Karnataka Politics ಸೊಸೆಯಾಗಿ ಬಂದವರು ಮಗಳಾಗಿ ಉಳಿದಿದ್ದಾರೆ, ವಲಸಿಗ ಬಿಜೆಪಿ ನಾಯಕರ ಬಗ್ಗೆ ರಾಮದಾಸ್ ಮಾತು

By Suvarna NewsFirst Published Jan 28, 2022, 5:06 PM IST
Highlights

* ಸೊಸೆಯಾಗಿ ಬಂದವರು ನಮ್ಮ ಮನೆಯ ಮಗಳಾಗಿ ಉಳಿದಿದ್ದಾರೆ
* ಕಾಂಗ್ರೆಸ್, ಜೆಡಿಎಸ್‌ನಿಂದ ವಲಸೆ ಬಂದ ಶಾಸಕರ ಬಗ್ಗೆ ಬಿಜೆಪಿ ಶಾಸಕ ಮಾತು
* ಮತ್ತೆ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ತರುತ್ತೇವೆ ಎಂದ  ರಾಮದಾಸ್

ಬೆಂಗಳೂರು, (ಜ.28): ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಪರ್ವ ಆರಂಭವಾಲಿದ್ಯಾ? ಯಾಕಂದ್ರೆ ಬಿಜೆಪಿಯ ಶಾಸಕರು ಕಾಂಗ್ರೆಸ್‌ನತ್ತ ಮುಖಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಇನ್ನು ಈ ಬಗ್ಗೆ ಬಿಜೆಪಿ ಶಾಸಕ ರಾಮದಾಸ್ (BJP MLA Ramdas) ಪ್ರತಿಕ್ರಿಯಿಸಿದ್ದು, ನಮ್ಮ ಮನೆಗೆ ಸೊಸೆಯಾಗಿ ಬಂದವರು ನಮ್ಮ ಮನೆಯ ಮಗಳಾಗಿ ಉಳಿದಿದ್ದಾರೆ ಎಂದು ಶಾಸಕ ರಾಮದಾಸ್, ಕೆಲ ಸಚಿವರು ಕಾಂಗ್ರೆಸ್‍ಗೆ (Congress)ಹೋಗಬಹುದು ಎಂಬ ಹೇಳಿಕೆಗೆ, ಅವರದೇ ಆದ ರೀತಿಯಲ್ಲಿ ಅಭಿಪ್ರಾಯ ತಿಳಿಸಿದರು.

Defection Politics: ಜೆಡಿಎಸ್‌ಗೆ ಗುಡ್‌ಬೈ ಹೇಳ್ತಾರಾ ಶಾಸಕ ಪುಟ್ಟರಾಜು..?

 ಇಂದು(ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಸಚಿವರು ಕಾಂಗ್ರೆಸ್‍ಗೆ ಹೋಗಬಹುದು ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮ್‌ದಾಸ್, ನಮ್ಮ ಮನೆಗೆ ಸೊಸೆಯಾಗಿ ಬಂದವರು ಈಗ ಸೊಸೆಯಾಗಿಲ್ಲ. ಮಗಳೇ ಆಗಿದ್ದಾರೆ. ಅವರು ನಮ್ಮಲ್ಲಿಗೆ ಬಂದಿದ್ದಾರೆ ಎಂದರೆ ನಮ್ಮ ಅಣ್ಣತಮ್ಮಂದಿರಿದ್ದಂತೆ. ನಾವೆಲ್ಲ ಒಟ್ಟಾಗಿ ಸೇರಿ ಚುನಾವಣೆ ಎದುರಿಸುತ್ತೇವೆ. ಮತ್ತೆ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ತರುತ್ತೇವೆ ಎಂದು ಸ್ಪಷ್ಟಪಡಿಸಿದರು.

ನಾವೆಲ್ಲ ಹಿರಿಯ ಶಾಸಕರ ಸಂದರ್ಭಗಳಿಗೆ ತಕ್ಕಂತೆ ಅನುಸರಿಸಿಕೊಂಡು ಹೋಗಬೇಕು. ಅದು ನಮ್ಮ ಜವಾಬ್ದಾರಿಯೂ ಕೂಡ ಎಂದು ಹೇಳಿದರು. ಮಂತ್ರಿ ಸ್ಥಾನ ಸಿಕ್ಕಿಲ್ಲ. ಸಿಕ್ಕಿದೆ ಎಂದು ಹೇಳಿಕೊಳ್ಳುವುದಲ್ಲ. ನಾನು 25 ವರ್ಷಗಳಿಂದ ಶಾಸಕನಾಗಿದ್ದೇನೆ. ನಮ್ಮ ಅನುಭವವನ್ನು ಜನರಿಗೆ ತಿಳಿಸುವುದರಲ್ಲಿ ನನಗೆ ಸಂತೋಷ ಎಂದರು.

ಯತ್ನಾಳ್ ಹೇಳಿದ್ದೇನು
ಕೆಲವರು ಕಾಂಗ್ರೆಸ್‌ಗೆ ಹೋಗಲು ಸಜ್ಜಾಗಿದ್ದಾರೆ. ಈಗಾಗಲೇ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರ ಮನೆಗೆ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು.

ಇನ್ನು ಇದಕ್ಕೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ತತ್ವ, ಸಿದ್ಧಾಂತಗಳು ಒಪ್ಪಿ ಯಾವುದೇ ಷರತ್ತು ಇಲ್ಲದೆ ಬರುವುದಾದರೆ ಸ್ವಾಗತ. ಆದ್ರೆ, ಅವರ ಹೆಸರು ಬಹಿರಂಗವಾಗಿ ಹೇಳಲು ಆಗಲ್ಲ ಎಂದಿದ್ದರು.

ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಗುಮ್ಮ ಭಾರೀ ಸದ್ದು ಮಾಡುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹೇಳಿಕೆಗಳು ಪಕ್ಷಾಂತರ ಸದ್ದನ್ನು ಮತ್ತಷ್ಟು ಗಂಭೀರಗೊಳಿಸಿದೆ. ಸಹಜವಾಗಿ ಚುನಾವಣೆ ಸಮೀಪವಾಗುತ್ತಿದ್ದಂತೆ ಯಾರು ಯಾವ ಪಕ್ಷದತ್ತ ವಲಸೆ ಹೋಗುತ್ತಾರೆ? ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ವಲಸೆ ಬಂದು ರಾಜ್ಯದಲ್ಲಿ ಬಿಎಸ್‌ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆಗೆ ಕಾರಣರಾಗಿದ್ದ ವಲಸಿಗರ ಪೈಕಿ ಎಷ್ಟು ಮಂದಿ ಮತ್ತೆ ಮೂಲ ಸ್ಥಾನಕ್ಕೆ ತೆರಳುತ್ತಾರೆ? ಎಂಬುವುದು ಕೂಡಾ ಕುತೂಹಲ ಕೆರಳಿಸಿದೆ.

click me!