Karnataka Politics: ಡಿಕೆಶಿ ಜೊತೆ ಸೇರಿ ಲಕ್ಷ್ಮಣ ಸವದಿ ಕುತಂತ್ರ: ಲಖನ್‌ ಜಾರಕಿಹೊಳಿ ವಾಗ್ದಾಳಿ

By Kannadaprabha NewsFirst Published Jan 28, 2022, 10:35 AM IST
Highlights

*  ರಮೇಶ ಜಾರಕಿಹೊಳಿ ವಿರುದ್ಧ ಕತ್ತಿ ಮಸೆಯುತ್ತಿರುವ ಲಕ್ಷ್ಮಣ ಸವದಿ 
*  ಬೆಳಗಾವಿ ನಾಯಕರು ಸೇರಿ ಕುತಂತ್ರ ಮಾಡಿ ಬಿಜೆಪಿ ಸರ್ಕಾರ ಬಲಿ ಕೊಡಲು ಯತ್ನ
*  ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪತನವಾಗಲು ರಮೇಶ ಜಾರಕಿಹೊಳಿ ಕಾರಣ

ಬೆಳಗಾವಿ(ಜ.28):  ವಿಧಾನಸಭೆ ಚುನಾವಣೆಯಲ್ಲಿ(Assembly Election) ಸೋತರೂ ಉನ್ನತ ಹುದ್ದೆಗೇರಿ ಅಧಿಕಾರ ಅನುಭವಿಸಿದವರು, ಇದೀಗ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ(DK Shivakumar) ಜೊತೆ ಸೇರಿ ಕುತಂತ್ರ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಲಖನ್‌ ಜಾರಕಿಹೊಳಿ(Lakhan Jarkiholi) ಅವರು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋತ ನಾಯಕರನ್ನು ಪಕ್ಷದ ಉಪಾಧ್ಯಕ್ಷ, ಡಿಸಿಎಂ ಮಾಡಿದರೆ ಒಳ್ಳೆಯದಾಗುವುದಿಲ್ಲ. ರಮೇಶ ಜಾರಕಿಹೊಳಿ(Ramesh Jarkiholi) ವಿರುದ್ಧ ಲಕ್ಷ್ಮಣ ಸವದಿ(Laxman Savadi) ಕತ್ತಿ ಮಸೆಯುತ್ತಿದ್ದಾರೆ ಎಂದು ಕಿಡಿಕಾರಿದರು.

ಜಾರಕಿಹೊಳಿ ಸಹೋದರರನ್ನು ಹೊರಗಿಟ್ಟು ಸಚಿವ ಉಮೇಶ ಕತ್ತಿ(Umesh Katti) ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ ನಡೆಸಿದ್ದಾರೆ. ಅಥಣಿ, ಬೆಳಗಾವಿ(Belagavi) ನಾಯಕರು ಸೇರಿ ಕುತಂತ್ರ ಮಾಡಿ ಬಿಜೆಪಿ(BJP) ಸರ್ಕಾರ ಬಲಿ ಕೊಡಲು ಯತ್ನಿಸುತ್ತಿದ್ದಾರೆ. ಈಗಾಗಲೇ ಬಿಜೆಪಿಯಲ್ಲಿ ಉನ್ನತ ಹುದ್ದೆ ಅನುಭವಿಸಿ ಮತ್ತೆ ಅಧಿಕಾರ ಸಿಗಲೆಂದು ಕುತಂತ್ರ ನಡೆಸಿದ್ದಾರೆ. ಈ ರೀತಿ ಮೀಟಿಂಗ್‌ ಎಲ್ಲಾ ಮಾಡಿ ಅಧಿಕಾರ ಗಿಟ್ಟಿಸುವ ಫಾರ್ಮುಲಾ ಇದಾಗಿದೆ. ಸಚಿವ ಉಮೇಶ ಕತ್ತಿ ಅವರು ಸಭೆಯಲ್ಲಿ ಮೇಯರ್‌ ಚುನಾವಣೆ, ಪಕ್ಷದ ಸಂಘಟನೆ ಕುರಿತು ಚರ್ಚಿಸಿರುವುದಾಗಿ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಸಭೆ ನಡೆದರೆ, ಅದು ಅಧಿಕೃತ ಸಭೆ ಎನ್ನುವ ಮೂಲಕ ಇದೊಂದು ಅನಧಿಕೃತ ಸಭೆ ಎಂದು ಜರಿದರು.

Karnataka Politics: ಬಿಜೆಪಿಗೆ ಬರುವವರನ್ನು ಡಿಕ್ಕೀಲಿ ಕೂರಿಸ್ತಾರಾ?: ಸತೀಶ್‌ ವ್ಯಂಗ್ಯ

ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರ ಕೊಡುಗೆ ಇದೆ. ಇತ್ತೀಚೆಗೆ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಭ್ಯರ್ಥಿ ತಪ್ಪು ನಿರ್ಧಾರದಿಂದ ಬಿಜೆಪಿ ಚುನಾವಣೆಯಲ್ಲಿ ಸೋತಿದೆ. ಈಗ ಆ ಸೋಲನ್ನು ಬೇರೆಯವರ ತಲೆಗೆ ಕಟ್ಟುವುದಕ್ಕೆ ಹೊರಟಿದ್ದಾರೆ. ಅವರೇ (ಸಭೆ ನಡೆಸಿದವರೇ) ಬೆಳಗಾವಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಸೋಲಲು ಕಾರಣವಾಗಿದೆ. ಯಾರು ಷಡ್ಯಂತ್ರ ಮಾಡಿದ್ದಾರೆ ಎಂಬುದನ್ನು ಬಿಜೆಪಿ ಹೈಕಮಾಂಡ್‌, ಮುಖ್ಯಮಂತ್ರಿ ಗಮನಿಸುತ್ತಿರುತ್ತಾರೆ ಎಂದರು.

ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಅವರನ್ನು ಸಮರ್ಪಕವಾಗಿ ಬಳಸಿಕೊಂಡರೆ ಮತ್ತೆ ಬಿಜೆಪಿ ಸರ್ಕಾರ ಬರುವುದು ಗ್ಯಾರಂಟಿ. ಬಿಜೆಪಿ ಸರ್ಕಾರ ಬರಲು ರಮೇಶ ಮತ್ತು ಬಾಲಚಂದ್ರ ಅವರೇ ಕಾರಣರಾಗಿದ್ದು, ಅವರನ್ನು ಸಮರ್ಪಕವಾಗಿ ಉಪಯೋಗ ಮಾಡಿಕೊಳ್ಳಬೇಕು ಎಂದರು.

ರಮೇಶ ಜಾರಕಿಹೊಳಿ ವಿರುದ್ಧ ಬಿಜೆಪಿಯವರೇ ಷಡ್ಯಂತ್ರ ಮಾಡಲಿ, ಕಾಂಗ್ರೆಸ್‌ನವರಾದರೂ(Congress) ಮಾಡಲಿ. ಅದನ್ನು ಎದುರಿಸುವ ಶಕ್ತಿ ಅವರ ಹತ್ತಿರ ಇದೆ. ರಮೇಶ ಬಳಿ ಗೋಕಾಕ ಕ್ಷೇತ್ರದ ಮತಬಾಂಧವರ ಶಕ್ತಿಯಿದೆ. ಯಾರು ಎಷ್ಟೇ ಕಷ್ಟ ಕೊಟ್ಟರೂ ದೇವರ ಆಶೀರ್ವಾದ, ಮತದಾರರ ಆಶೀರ್ವಾದ ಇದ್ದೆ ಇರುತ್ತದೆ. ಅವರಿಗೆ ಕಷ್ಟಕೊಟ್ಟಷ್ಟು ರಮೇಶ ಜಾರಕಿಹೊಳಿ ಗಟ್ಟಿಯಾಗುತ್ತಾರೆ. ರಮೇಶ ಈ ಮೊದಲು ಕಾಂಗ್ರೆಸ್‌ನಲ್ಲಿದ್ದವರು. ಅವರ ಜೊತೆ ಕಾಂಗ್ರೆಸ್‌ ಶಾಸಕರು ಸಂಪರ್ಕದಲ್ಲಿರುವುದು ನಿಜ. ಹೀಗಾಗಿ 16 ಅಲ್ಲ 25 ಶಾಸಕರು ರಮೇಶ ಜಾರಕಿಹೊಳಿ ಜೊತೆಗೆ ಬರುತ್ತಾರೆ ಎಂದರು.

Goa Elections: ಕಾಂಗ್ರೆಸ್‌ ಅಭ್ಯರ್ಥಿಗಳ ಆಣೆ, ಪ್ರಮಾಣ: ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು

ನಾನು ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗುವುದಿಲ್ಲ. ನಾನು ಮೊದಲು ಕಾಂಗ್ರೆಸ್‌ನಲ್ಲಿದ್ದೆ. ಕಾಂಗ್ರೆಸ್‌ ಪಕ್ಷಕ್ಕೆ ಶಕ್ತಿ ಕಡಿಮೆಯಾಗಿದೆ. ಮಾಜಿ ಸಿದ್ದರಾಮಯ್ಯ(Siddaramaiah), ಮಲ್ಲಿಕಾರ್ಜುನ ಖರ್ಗೆ(Mallikarjun Kharge) ನಮ್ಮ ನಾಯಕರು, ಗುರುಗಳು. ಕಾಂಗ್ರೆಸ್‌ ಪಕ್ಷಕ್ಕೆ ಹೋಗುವ ಪ್ರಮೇಯವೇ ಇಲ್ಲ. ಜಿಲ್ಲೆಯಲ್ಲಿ, ರಾಜ್ಯದಲ್ಲಿ ಸ್ವಯಂ ಘೋಷಿತ ನಾಯಕರಿದ್ದಾರೆ. ಕಾಂಗ್ರೆಸ್‌ ಸರ್ಕಾರ ಪತನ ಆಗಲು ಅವರೇ ಕಾರಣ. ಈಗ ಅವರೇ ಮುಂಚೂಣಿಯಲ್ಲಿದ್ದಾರೆ. ಬಿಜೆಪಿಯವರು ಯಾರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಮೇಶ ಜಾರಕಿಹೊಳಿ ಅವರನ್ನು ನಿಮ್ಹಾನ್ಸ್‌ಗೆ ಸೇರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರ(Congress-JDS Coalition Government) ಪತನವಾಗಲು ರಮೇಶ ಜಾರಕಿಹೊಳಿ ಕಾರಣ. ಆಗ ಡಿ.ಕೆ.ಶಿವಕುಮಾರ ನಿಮ್ಹಾನ್ಸ್‌ಗೆ ಹೋಗಬೇಕಿತ್ತು. ಯಾರು ನಿಮ್ಹಾನ್ಸ್‌ಗೆ ಸೇರಬೇಕು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ರಮೇಶ, ಬಾಲಚಂದ್ರ ಅವರು ಕೇವಲ ಬೆಳಗಾವಿ ಜಿಲ್ಲೆಗೆ ಮಾತ್ರ ಸೀಮಿತವಲ್ಲ. ಅವರಿಬ್ಬರು ರಾಜ್ಯ ನಾಯಕರು ಎಂದು ಹೇಳಿದರು.
 

click me!