
ನವದೆಹಲಿ: ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಅವರು ತಮ್ಮ ಹೆಸರಿನ ವಿಚಾರಕ್ಕೆ ಮತ್ತೆ ಸದನದಲ್ಲಿ ಕ್ಯಾತೆ ತೆಗೆದಿದ್ದಾರೆ. ಮೊನ್ನೆಯಷ್ಟೇ ಅವರು ಸದನದಲ್ಲಿ ತಮ್ಮನ್ನು ಜಯಾ ಅಮಿತಾಬ್ ಬಚ್ಚನ್ ಎಂದು ಕರೆದ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ ನಾರಾಯಣ್ ಸಿಂಗ್ ಅವರ ಮೇಲೆ ಕೋಪಗೊಂಡು ತನ್ನನ್ನು ಆ ರೀತಿ ಕರೆಯದಂತೆ ಕೇಳಿದ್ದರು. ಇದಾದ ನಂತರ ಮಾರನೇ ದಿನ ಸದನದಲ್ಲಿ ಮಾತನಾಡುವ ವೇಳೆ ಅವರೇ ತನ್ನ ಹೆಸರು ಜಯಾ ಅಮಿತಾಭ್ ಬಚ್ಚನ್ ಎಂದು ಹೇಳಿಕೊಂಡಿದ್ದರು. ಹೀಗೆ ಕರೆಯಬೇಡಿ ಎಂದು ರಾಜ್ಯಸಭಾ ಅಧ್ಯಕ್ಷರಿಗೆ ಹೇಳಿದ ಅವರು ಮತ್ತೆ ಅದೇ ಹೆಸರಿನಲ್ಲಿ ತಮ್ಮನ್ನು ಗುರುತಿಸಿಕೊಂಡಾಗ ಇಡೀ ರಾಜ್ಯಸಭೆ ಕಲಾಪದಲ್ಲಿ ಉಪಸ್ಥಿತರಿದ್ದ ಅಧ್ಯಕ್ಷರು ಸೇರಿದಂತೆ ಎಲ್ಲಾ ಸದಸ್ಯರು ಪಕ್ಷ ಬೇಧ ಮರೆತು ನಗೆಯಾಡಿದ್ದರು. ಈ ಹೆಸರಿನ ಪ್ರಸಂಗ ಅಲ್ಲಿಗೆ ಮುಗಿದೇ ಹೋಯ್ತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇಂದು ಮತ್ತೆ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಅವರು, ಜಯ ಬಚ್ಚನ್ ಅವರನ್ನು ಜಯಾ ಅಮಿತಾಬ್ ಬಚ್ಚನ್ ಎಂದು ಉಲ್ಲೇಖಿಸಿದಾಗ ಮತ್ತೆ ಜಯಾ ಬಚ್ಚನ್ ಹಳೇ ರಾಮಾಯಣ ಶುರು ಮಾಡಿದ್ದಾರೆ. ತನ್ನನ್ನು ಆ ಹೆಸರಿನಿಂದ ಕರೆಯದಂತೆ ಅಧ್ಯಕ್ಷರಿಗೆ ಹೇಳಿದ್ದಾರೆ.
ಆದರೆ ಈ ಬಾರಿ ಮಾತ್ರ ವಿಚಾರದ ಬಗ್ಗೆ ಗಂಭೀರರಾದ ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಅವರು ಅರಳು ಮರಳು ಆಡುವ ಜಯಾ ಬಚ್ಚನ್ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಶ್ರೀಮತಿ ಜಯಾ ಅಮಿತಾಬ್ ಬಚ್ಚನ್ ಎಂದು ಹೇಳುತ್ತಲೇ ವರಾತ ತೆಗೆದ ಜಯಾಗೆ, ನೀವು ಹೆಸರು ಬದಲಾಯಿಸಿ, ನಾನು ಆಗ ಬದಲಾದ ಹೆಸರಿನಂತೆ ಕರೆಯುವೆ ಎಂದು ಉತ್ತರಿಸಿದ್ದಾರೆ. ಈ ವೇಳೆ ನನಗೆ ಅಮಿತಾಬ್ ಹೆಸರಿನ ಬಗ್ಗೆ ಹೆಮ್ಮೆ ಇದೆ ಅದೇ ಹೆಸರಿನೊಂದಿಗೆ ನನ್ನ ಗುರುತಿದೆ ಎಂದು ಹೇಳುತ್ತಿದ್ದ ಜಯಾ ಬಚ್ಚನ್ ಅವರನ್ನು ತಡೆದ ಜಗದೀಪ್ ಧನಕರ್, ಎಲ್ಲಾ ಸದಸ್ಯರ ಗಮನಕ್ಕೆ, ಈ ಹೆಸರು ಚುನಾವಣಾ ಪ್ರಮಾಣಪತ್ರದಲ್ಲಿರುವ ಹೆಸರೇ ಆಗಿದೆ. ಇದನ್ನು ಇಲ್ಲಿ ಸಲ್ಲಿಕೆ ಮಾಡಲಾಗಿದೆ. ಇಲ್ಲಿ ಹೆಸರು ಬದಲಾಯಿಸಬೇಕು ಎಂಬ ಮನಸ್ಸಿದ್ದರೆ ಹೆಸರು ಬದಲಾಯಿಸುವ ಅವಕಾಶವೂ ಇದೆ. ಸ್ವತಃ ನಾನು 1989ರಲ್ಲಿ ಈ ಅವಕಾಶವನ್ನು ಬಳಸಿಕೊಂಡಿದ್ದೇನೆ. ಪ್ರತಿಯೊಬ್ಬ ಸದಸ್ಯರಿಗೂ ಈ ಅವಕಾಶವಿದೆ ಎಂದು ಜಗದೀಪ್ ಧನಕರ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಅಮಿತಾಭ್ ಬಚ್ಚನ್ ಹೆಸರು ಹೇಳಿ ಪೇಚಿಗೆ ಸಿಲುಕಿದ ಜಯಾ: ಬಿದ್ದೂ ಬಿದ್ದೂ ನಕ್ಕ ಸ್ಪೀಕರ್!
ಈ ವೇಳೆ ಮಧ್ಯ ಮಾತನಾಡಿದ ಜಯಾ ಬಚ್ಚನ್, ಇಲ್ಲ ಸರ್ ನನಗೆ ಈ ಹೆಸರಿನ ಬಗ್ಗೆ ಬಹಳ ಹೆಮ್ಮೆ ಇದೆ, ನನಗೆ ನನ್ನ ಗಂಡ ಹಾಗೂ ಅವರ ಸಾಧನೆ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಈ ವೇಳೆ ಧನಕರ್, ಸೀಟಿನಲ್ಲಿ ಕುಳಿತುಕೊಳ್ಳುವಂತೆ ಜಯಾ ಬಚ್ಚನ್ಗೆ ಹೇಳಿದ್ದಾರೆ. ಈ ವೇಳೆ ಜಯಾ ಮೊದಲು ಹೀಗೆ ಕರೆಯುತ್ತಿರಲಿಲ್ಲ ನೀವು ಹೊಸದಾಗಿ ಶುರು ಮಾಡಿದ್ದೀರಿ ಎಂದು ದೂರಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಧನಕರ್ 2004ರಲ್ಲಿ ನಾನು ಫ್ರಾನ್ಸ್ಗೆ ಹೊರಟಿದ್ದ ವೇಳೆ ಹೊಟೇಲೊಂದಕ್ಕೆ ಹೋಗಿದ್ದೆ ಅಲ್ಲಿ ಜಾಗತಿಕ ಪ್ರಸಿದ್ಧ ನಾಯಕರ ಫೋಟೋಗಳಿದ್ದವು. ಅಲ್ಲಿ ಅಮಿತಾಬ್ ಬಚ್ಚನ್ ಅವರ ಫೋಟೋ ಕೂಡ ಇತ್ತು. ಇಡೀ ದೇಶ ಮಾತ್ರವಲ್ಲ ಪ್ರಪಂಚವೇ ಅವರನ್ನು ಹೆಮ್ಮೆಯಿಂದ ಗುರುತಿಸುತ್ತಿದೆ. ನಾನು ಕೂಡ ನನ್ನ ಪತ್ನಿ ಸುದೇಷ್ಣ ಅವರ ಹೆಸರಿನಲ್ಲಿ ಹಲವು ಬಾರಿ ಗುರುತಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಧನಕರ್ ಅವರ ಈ ಉತ್ತರಕ್ಕೆ ನೆಟ್ಟಿಗರು ಶಹಭಾಷ್ ಹೇಳಿದ್ದಾರೆ. ಅಲ್ಲದೇ ರಾಜ್ಯಸಭೆಯಲ್ಲಿದ್ದ ವಿರೋಧ ಪಕ್ಷದ ನಾಯಕರು ಕೂಡ ರಾಜ್ಯಸಭಾ ಅಧ್ಯಕ್ಷರ ಉತ್ತರಕ್ಕೆ ಬೆಂಚು ಗುದ್ದಿ ಸಂತಸ ವ್ಯಕ್ತಪಡಿಸಿದ್ದಾರೆ. ಜಯಾ ಬಚ್ಚನ್ ಓವರ್ ಸ್ಮಾರ್ಟ್ ಆಗೋಕೆ ಪ್ರಯತ್ನಿಸುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಜಯಾ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನನ್ನ ಹೆಸರ ಮುಂದೆ ಗಂಡನ ಹೆಸರೇಕೆ? ಉಪಸಭಾಪತಿ ವಿರುದ್ಧ ಜಯಾ ಬಚ್ಚನ್ ಅಸಮಾಧಾನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.