ಭಾರತ್ ಜೋಡೋ ಯಾತ್ರೆ, ಚಳಿಗಾಲದ ಅಧಿವೇಶನಕ್ಕೆ ರಾಹುಲ್ ಗಾಂಧಿ ಗೈರು!

By Suvarna NewsFirst Published Nov 12, 2022, 5:03 PM IST
Highlights

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಸದ್ಯ ಮಹಾರಾಷ್ಟ್ರದಲ್ಲಿ ಸಂಚರಿಸುತ್ತಿದೆ. ಈ ಯಾತ್ರೆ ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ. ಹೀಗಾಗಿ ರಾಹುಲ್ ಗಾಂಧಿ ಚಳಿಗಾಲದ ಅಧಿವೇಶನಕ್ಕೆ ಗೈರಾಗುವ ಸಾಧ್ಯತೆ ಇದೆ.

ನವದೆಹಲಿ(ನ.12): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಶತಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ಇದೀಗ ಭಾರತ್ ಜೋಡೋ ಯಾತ್ರೆ ಮೂಲಕ ಸಂಚಲನ ಸೃಷ್ಟಿಸಲು ಹೊರಟಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯತ್ತಿರುವ ಈ ಯಾತ್ರೆ ಸದ್ಯ ಮಹಾರಾಷ್ಟ್ರದಲ್ಲಿ ಸಂಚರಿಸುತ್ತಿದೆ. 66 ದಿನಗಳನ್ನು ಪೂರೈಸಿರುವ ಈ ಯಾತ್ರೆ 150 ದಿನಗಳ ಕಾಲ ನಡೆಯಲಿದೆ. ಈ ಯಾತ್ರೆಯ ಮುಂದಾಳತ್ವ ವಹಿಸಿರುವ ರಾಹುಲ್ ಗಾಂಧಿ, ಯಾತ್ರೆ ಬಿಟ್ಟು ಚಳಿಗಾಲದ ಅಧಿವೇಶನಕ್ಕೆ ಹಾಜರಾಗುವ ಸಾಧ್ಯತೆ ಇಲ್ಲ. ಈ ಕುರಿತು ಕಾಂಗ್ರೆಸ್ ವಕ್ತಾರ, ಹಿರಿಯ ನಾಯಕ ಜೈರಾಮ್ ರಮೇಶ್ ಸೂಚನೆ ನೀಡಿದ್ದಾರೆ. ರಾಹುಲ್ ಗಾಂಧಿ ಆರಂಭಿಸಿರುವ ಭಾರತ್ ಜೋಡೋ ಯಾತ್ರೆ ಅರ್ಧದಲ್ಲಿ ಕೈಬಿಟ್ಟು ಅಧಿವೇಶನಕ್ಕೆ ತೆರಳುವ ಸಾಧ್ಯತೆ ಕಡಿಮೆ. ಭಾರತ್ ಜೋಡೋ ಯಾತ್ರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹೀಗಾಗಿ ರಾಹುಲ್ ಗಾಂಧಿ ಮತ್ತಷ್ಟು ಹುರುಪಿನಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಚಳಿಗಾಲದ ಅಧಿವೇಶನ ಡಿಸೆಂಬರ್ ಮೊದಲ ಆರಂಭಗೊಳ್ಳಲಿದೆ. ಡಿಸೆಂಬರ್ ಅಂತ್ಯದಲ್ಲಿ ಅಧಿವೇಶನಕ್ಕೆ ತೆರಬೀಳಲಿದೆ. ಇದೇ ವೇಳೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಯಲಿದೆ. ಹೀಗಾಗಿ ರಾಹುಲ್ ಗಾಂಧಿ ಅಧಿವೇಶನಕ್ಕೆ ಭಾಗವಹಿಸುವುದಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಆರಂಭಗೊಂಡಿತ್ತು. ಈಗಾಗಲೇ 6 ರಾಜ್ಯಗಳ 28 ಜಿಲ್ಲೆಗಳಲ್ಲಿ ಭಾರತ್ ಜೋಡೋ ಯಾತ್ರೆ ಸಂಚರಿಸಿದೆ. ಇನ್ನು 12 ರಾಜ್ಯಗಳಲ್ಲಿ ಸಂಚರಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ. ಸದ್ಯ 66ನೇ ದಿನಕ್ಕೆ ಕಾಲಿಟ್ಟಿರುವ ಯಾತ್ರೆ 3,570 ಕಿಲೋಮೀಟರ್ ಸಂಚರಿಸಲಿದೆ. ಒಟ್ಟು 150 ದಿನಗಳನ್ನು ಪೂರೈಸಲಿದೆ. 

Gujarat Election 2022: ನರೇಂದ್ರ ಮೋದಿ ಸ್ಟೇಡಿಯಂ ಹೆಸರು ಬದಲಾವಣೆ, ಉದ್ಯೋಗ ಭರವಸೆ ನೀಡಿದ ಕಾಂಗ್ರೆಸ್‌ ಪ್ರಣಾಳಿಕೆ!

ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ಗೆ ಆದಿತ್ಯ ಠಾಕ್ರೆ ಸಾಥ್‌
ಮಹಾರಾಷ್ಟ್ರದಲ್ಲಿ ಸಾಗುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಪಾದಯಾತ್ರೆಯಲ್ಲಿ ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಶುಕ್ರವಾರ ಪಾಲ್ಗೊಂಡರು. 65ನೇ ದಿನಕ್ಕೆ ಕಾಲಿಟ್ಟಯಾತ್ರೆಯಲ್ಲಿ ಶಿವಸೇನೆಯ ಮಾಜಿ ಶಾಸಕ ಸಚಿನ್‌ ಆಹಿರ್‌, ಅಂಬಾದಾಸ್‌ ದಾನ್ವೆ ಭಾಗವಹಿಸಿದ್ದರು. ಈ ನಡುವೆ ಮಾಜಿ ಸೇನಾಧಿಕಾರಿ ಸಾಹೇಬ್‌ರಾವ್‌ ಹೋನೆ ಸಹ ಭಾರತ್‌ ಜೋಡೋ ಪಾದಯಾತ್ರೆಯಲ್ಲಿ ಭಾಗವಹಿಸಿ, ‘ಒಂದು ಶ್ರೇಣಿ, ಒಂದು ಪಿಂಚಣಿ’ ಬೇಡಿಕೆಯನ್ನು ಕಾಂಗ್ರೆಸ್‌ ಪೂರೈಸುವ ವಿಶ್ವಾಸವಿದೆ ಎಂದು ಹೇಳಿದರು. ಗುರುವಾರ ಮಾಹಾರಾಷ್ಟ್ರದ ಭಾರತ್‌ ಜೋಡೋ ಯಾತ್ರೆ ವೇಳೆ ಎನ್‌ಸಿಪಿ ನಾಯಕಿ ಸುಪ್ರೀಯಾ ಸುಳೆ, ಜಿತೇಂದ್ರ ಅವ್ಹಾಡ್‌ ಭಾಗವಹಿಸಿದ್ದರು.

ಸಂಭಾಜಿ ಮಹಾರಾಜರಿಗೆ ಜಾರಕಿಹೊಳಿ ಅಪಮಾನ ಆರೋಪ: ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ ಫಡ್ನವಿಸ್!

ಸಂಸತ್ತಿನಲ್ಲಿ ವಿಪಕ್ಷ ನಾಯಕರು ಬಿಜೆಪಿ ಸರ್ಕಾರಕ್ಕೆ ಅಹಿತಕಾರಿ ಎನಿಸುವ ವಿಷಯಗಳ ಚರ್ಚೆಗೆ ಮುಂದಾದಾಗ ಹೇಗೆ ಅವರ ಮೈಕ್‌ಗಳನ್ನು ಆಫ್‌ ಮಾಡಲಾಗುತ್ತದೆ ಎಂಬುದರ ಅಣಕು ಪ್ರದರ್ಶನವನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನಡೆಸಿದರು. ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಭಾರತ ಜೋಡೋ ಯಾತ್ರೆಯಲ್ಲಿ ‘ನೋಡಿ, ನಾವು ನೋಟು ಅಮಾನ್ಯೀಕರಣ (2016) ಬಗ್ಗೆ ಸಂಸತ್ತಿನಲ್ಲಿ ಧ್ವನಿಯೆತ್ತಿದ್ದೆ’ ಎಂದು ಮೈಕ್‌ ಆಫ್‌ ಮಾಡಿದ ರಾಹುಲ್‌, ಬಳಿಕ ತಾವೇ ಅದನ್ನು ಆನ್‌ ಮಾಡಿದ್ದು, ‘ಇಲ್ಲಿ ನಿಯಂತ್ರಣ ನನ್ನ ಕೈಯಲ್ಲಿದೆ. ಆದರೆ ಸಂಸತ್ತಿನಲ್ಲಿ ನಮ್ಮ ಮೈಕ್‌ ಹೀಗೆ ಆಫ್‌ ಮಾಡಲಾಗುತ್ತದೆ. ನಾವು ಏನು ನಡೆಯುತ್ತದೆ ಎಂಬುದನ್ನೇ ತಿಳಿಯದೇ ಗೊಂದಲಕ್ಕೀಡಾಗುತ್ತೇವೆ’ ಎಂದರು.
 

click me!