
ವಿಧಾನಸಭೆ (ಜು.14): ರಾಜ್ಯ ಸರ್ಕಾರದ ಐದೂ ಗ್ಯಾರಂಟಿಯನ್ನೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಾರಿ ಮಾಡಲು ನಾವು ಸಿದ್ಧರಿದ್ದೇವೆ. ಶಕ್ತಿ ಯೋಜನೆಯ ಪೂರ್ಣ ಲಾಭ ಮಹಿಳೆಯರಿಗೆ ತಲುಪಲು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಬಸ್ಸು ಕೊರತೆ ನೀಗಿಸಲು 4 ಸಾವಿರ ಹೊಸ ಬಸ್ಸು ಖರೀದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯಪಾಲರ ಭಾಷಣದ ಬಗೆಗಿನ ವಂದನಾ ನಿರ್ಣಯದ ಬಗ್ಗೆ ಉತ್ತರ ನೀಡಿದ ಅವರು, ಈಗಾಗಲೇ ಮೂರು ಗ್ಯಾರಂಟಿ ಈಡೇರಿಸಿದ್ದೇವೆ. ಗೃಹ ಲಕ್ಷ್ಮೇ ಯೋಜನೆಯಲ್ಲಿನ ಗೊಂದಲಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ. ಜತೆಗೆ ಗೃಹ ಜ್ಯೋತಿಯಲ್ಲಿನ ಗೊಂದಲಗಳನ್ನೂ ಬಹುತೇಕ ಈಡೇರಿಸಿದ್ದೇವೆ ಎಂದು ಸಮರ್ಥಿಸಿಕೊಂಡರು. ಇನ್ನು ಅನ್ನಭಾಗ್ಯ ಯೋಜನೆ ಅಕ್ಕಿ ಕಡಿತದ ಬಗ್ಗೆ ಬಿಜೆಪಿಯವರು ಸಭಾತ್ಯಾಗ ಮಾಡಿದ ನಡುವೆಯೇ ರಾಜ್ಯಪಾಲರ ವಂದನಾ ನಿರ್ಣಯಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಸಿದ್ದು ವರ್ಗಾವಣೆ ದಂಧೆ ಮಾಡಿದ್ದಾರೆ ಎಂಬುದನ್ನು ಒಪ್ಪಲ್ಲ: ಎಚ್.ಡಿ.ರೇವಣ್ಣ
ಇದಕ್ಕೂ ಮೊದಲು ಮಾತನಾಡಿದ ಸಿದ್ದರಾಮಯ್ಯ, ಶಕ್ತಿ ಯೋಜನೆ ಯಶಸ್ವಿಯಾಗಿ ಅನುಷ್ಠಾನ ಮಾಡಿದ್ದು ಈಗಾಗಲೇ 18 ಕೋಟಿ ಮಂದಿ ಮಹಿಳಾ ಪ್ರಯಾಣಿಕರು ಇದರ ಲಾಭ ಪಡೆದಿದ್ದಾರೆ. ಇನ್ನು ಶಕ್ತಿ ಯೋಜನೆಯಿಂದಾಗಿ ಪುರುಷರಿಗೆ ಬಸ್ಸುಗಳ ಕೊರತೆ ಉಂಟಾಗಿದೆ. ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ಸೂಕ್ತ ಬಸ್ಸು ವ್ಯವಸ್ಥೆ ಇಲ್ಲ ಎಂಬ ದೂರುಗಳು ಬಂದಿವೆ. ಹೀಗಾಗಿ 4 ಸಾವಿರ ಹೊಸ ಬಸ್ಸುಗಳ ಖರೀದಿಗೆ ನಿರ್ಧರಿಸಿದ್ದು, ಯಾವುದೇ ಸಮಸ್ಯೆಯಾಗದಂತೆ ಜನರಿಗೆ ಗ್ಯಾರಂಟಿಗಳ ಲಾಭ ತಲುಪಿಸುತ್ತೇವೆ ಎಂದು ಹೇಳಿದರು.
ಬೊಮ್ಮಾಯಿ ಆಕ್ಷೇಪ: ಗ್ಯಾರಂಟಿಗಳಿಗಾಗಿ ಮದ್ಯದ ಮೇಲೆ ತೆರಿಗೆ ಹೆಚ್ಚಳ ಮಾಡಿದ್ದೀರಿ. ಆಸ್ತಿ ನೋಂದಣಿ ಶುಲ್ಕ, ಮೋಟಾರು ವಾಹನ ಶುಲ್ಕ ಸೇರಿ ಎಲ್ಲವನ್ನೂ ಹೆಚ್ಚಳ ಮಾಡಿದ್ದೀರಿ. ಬಡವರಿಂದ ಕಿತ್ತುಕೊಂಡು ಬಡವರಿಗೆ ಕೊಡುವ ಪ್ರಯತ್ನ ಮಾಡಿದ್ದೀರಿ ಎಂಬ ಟೀಕೆ ವ್ಯಕ್ತವಾಗಿದೆ. ನೀವು ಕೊಡುವ 2 ಸಾವಿರ ರು. ಗೃಹಲಕ್ಷ್ಮೇ ಹಣ ಈಗಿನ ಮದ್ಯದ ದರದಲ್ಲಿ 2 ದಿನಗಳ ಖರ್ಚಿಗೂ ಆಗುವುದಿಲ್ಲ ಎಂದು ಬಸವರಾಜ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ನಿಮ್ಮ ಅವಧಿಯಲ್ಲಿ 4 ವರ್ಷದಲ್ಲಿ 3.10 ಲಕ್ಷ ಕೋಟಿ ರು. ಸಾಲ ಮಾಡಿದ್ದೀರಿ.
ಸಿದ್ದರಾಮಯ್ಯ ಅನ್ನಭಾಗ್ಯಕ್ಕೆ ದೇವೇಗೌಡ ಪ್ರೇರಣೆ: ಶರವಣ
ನಿಮ್ಮ ಅವಧಿಯಲ್ಲಿ ಮಾಡಿರುವ ಸಾಲಗಳಿಂದಾಗಿ ಆರ್ಥಿಕ ಶಕ್ತಿ ಕುಂದಿದೆ. ಈ ವರ್ಷ ಗ್ಯಾರಂಟಿಗಳಿಗಾಗಿ 32,410 ಕೋಟಿ ರು. ಹೊಂದಿಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಬಡವರು, ಮಧ್ಯಮವರ್ಗದವರಿಗೆ ಸಮಸ್ಯೆಯಾಗದಂತೆ ಕೆಲ ತೆರಿಗೆ ಪರಿಷ್ಕರಣೆ ಮಾಡಿದ್ದೇವೆ. ಇದರಿಂದ 13 ಸಾವಿರ ಕೋಟಿ ರು. ಆದಾಯ ಮಾತ್ರ ಬರುತ್ತದೆ. ಹೀಗಾಗಿ ಇದು ಯಾರಿಗೂ ಹೊರೆಯಾಗಲ್ಲ ಎಂದು ಸಮರ್ಥಿಸಿಕೊಂಡರು. ರಾಜ್ಯಪಾಲರ ಭಾಷಣದ ಬಗ್ಗೆ ಒಟ್ಟು 34 ಸದಸ್ಯರು 12 ಗಂಟೆ 39 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.