ಪ್ರಿಯಾಂಕ ಖರ್ಗೆಗೆ ಪ್ರಚಾರದ ಹುಚ್ಚು Minister Sunil Kumar

By Suvarna NewsFirst Published May 2, 2022, 3:33 PM IST
Highlights

ರಾಜ್ಯ ವಿಧಾನಸಭಾ ಚುನಾವಣೆಗೆ ಸಮೀಪಿಸುತ್ತಿದೆ. ಭಾರತೀಯ ಜನತಾ ಪಕ್ಷದಲ್ಲಿ  ಚುನಾವಣಾ ಸಿದ್ಧತೆಗಳು ಬಿರುಸುಗೊಂಡಿವೆ. ಜಿಲ್ಲೆ ಜಿಲ್ಲೆಗಳಲ್ಲೂ ಪಕ್ಷ ಸಂಘಟನಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ವರದಿ: ಶಶಿಧರ ಮಾಸ್ತಿಬೈಲು, ಏಷಿಯಾನೆಟ್ ಸುವರ್ಣ 

ಉಡುಪಿ(ಮೇ.2): ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕ ಪ್ರಿಯಾಂಕ ಖರ್ಗೆ ಅವರ ಆರೋಪಗಳಿಗೆ ಇಂಧನ ಸಚಿವ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ. ಪ್ರಿಯಾಂಕ್ ಖರ್ಗೆ ಪ್ರತಿಯೊಂದು ವಿಷಯಕ್ಕೂ ಗಾಳಿಯಲ್ಲಿ ತೇಲಿಸಿ ದಾಖಲೆಗಳಿಲ್ಲದೆ ಮಾತನಾಡುತ್ತಾರೆ ಅವರು ಗಂಭೀರ ಆರೋಪಗಳನ್ನು ಯಾವತ್ತೂ ಮಾಡಿಲ್ಲ ಎಂದು ಉಡುಪಿಯಲ್ಲಿ ಸಚಿವ ಸುನೀಲ್ ಟಾಂಗ್ ನೀಡಿದರು.

ಬಿಟ್ ಕಾಯಿನ್ ವಿಷಯದಲ್ಲೂ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆಗಿದೆ ಎಂದು ಪ್ರಿಯಾಂಕ್ ಖರ್ಗೆ ದೂರಿದರು. ಅದರ ಬಗೆಗೂ ಯಾವುದೇ ದಾಖಲೆಗಳನ್ನು ಕೊಟ್ಟಿಲ್ಲ. ಅವರಿಗೆ  ಪ್ರಚಾರದ ಹುಚ್ಚು ಇರುವುದರಿಂದ ನಿರಂತರ ಆರೋಪ ಮಾಡುತ್ತಾರೆ. ಬಿಟ್ ಕಾಯಿನ್  ವಿಚಾರದಲ್ಲಿ ಸಾಧಿಸಿದ್ದೇನು? ತನ್ನ ಮೇಲೆ ಬಂದ ಆರೋಪಗಳನ್ನು ಅಲ್ಲಗಳೆಯಲು ಈ ರೀತಿ ಮಾತನಾಡುತ್ತಾರೆ. ಪೊಲೀಸರಿಗೆ ಸಿಗದ ವಾಯ್ಸ್ ರೆಕಾರ್ಡ್ ಇವರಿಗೆ ಹೇಗೆ ಸಿಗುತ್ತೆ? ಇವರ ಹುನ್ನಾರ ಇಲ್ಲದೆ ಇಷ್ಟೆಲ್ಲಾ ನಡೆಯಲು ಸಾಧ್ಯವಿಲ್ಲ.

ಪ್ರಿಯಾಂಕ ಖರ್ಗೆ ತನಿಖೆಯಾಗಬೇಕು ಎಂದು ಹೇಳಿದ್ದೇನೆ. ನೋಟೀಸು ಕೊಟ್ಟರೆ ಅವರು ಉತ್ತರ ಕೊಡಲ್ಲ ಅಂತಾರೆ. ಇದು ಪಲಾಯನವಾದ ಅಲ್ಲದೆ ಮತ್ತೇನು? ತಲೆಮರೆಸಿಕೊಂಡ ಆರೋಪಿಗಳ ರೀತಿಯಲ್ಲೇ ಇವರೂ ವರ್ತಿಸುತ್ತಾರೆ ಎಂದು ಸುನೀಲ್ ಕುಮಾರ್ ನೇರ ಆರೋಪಿಸಿದರು.

ಪ್ರಿಯಾಂಕ ಖರ್ಗೆ ಸಿಎಂ ಬದಲಾವಣೆ ಹೇಳಿಕೆಗೆ ಸುಧಾಕರ್ ತಿರುಗೇಟು!

ಕಾಂಗ್ರೇಸ್ ಗೆ ಅಭ್ಯರ್ಥಿಗಳೇ ಇಲ್ವಾ?: ಸಿದ್ದರಾಮಯ್ಯಗೆ 20 ಕ್ಷೇತ್ರಗಳಿಂದ ಚುನಾವಣೆ ಸ್ಪರ್ಧಿಸಲು ಬೇಡಿಕೆ ಇದೆ ಎಂಬ ವಿಚಾರಕ್ಕೆ ಇಂಧನ ಸಚಿವ ಸುನೀಲ್ ಕುಮಾರ್ ಲೇವಡಿ ಮಾಡಿದ್ದಾರೆ. ಕಳೆದ ಬಾರಿ ಸಿದ್ದರಾಮಯ್ಯ ಎರಡು ಕಡೆ ಚುನಾವಣೆಗೆ ನಿಂತಿದ್ದರು.ಒಂದು ಕಡೆ ಸೋತು ಮತ್ತೊಂದು ಕಡೆ ಕಷ್ಟದಿಂದ ಗೆದ್ದಿದ್ದರು. ಇವರಿಗೆ 20 ಕಡೆ ನಿಲ್ಲಲು ಯಾರು ಸಲಹೆ ಕೊಡುತ್ತಾರೋ ಗೊತ್ತಿಲ್ಲ.ಎಷ್ಟು ಕಡೆಯಿಂದ ಅವಕಾಶ ಕೊಡಬೇಕು ಎಂದು ಚುನಾವಣಾ ಆಯೋಗ ನಿರ್ಧಾರ ಮಾಡಲಿ.20 ಕಡೆ ಒಬ್ಬನೇ ವ್ಯಕ್ತಿಯನ್ನು ನಿಲ್ಲಿಸುವ ದಾರಿದ್ರ್ಯತೆ ಕಾಂಗ್ರೆಸ್ಸಿಗೆ ಬಂದಿದೆ ಅಂದರೆ ಬೇರೆ ಕಡೆ ಅಭ್ಯರ್ಥಿಗಳೇ ಇಲ್ಲ ಅಂತಾಯ್ತು.ಕಾಂಗ್ರೆಸ್ಸಿನಲ್ಲಿ ಅಭ್ಯರ್ಥಿಗಳ ಕೊರತೆ ಇದೆ ಅನ್ನೋದು ಖಾತ್ರಿ ಆಯ್ತು.ಆ ಪಕ್ಷವನ್ನು ಭಗವಂತನೇ ಕಾಪಾಡಬೇಕು ಎಂದರು.

ಬಿಜೆಪಿಯಲ್ಲಿ ಚುನಾವಣಾ ಸಿದ್ಧತೆ:  ರಾಜ್ಯ ವಿಧಾನಸಭಾ ಚುನಾವಣೆಗೆ ಸಮೀಪಿಸುತ್ತಿದೆ. ಭಾರತೀಯ ಜನತಾ ಪಕ್ಷದಲ್ಲಿ  ಚುನಾವಣಾ ಸಿದ್ಧತೆಗಳು ಬಿರುಸುಗೊಂಡಿವೆ. ಜಿಲ್ಲೆ ಜಿಲ್ಲೆಗಳಲ್ಲೂ ಪಕ್ಷ ಸಂಘಟನಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕೇಂದ್ರ ಬಿಜೆಪಿಯ ಟಾಪ್ ನಾಯಕರಲ್ಲಿ ಒಬ್ಬರಾದ ಬಿ.ಎಲ್ ಸಂತೋಷ್ ಮೈಸೂರಿನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪಕ್ಷ ದೊಳಗೆ  ಹೊಸತನದ ಆಗಮನದ ಕುರಿತು ಹೇಳಿಕೆ ಕೊಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಕಾರ್ಯಕರ್ತರಿಗೆ ಅವಕಾಶ ನೀಡುವ ಬಗ್ಗೆಯೂ ಮಾತನಾಡಿದ್ದಾರೆ. ಪಕ್ಷದಲ್ಲಿ ಹೊಸತನಕ್ಕೆ ಆದ್ಯತೆ ಎಂಬ ವಿಚಾರ ರಾಜ್ಯ ಬಿಜೆಪಿಯಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ. ಹಿರಿಯರು ಚಿಂತೆಗೆ ಬಿದ್ದಿದ್ದು, ಹೊಸಬ ಯಾರು? ಯುವಕ ಯಾರು ಎಂಬ ಪರಾಮರ್ಶೆ ಶುರುವಾಗಿದೆ. 

PSI Recruitment Scam: ಹಗರಣದಲ್ಲಿ ಪ್ರಭಾವಿ ಮಂತ್ರಿಗಳೇ ಭಾಗಿ, ಕಾಂಗ್ರೆಸ್ ಆರೋಪ!

ಈ ವಿಚಾರಕ್ಕೆ ಕುರಿತಂತೆ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹೊಸತನ ನಮ್ಮ ಸಂಘಟನೆಯ ಮೂಲ ಸ್ವರೂಪದಲ್ಲೇ ಇದೆ.  ಪ್ರತಿಯೊಬ್ಬ ಕಾರ್ಯಕರ್ತ ನಲ್ಲಿ ಹೊಸತನ ಇದೆ. ಕಾರ್ಯಕರ್ತರ ಹೊಸತನವನ್ನು ಸಂಘಟನೆಗೆ ಸಮಾಜಕ್ಕೆ ಪೂರಕವಾಗಿ ಬಳಸುತ್ತೇವೆ. ನಮ್ಮ ಸಂಘಟನೆಗಳಲ್ಲಿ ಇರುವಷ್ಟು ಹೊಸತನ ಬೇರೆ ಯಾವ ಸಂಘಟನೆಯಲ್ಲೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ನಮ್ಮಲ್ಲಿ ಹೊಸತನಗಳಿಗೆ ಅವಕಾಶವನ್ನೂ ಕೊಡುತ್ತಾರೆ. ಹೊಸತನಕ್ಕೆ ಅವಕಾಶ ನಿರಂತರವಾದ ಪ್ರಕ್ರಿಯೆ ಎಂದರು.

ಹಳೇಬೇರು ಹೊಸಚಿಗುರು ಇದ್ದರೇನೇ ಒಳ್ಳೆಯದು ಎನ್ನುವ ಗಾದೆ ಇದೆಯಲ್ಲ ಹಾಗೆ ಬಿಜೆಪಿ ಇದೆ ಎನ್ನುತ್ತಾ, ನನ್ನ ಪಕ್ಷ ಕಾಂಗ್ರೆಸ್ ನ ಕಾಲೆಳೆದರು. ಕಾಂಗ್ರೆಸ್ ರೀತಿಯಲ್ಲಿ ನಾವು ಒಂದೇ ಮರಕ್ಕೆ ಜೋತು ಬೀಳುವವರಲ್ಲ ಎಂದರು. ಪಕ್ಷದ ರಿಚಾರ್ಜ್ ನಮ್ಮ ಭೂತ್ ಗಳಲ್ಲಿ ನಡೆಯುತ್ತದೆ. ಪಕ್ಷದ ರೀ ಚಾರ್ಜಿಂಗ್ ಸೆಂಟರ್ ನಮ್ಮ ಕಾರ್ಯಕರ್ತನ ಕೈಯಲ್ಲಿದೆ. ಬೂತ್ ಮತ್ತು ಕಾರ್ಯಕರ್ತರನ್ನು ರಿಚಾರ್ಜ್ ಮಾಡುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ಯಾರ ಹೇಳಿಕೆಗಳ ಮೂಲಕ ನಾವು ರಿಚಾರ್ಜ್ ಆಗುವುದಿಲ್ಲ. ನಮ್ಮ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಿಚಾರ್ಜ್ ಆಗುತ್ತಾರೆ ಎಂದು ಯಾರ ಹೆಸರೂ ಹೇಳದೆ ಪ್ರಶ್ನೆಯೊಂದಕ್ಕೆ ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದರು.

click me!