ಆರೇಳು ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡವಿದೆ: ಸಿದ್ದರಾಮಯ್ಯ

By Govindaraj SFirst Published Oct 30, 2022, 3:20 AM IST
Highlights

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ, ವರುಣಾ, ಚಾಮರಾಜನಗರ, ಕೋಲಾರ ಸೇರಿದಂತೆ ಆರೇಳು ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಒತ್ತಡವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶಿವಮೊಗ್ಗ (ಅ.30): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ, ವರುಣಾ, ಚಾಮರಾಜನಗರ, ಕೋಲಾರ ಸೇರಿದಂತೆ ಆರೇಳು ಕ್ಷೇತ್ರದಿಂದ ಸ್ಪರ್ಧಿಸಲು ತಮಗೆ ಒತ್ತಡವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ‘ವರುಣಾ ಕ್ಷೇತ್ರದಲ್ಲಿ ನನ್ನ ಮಗ ಶಾಸಕನಾಗಿದ್ದಾನೆ. ಹೀಗಾಗಿ, ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ಇನ್ನೊಂದು ತಿಂಗಳಲ್ಲಿ ನಿರ್ಧರಿಸುತ್ತೇನೆ’ ಎಂದರು. ‘ಮೋದಿಯವರು ವಾರಣಾಸಿಯಿಂದ ಸ್ಪರ್ಧೆ ಮಾಡಿದರೆ ಬೇರೆ ರೀತಿಯಲ್ಲಿ ಬಿಂಬಿಸಲಾಗುತ್ತದೆ. ಅದೇ ನಾನು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಕ್ಕೆ ವಿಭಿನ್ನ ವ್ಯಾಖ್ಯಾನ ಮಾಡಲಾಗುತ್ತದೆ. ಹಾಗೇಕೆ?’ ಎಂದು ಪ್ರಶ್ನಿಸಿದರು.

ಇದೇ ವೇಳೆ, ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಬಿಜೆಪಿ ಸರ್ಕಾರ ಬಂದ ಮೇಲೆ ದ್ವೇಷದ ವಾತಾವರಣ ಹೆಚ್ಚಾಗಿದೆ. ಆರ್‌ಎಸ್‌ಎಸ್‌ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಂಡಿದ್ದಾರೆ. ಬಿಜೆಪಿಯರಿಗೆ ಅಪಪ್ರಚಾರ ಮತ್ತು ಸುಳ್ಳು ಹೇಳುವುದನ್ನು ಬಿಟ್ಟರೆ ಇನ್ನೇನು ಕೆಲಸವಿಲ್ಲ ಎಂದು ಟೀಕಿಸಿದರು. ಇದೇ ವೇಳೆ, ಶ್ರೀರಾಮುಲು, ನಳಿನ್‌ಕುಮಾರ್‌ ಕಟೀಲ್‌ ಹಾಗೂ ಈಶ್ವರಪ್ಪ ವಿರುದ್ದ ಕಿಡಿ ಕಾರಿದ ಸಿದ್ದು, ‘ಕಟೀಲ್‌ ಒಬ್ಬ ಜೋಕರ್‌. ಅವರ ಮಾತಿಗೆಲ್ಲ ಉತ್ತರ ಕೊಡುತ್ತ ಸಮಯ ವ್ಯರ್ಥ ಮಾಡಲು ನಾನು ಸಿದ್ಧನಿಲ್ಲ’ ಎಂದರು. ಶಿವಮೊಗ್ಗದಲ್ಲಿ ಜನರನ್ನು ಎತ್ತಿಕಟ್ಟಿಗಲಾಟೆ ಮಾಡಿಸುವುದು ಈಶ್ವರಪ್ಪನವರು.

ಬಾದಾಮಿಯ ಜನರ ವಿಶ್ವಾಸ, ನಂಬಿಕೆ ಕಳೆದುಕೊಂಡ ಸಿದ್ದು: ಯಡಿಯೂರಪ್ಪ

144 ಸೆಕ್ಷನ್‌ ಇದ್ದರೂ, ಹರ್ಷ ಕೊಲೆಯಾದಾಗ ಆತನ ಹೆಣ ಇಟ್ಟುಕೊಂಡು ಮೆರವಣಿಗೆ ಮಾಡಿದರು. ಈಶ್ವರಪ್ಪ ಅವರಂತವರಿಂದಲೇ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತಿದೆ ಎಂದರು. ‘ನಾನು ರಾಮುಲು ಅವರನ್ನು ಪೆದ್ದ ಎನ್ನಲು ಕಾರಣ ಅವರೇ. ಒಮ್ಮೆ ತಮ್ಮನ್ನು ತಾವೇ ಪೆದ್ದ ಎಂದು ಅವರು ಕರೆದುಕೊಂಡಿದ್ದರು. ಕೆಲವು ದಿನಗಳ ಹಿಂದೆ ಅವರು ಮಾತನಾಡುವಾಗ ‘ನಾನು ಉದ್ದವಿದ್ದೇನೆ, ಆದರೂ ಪೆದ್ದ. ಬಸವರಾಜ ಬೊಮ್ಮಾಯಿ ಕುಳ್ಳ ಇದ್ದರೂ ಬುದ್ಧಿವಂತ’ ಎಂದು ಹೇಳಿದ್ದರು. ಅವರ ಮಾತನ್ನೇ ನಾನು ನೆನಪು ಮಾಡಿದ್ದೇನೆ ಅಷ್ಟೆ ಎಂದರು.

ಮೀಸಲಾತಿ ಹೆಚ್ಚಳಕ್ಕಾಗಿ ಸಮುದಾಯಗಳು ಕೇಳುವುದು ತಪ್ಪಲ್ಲ: ಮೀಸಲಾತಿ ಹೆಚ್ಚಳಕ್ಕಾಗಿ ಸಮುದಾಯಗಳು ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮೀಸಲಾತಿ ಹೆಚ್ಚಿಸಲು ಕೆಲವು ಸಮುದಾಯಗಳು ಹೋರಾಟ ವಿಚಾರವಾಗಿ ಮಾತನಾಡಿದ ಅವರು, ಯಾರು ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ್ದಾರೆ, ಶೋಷಣೆಗೆ ಒಳಪಟ್ಟಿದ್ದಾರೆ. ಅವರಿಗೆ ಮೀಸಲಾತಿ ಕೊಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆರ್ಟಿಕಲ್‌ 15,16 ಪ್ರಕಾರ ಮೀಸಲಾತಿ ಕೊಡಬೇಕು. ಯಾವುದೇ ಸಮುದಾಯಗಳು ಮೀಸಲಾತಿ ಕೇಳುವುದು ತಪ್ಪೇನಿಲ್ಲ ಎಂದರು. ಸಿದ್ದು-ಡಿಕೆಗೆ ಖರ್ಗೆಯಿಂದ ಭಯ ಶುರುವಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕಟೀಲ್‌ ಒಬ್ಬ ಜೋಕರ್‌ ಅವನಿಗೆ ಉತ್ತರ ಕೊಡಲ್ಲ ಎಂದು ಕಿಡಿಕಾರಿದರು.

ಬಿಜೆಪಿಯವರಿಂದ ಜಗತ್ತಿನೆದುರು ದೇಶದ ಮರ್ಯಾದೆ ಹರಾಜು: ಸಿದ್ದರಾಮಯ್ಯ

ಬಿಜೆಪಿ ಸರ್ಕಾರಗಳಿಂದ ಜನರ ಕಲ್ಯಾಣ ಸಾಧ್ಯವಿಲ್ಲ ಎಂಬುದು ಇದೀಗ ಎಲ್ಲರಿಗೂ ಅರ್ಥವಾಗುತ್ತಿದೆ. ದೇಶ, ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು ಬಡವರು, ರೈತರು, ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಮಾರಕವಾಗಿವೆ. ಅಲ್ಲದೆ ಧರ್ಮ ಧರ್ಮಗಳ ನಡುವೆ ವಿಷಬೀಜ ಭಿತ್ತಿ ಜನರು ನೆಮ್ಮದಿಯಿಂದ ಬದುಕಲಾರದ ವಾತಾವರಣ ನಿರ್ಮಾಣ ಮಾಡಲಾಗಿದೆ. ಈ ಎಲ್ಲಾ ಕಾರಣಗಳಿಂದ ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ ಬರುವ ಸಂಪೂರ್ಣ ವಿಶ್ವಾಸವಿದೆ ಎಂದರು.

click me!