ಲೋಕಸಭಾ ಚುನಾವಣೆ 2024: ಬಾಗಲಕೋಟೆಯಲ್ಲಿ ಹ್ಯಾಟ್ರಿಕ್ ಗೆಲವು ಸಾಧಿಸಿದ್ದ ಗದ್ದಿಗೌಡರು..!

By Kannadaprabha NewsFirst Published Apr 16, 2024, 12:39 PM IST
Highlights

ಸತತ ಎರಡು ಬಾರಿ ಗೆಲುವು ಕಂಡಿದ್ದ ಪಿ.ಸಿ.ಗದ್ದಿಗೌಡರ 2014ರ ಲೋಕಸಭಾ ಚುನಾವಣೆಯನ್ನು ಅತೀ ಆತ್ಮವಿಶ್ವಾಸದಿಂದಲೇ ಎದುರಿಸಿದರು. ಈ ಸಾರಿ ಅವರಿಗೆ ಮೋದಿ ಅಲೆಯು ಕೈ ಹಿಡಿಯಿತು. ಹೀಗಾಗಿ ಲಕ್ಷಾಂತರ ಮತಗಳ ಅಂತರದಿಂದ ಕಾಂಗ್ರೆಸ್‌ನ ಅಜಯಕುಮಾರ ಸರನಾಯಕರನ್ನು ಸೋಲಿಸಿದರು. ಈ ಮೂಲಕ ಬಾಗಲಕೋಟೆ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಸುನಗದ ಎಸ್.ಬಿ.ಪಾಟೀಲರ ನಂತರ ಸತತ ಮೂರು ಗೆಲುವು ಕಂಡ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈಶ್ವರ ಶೆಟ್ಟರ

ಬಾಗಲಕೋಟೆ(ಏ.16): 2014ರ ಲೋಕಸಭೆ ಚುನಾವಣೆ ದೇಶದಲ್ಲಿ ಹೊಸತನಕ್ಕೆ ಸಾಕ್ಷಿಯಾಯಿತು. ಸತತ 10 ವರ್ಷಗಳ ಯುಪಿಎ ಸರ್ಕಾರದ ದುರಾಡಳಿತದಿಂದ ಕಂಗೆಟ್ಟಿದ್ದ ದೇಶದ ಜನತೆ ಬಿಜೆಪಿಗೆ ಭರ್ಜರಿ ಗೆಲುವು ಕರುಣಿಸಿದ್ದರು. ಅಂದು ದೇಶದಲ್ಲಿದ್ದ ಮೋದಿ ಅಲೆಯಲ್ಲಿ ಬಾಗಲಕೋಟೆಯ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಸತತ ಹ್ಯಾಟ್ರಿಕ್ ಗೆಲುವು ಸಾಧಿಸಿ ದಾಖಲೆ ಬರೆದರು.

ಸತತ ಎರಡು ಬಾರಿ ಗೆಲುವು ಕಂಡಿದ್ದ ಪಿ.ಸಿ.ಗದ್ದಿಗೌಡರ 2014ರ ಲೋಕಸಭಾ ಚುನಾವಣೆಯನ್ನು ಅತೀ ಆತ್ಮವಿಶ್ವಾಸದಿಂದಲೇ ಎದುರಿಸಿದರು. ಈ ಸಾರಿ ಅವರಿಗೆ ಮೋದಿ ಅಲೆಯು ಕೈ ಹಿಡಿಯಿತು. ಹೀಗಾಗಿ ಲಕ್ಷಾಂತರ ಮತಗಳ ಅಂತರದಿಂದ ಕಾಂಗ್ರೆಸ್‌ನ ಅಜಯಕುಮಾರ ಸರನಾಯಕರನ್ನು ಸೋಲಿಸಿದರು. ಈ ಮೂಲಕ ಬಾಗಲಕೋಟೆ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಸುನಗದ ಎಸ್.ಬಿ.ಪಾಟೀಲರ ನಂತರ ಸತತ ಮೂರು ಗೆಲುವು ಕಂಡ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಯತ್ನಾಳ್ ಗಂಡಸ್ತನಕ್ಕೆ ಸವಾಲ್‌ ಹಾಕಿದ ಸಚಿವ ಶಿವಾನಂದ ಪಾಟೀಲ..!

ಕೇಂದ್ರದಲ್ಲಿ ಸತತ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದ ಯುಪಿಎ ಸರ್ಕಾರದ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ಹಾಗೂ ಅಸಮಾಧಾನ ಭುಗಿಲೆದ್ದ ಸಂದರ್ಭ ಅದು. ಪ್ರಮುಖ ಹಗರಣಗಳಾದ 2ಜಿ ಸ್ಪೆಕ್ಟ್ರಂ, ಕಲ್ಲಿದ್ದಲು ಹಗರಣ ಕಾಂಗ್ರೆಸ್‌ ಸರ್ಕಾರಕ್ಕೆ ಅಂಟಿಕೊಂಡಿತ್ತು. ಲೋಕಪಾಲ ಜಾರಿಗೆ ಒತ್ತಾಯಿಸಿ ಅಣ್ಣಾ ಹಜಾರೆ ಹೋರಾಟ, ಕಪ್ಪು ಹಣದ ವಿರುದ್ಧದ ಜನಜಾಗ್ರತೆಯಂತಹ ಹೋರಾಟಗಳು ಕಾಂಗ್ರೆಸ್ ಪಕ್ಷವನ್ನು ಇನ್ನಿಲ್ಲದಂತೆ ಕಾಡಿದ ದಿನಗಳು. ಅಂತಹ ಸಂದರ್ಭದಲ್ಲಿ ಬಂದ ಲೋಕಸಭೆ ಚುನಾವಣೆ ದೇಶವ್ಯಾಪಿ ಕಾಂಗ್ರೆಸ್ ವಿರುದ್ಧ ಜನಾಂದೋಲನವಾಗಿ ರೂಪಗೊಂಡ ಪರಿಣಾಮ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರೆ ಸೋಲನುಭವಿಸಬೇಕಾಯಿತು.

ನಿಜಕ್ಕೂ ಭಾರತೀಯ ಜನತಾ ಪಕ್ಷದ ಇತಿಹಾಸದಲ್ಲಿಯೇ ಇಂತಹ ಬಹುದೊಡ್ಡ ಚುನಾವಣೆ ಗೆಲವು ಕಂಡಿರಲಿಲ್ಲ. 2014ರಲ್ಲಿ ನಡೆದ ಲೋಕಸಭೆಗೆ ಅಂದಿನ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಪರ ಅಲೆ ಸೃಷ್ಟಿಯಾಗಿತ್ತು. ರಾಜ್ಯದಲ್ಲಿ 2013ರಲ್ಲಿ ಬಹುಮತದೊಂದಿಗೆ ರಾಜ್ಯದ ಚುಕ್ಕಾಣೆ ಹಿಡಿದಿದ್ದ ಅಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆಯ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಎದುರಾಯಿತು. ಅಂದು ಬಾಗಲಕೋಟೆ ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಈ ಪರಿ ಸೋಲಾಗುತ್ತದೆ ಎಂದು ಯಾರು ನಿರೀಕ್ಷಿಸಿರಿಲ್ಲ. ಜಿಲ್ಲೆಯಲ್ಲಿ ಮುಧೋಳ ಮೀಸಲು ಕ್ಷೇತ್ರ ಹೊರತುಪಡಿಸಿದರೆ ಉಳಿದೆಲ್ಲೆಡೆ ಕಾಂಗ್ರೆಸ್ ಪಕ್ಷದ ಶಾಸಕರೆ ಅಧಿಕಾರದಲ್ಲಿದ್ದರು. ಆದರೂ ಸಹ ಸಿದ್ದರಾಮಯ್ಯ ಅವರ ಯಾವ ಜನಪರ ಯೋಜನೆಗಳು ಕಾಂಗ್ರೆಸ್‌ ಕೈಹಿಡಿಯಲಿಲ್ಲ.

ಗೆಳೆಯರ ಸ್ಪರ್ಧೆ: 

ಜನತಾ ಪರಿವಾರದ ಮೂಲಕ ರಾಜಕಾರಣ ಆರಂಭಿಸಿದ್ದ, ರಾಮಕೃಷ್ಣ ಹೆಗಡೆಯವರ ಶಿಷ್ಯರಾಗಿದ್ದ ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ಅಜಯಕುಮಾರ ಸರನಾಯಕ ದಶಕಗಳ ಕಾಲ ಆತ್ಮೀಯ ಸ್ನೇಹಿತರಾಗಿದ್ದವರು. ತಮ್ಮ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಅಜಯಕುಮಾರ ಸರನಾಯಕ 2003ರಲ್ಲಿ ಜನತಾದಳ ತೊರೆದು ಕಾಂಗ್ರೆಸ್‌ ಸೇರಿದ್ದರು. 2004ರಲ್ಲಿ ಪ್ರಗತಿ ಪರ ಜನತಾದಳದ ಜಿಲ್ಲಾಧ್ಯಕ್ಷರಾಗಿದ್ದ ಪಿ.ಸಿ.ಗದ್ದಿಗೌಡರ ಬಿಜೆಪಿ ಸೇರಿದ್ದರು. ಆದರೆ, ಇಬ್ಬರು ಗೆಳೆಯರು 2014ರ ಚುನಾವಣೆಯಲ್ಲಿ ಪರಸ್ಪರ ಎದುರಾಳಿಯಾಗಿ ಚುನಾವಣೆ ಎದುರಿಸುವ ಸಂದರ್ಭದಲ್ಲಿ ಅವರ ಅನುಯಾಯಿಗಳಲ್ಲಿ ಸಾಕಷ್ಟು ಮುಜುಗರ ಉಂಟಾಗಿತ್ತು.

ಜನರನ್ನು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್‌ ಮಾಡಿದ್ದೇ ಬಿಜೆಪಿ ಸಾಧನೆ: ಕಾಂಗ್ರೆಸ್ ವಾಗ್ದಾಳಿ

ಹ್ಯಾಟ್ರಿಕ್ ಗೆಲವು: 

2014ರ ಚುನಾವಣೆಯಲ್ಲಿ 14 ಅಭ್ಯರ್ಥಿಗಳು ಕಣದಲ್ಲಿದ್ದರು. ಪಿ.ಸಿ.ಗದ್ದಿಗೌಡರ 5,71,548 ಮತಗಳನ್ನು ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದರು. ಅವರ ಸಮೀಪದ ಪ್ರತಿ ಸ್ಪರ್ಧಿ ಕಾಂಗ್ರೆಸ್‌ನ ಅಜಯಕುಮಾರ ಸರನಾಯಕ 4,54,988 ಮತಗಳನ್ನು ಪಡೆದು ಪರಾಭವಗೊಂಡರು. ಅಂದು ಒಟ್ಟು ಮತದಾನ 10,78,805 (ಶೇ 68.90) ರಷ್ಟು ಆಗಿತ್ತು. ಗೆಲವಿನ ಅಂತರ 1,16,560 ಇತ್ತು.

ಶಂಕರ ಬಿದರಿ ಸೋಲು:

ನಿಜಕ್ಕೂ ಈ ಚುನಾವಣೆಯಲ್ಲಿ ಮತ್ತೊಂದು ಮಹತ್ವದ ಸೋಲು ಕಂಡಿದ್ದು ಅಂದಿನ ಜನಪ್ರಿಯ ಪೊಲೀಸ್‌ ಅಧಿಕಾರಿಯಾಗಿ ನಿವೃತ್ತರಾಗಿದ್ದ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಶಂಕರ ಬಿದರಿ. ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿದರಿ ಅವರಿಗೆ ಟಿಕೆಟ್ ಸಿಗಲಿಲ್ಲ. ಆದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸಿ ಕನಿಷ್ಟ ಮತಗಳನ್ನು ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದರು. ಅದ್ದೂರಿ ಪ್ರಚಾರ ಮಾಡಿಯೂ ಸಹ ಕೇವಲ 10,959 ಮತಗಳನ್ನು ಮಾತ್ರ ಪಡೆದು ಸೋಲು ಅನುಭವಿಸಿದ್ದರು.

click me!