100% ಸೋಲುವ ಕೈ ಶಾಸಕರಿಗೆ ಟಿಕೆಟ್‌ ಇಲ್ಲ: ಸಿದ್ದರಾಮಯ್ಯ

By Kannadaprabha NewsFirst Published Feb 4, 2023, 11:30 AM IST
Highlights

ನೂರಕ್ಕೆ ನೂರರಷ್ಟು ಸೋಲುವ ಕಾಂಗ್ರೆಸ್‌ ಶಾಸಕರಿಗೆ ಈ ಬಾರಿ ಟಿಕೆಟ್‌ ಇಲ್ಲ ಎಂದು ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬಸವಕಲ್ಯಾಣದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. 

ಬೀದರ್‌ (ಫೆ.04): ನೂರಕ್ಕೆ ನೂರರಷ್ಟು ಸೋಲುವ ಕಾಂಗ್ರೆಸ್‌ ಶಾಸಕರಿಗೆ ಈ ಬಾರಿ ಟಿಕೆಟ್‌ ಇಲ್ಲ ಎಂದು ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಬಸವಕಲ್ಯಾಣದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕಾಂಗ್ರೆಸ್‌ನ ಐವರು ಹಾಲಿ ಶಾಸಕರಿಗೆ ಕೊಕ್‌ ನೀಡುವ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಬಹುತೇಕ ಎಲ್ಲಾ ಶಾಸಕರಿಗೂ ಅವಕಾಶ ನೀಡಲಾಗುತ್ತಿದೆ. ಯಾರು ನೂರಕ್ಕೆ ನೂರರಷ್ಟುಸೋಲುತ್ತಾರೆ ಎಂಬ ಕಡೆ ಟಿಕೆಟ್‌ ನೀಡಲ್ಲ ಎಂದರು.

ಕಾಂಗ್ರೆಸ್‌ ಹೈಕಮಾಂಡ್‌ ಪ್ರತಿ ಕ್ಷೇತ್ರದಲ್ಲಿ 3 ಬಾರಿ ಸರ್ವೆ ಮಾಡಿಸಿದ್ದು, ಆ ಸರ್ವೆ ವರದಿಯ ಆಧಾರದ ಮೇಲೆ ಟಿಕೆಟ್‌ ಹಂಚಿಕೆಯಾಗಲಿದೆ. ಟಿಕೆಟ್‌ ಸಿಗದವರು ನಿರಾಶರಾಗಬೇಕಿಲ್ಲ. ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದ್ದು, ಅನೇಕ ಅವಕಾಶಗಳಿರುತ್ತವೆ ಎಂದರು. ರಾಜ್ಯದಲ್ಲಿ ಕಾಂಗ್ರೆಸ್‌ ಪರವಾದ ಗಾಳಿ ಬೀಸಿದೆ. ಬಿಜೆಪಿಯ ಕೆಲ ಹಾಲಿ ಶಾಸಕರು ಈ ಚುನಾವಣೆ ಸಂದರ್ಭ ಕಾಂಗ್ರೆಸ್‌ ಪಕ್ಷಕ್ಕೆ ಬರ್ತಾರೆ. ಯಾರು ಪಕ್ಷಕ್ಕೆ ಬರ್ತಾರೆ ಎಂದು ಬಹಿರಂಗವಾಗಿ ಹೇಳಲು ಆಗೋದಿಲ್ಲ. ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬರುವವರಿಗೆ ಸ್ವಾಗತಿಸುತ್ತೇವೆ ಎಂದರು.

ಸಿದ್ದರಾಮಯ್ಯ, ರಾಬರ್ಟ್‌ ವಾದ್ರಾ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ದೂರು

ಬಸವಕಲ್ಯಾಣದ ಅನುಭವ ಮಂಟಪಕ್ಕೆ 1 ಸಾವಿರ ಕೋಟಿ ರು. ಅನುದಾನ: ಅಂದಿನ ನಮ್ಮ ಕಾಂಗ್ರೆಸ್‌ ಸರ್ಕಾರವೇ ಗೊ.ರು ಚನ್ನಬಸಪ್ಪ ಅವರ ನೇತೃತ್ವದಲ್ಲಿ ಅನುಭವ ಮಂಟಪದ ಸಮಿತಿ ರಚನೆ ಮಾಡಿತ್ತು. ಆದರೆ ಆ ದಿನಗಳಲ್ಲಿ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅದು ಅಲ್ಲಿಯೇ ನಿಂತಿತ್ತು. ಈಗ ಆರಂಭವಾಗಿರುವ ಕಾಮಗಾರಿ ಬಹಳ ಮಂದಗತಿಯಲ್ಲಿ ಸಾಗುತ್ತಿದೆ. ಮುಂದೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೆ, ಆಗ ಸಾವಿರ ಕೋಟಿ ಆದರೂ ಸರಿ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸುತ್ತೇವೆ ಎಂದರು.

ಬಿಜೆಪಿ ಪಾಪದ ಚಾಜ್‌ರ್‍ಶೀಟ್‌ ಬಿಚ್ಚಿಟ್ಟಿದ್ದೇವೆ: ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಚಾರ್ಜಶೀಟ್‌ನ್ನು ಪ್ರಜಾಧ್ವನಿ ಯಾತ್ರೆಯ ಸಂದರ್ಭದಲ್ಲಿ ಜನತೆಯ ಮುಂದೆ ಪಾಪದ ಪುರಾಣ ಎಂದು ಅವರ ಕರ್ಮ ಕಾಂಡಗಳನ್ನು ಬಿಚ್ಚಿಟ್ಟಿದ್ದು, ಜನರಿಂದ ನಮ್ಮ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ನುಡಿದರು. ಅವರು ಬಸವಕಲ್ಯಾಣದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ ಯಾತ್ರೆಯ ಉದ್ಘಾಟನೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಅಧಿಕಾರಕ್ಕೆ ಬಂದರೆ ಏನು ಮಾಡ್ತೇವೆ ಎಂಬ ಭರವಸೆಗಳನ್ನು ಕೊಡುತ್ತಿದ್ದೇವೆ, ಇದು ಕೇವಲ ನೆಗೆಟಿವ್‌ ಕ್ಯಾಂಪೇನಿಂಗ್‌ ಅಲ್ಲ ಎಂದರು.

ಕೋಲಾರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ: ಶಾಸಕ ಯತೀಂದ್ರ

ಎಸ್‌ಸಿ-ಎಸ್‌ಟಿ ಜನಾಂಗದವರ ಏಳ್ಗೆಗೆ 10 ಅಂಶಗಳ ಅಭಿವೃದ್ಧಿ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿ ಘೋಷಿಸಿದ್ದೇವೆ. ಅದರಂತೆ 2ಲಕ್ಷ ಕೋಟಿ ರು. ಗಳ ನೀರಾವರಿ ಯೋಜನೆಗಳನ್ನು ಜಾರಿಗೆ ತರುವ, ಬಾಕಿಯುಳಿದ ಯೋಜನೆಗಳನ್ನು 5 ವರ್ಷದಲ್ಲಿ ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ ಎಂದರು. ಕಲ್ಯಾಣ ಕರ್ನಾಟಕ ಭಾಗದ ಏಳ್ಗೆಗೆ 5 ಸಾವಿರ ಕೋಟಿ ರು. ಗಳನ್ನು ನೀಡುವದರ ಜೊತೆಗೆ ಈ ಭಾಗದ 41ಕ್ಷೇತ್ರಗಳ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಕೋಟಿ ರು. ಗಳನ್ನು ಪ್ರತಿ ವರ್ಷ ನೀಡಲು ನಿರ್ಧರಿಸಿದ್ದೇವೆ. ಈ ಹಿಂದೆ 30 ಸಾವಿರಕ್ಕೂ ಹೆಚ್ಚು ಉದ್ಯೋಗ ಭರ್ತಿ ಮಾಡಿದ್ದೇವು. ಇವರು ಹೈದ್ರಾಬಾದ್‌ ಕರ್ನಾಟಕ ಎಂಬ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದು ಬಿಟ್ರೆ ಏನೂ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

click me!