ಮೂರನೇ ಬಾರಿ ಮೋದಿ ಪ್ರಧಾನಿಯಾಗಿ ವಿಶ್ವನಾಯಕರಾಗ್ತಾರೆ: ಕೆ.ಎಸ್.ಈಶ್ವರಪ್ಪ

By Kannadaprabha NewsFirst Published Jan 4, 2024, 12:36 PM IST
Highlights

ಮುಂಬರುವ ಲೋಕಸಭೆ ಚುನಾವಣೆ ಇಡೀ ವಿಶ್ವದ ಗಮನ ಸೆಳೆದಿದ್ದು, ಚುನಾವಣೆ ನಂತರ ನರೇಂದ್ರ ಮೋದಿ ಮೂರನೇ ಬಾರಿಗೆ ಭಾರೀ ಬಹುಮತದೊಂದಿಗೆ ಪ್ರಧಾನಿಯಾಗಿ ವಿಶ್ವ ನಾಯಕರಾಗಿ ಹೊರ ಹೊಮ್ಮಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ದಾವಣಗೆರೆ (ಜ.04): ಮುಂಬರುವ ಲೋಕಸಭೆ ಚುನಾವಣೆ ಇಡೀ ವಿಶ್ವದ ಗಮನ ಸೆಳೆದಿದ್ದು, ಚುನಾವಣೆ ನಂತರ ನರೇಂದ್ರ ಮೋದಿ ಮೂರನೇ ಬಾರಿಗೆ ಭಾರೀ ಬಹುಮತದೊಂದಿಗೆ ಪ್ರಧಾನಿಯಾಗಿ ವಿಶ್ವ ನಾಯಕರಾಗಿ ಹೊರ ಹೊಮ್ಮಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಕಾಂಗ್ರೆಸ್ ಆಳ್ವಿಕೆ ಇದ್ದಾಗ ಯಾವುದೇ ದೇಶಗಳೂ ನಮ್ಮ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಆದರೆ, ನರೇಂದ್ರ ಮೋದಿ ದೇಶದ ಸಾರಥ್ಯ ವಹಿಸಿದ ನಂತರ ವಿಶ್ವದ ಬಹುತೇಕ ರಾಷ್ಟ್ರಗಳು ಭಾರತದೊಂದಿಗೆ ಸ್ನೇಹ, ವಿಶ್ವಾಸದಿಂದಿವೆ. ಅದರಲ್ಲೂ ಮುಸ್ಲಿಂ ರಾಷ್ಟ್ರಗಳು, ಕ್ರಿಶ್ಚಿಯನ್‌ ರಾಷ್ಟ್ರಗಳು ನಮ್ಮೊಂದಿಗೆ ಸಹೋದರರಂತೆ ಇವೆ. ಇದನ್ನೆಲ್ಲಾ ಗಮನಿದರೆ ಮೋದಿ ಮುಂದಿನ ದಿನಗಳಲ್ಲಿ ವಿಶ್ವ ನಾಯಕರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಭಾರತೀಯ ಕಲೆ, ಸಂಸ್ಕೃತಿಯ ಅನ್ಯ ದೇಶಗಳು ಒಪ್ಪಿಕೊಂಡಿವೆ. ಇಂದು ಅನೇಕ ದೇಶಗಳಲ್ಲಿ ಸನಾತನ ಧರ್ಮದ ಬಗ್ಗೆ ಸ್ಮರಣೆಯಾಗುತ್ತಿದೆ. ದೇಶದ ಸಂಸ್ಕೃತಿ, ಶ್ರದ್ಧಾ ಕೇಂದ್ರಗಳ ಉಳಿಸುವ ಕೆಲಸ, ಪ್ರಯತ್ನವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ. ಕಾಶಿ ವಿಶ್ವನಾಥ ಮತ್ತು ಅಲ್ಲಿನ ದೇವಸ್ಥಾನಗಳ ಸಮೀಕ್ಷೆ ಕೈಗೊಳ್ಳಲು ನ್ಯಾಯಾಲಯಗಳು ಆದೇಶ ಹೊರಡಿಸಿವೆ. ಅದೇ ರೀತಿ ನಮ್ಮ ಶ್ರದ್ಧಾ ಕೇಂದ್ರಗಳ ಮತ್ತೆ ನಮ್ಮ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲೂ ಪ್ರಯತ್ನ ನಡೆದಿವೆ ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದರು.

ಹರಿಪ್ರಸಾದ್‌ ರಿಂದ ಬೇಜವಾಬ್ದಾರಿ ಹೇಳಿಕೆ ಈಶ್ವರಪ್ಪ ಗರಂ: ಗೋಧ್ರಾ ಹತ್ಯಾಕಾಂಡದ ರೀತಿ ಮತ್ತೊಂದು ದುರಂತ ಆಗಬಹುದೆಂಬ ಹೇಳಿಕೆ ನೀಡಿದ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ಬಾಯಿಯಿಂದ ಇಂತಹ ಮಾತುಗಳು ಬರಬಾರದಿತ್ತು ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಇಡೀ ದೇಶವೇ ಒಪ್ಪಿದೆ. ಹೀಗಿದ್ದರೂ ಹರಿಪ್ರಸಾದ್‌ರಂತಹವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ದುರಂತ ಎಂದರು. ಪಿ.ವಿ.ನರಸಿಂಹರಾವ್‌, ರಾಜೀವ್‌ ಗಾಂಧಿಯಂತಹವರ ಸಹಕಾರ ಇರಲಿಲ್ಲವೆಂದರೆ ಆಗುತ್ತಿರಲಿಲ್ಲ. ಅಲ್ಲೊಂದು, ಇಲ್ಲೊಂದು ಒಡಕು ಧ್ವನಿ ಬರುವುದು ಸರಿಯಲ್ಲ ಎಂದು ತಿಳಿಸಿದರು. ರಾಜ್ಯ ಸರ್ಕಾರದ ರಕ್ಷಣೆಯ ಅವಶ್ಯಕತೆ ಇಲ್ಲವೆನಿಸುತ್ತದೆ. ಶ್ರೀರಾಮಚಂದ್ರನೇ ಜನರಿಗೆ ರಕ್ಷಣೆ ಕೊಡುತ್ತಾನೆ ಎಂದು ಈಶ್ವರಪ್ಪ ಹೇಳಿದರು.

ಕರಸೇವಕರಿಗೆ ತೊಂದರೆ ಕೊಟ್ಟರೆ ಸುಮ್ಮನೆ ಬಿಡಲ್ಲ: ಕೆ.ಎಸ್.ಈಶ್ವರಪ್ಪ

ಯೋಗಿ ಆದಿತ್ಯನಾಥ್‌ ಬಿಟ್ಟರೆ ಬೇರೆ ಸಿಎಂಗೆ ಆಹ್ವಾನಿಸಿಲ್ಲ: ಅಯೋಧ್ಯೆಯಲ್ಲಿ ಜ.22ರಂದು ನಡೆಯುವ ಶ್ರೀರಾಮ ಮಂದಿರ ಉದ್ಘಾಟನೆಗೆ ಲಾಲ್‌ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿ ಎಲ್ಲರಿಗೂ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿಗಳ ಪೈಕಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರನ್ನು ಸಮಾರಂಭಕ್ಕೆ ಆಹ್ವಾನಿಸಿದ್ದು, ಬೇರೆ ಯಾವುದೇ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

click me!