
ನವದೆಹಲಿ: ಕೇಂದ್ರದ ಎನ್ಡಿಎ ಸರ್ಕಾರದ ಅಳಿವು- ಉಳಿವು ನಿರ್ಧರಿಸಿರುವ ಸಾಮರ್ಥ್ಯ ಹೊಂದಿರುವ ಜೆಡಿಯುಗೆ ಬಿಗ್ ಶಾಕ್ ಎದುರಾಗಿದೆ. ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ಯಾವುದೇ ಪ್ರಸ್ತಾಪ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಅಭಿವೃದ್ಧಿಯ ನಿಟ್ಟಿನಲ್ಲಿ ಬಿಹಾರಕ್ಕೆ ವಿಶೇಷ ಸ್ಥಾನಮಾನದ ಪ್ರಸ್ತಾಪ ಇದೆಯೇ ಎಂಬ ಜೆಡಿಯು ಸಂಸದ ರಾಮ್ಪ್ರೀತ್ ಮಂಡಲ್ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹಣಕಾಸು ಸಚಿವಾಲಯ, ವಿಶೇಷ ಸ್ಥಾನಮಾನ ನೀಡಲು ಅಗತ್ಯವಾದ ವ್ಯಾಪ್ತಿಯಲ್ಲಿ ಬಿಹಾರ ಬರುವುದಿಲ್ಲ ಎಂದು 2012ರಲ್ಲಿ ಸರ್ಕಾರ ರಚಿಸಿದ್ದ ಸಮಿತಿಯೊಂದು ವರದಿ ನೀಡಿದೆ. ಹೀಗಾಗಿ ಅಂಥ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಹೇಳಿದೆ.
ಕೇಂದ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಜೆಡಿಯು ಬಜೆಟ್ನಲ್ಲಿ 45000 ಕೋಟಿ ರು. ವಿಶೇಷ ಅನುದಾನಕ್ಕೆ ಬೇಡಿಕೆ ಇಟ್ಟಿದೆ ಎಂಬ ವರದಿಗಳ ಬೆನ್ನಲ್ಲೇ ಸರ್ಕಾರ ಈ ಮಾಹಿತಿ ನೀಡಿದೆ. ಈ ನಡುವೆ ಸರ್ಕಾರದ ಹೇಳಿಕೆಯನ್ನು ವಿಪಕ್ಷ ಆರ್ಜೆಡಿ ಕಟುವಾಗಿ ಟೀಕಿಸಿದೆ.
ಲೋಕಸಭೆಯಲ್ಲಿ 12 ಸ್ಥಾನ ಹೊಂದಿರುವ ಜೆಡಿಯು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಸರ್ಕಾರವು ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಬೇಡಿಕೆಯನ್ನು ಪಕ್ಷ ಇರಿಸಿತ್ತು. ಒಂದು ವೇಳೆ ವಿಶೇಷ ಸ್ಥಾನಮಾನ ಸಾಧ್ಯವಾಗದೇ ಹೋದರೆ ವಿಶೇಷ ಪ್ಯಾಕೇಜ್ ನೀಡುವ ವಿಧಾನವನ್ನೂ ಪರಿಗಣಿಸಬಹುದು ಎಂದು ಸಲಹೆ ನೀಡಿತ್ತು.
ಇಂದಿನ ಇಂಡಿಯಾ ಕೂಟದ ಭಾಗವಾಗಿದ್ದ ಜೆಡಿಯು ಜಾರಿಗೊಳಿಸಿದ್ದ ಒಬಿಸಿ, ಎಸ್ಸಿಎಸ್ಟಿ ಸಮುದಾಯಕ್ಕೆ ಶೇ.65ರಷ್ಟು ಮೀಸಲು ಆದೇಶವನ್ನು ಇತ್ತೀಚೆಗೆ ಹೈಕೋರ್ಟ್ ವಜಾ ಮಾಡಿತ್ತು. ಇದು 2025ರ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಜೆಡಿಯುಗೆ ಶಾಕ್ ನೀಡಿತ್ತು. ಹೀಗಾಗಿ ಜನರ ಮುಂದೆ ಮತ್ತೊಮ್ಮೆ ತೆರಳುವ ಮುನ್ನ ವಿಶೇಷ ಸ್ಥಾನಮಾನ ಅಥವಾ ಹಣಕಾಸು ಪ್ಯಾಕೇಜ್ ಪಡೆಯುವ ಪಟ್ಟನ್ನು ಕೇಂದ್ರದ ಮುಂದೆ ಜೆಡಿಯು ಇರಿಸಿತ್ತು. ಇದರ ಜೊತೆಗೆ ಸಂವಿಧಾನದ 9ನೇ ಪರಿಚ್ಛೇದಲ್ಲಿ ಒಬಿಸಿ, ಅತ್ಯಂತ ಹಿಂದುಳಿದ ಸಮುದಾಯ, ಎಸ್ಸಿ, ಎಸ್ಟಿ ಸಮುದಾಯಕ್ಕೆ ಹೆಚ್ಚಿನ ಮೀಸಲು ನೀಡುವ ಅಂಶ ಸೇರಿಸುವ ಬಗ್ಗೆಯೂ ಒತ್ತಾಯ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.