ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಮ್ಯೂಸಿಕಲ್‌ ಚೇರ್‌ ಆರಂಭ: ಛಲವಾದಿ ನಾರಾಯಣಸ್ವಾಮಿ

By Kannadaprabha NewsFirst Published Sep 25, 2024, 4:29 PM IST
Highlights

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ ನಾಳೆಯಿಂದಲೇ (ಇಂದು) ಮ್ಯೂಸಿಕಲ್‌ ಚೇರ್‌ ಆರಂಭವಾಗಲಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. 

ಗುಂಡ್ಲುಪೇಟೆ (ಸೆ.25): ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಟ್ರೆ ನಾಳೆಯಿಂದಲೇ (ಇಂದು) ಮ್ಯೂಸಿಕಲ್‌ ಚೇರ್‌ ಆರಂಭವಾಗಲಿದೆ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಹಿರೀಕಾಟಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಮ್ಯೂಸಿಕಲ್‌ ಚೇರ್‌ನ ಜಾಗ ಹಿಡಿಯಲು ಬುಧವಾರದಿಂದಲೇ ಶುರುವಾಗಲಿದೆ ಎಂದು ಭವಿಷ್ಯ ನುಡಿದರು. ಪ್ರತಿ ರಸ್ತೇಲೂ ಮುಡಾ ದಾಖಲೆಗಳು ಸಿಗುತ್ತಿವೆ. ಕಾರಣ ಏನಂದ್ರೆ ಸಚಿವ ಭೈರತಿ ಸುರೇಶ್‌ ಹೆಲಿಕ್ಯಾಪ್ಟರ್‌ನಲ್ಲಿ ತೆರಳುವಾಗ ಮುಡಾ ದಾಖಲೆ ರಸ್ತೆಯಲ್ಲಿ ಬಿದ್ದಿರಬೇಕು ಎಂದು ವ್ಯಂಗವಾಡಿದರು.

ಕ್ರಷರ್‌ ರಸ್ತೆಯೇ ದುರುಪಯೋಗ ಸಾಬೀತು: ಶಾಸಕರ ಒಡೆತನದ ಕ್ರಷರ್‌ಗೆ ರಸ್ತೆ ಮಾಡಿರೋದರಲ್ಲಿ ಅಧಿಕಾರಿಗಳ ದುರುಪಯೋಗ ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ದೊಡ್ಡಹುಂಡಿ ಬಳಿಯ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ರಿಗೆ ಸೇರಿದ ಕ್ರಷರ್‌ಗೆ ದಲಿತ ಭೂಮಿಯಲ್ಲಿ ರಸ್ತೆ ನಿರ್ಮಾಣ ಮಾಡಿ ತೊಂದರೆಯಾಗಿದೆ ಎಂದು ದಲಿತರು ದೂರು ನೀಡಿದ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ಬಳಿಕ ಮಾತನಾಡಿದರು. ಇಲ್ಲಿನ ತಹಸೀಲ್ದಾರ್‌ ಹಾಗೂ ಬೇಗೂರು ಪೊಲೀಸರು ಇಲ್ಲಿನ ಶಾಸಕರ ತೃಪ್ತಿ ಪಡಿಸಲು ಹೋಗಿ ಜನರಿಗಾಗಿ ರಸ್ತೆ ಮಾಡಲಿಲ್ಲ. ಕ್ರಷರ್‌ಗೆ ರಸ್ತೆ ಮಾಡುತ್ತಿದ್ದಾರೆ ಇದು ತಪ್ಪು ಎನ್ನುವುದು ಸಾಬೀತು ಕೂಡ ಆಗಿದೆ ಎಂದರು.

Latest Videos

ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಛಲವಾದಿ ನಾರಾಯಣಸ್ವಾಮಿ

ರಸ್ತೆ ಮಾಡಲು ಗುತ್ತಿಗೆದಾರ ಯಾರು ಎಂಬುದು ಗೊತ್ತಿಲ್ಲ. ಯಾವ ಅನುದಾನ ಅನ್ನೋದು ಗೊತ್ತಿಲ್ಲ. 8 ವರ್ಷದ ಹಿಂದಿನ ಹಣ ಅಂತಾರೆ ಎಂಟು ವರ್ಷದಿಂದ ಅನುದಾನ ವಾಪಸ್‌ ಹೋಗಿಲ್ವ? ತಹಸೀಲ್ದಾರ್‌ ತಪ್ಪು ಮಾಹಿತಿ ನೀಡಿ, ಅವರೇ ಖಾತ್ರಿ ಮಾಡಿದ್ದಾರೆ ಎಂದರು. ಯಾರದೋ ಹಿತಕ್ಕಾಗಿ ಕಾಯಲು ಹೋಗಬೇಡಿ ಎಂದು ತಹಸೀಲ್ದಾರ್‌ ಹಾಗೂ ಬೇಗೂರು ಪೊಲೀಸರಿಗೆ ತಿಳಿ ಹೇಳಿದರಲ್ಲದೆ ಯಾರ ಮರ್ಜಿಗೂ ಒಳಗಾಗದೆ ಜನರ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.

ಕೆಲಸ ನಿಲ್ಲಿಸಿ: ಕ್ರಷರ್‌ಗಾಗಿ ಮಾಡಿರುವ ಕೆಲಸ ಇಂದಿನಿಂದಲೇ ನಿಲ್ಲಿಸಬೇಕು. ಹಿಂದೆ ಹೇಗಿತ್ತೋ ಅದೇ ರೀತಿ ಜಮೀನು ಕೂಡ ಇರಬೇಕು. ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ರೈತರ ಸಭೆ ಕರೆಯುವ ತನಕ ಯಥಾಸ್ಥಿತಿ ಮುಂದುವರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಿಮ್ಮ ವಿಷಯ ಹೊರಹಾಕಿದರೆ ನಿದ್ದೆ ಮಾಡಲ್ಲ: ಸಚಿವ ಎಂಬಿಪಾಗೆ ಛಲವಾದಿ ತಿರುಗೇಟು

ಒಪ್ಪಿಗೆ ಪಡೆದಿಲ್ಲ: ದಲಿತರ ವಿರೋಧದ ನಡುವೆ ಬಂಡಿ ದಾರಿ ಮಾಡಿಸಲು ತಹಸೀಲ್ದಾರ್‌, ಪೊಲೀಸರು ಗುತ್ತಿಗೆದಾರರಲ್ಲ. ದಲಿತರ ಹೆದರಿಸಿ, ಬೆದರಿಸಿ ಆಮೀಷ ಒಡ್ಡಿರುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು. ಈ ಸಮಯದಲ್ಲಿ ಮಾಜಿ ಸಚಿವ ಎನ್.ಮಹೇಶ್‌, ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌, ಬಿಜೆಪಿ ಹಿರಿಯ ಮುಖಂಡ ಸಿ.ಮಹದೇವಯ್ಯ, ಮಂಡಲ ಅಧ್ಯಕ್ಷ ಸಿ.ಮಹದೇವಪ್ರಸಾದ್‌, ಬಿಜೆಪಿ ದಲಿತ ಮೋರ್ಚ ಮುಖಂಡ ಪ್ರಕಾಶ್‌ ಮೂಡ್ನಾ ಕೂಡು, ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್‌, ಉಪ ವಿಭಾಗಾಧಿಕಾರಿ ಬಿ.ಆರ್.‌ಮಹೇಶ್‌, ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಸೇರಿದಂತೆ ಹಲವರಿದ್ದರು.

click me!