ಜೆಡಿಎಸ್- ಬಿಜೆಪಿ ಮೈತ್ರಿ ಪವಿತ್ರವೋ ಅಪವಿತ್ರವೋ ಜನರೇ ನಿರ್ಧರಿಸಲಿದ್ದಾರೆ: ಸಂಸದ ಡಿ.ಕೆ.ಸುರೇಶ್

By Kannadaprabha NewsFirst Published Oct 1, 2023, 3:40 AM IST
Highlights

ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿ ಮಾಜಿ ಶಾಸಕ ಎಂ.ಸಿ.ಅಶ್ವತ್ಥ ಅವರು ತಮ್ಮ ಬೆಂಬಲಿಗರೊಂದಿಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಗಾಂಧಿ ಜಯಂತಿಯಂದು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. 

ಚನ್ನಪಟ್ಟಣ (ಅ.01): ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿ ಮಾಜಿ ಶಾಸಕ ಎಂ.ಸಿ.ಅಶ್ವತ್ಥ ಅವರು ತಮ್ಮ ಬೆಂಬಲಿಗರೊಂದಿಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಗಾಂಧಿ ಜಯಂತಿಯಂದು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ನಗರದಲ್ಲಿ ಮಾಜಿ ಶಾಸಕ ಎಂ.ಸಿ.ಅಶ್ವತ್ಥ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಎಂ.ಸಿ.ಅಶ್ವತ್ಥ್, ಅವರ ಸಹೋದರ ಎಂ.ಸಿ.ಕರಿಯಪ್ಪ ಸೇರಿದಂತೆ ತಾಲೂಕಿನ ಹಲವು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ಅಶ್ವತ್ಥ್‌, ತಾಲೂಕಿನಲ್ಲಿ ಜೆಡಿಎಸ್ ಬಲವರ್ಧನೆಗಾಗಿ ಬೂತ್ ಮಟ್ಟದಿಂದ ಪಕ್ಷ ಕಟ್ಟಿದ್ದಾರೆ.  ಇಂದಿನ ರಾಜಕೀಯ ಬದಲಾವಣೆಗಳಿಂದ ಕಾಂಗ್ರೆಸ್ ಸೇರುತ್ತಿದ್ದು, ಪಕ್ಷದ ತತ್ವ ಸಿದ್ಧಾಂತ ಮೆಚ್ಚಿ ಬರುವವರನ್ನು ಸ್ವಾಗತಿಸಲಾಗುವುದು ಎಂದರು.

ಪ್ರಧಾನಿ ಮೋದಿ ಜಗತ್ತೇ ಮೆಚ್ಚುವಂತಹ ನಾಯಕ: ಸಂಸದ ರಮೇಶ ಜಿಗಜಿಣಗಿ

ಹಿಂದೆಯೇ ಆಹ್ವಾನ ನೀಡಿದ್ದೆ: ಅಶ್ವತ್ ಮೊದಲಿನಿಂದಲೂ ಸಹ ಡಿ.ಕೆ.ಶಿವಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಕಾಂಗ್ರೆಸ್ ಸೇರ್ಪಡೆಗೊಳ್ಳುವಂತೆ ಅವರಿಗೆ ಆಹ್ವಾನ ನೀಡಿದ್ದೆ. ಆದರೆ, ಇಂದು ಬದಲಾದ ವಾತಾವರಣದಲ್ಲಿ ಅವರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ. ಜಾತ್ಯತೀತ ಎಂದು ಹೇಳಿಕೊಳ್ಳುತ್ತಿದ್ದವರು ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ. ನಾಯಕರು ಒಂದು ಸಮುದಾಯದ ಮತವೇ ಬೇಡ ಎಂದು ಹೇಳಿದ ಮೇಲೆ ಅಲ್ಪಸಂಖ್ಯಾತರು ಏನು ತೀರ್ಮಾನ ತೆಗೆದುಕೊಳ್ಳಬೇಕೋ ತೆಗೆದುಕೊಂಡಿದ್ದಾರೆ. 

ಜೆಡಿಎಸ್- ಬಿಜೆಪಿ ಮೈತ್ರಿ ಪವಿತ್ರವೋ ಅಪವಿತ್ರವೋ ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ ಎಂದರು.ಜೆಡಿಎಸ್ ಕಾರ್ಯಕರ್ತರು ಯೋಗೇಶ್ವರ್ ವಿರುದ್ಧ ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಅವರೆಂದೂ ವೈಯಕ್ತಿಕ ಹಿತಾಸಕ್ತಿಗಾಗಿ ಹೋರಾಟ ಮಾಡಲಿಲ್ಲ. ಶಿಷ್ಟಾಚಾರ ಕದನ, ತಹಸೀಲ್ದಾರ್ ವಿಚಾರದ ಜಟಾಪಟಿ, ಕೆಲಸಗಳ ಕುರಿತು ನಡೆದ ಹಣಾಹಣಿಗಳನ್ನು ಎಲ್ಲರೂ ನೋಡಿದ್ದಾರೆ. ಇವತ್ತು ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ನಡುವೆ ಏನು ಒಡಂಬಡಿಕೆ ನಡೆದಿದೆಯೋ ಗೊತ್ತಿಲ್ಲ. ಆದರೆ, ಅವರ ನಿರ್ಧಾರದಿಂದ ನೊಂದಿರುವ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ತಿಳಿಸಿದರು. 

ಮಾಜಿ ಶಾಸಕ ಎಂ.ಸಿ.ಅಶ್ವತ್ಥ ಮಾತನಾಡಿ, ಜೆಡಿಎಸ್‌ನಲ್ಲಿನ ಕುಟುಂಬ ರಾಜಕಾರಣ ಬೇಸರ ತರಿಸಿದೆ. ನಾವು 25-30 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬರುತ್ತಿದ್ದೇವೆ. ನಮಗೆ ಶಕ್ತಿ ಬೇಕು. ಜನರ ಕೆಲಸ ಮಾಡಿಕೊಡಬೇಕು. ಆದರೆ, ಅಲ್ಲಿ ನಮಗೆ ಸರಿಯಾದ ಸಹಕಾರ ಸಿಗಲಿಲ್ಲ. ಡಿ.ಕೆ.ಸಹೋದರರು ಎಲ್ಲೇ ಇದ್ದರು ನಮ್ಮ ಕರೆ ಸ್ವೀಕರಿಸುತ್ತಾರೆ. ನಮಗೆ ಸಹಕಾರ ಕೊಡುತ್ತಾರೆ. ಸಂಸದ ಸುರೇಶ್ ಅವರು ಅತ್ಯಂತ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದು, ಅವರನ್ನು ಮತ್ತೊಮ್ಮೆ ಗೆಲ್ಲಿಸಬೇಕೆಂಬ ಉದ್ದೇಶದಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತಿರುವುದಾಗಿ ತಿಳಿಸಿದರು. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಅವರ ವೈಯಕ್ತಿಕ ವಿಚಾರ. ಇಲ್ಲಿಯವರೆಗೆ ಜಾತ್ಯತೀತ ಅಂತ ಹೋರಾಟ ಮಾಡಿಕೊಂಡು ಬಂದಿದ್ದರು. ಜಾತ್ಯತೀತ ಬಿಟ್ಟು ಹೋಗುವುದಿಲ್ಲ ಎಂದು ತಿಳಿದಿದ್ದೆವು. 

ಮನುಷ್ಯನ ಜೀವ ಮತ್ತು ಜೀವನ ಯಾವುದು ಶಾಶ್ವತವಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ದೇವೇಗೌಡರು ಇರೋವರೆಗೂ ಈ ಪಕ್ಷಕ್ಕೆ ಗೌರವ ಇರುತ್ತೆ ಅಂತ ತಿಳಿದುಕೊಂಡಿದ್ದೆವು. ಅದರೆ, ದೇವೇಗೌಡರಿಗೆ ಅದೇನ್ ಮಾಡಿದ್ರೋ ಗೊತ್ತಿಲ್ಲ. ಚನ್ನಪಟ್ಟಣ, ಹಾಸನದಲ್ಲಿ ಅಲ್ಪಸಂಖ್ಯಾತರು ಜೆಡಿಎಸ್‌ಗೆ ಕೊಟ್ಟಷ್ಟು ಮತ ಎಲ್ಲೂ ನೀಡಲಿಲ್ಲ. ಆದರೂ ಇಂತಹ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕ ಕೆ.ರಾಜು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್. ಪ್ರಮೋದ್, ಸುನೀಲ್ ಕುಮಾರ್, ಮುಖಂಡರಾದ ದುಂತೂರು ವಿಶ್ವನಾಥ್, ಬೋರ್‌ವೆಲ್ ರಂಗನಾಥ್, ಶಿವಮಾದು, ಎಂ.ಸಿ.ಕರಿಯಪ್ಪ, ಜಬಿವುಲ್ಲಾ ಖಾನ್ ಘೋರಿ, ಮುಕ್ರಂ ಇತರರಿದ್ದರು.

click me!