Council Election : ಮೈಸೂರಲ್ಲಿ ಬಿಜೆಪಿ ತಕರಾರು ತಿರಸ್ಕೃತ : ಕಾಂಗ್ರೆಸ್‌, ಜೆಡಿಎಸ್‌ ನಾಮಪತ್ರ ಕ್ರಮಬದ್ಧ

Kannadaprabha News   | Asianet News
Published : Nov 26, 2021, 01:43 PM IST
Council Election : ಮೈಸೂರಲ್ಲಿ ಬಿಜೆಪಿ ತಕರಾರು ತಿರಸ್ಕೃತ :  ಕಾಂಗ್ರೆಸ್‌, ಜೆಡಿಎಸ್‌  ನಾಮಪತ್ರ ಕ್ರಮಬದ್ಧ

ಸಾರಾಂಶ

ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಡಿ.10 ರಂದು ಮೇಲ್ಮನೆಗೆ ನಡೆಯುವ ಚುನಾವಣೆ ಚುನಾವಣೆಯ ಸಂಬಂಧ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧ

  ಮೈಸೂರು (ನ.26):  ಮೈಸೂರು  (Mysuru), ಚಾಮರಾಜನಗರ (Chamarajanagar) ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಡಿ.10 ರಂದು ಮೇಲ್ಮನೆಗೆ ನಡೆಯುವ ಚುನಾವಣೆಯ (MLC Election) ಸಂಬಂಧ ಕಾಂಗ್ರೆಸ್‌ (congress) ಹಾಗೂ ಜೆಡಿಎಸ್‌ (JDS) ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ. ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿತ್ತು. ಬುಧವಾರ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ (Bagadi Goutham) ಅವರು ಪರಿಶೀಲನಾ ಕಾರ್ಯ ಕೈಗೆತ್ತಿಕೊಂಡರು. ಬಿಜೆಪಿಯ (BJP) ಆರ್‌. ರಘು, ಕನ್ನಡ ಚಳವಳಿ ಪಕ್ಷದ ವಾಟಾಳ್‌ ನಾಗರಾಜ್‌ (vatal Nagaraj), ಪಕ್ಷೇತರರಾದ ಪಿ.ಎಸ್‌. ಯಡಿಯೂರಪ್ಪ,ಕೆ.ಸಿ. ಬಸವರಾಜಸ್ವಾಮಿ, ಗುರುಲಿಂಗಯ್ಯ, ಆರ್‌. ಮಂಜುನಾಥ್‌ ಅವರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದರು.

ಆದರೆ ಕಾಂಗ್ರೆಸ್‌ (Congress) ಅಭ್ಯರ್ಥಿ ಡಾ.ಡಿ. ತಿಮ್ಮಯ್ಯ, ಜೆಡಿಎಸ್‌ ಅಭ್ಯರ್ಥಿ ಸಿ.ಎನ್‌. ಮಂಜೇಗೌಡ ಅವರು ನಾಮಪತ್ರ ಸಲ್ಲಿಕೆ ಕಾಲಕ್ಕೆ ಆಸ್ತಿಯ ಸಂಪೂರ್ಣ ವಿವರ ನೀಡಿಲ್ಲ. ಕೆಲವೊಂದು ಕಾಲಂಗಳನ್ನು ಭರ್ತಿ ಮಾಡಿಲ್ಲ ಎಂದು ಬಿಜೆಪಿಯವರು (BJP) ಆಕ್ಷೇಪ ವ್ಯಕ್ತರಡಿಸಿ, ಚುನಾವಣಾಧಿಕಾರಿಗೆ ತಕರಾರು ಸಲ್ಲಿಸಿದರು. ಅವರಿಬ್ಬರ ನಾಮಪತ್ರಗಳನ್ನು ತಿರಸ್ಕರಿಸುವಂತೆ ವಾದಿಸಿದರು. ಹೀಗಾಗಿ ಆ ಇಬ್ಬರಿಗೆ ತಕರಾರಿಗೆ ಉತ್ತರ ನೀಡಲು ಕಾಲಾವಕಾಶ ನೀಡಲಾಯಿತು. ಜೆಡಿಎಸ್‌  (JDS)ಅಭ್ಯರ್ಥಿ ಸಿ.ಎನ್‌. ಮಂಜೇಗೌಡರು ನೀಡಿದ ಉತ್ತರದಿಂದ ತೃಪ್ತರಾದ ಚುನಾವಣಾಧಿಕಾರಿಗಳು ನಿನ್ನೆಯೇ ಅವರ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಘೋಷಿಸಿದರು. ಆದರೆ ಕಾಂಗ್ರೆಸ್‌ ಅಭ್ಯರ್ಥಿ ಡಾ.ಡಿ. ತಿಮ್ಮಯ್ಯ ಅವರ ತಕರಾರು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದರಿಂದ ಆತಂಕದ ವಾತಾವರಣ ಉಂಟಾಗಿತ್ತು.

ಪರ- ವಿರೋಧವಾಗಿ ವಾದ- ಪ್ರತಿವಾದ ಆಲಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಬಗಾದಿ ಗೌತಮ್‌ ಅವರು ಡಾ.ಡಿ. ತಿಮ್ಮಯ್ಯ ಅವರ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಘೋಷಿಸುತ್ತಿದ್ದಂತೆಯೇ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಹೊರಗೆ ವಿಜಯೋತ್ಸವ ಆಚರಿಸಿದರು.

ನಾಮಪತ್ರ ವಾಪಸಾತಿಗೆ ನ.26 ಕೊನೆಯ ದಿನ. ಯಾರಾದರೂ ವಾಪಸ್‌ ಪಡೆಯುವರೇ ಅಥವಾ ಕಾಂಗ್ರೆಸ್‌, ಜೆಡಎಸ್‌, ಬಿಜೆಪಿ, ವಾಟಾಳ್‌ ನಾಗರಾಜ್‌ ಸೇರಿದಂತೆ ಎಲ್ಲಾ ಕಣದಲ್ಲಿ ಉಳಿಯುವರೇ ಕಾದು ನೋಡಬೇಕು.

15 ಸ್ಥಾನಗಳಲ್ಲಿ ಗೆಲುವು :   ವಿಧಾನ ಪರಿಷತ್‌ (MLC election)  ಚುನಾವಣೆಯಲ್ಲಿ ಬಿಜೆಪಿಯು 15 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ (BJP) ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ 65 ವಾರ್ಡ್‌ಗಳ ಮಹಾಶಕ್ತಿ ಕೇಂದ್ರದ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಯಿಂದ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ರಾಜ್ಯದಲ್ಲಿ ಬಿಜೆಪಿ ಆಯೋಜಿಸಿದ್ದ ಜನಸ್ವರಾಜ್‌ ಸಮಾವೇಶದಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಕ್ಷವು 25 ಸ್ಥಾನಗಳ ಪೈಕಿ ಹೆಚ್ಚಿನ ಸೀಟು ಗೆಲ್ಲಲು ತಯಾರಿ ಆರಂಭಿಸಿದ್ದೇವೆ. ಈ ಪೈಕಿ ಕನಿಷ್ಠ 15 ಸೀಟು ಗೆಲ್ಲುತ್ತೇವೆ ಎಂದರು.

ಮೇಲ್ಮನೆಯಲ್ಲಿ ಬಿಜೆಪಿ ಬಹುಮತಕ್ಕೆ 12 ಸೀಟು ಕೊರತೆ ಇದೆ. ಈ ಚುನಾವಣೆಯಲ್ಲಿ ಬಹುಮತ ಪಡೆಯುತ್ತೇವೆ. ಜೆಡಿಎಸ್‌ನಿಂದ 7 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಉಳಿದ ಕಡೆ ಬೆಂಬಲ ನೀಡುವಂತೆ ಮಾಜಿ ಸಿಎಂ ಯಡಿಯೂರಪ್ಪ (Yediyurappa) ಅಭಿಪ್ರಾಯಪಟ್ಟಿದ್ದಾರೆ. ಹಾಗಂತ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್‌ (congress) ನಿರುದ್ಯೋಗಿಗಳ ಕೂಟವಾಗಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಪರಮೇಶ್ವರ್‌ ಅವರಿಗೆ ಬಿಜೆಪಿ ಟೀಕಿಸುವುದೇ ಕೆಲಸ. ಇಲ್ಲಸಲ್ಲದ ಟೀಕೆ ಮಾಡುವುದರಿಂದ ಅವರ ಗೌರವ ಕಡಿಮೆಯಾಗುತ್ತದೆ ಎಂದರು.

ಕಾಂಗ್ರೆಸ್‌ 5 ದಶಕದಿಂದ ಆಡಳಿತ ನಡೆಸಿದೆ. 39 ವರ್ಷ ಒಂದೇ ಕುಟುಂಬದವರು ಪ್ರಧಾನಿಯಾಗಿದ್ದರು. ಈಗ ಅಳಿವಿನಂಚಿನಲ್ಲಿದೆ. ಪ್ರಾದೇಶಿಕ ಪಕ್ಷಗಳಿಗಿಂತ ಕಡಿಮೆ ಶಾಸಕರು, ಸಂಸದರನ್ನು ಹೊಂದಿದೆ. ಧ್ವಜ ಕಟ್ಟಲು ಜನರಿಲ್ಲದ ಪಕ್ಷವೀಗ ಪ್ರಪಂಚದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಎಂದೂ ಸೈದ್ಧಾಂತಿಕವಾಗಿ ರಾಜಿ ಮಾಡಿಕೊಂಡಿಲ್ಲ. ಸೈದ್ಧಾಂತಿಕವಾಗಿ ರಾಜಿಯಾಗುವ ಪಕ್ಷಗಳು ಬೇಗ ಅವಸಾನವಾಗುತ್ತವೆ ಎಂದು ಅವರು ಹೇಳಿದರು.

ಮಳೆ ಆವಾಂತರಕ್ಕೆ ಸರ್ಕಾರ ಉತ್ತಮವಾಗಿ ಸ್ಪಂದಿಸುತ್ತಿದೆ. ಮುಖ್ಯಮಂತ್ರಿ ಮತ್ತು ಎಲ್ಲಾ ನಾಯಕರು ರಾಜ್ಯ ಪ್ರವಾಸ ಮಾಡಿ, ಪರಿಹಾರ ಘೋಷಿಸಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ನಿರಾಶ್ರಿತರ ಮನೆಗೆ ಹೋಗಿ ಕ್ಯಾಶ್‌ ಕೊಟ್ಟರಾ? ಸಂವಿಧಾನಾತ್ಮಕವಾಗಿ, ಆಡಳಿತತ್ಮಾಕವಾಗಿ ಒಂದು ವಿಧಾನವಿದೆ. ಅದನ್ನು ವಿರೋಧ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಕುಟುಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಲಾ-ಕಾಲೇಜು ಹುಡುಗಿಯರಿಗೂ ಋತುಚಕ್ರ ರಜೆ?: ಸಂಪುಟ ಸಭೆಯಲ್ಲಿ ಕಾಯ್ದೆಗೆ ಅನುಮೋದನೆ ಸಾಧ್ಯತೆ
ಗೃಹ ಸಚಿವ ಅಮಿತ್‌ ಶಾ - ರಾಹುಲ್ ಗಾಂಧಿ ಮತಚೋರಿ ಸಮರ