ಬಿಜೆಪಿ ಜಾತಿ ಹೆಸರಲ್ಲಿ ಯೋಜನೆ ರೂಪಿಸಲ್ಲ: ತೇಲ್ಕೂರ್‌

By Kannadaprabha NewsFirst Published Feb 4, 2023, 8:30 PM IST
Highlights

ರು.2.5 ಕೋಟಿ ವೆಚ್ಚದಲ್ಲಿ ಈ ಭಾಗದ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಗಿದೆ. ಮಾ.31ರ ಒಳಗೆ ಉದ್ಘಾಟನೆಯಾಗಲಿದ್ದು, ಈ ಭಾಗದ ರೈತರ ಹೊಲಗಳಿಗೆ ಹಳ್ಳ ದಾಟಿ ಹೋಗಲು ಸಹಾಯವಾಗಲಿದೆ ಎಂದ ರಾಜಕುಮಾರ ಪಾಟೀಲ ತೇಲ್ಕೂರ್‌ 

ಸೇಡಂ(ಫೆ.04): ಬಿಜೆಪಿ ಸರ್ಕಾರ ಯಾವುದೇ ಒಂದು ಜಾತಿಯ ಹೆಸರಲ್ಲಿ ಯೋಜನೆ ತರಲಿಲ್ಲ. ನಾವು ರೈತರ ಹಾಗು ದೇಶದ ಹೆಸರಲ್ಲಿ ಎಲ್ಲ ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಸೇಡಂ ಶಾಸಕ ಕಲಬುರಗಿ ಯಾದಗಿರಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ್‌ ಹೇಳಿದರು.

ಸೇಡಂ ತಾಲೂಕಿನ ಕಲಕಂಭ ಗ್ರಾಮದಿಂದ ದಿಗ್ಗಾಂವ ಗ್ರಾಮಕ್ಕೆ ಹೋಗುವ ಸಂಪರ್ಕ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ರು.2.5 ಕೋಟಿ ವೆಚ್ಚದಲ್ಲಿ ಈ ಭಾಗದ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಗಿದೆ. ಮಾ.31ರ ಒಳಗೆ ಉದ್ಘಾಟನೆಯಾಗಲಿದ್ದು, ಈ ಭಾಗದ ರೈತರ ಹೊಲಗಳಿಗೆ ಹಳ್ಳ ದಾಟಿ ಹೋಗಲು ಸಹಾಯವಾಗಲಿದೆ ಎಂದರು.

ಕಲಬುರಗಿ: ಕೇಂದ್ರ ಬಜೆಟ್‌ ಜನ ವಿರೋಧಿ, ಸಿಪಿಐ (ಎಂ) ಸಮಿತಿ ಕಾರ್ಯದರ್ಶಿ ಕೆ.ನೀಲಾ

ಸೇಡಂ ತಾಲೂಕಿನ 250 ಕೋಟಿ ರು. ವೆಚ್ಚದಲ್ಲಿ 160 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರನ್ನು ನಳಗಳ ಮೂಲಕ ಮನೆ ಬಾಗಿಲಿಗೆ ಒದಗಿಸಿಕೊಡುವ ಕೆಲಸ ಆಗುತ್ತಿದೆ. ಈ ಮೊದಲು ಅಳ್ಳೊಳ್ಳಿ ಗ್ರಾಮಕ್ಕೆ ದೂರದ ಕಾಗಿಣಾ ನದಿಯಿಂದ ನೀರನ್ನು ಹರಿಸಿ ಕೊಡಬೇಕೆನ್ನುವ ಇರಾದೆ ಇತ್ತು. ಆದರೆ, ಸದ್ಯ ಕೊಳವೆ ಬಾವಿಯಲ್ಲಿ ನೀರು ಲಭ್ಯವಿದ್ದು, ಇಲ್ಲಿಯೇ ನಳಗಳ ಮೂಲಕ ನೀರು ಸರಬರಾಜು ಆಗಲಿದೆ ಎಂದರು.

ಸೇಡಂ ಕ್ಷೇತ್ರದಲ್ಲಿ ನಮ್ಮ ಅವಧಿಯಲ್ಲಿ ರೈತರ ಹೊಲಗಳಿಗೆ ಸಂಪರ್ಕ ಒದಗಿಸುವದಕ್ಕಾಗಿ 250 ರಿಂದ 300 ಕೋಟಿ ರು. ವೆಚ್ಚದಲ್ಲಿ ರಸ್ತೆಗಳ ನಿರ್ಮಾಣವಾಗಿದೆ. ಸೇಡಂ ಒಂದೇ ತಾಲೂಕಿಗೆ 50 ಕೋಟಿ ರು. ಬೆಳೆ ಪರಿಹಾರ ಬಂದಿದೆ. ಕಳೆದ ಐದು ವರ್ಷದಲ್ಲಿ 300 ಕೋಟಿ ರು. ಬೆಳೆ ಪರಿಹಾರ ನೀಡಿದ್ದೇವೆ. ಆದರೆ, ಡಿಸಿಸಿ ಬ್ಯಾಂಕ್‌ ಮೂಲಕ ಮಾಡುತ್ತಿರುವ ಕೆಲಸಗಳಿಗೆ ಕಲ್ಲು ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲರನ್ನು ಪರೋಕ್ಷವಾಗಿ ಕುಟುಕಿದರು. ಕಲಕಂಭ ಗ್ರಾಮದಲ್ಲಿ ಮಹಿಳೆಯರ ಶೌಚಾಲಯ ನಿರ್ಮಾಣಕ್ಕೆ ಸ್ಥಳದಲ್ಲಿಯೇ ಆದೇಶ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅಮೀನರೆಡ್ಡಿ ಪಾಟೀಲ, ಶಿವಕುಮಾರ (ಜಿ.ಕೆ.ಪಾಟೀಲ), ಸಿದ್ದು ಕೋದಂಪುರ, ನಾಗಪ್ಪ ಕೊಳ್ಳಿ, ನಾಗೇಂದ್ರಪ್ಪ ದುಗನೂರ, ಪ್ರಶಾಂತ ಕೇರಿ ಸೇರಿದಂತೆ ಹಲವಾರು ಜನ ಮುಖಂಡರು ಉಪಸ್ಥಿತರಿದ್ದರು.

click me!