
ಸೊರಬ (ಮಾ.25) : ತಾಳಗುಪ್ಪ ಗ್ರಾಮದ ಬಗರ್ಹುಕುಂ ಜಮೀನು ತೆರವು ವಿಚಾರದಲ್ಲಿ ರಕ್ತಕ್ರಾಂತಿ ಹರಿಸುವ ಬಗ್ಗೆ ಮಾತನಾಡಿರುವ ಮಧು ಬಂಗಾರಪ್ಪ ಭಯೋತ್ಪಾದಕತೆಯನ್ನು ಸೃಷ್ಠಿಸುವ ಮೂಲಕ ತಾಲೂಕಿನಲ್ಲಿ ರಾಜಕೀಯ ಲಾಭಕ್ಕಾಗಿ ಶಾಂತಿಯನ್ನು ಕದಡುತ್ತಿದ್ದಾನೆ ಎಂದು ಶಾಸಕ ಕುಮಾರ ಬಂಗಾರಪ್ಪ ಹರಿಹಾಯ್ದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಕ್ತಕ್ರಾಂತಿ ಮಾಡುವ ದೇಶ ನಮ್ಮದಲ್ಲ. ಪ್ರಧಾನಿ ನರೇಂದ್ರ ಮೋದಿ(PM narendra Modi) ಹಾಕಿಕೊಟ್ಟಿರುವ ಅಭಿವೃದ್ಧಿ ಚಿಂತನೆಯಲ್ಲಿ ಸಾಗುತ್ತಿರುವ ರಾಷ್ಟ್ರದಲ್ಲಿ ರಕ್ತಕ್ರಾಂತಿ ಬಗ್ಗೆ ಮಾತನಾಡಿದ್ದೇ ಆದಲ್ಲಿ ಆತನ ಮನಸ್ಥಿತಿ ಭಯೋತ್ಪಾದನೆಯಂತೆ ಕೀಳುಮಟ್ಟದಲ್ಲಿದೆ ಎಂದ ಕಿಡಿಕಾರಿದರು.
ಸೊರಬದಲ್ಲಿ ಕುಮಾರ್ ಬಂಗಾರಪ್ಪ ಗೆಲ್ಲಿಸಿ: ಬಿ.ಎಸ್.ಯಡಿಯೂರಪ್ಪ
ಇಂಥ ಧೋರಣೆಗಳಿಂದಲೇ ಮನೆಯನ್ನೂ ಹಾಳು ಮಾಡಿದ್ದಾನೆ. ಜೊತೆಗೆ ತನ್ನ ಅಧಿಕಾರವಧಿಯಲ್ಲಿ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ತಾಲೂಕನ್ನು ಭ್ರಷ್ಟತೆಯ ಕೂಪಕ್ಕೆ ತಳ್ಳಿದ್ದಾನೆ. ನನ್ನನ್ನು ಎ-1 ಆರೋಪಿ ಎಂದು ಮೂದಲಿಸುತ್ತಿರುವ ಆತ ಚೆಕ್ ಬೋನ್ಸ್ ಪ್ರಕರಣದಲ್ಲಿ ನಂ.1 ಆರೋಪಿಯಾಗಿ ಮಾನ ಮರ್ಯಾದೆ ಇಲ್ಲದೇ ಬೇಲ್ ಮೇಲೆ ಓಡಾಡುತ್ತಿದ್ದಾನೆ. ಆದರೆ ತಮ್ಮ ಮೇಲೆ ಯಾವುದೇ ಆರೋಪ ಪ್ರಕರಣಗಳಿಲ್ಲ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಕಟ್ಟಿ-ಬೆಳೆಸಿ, ರಾಷ್ಟ್ರಮಟ್ಟದಲ್ಲಿ ಹೆಸರು ಬರುವಂತೆ ಮಾಡಿದ ಸೊರಬ ತಾಲೂಕಿನಲ್ಲಿ ಮಗನಾಗಿ ರಕ್ತಕ್ರಾಂತಿ ಬಗ್ಗೆ ಮಾತನಾಡುವುದು ಶೋಭೆ ತರುವುದಿಲ್ಲ. ಎಲ್ಲ ಜಾತಿ-ಜನಾಂಗಗಳನ್ನು ಒಗ್ಗೂಡಿಸಿ ರಾಜಕಾರಣ ಮಾಡಿರುವ ಬಿ.ಎಸ್. ಯಡಿಯೂರಪ್ಪ ಅವರಿಂದ ತಾವು ರಾಜಕಾರಣದ ದಿಕ್ಕು ಕಲಿತಿದ್ದೇನೆ ಎಂದರು.
ರಕ್ತಕ್ರಾಂತಿ ಹೆಸರಿನಲ್ಲಿ ಬಗರ್ಹುಕುಂ ಸಾಗುವಳಿದಾರರ ಭಾವನೆಗಳನ್ನು ಕೆರಳಿಸುವ ದೌರ್ಜನ್ಯ ಮಾತುಗಳು ಬರುವ ಚುನಾವಣೆಯಲ್ಲಿ ಬಳಕೆಯಾಗುವುದಿಲ್ಲ. ಇನ್ನಾದರೂ ಬೂಟಾಟಿಕೆಯ ರಾಜಕಾರಣ ಬಿಟ್ಟು ಎಸ್. ಬಂಗಾರಪ್ಪನವರ ಮಗನಂತೆ ವರ್ತಿಸಬೇಕಿದೆ. ನೀನೀಗ ತಾಲೂಕಿನಲ್ಲಿ ನೂರಕ್ಕೆ ನೂರರಷ್ಟುಶೂನ್ಯ ಸಂಪಾದನೆಯಲ್ಲಿದ್ದೀಯ. ಸೋಲುವುದು ಖಚಿತ. ಹಾಗಾಗಿ ವಿಧಾನಸಭಾ ಚುನಾವಣೆಯ ನಂತರ ಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಈಗಿನಿಂದಲೇ ತಯಾರಿ ನಡೆಸು. ಅಲ್ಲಿಯೂ ಜನ ನಿನ್ನನ್ನು ಸೋಲಿಸುತ್ತಾರೆ ಎಂದ ಅವರು, ನೀನು ಮತ್ತು ನಿನ್ನ ಅಕ್ಕ ಎಷ್ಟೇ ಚುನಾವಣೆ ಎದುರಿಸಿದರೂ ಸೋಲು ಕಟ್ಟಿಟ್ಟಬುತ್ತಿ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಕಾರಣವಲ್ಲ:
ಇತ್ತೀಚೆಗೆ ನಡೆದ ತಾಳಗುಪ್ಪ ಆರು ಜನ ರೈತರ ಭೂಮಿ ತೆರವು ಕಾರ್ಯಾಚರಣೆ ಹೈಕೋರ್ಚ್ನ ಆದೇಶದ ಮೇರೆಗೆ ಅರಣ್ಯ ಇಲಾಖೆ ವತಿಯಿಂದ ನೆಡೆದಿದೆ. ಇದರಲ್ಲಿ ಸರ್ಕಾರವಾಗಲೀ ಸ್ಥಳೀಯ ಜನಪ್ರತಿನಧಿಗಳಾಗಲೀ ಕಾರಣರಲ್ಲ. ಆರು ಜನ ರೈತರಲ್ಲಿ ನಾಲ್ಕು ಕುಟುಂಬಗಳು ಬಡ ರೈತರಿದ್ದು ಇನ್ನುಳಿದ ರಮೇಶ್ ಮತ್ತು ಹಿರಣ್ಯಪ್ಪ ಎಂಬುವವರು ಅಧಿಕ ಇಳುವರಿ ಭೂಮಿ ಹೊಂದಿದ್ದು ಅದೇ ಜಾಗದಲ್ಲಿ ವಾಣಿಜ್ಯ ಉದ್ಯಮವನ್ನು ಹೊಂದಿ ಸ್ಥಿತಿವಂತರಾಗಿದ್ದಾರೆ ಎಂದರು.
2012ರ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಹೈಕೋರ್ಚ್ ತೀರ್ಪಿನ ವಿರುದ್ದವಾಗಿ ಏನೂ ಅರಿಯದ 4 ಬಡ ಕುಟುಂಬಗಳನ್ನು ಬಳಸಿಕೊಂಡು ರಮೇಶ್ ಮತ್ತು ಹಿರಣ್ಯಪ್ಪ ಎಂಬುವವರು ದಾವೆ ಹೂಡಿದ್ದ ಕಾರಣ ಇಂದು ಹೈಕೋರ್ಚ್ ತೆರವು ಕಾರ್ಯಕ್ಕೆ ಆದೇಶ ನೀಡಿದೆ. ನ್ಯಾಯಾಲಯದ ಮೆಟ್ಟಿಲೇರದೇ ಪ್ರಕರಣವನ್ನು ವಾಪಾಸ್ಸು ಪಡೆದಿದ್ದರೆ ಸರ್ಕಾರದ ಮಟ್ಟದಲ್ಲಿ 4 ಜನ ರೈತರಿಗೆ ರಕ್ಷಣೆ ನೀಡುವ ಅವಕಾಶವಿತ್ತು. ಆದರೆ ಆ ಇಬ್ಬರು ಸ್ಥಿತಿವಂತರ ಜೊತೆಗೆ ಮುಗ್ದ ರೈತರು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಆ 4 ರೈತ ಕುಟುಂಬಗಳಿಗೆ ರಕ್ಷಣೆ ನೀಡುವ ಜವಾಬ್ದಾರಿ ನಮ್ಮದು ಎಂದರು.
ಸೊರಬದ ಅತಿರಥರ ಅಖಾಡ: ಕುಮಾರ್ ಶುರು ಮಾಡ್ತಾರಾ ಗೆಲುವಿನ ಅಶ್ವಮೇಧ..?
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಬಗರ್ಹುಕುಂ ಸಮಿತಿ ಸದಸ್ಯ ದೇವೇಂದ್ರಪ್ಪ ಚನ್ನಾಪುರ, ಪುರಸಭಾ ಸದಸ್ಯ ಎಂ.ಡಿ. ಉಮೇಶ್, ಟಿ.ಆರ್. ಸುರೇಶ್, ಅಶೋಕ್ ಶೇಟ್, ಆಟೋ ಶಿವು ಮೊದಲಾದವರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.