
ಬೆಂಗಳೂರು (ಮಾ.25): ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿ ಉಪಹಾರ ಸೇವಿಸುವ ಮೂಲಕ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದರು. ಈ ಭೇಟಿ ಹಲವು ರಾಜಕೀಯ ಸಂದೇಶ ರವಾನಿಸಿದೆ. ಗುರುವಾರ ತಡರಾತ್ರಿ ದೆಹಲಿಯಿಂದ ಆಗಮಿಸಿದ್ದ ಅಮಿತ್ ಶಾ ಅವರು ಶುಕ್ರವಾರ ಬೆಳಗ್ಗೆ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದರು.
ತಮ್ಮ ಕಾರಿನಿಂದ ಇಳಿದ ಕೂಡಲೇ ಯಡಿಯೂರಪ್ಪನವರ ಕಡೆಗೆ ನಗುಮೊಗ ಬೀರಿದರಾದರೂ ಅವರು ಕೊಡಲು ಬಂದ ಹೂಗುಚ್ಛ ತೆಗೆದುಕೊಳ್ಳಲಿಲ್ಲ. ಆ ಹೂಗುಚ್ಛವನ್ನು ಪುತ್ರ ವಿಜಯೇಂದ್ರ ಅವರಿಗೆ ಕೊಡಿ ಎಂದರು. ಇದರಿಂದ ತುಸು ವಿಚಲಿತರಾದ ಯಡಿಯೂರಪ್ಪನವರಿಗೆ ಮೊದಲಿಗೆ ಅರ್ಥವಾಗಲಿಲ್ಲ. ಬಳಿಕ ಕೈತೋರಿ ಹೇಳಿದರು. ಆಗ ಯಡಿಯೂರಪ್ಪ ಅವರು ತಮ್ಮ ಕೈಯ್ಯಲ್ಲಿದ್ದ ಗುಲಾಬಿ ಹೂಗುಚ್ಛವನ್ನು ವಿಜಯೇಂದ್ರ ಅವರಿಗೆ ಕೊಟ್ಟರು. ವಿಜಯೇಂದ್ರ ಅವರಿಂದ ಹೂಗುಚ್ಛವನ್ನು ಸ್ವೀಕಸಿರಿದ ಅಮಿತ್ ಶಾ ಅವರು ಬೆನ್ನು ತಟ್ಟಿದರು.
ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಲು ಮೀಸಲಾತಿ ಹಂಚಿಕೆ: ಸಿಎಂ ಬೊಮ್ಮಾಯಿ
ಪರೋಕ್ಷವಾಗಿ ವಿಜಯೇಂದ್ರನ ಜತೆ ಹೈಕಮಾಂಡ್ ಇದೆ ಎಂಬ ಸಂದೇಶವನ್ನೂ ರವಾನಿಸಿದರು. ನಂತರ ಮನೆಯಲ್ಲಿ ವಿಜಯೇಂದ್ರ ಅವರೇ ಮುಂದೆ ನಿಂತು ಅಮಿತ್ ಶಾ ಅವರಿಗೆ ಉಪಹಾರ ಬಡಿಸಿದರು. ಬಳಿಕ ಕೆಲಕಾಲ ಮಾತುಕತೆ ನಡೆಸಿ ಅಮಿತ್ ಶಾ ಅವರು ನಿರ್ಗಮಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು ಹಾಗೂ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಅವರಿದ್ದರು.
ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ: ಬಿಜೆಪಿ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಜನರು ಮೆಚ್ಚಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾವ ದುಷ್ಟಶಕ್ತಿಗಳಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಪಟ್ಟಣದ ವಿದ್ಯಾವರ್ಧಕ ಶಾಲಾ ಮೈದಾನದಲ್ಲಿ ಬಿಜೆಪಿ ಆಯೋಜಿಸಿದ್ದ ಜಿಲ್ಲಾ ಎಸ್ಟಿಸಮಾವೇಶ ಮತ್ತು ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿ. ಹರ್ಷವರ್ಧನ್ರನ್ನು ಮತ್ತೊಮ್ಮೆ ಆಶೀರ್ವದಿಸಿ: ಕ್ಷೇತ್ರದಲ್ಲಿ ಸುಮಾರು 750 ಕೋಟಿಗಿಂತಲೂ ಹೆಚ್ಚಿನ ಅಭಿವೃದ್ದಿ ಕೆಲಸ ಮಾಡುವ ಮೂಲಕ ಯಾವೊಬ್ಬ ಶಾಸಕರು ಮಾಡಿರಲಾರದಷ್ಟುಕೆಲಸವನ್ನು ಶಾಸಕ ಬಿ.ಹರ್ಷವರ್ಧನ್ ಮಾಡಿದ್ದಾರೆ. ಅವರು ಕಳೆದ 5 ವರ್ಷದಲ್ಲಿ ಮಾಡಿರುವ ಅಭಿವೃದ್ದಿ ಕೆಲಸವನ್ನು ಯೋಚಿಸಿ ಅವರನ್ನು ಮತ್ತೊಮ್ಮೆ ಆಶೀರ್ವಾದ ಮಾಡಿ ಗೆಲ್ಲಿಸಿ ಎಂದು ಕರೆ ನೀಡಿದರು. ಶಾಸಕ ರಾಜುಗೌಡ ಮಾತನಾಡಿ, ಬಿಜೆಪಿ ಸಂವಿಧಾನ ಬದಲಿಸುತ್ತದೆ ಎಂದು ಕಾಂಗ್ರೆಸ್ ಅಪಪ್ರಚಾರದಲ್ಲಿ ತೊಡಗಿದೆ. ಆದರೆ ಬಾಬಾ ಸಾಹೇಬರ ಸಂವಿಧಾನವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಈ ಭಾಗದ ನಾಯಕ ಸಮುದಾಯದವರು ಬಿ. ಹರ್ಷವರ್ಧನ್ ಅವರ ಕೈ ಬಲಪಡಿಸುವ ಮೂಲಕ ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು ಎಂದರು.
ಗ್ರಾಮ ಪಂಚಾಯ್ತಿ ಅನುದಾನ ಹೆಚ್ಚಳಕ್ಕೆ ಆದ್ಯತೆ: ಸಿಎಂ ಬೊಮ್ಮಾಯಿ
ಸಂಸದ ವಿ. ಶ್ರೀನಿವಾಸಪ್ರಸಾದ್ ಮಾತನಾಡಿ, ಕಾಂಗ್ರೆಸ್ನಲ್ಲಿ ಬಸವರಾಜ ಬೊಮ್ಮಾಯಿ ಅವರ ಸಮಾನವಾಗಿ ಯಾರೂ ಮುಖ್ಯಮಂತ್ರಿಯಾಗುವ ಯೋಗ್ಯತೆ ಇಲ್ಲ, ಸಿಎಂ ರೇಸ್ನಲ್ಲಿರುವವರು ಕೋಟಿ ರು. ಗಳ ಬೇಲ್ಮೇಲೆ ಹೊರಗಿದ್ದಾರೆ. ಚುನಾವಣೆ ಮುಗಿದ ನಂತರ ಅವರು ಮತ್ತೆ ಜೈಲಿಗೆ ಹೋಗುತ್ತಾರೆ, ಅವರು ಮುಖ್ಯಮಂತ್ರಿಯಾಗುವುದಿಲ್ಲ ಮತ್ತೊಮ್ಮೆ ಬಿಜೆಪಿ ಅಧಿಕಾರ ನಡೆಸುವುದು ಅದರಲ್ಲಿ ಅನುಮಾನ ಬೇಡ ಎಂದರು. ಸಿದ್ದರಾಮಯ್ಯ ಉಪಕಾರ ಸ್ಮರಣೆಯಿಲ್ಲದೆ ಸಂಪುಟದಿಂದ ಕೈಬಿಟ್ಟು ನನ್ನನ್ನು ಅವಮಾನಿಸಿದರು. ಅಲ್ಲದೆ ಕಚ್ಚೆ ಪಂಚೆ ಎತ್ತಿಕೊಂಡು ಉಪಚುನಾವಣೆಯಲ್ಲಿ ನನ್ನನ್ನು ಸೋಲಿಸಿದರು. ಈಗ ಬಾ ಓಡಾಡು ನೋಡೋಣ. ತಾಕತ್ತಿದ್ದರೆ ವರುಣದಲ್ಲಿ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.