
ಬಾಗಲಕೋಟೆ (ಜ.31): ಈ ದೇಶದಲ್ಲಿ ಕೆಲವರಿಂದ ಕಿಡಿಗೇಡಿತನ ಕೆಲಸಗಳು ನಡೆಯುತ್ತಿವೆ. ಚುನಾವಣೆ ಬಂದಾಗ ಕೋಮು ಗಲಭೆ, ಜಾತಿ ಗಲಭೆ ಎಬ್ಬಿಸಿ ಆ ಮೂಲಕ ಲಾಭ ಪಡೆಯಲು ಬಿಜೆಪಿ ಕುತಂತ್ರ ಮಾಡುತ್ತಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ನಿನ್ನೆ ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಬ್ಯಾನರ್ಗಳಿಗೆ ಕಲ್ಲೆಸೆತದ ಘಟನೆ ಪ್ರಸ್ತಾಪಿಸಿ ಮಾತನಾಡಿದರು. ಸಂವಿಧಾನ ವಿರೋಧಿ ನಡವಳಿಕೆಗಳು ನಡೆಯುತ್ತಿವೆ. ಬಿಜೆಪಿಗರಿಗೆ ಹನುಮ ಬೇಕಾಗಿಲ್ಲ, ರಾಮನೂ ಬೇಕಾಗಿಲ್ಲ. ಅವರಿಗೆ ಮತ ಬೇಕಾಗಿದೆ. ಆ ಮತಗಳ ಲಾಲಸೆ, ಆಸೆಗೆ ಹೀನ ಕೃತ್ಯಕ್ಕೆ ಇಳಿಯುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ಹನುಮಧ್ವಜ ವಿಚಾರ ಇಟ್ಟುಕೊಂಡು ಮೈಸೂರು ಭಾಗದಲ್ಲಿ ಬಿಜೆಪಿ ಗಟ್ಟಿ ನೆಲೆಯೂರಲು ಪ್ರಯತ್ನ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲ್ಲೆಲ್ಲಿ ಅವಕಾಶ ಸಿಗುತ್ತದೋ ಅಲ್ಲೆಲ್ಲ ಹೀಗೆ ಮಾಡುತ್ತಾರೆ. ಎಲೆಕ್ಷನ್ ಮುಗಿಯುವವರೆಗೂ ಬಿಜೆಪಿ ಕೆಲಸವೇ ಇದು. ಯಾವತ್ತಾದರೂ ಅವರು ಅಭಿವೃದ್ಧಿ ಕೆಲಸಗಳನ್ನು ಹೇಳಿದ್ದಾರಾ? ಅಧಿಕಾರ ಪಡೆಯೋಕೆ ಹಿಂದುಗಳು ಅನ್ನೋದು, ಎಲೆಕ್ಷನ್ ಮುಗಿದ ಮೇಲೆ ಮತದಾರ ಎಲ್ಲಿದ್ದಾನೋ ಅಲ್ಲೇ ಇರುತ್ತಾನೆ ಎಂದು ಸಚಿವರು ಟೀಕಿಸಿದರು.
ದೇಶದಲ್ಲಿ ಸಿಎಎ ಜಾರಿ ಮಾಡುವುದಾಗಿ ಕೇಂದ್ರ ಸಚಿವರು ಹೇಳಿಕೆ ಬಗ್ಗೆ ಮಾತನಾಡಿದ ಸಚಿವರು, ಇದು ಎಲೆಕ್ಷನ್ ಗಿಮಿಕ್, ಇಲೆಕ್ಷನ್ ಗೆ ಏನು ಬೇಕೋ ಅಷ್ಟೇ ಮಾಡುತ್ತಾರೆ. ಮುಂದೆ ಅದನ್ನು ಇಂಪ್ಲಿಮೆಂಟ್ ಮಾಡಲ್ಲ. ಏನೂ ಮಾಡಲ್ಲ ಎಂದು ವ್ಯಂಗ್ಯವಾಡಿದರು. ಮಾಜಿ ಸಚಿವ ಪ್ರಭು ಚವ್ಹಾಣ್ ಬಿಜೆಪಿ ರಾಜ್ಯಾಧ್ಯಕ್ಷರ ಕಾಲಿಗೆ ಬಿದ್ದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅಂತವರು ಎಲ್ಲ ಕಡೆಯೂ ಇದ್ದಾರೆ. ಏನೂ ಮಾಡಲು ಆಗಲ್ಲ. ವಿಜಯಪುರ-ಬಾಗಲಕೋಟೆಯಲ್ಲೂ ಇಂತವರಿದ್ದಾರೆ. ಇಲ್ಲಿನ ಡಿಸಿ ಕಚೇರಿಯಲ್ಲಿಯೇ ಕಾಲಿಗೆ ಬಿದ್ದಿದ್ದಾರೆ.
ಮಂಡ್ಯದಲ್ಲಿ ಕೋಮುಬೀಜ ಬಿತ್ತಿದ ಎಚ್ಡಿಕೆ: ಸಚಿವ ಎನ್.ಚಲುವರಾಯಸ್ವಾಮಿ
ಅಂತವರು ಅಧಿಕಾರ ಆಸೆಗಾಗಿ ಕಾಲಿಗೆ ಬೀಳುತ್ತಾರೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಕಾರಜೋಳ ಅವರು ಚರಂತಿಮಠರ ಕಾಲಿಗೆ ನಮಿಸಿದ್ದನ್ನು ಸಚಿವ ತಿಮ್ಮಾಪುರ ನೆನಪಿಸಿದರು. ಕೇಂದ್ರ ಬಜೆಟ್ ಬಗ್ಗೆ ನಾವು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಬಾಗಲಕೋಟೆ-ಕುಡಚಿ ರೈಲ್ವೆಗೆ ಪೂರ್ಣ ಅನುದಾನದ ನಿರೀಕ್ಷೆಯಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡುವ ನಿರೀಕ್ಷೆಯಿದೆ. ಜಿಲ್ಲೆಯ ಮುಳುಗಡೆ ಸಂತ್ರಸ್ತರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುತ್ತಾರೆಂಬ ನಿರೀಕ್ಷೆ ಇದೆ. ಕಾದು ನೋಡೋಣ, ಕೇಂದ್ರ ಬಜೆಟ್ನಲ್ಲಿ ಜಿಲ್ಲೆಗೆ ಏನು ಬರುತ್ತೆ ಎಂದು ಎಂದು ಸಚಿವ ತಿಮ್ಮಾಪುರ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.