
ಕಲಬುರಗಿ (ಅ.07): ಪಂಚಾಯತ್ ರಾಜ್ ಇಲಾಖೆಯ ನೌಕರರ ಪ್ರತಿಭಟನೆಯ ವಿಷಯದಲ್ಲಿ ತಮ್ಮನ್ನು ಕೆಣಕಿದ ಬಿಜೆಪಿಗರಿಗೆ ಆರ್ಡಿಪಿಆರ್ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಇಲಾಖೆಯಲ್ಲಿ ತಾವು ಕೈಗೊಂಡ ಸುಧಾರಣೆಗಳ ಪಟ್ಟಿ ಬಿಡುಗಡೆ ಮಾಡಿ ಮಾರುತ್ತರ ನೀಡಿದ್ದಾರೆ. ಪಂಚಾಯತ್ ರಾಜ್ ಇಲಾಖೆಯ ನೌಕರರ ಪ್ರತಿಭಟನೆಯ ಕುರಿತಾದ ಪತ್ರಿಕೆಯ ವರದಿಯನ್ನು ಟ್ವೀಟ್ಗೆ ಅಂಟಿಸಿ ಎಲ್ಲಿ ಅಡಗಿದ್ದೀರಿ ಖರ್ಗೆಯವರೇ, ನೌಕರರ ಗೋಳು ಕೇಳುವವರು ಯಾರು? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿತ್ತು. ಬಿಜೆಪಿಯ ಟ್ವೀಟ್ಗೆ ಉತ್ತರ ನೀಡಿದ ಪ್ರಿಯಾಂಕ್ ಖರ್ಗೆ ತಮ್ಮ ಅವಧಿಯಲ್ಲಿ ಆದ ಕೆಲಸಗಳನ್ನು ಪಟ್ಟಿ ನೀಡಿ ಅವರ ಅವಧಿಯಲ್ಲಿ ನಡೆದ ವಿಷಯಗಳನ್ನು ಪ್ರಸ್ತಾಪಿಸಿ ಚೆಂಡನ್ನು ವಾಪಸ್ ಅವರ ಅಂಗಳಕ್ಕೆ ಎಸೆದಿದ್ದಾರೆ.
ಪ್ರಶ್ನೆ ಕೇಳಿದರೆ ‘ಓ ಮೈ ಗಾಡ್’ ಎಂದು ಹೆದರುವುದಕ್ಕೆ, ಎಲ್ಲಿಯೋ ಹೋಗಿ ಅಡಗಿಕೊಳ್ಳುವುದಕ್ಕೆ ನಾನು ನಿಮ್ಮ ಸ್ವಯಂ ಘೋಷಿತ ವಿಶ್ವಗುರು ಮೋದಿಯಲ್ಲ! ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವನಾಗಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇನೆ ಮತ್ತು ಗ್ರಂಥಪಾಲಕರ ಬಹು ವರ್ಷಗಳ ಬೇಡಿಕೆಯಂತೆ ವೇತನವನ್ನು ಸಹ ಏರಿಸಲಾಗಿದೆ. ಗ್ರಾಮೀಣ ಗ್ರಂಥಾಲಗಳನ್ನು ಅರಿವು ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಖರ್ಗೆ ಹೇಳಿದ್ದಾರೆ.
ರಾಜಕೀಯ ಪ್ರೇರಿತ ಆರೋಪಕ್ಕೆ ಅದೇ ರೀತಿ ಉತ್ತರ: ಸಚಿವ ಶಿವರಾಜ ತಂಗಡಗಿ
ಈಗಾಗಲೇ ಗ್ರಾಮ ಪಂಚಾಯಿತಿ ನೌಕರರು ಮತ್ತು ಸಿಬ್ಬಂದಿ ಬೇಡಿಕೆಗಳನ್ನು ಈಡೇರಿಸಲು ನಾವು ಕಳೆದ ಒಂದು ವರ್ಷದಿಂದ ಮಾತುಕತೆ ನಡೆಸುತ್ತಲೇ ಇದ್ದೇವೆ. ಹಲವು ಸಂಘಟನೆಗಳ ಜೊತೆಯಲ್ಲಿ ಚರ್ಚಿಸಿದ್ದೇವೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ತಪ್ಪುಗಳು, ಲೋಪಗಳನ್ನು ಇನ್ನೂ ಸಹ ಸರಿಪಡಿಸುತ್ತಿದ್ದೇನೆ. ಈಗಾಗಲೇ ಗ್ರಾಮ ಪಂಚಾಯಿತಿಯ ನೌಕರರ ನಲವತ್ತು ಬೇಡಿಕೆಗಳಲ್ಲಿ ಹಲವು ಬೇಡಿಕೆಗಳನ್ನು ಈಡೇರಿಸಿದ್ದೇವೆ. ಕೆಲವು ಬೇಡಿಕೆಗಳನ್ನು ಈಡೇರಿಸಲು ಕಾನೂನಿನಲ್ಲಿ ಅವಕಾಶವಿಲ್ಲದಿರುವುದರಿಂದ ಪರಿಶೀಲನೆ ನಡೆಸಲಾಗುತ್ತಿದೆ.
ಕೆಲ ಬೇಡಿಕೆ ಈಡೇರಿಸಲು ನೀತಿ ನಿರೂಪಣೆಯಾಗಿ, ತಿದ್ದುಪಡಿಯನ್ನು ಸಹ ತರಬೇಕಾಗಿದೆ. ಅದಕ್ಕಾಗಿ ನಮ್ಮ ಸರ್ಕಾರವು ಶೀಘ್ರದಲ್ಲಿಯೇ ನೌಕರರೊಂದಿಗೆ ಸಭೆ ನಡೆಸಲಿದೆ ಎಂದೂ ಖರ್ಗೆ ಹೇಳಿದ್ದಾರೆ. ಬಿಜೆಪಿ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರೇ ರಾಜೀನಾಮೆ ಕೊಟ್ಟಿದ್ದನ್ನು ಮರೆತಿರಾ, ಯಾಕಾಗಿ ರಾಜೀನಾಮೆ ಕೊಟ್ಟಿದ್ದರು ಎನ್ನುವುದು ನೆನಪಿದೆಯೇ. ಒಂದಿಡೀ ವರ್ಷ ರೈತರು ಬೀದಿಯಲ್ಲಿ ಕುಳಿತು, 700 ರೈತರು ಪ್ರಾಣ ಬಿಟ್ಟರೂ ಕಣ್ಣೆತ್ತಿ ನೋಡದವರು ಯಾರು? ಕುಸ್ತಿಪಟುಗಳು ತಿಂಗಳುಗಟ್ಟಲೆ ಪ್ರತಿಭಟಿಸಿದ್ದಾಗ ತಿರುಗಿ ನೋಡದವರು ಯಾರು?
ಕಾಂಗ್ರೆಸ್ ಸರ್ಕಾರವನ್ನು ಹೊಡೆದೋಡಿಸಲು ಮೈತ್ರಿ ಅಗತ್ಯ: ನಿಖಿಲ್ ಕುಮಾರಸ್ವಾಮಿ
ನಿಮ್ಮ ಅವಧಿಯಲ್ಲಿ ರಾಜ್ಯದ ಸಾರಿಗೆ ನೌಕರರು ಪ್ರತಿಭಟಿಸಿದಾಗ ನಿರ್ಲಕ್ಷಿಸಿದವರು ಯಾರು? ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದ್ದಾಗ ಅವರತ್ತ ಸುಳಿಯದೆ ತಲೆ ತಪ್ಪಿಸಿ ಓಡಾಡಿದವರು ನೀವೇ ಅಲ್ಲವೇ? ಎಂದೂ ಖರ್ಗೆ ಪ್ರಶ್ನಿಸಿದ್ದಾರೆ. ಬಿಜೆಪಿಗರೇ ನೆನಪಿರಲಿ ‘ನಮ್ಮದು ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರ, ಸ್ಪಂದಿಸುವ ಸರ್ಕಾರ’ ನಿಮ್ಮ ರೆಬಲ್ ನಾಯಕರು ವಿಜಯೇಂದ್ರ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯನ್ನು ನಿಭಾಯಿಸುವ ಕುರಿತು ತಲೆ ಕೆಡಿಸಿಕೊಳ್ಳಿ. ನಿಮ್ಮ ತಟ್ಟೆಯಲ್ಲಿರುವ ಹೆಗ್ಗಣದ ರಾಶಿಯನ್ನು ಕ್ಲಿಯರ್ ಮಾಡಿಕೊಳ್ಳಿ! ಎಂದು ಪ್ರಿಯಾಂಕ್ ಬಿಜೆಪಿಗೆ ಮಾರುತ್ತರ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.