Karnataka Politics : 'ಕಾಂಗ್ರೆಸ್‌ ಬಿಟ್ಟು ಜಾರಕಿಹೊಳಿ ಬಿಜೆಪಿಗೆ : ಹೆಬ್ಬಾಳ್ಕರ್‌ಗೆ ಸಂಕಟ'

By Kannadaprabha NewsFirst Published Nov 29, 2021, 6:52 AM IST
Highlights
  • ಮಾಜಿ ಸಚಿವ  ಜಾರಕಿಹೊಳಿ ಅವರು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ
  • ಬಿಟ್ಟು ಬಂದ ಬಳಿಕ ಪಕ್ಷಕ್ಕೆ ಮೋಸ ಮಾಡಿದರು ಅಂತ ಹೇಳುತ್ತಿದ್ದಾರೆ

 ಬೆಳಗಾವಿ (ನ.29):  ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jariholi) ಅವರು ಕಾಂಗ್ರೆಸ್‌ (Congress) ಬಿಟ್ಟು ಬಿಜೆಪಿಗೆ (BJP) ಬಂದಿದ್ದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್‌ (Lakshmi Hebbalkar) ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರು ಪಕ್ಷ ಬಿಟ್ಟು ಬಂದ ಬಳಿಕ ಪಕ್ಷಕ್ಕೆ ಮೋಸ ಮಾಡಿದರು ಅಂತ ಹೇಳುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ (KS eshwarappa) ತಿರುಗೇಟು ನೀಡಿದರು. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನಲ್ಲಿದ್ದಾಗ ಕಾಂಗ್ರೆಸ್‌ಗೆ (Congress) ಮೋಸ ಮಾಡಿದರು ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ. ಯಾವಾಗ ಅವರು ಕಾಂಗ್ರೆಸ್‌ ಬಿಟ್ಟು ಬಂದರೋ ಆಗ ಅವರಿಗೆ ಈ ವಿಚಾರ ನೆನಪಾಯ್ತು. ಸತ್ಯವನ್ನು ಸತ್ಯವಾಗಿ ಹೇಳಿದರೆ ಅದು ಸತ್ಯ . ಆದರೆ ಸತ್ಯವನ್ನು ತಮಗೆ ಬೇಕಾದಂತೆ ತಿರುಚಿ ಹೇಳಿದರೆ ಹೇಗೆ? ರಮೇಶ್‌ ಜಾರಕಿಹೊಳಿ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ (BJP) ಬಂದಿದ್ದಕ್ಕೆ ಹೆಬ್ಬಾಳ್ಕರ್‌ ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.

ರಮೇಶ್‌ ಜಾರಕಿಹೊಳಿ ಅವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಮೋಸ ಮಾಡಲ್ಲ. ಪರಿಷತ್‌ ಚುನಾವಣೆಯಲ್ಲಿ (MLC election) ಮೊದಲನೇ ಮತ ಬಿಜೆಪಿಗೆ, ಎರಡನೇ ಮತ ತಮ್ಮ ಸಹೋ​ದ​ರ​ನಿ​ಗೆ ಕೊಡಿ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ ಎಂದರು.

ಬಂಡುಕೋರ ಜಾರಕಿಹೊಳಿ :   ಬೆಳಗಾವಿ ವಿಧಾನ ಪರಿಷತ್‌ ಚುನಾವಣೆ (MLC Election) ಪ್ರಚಾರ ಬಿರುಸು ಪಡೆಯುತ್ತಿದ್ದಂತೆಯೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಮತ್ತೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದಾರೆ. ರಮೇಶ್‌ ಜಾರಕಿಹೊಳಿ ಒಬ್ಬ ಬಂಡುಕೋರ ಎಂದು ಆರೋಪಿಸಿದ್ದಾರೆ. ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಭಾನುವಾರ ಮಾತನಾಡಿ, ಈ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಬಿಜೆಪಿಯಿಂದ ಓಡಾಡುತ್ತಿರುವ ಒಬ್ಬರು ಮುಂಚೆ ನಮ್ಮ ಪಕ್ಷದಲ್ಲೂ ಇದ್ದವರು. ಅವರು ಇಲ್ಲೂ ಬಂಡಾಯ ಮಾಡಿದ್ದರು. ಆದರೂ ಅವರಿಗೆ ಸಮಾಧಾನ ಆಗಲಿಲ್ಲ. ಈಗ ಬಿಜೆಪಿಗೆ ಹೋಗಿದ್ದು, ಅಲ್ಲೂ ಬಂಡಾಯದ ಕೆಲಸ ಮಾಡುತ್ತಿದ್ದಾರೆ ಎಂದರು. 

ಅವರೊಬ್ಬ ಬಂಡುಕೋರ ಎಂದು ರಮೇಶ ಜಾರಕಿಹೊಳಿ (Ramesg jarkiholi) ಹೆಸರೆತ್ತದೆ ವಾಗ್ದಾಳಿ ನಡೆಸಿದರು. ಬಿಜೆಪಿ (BJP)  ಪಕ್ಷದಲ್ಲಿ ಬಾಯಿ ತೆಗೆದರೆ ರಾಮ ರಾಮ ಅಂತಾ ಹೇಳುತ್ತಾರೆ. ಆದರೆ, ಅವರ ಪಕ್ಷದ ಪ್ರಭಾವಿ ಮುಖಂಡ ಮಹಿಳಾ ಶಾಸಕಿ (MLA)  ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ನನಗೆ ಅದರ ಬಗ್ಗೆ ಪ್ರತಿಕ್ರಿಯಿಸುವಷ್ಟು ಸಮಯ ಇಲ್ಲ, ತಲೆನೂ ಓಡಲ್ಲ. ನನಗೆ ನನ್ನ ಪಕ್ಷದ ಅಭ್ಯರ್ಥಿ ಗೆಲ್ಲಿಸಬೇಕು ಎನ್ನುವ ಒಂದೇ ಗುರಿ ಇದೆ ಎಂದರು.  ‘ನನಗೆ ಥೂ... ಥೂ... ಎನ್ನುತ್ತಾರೆ. ನಾನೇನು ಮಾಡಿದ್ದೇನೆ? ಲಿಂಗಾಯತ ಸಮುದಾಯದಲ್ಲಿ ಹುಟ್ಟಿರುವ ಒಬ್ಬ ಹೆಣ್ಣು ಮಗಳು ನಾನು. ಇಡೀ ಸ್ತ್ರೀ ಕುಲಕ್ಕೆ ಅವರು ಮಾಡಿದ ಅವಮಾನವಿದು.’

ಇದು ತನ್ನ ವಿರುದ್ಧ ಥೂ ಥೂ ಅಂದಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ(Ramesh Jarkiholi) ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌(Lakshmi Hebbalkar) ಮಾಡಿರುವ ವಾಗ್ದಾಳಿ. ಕಾಂಗ್ರೆಸ್‌(Congress) ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪರವಾಗಿ ನಗರದಲ್ಲಿ ಶನಿವಾರ ಪ್ರಚಾರ(Campaign) ಸಭೆಯಲ್ಲಿ ಮಾತನಾಡಿದ ಅವರು ಕೆಪಿಸಿಸಿ(KPCC) ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ(Satish Jarkiholi) ಅವರ ಎದುರು ಸತೀಶ್‌ ಅವರನ್ನು ಹೊಗಳಿ ರಮೇಶ್‌ ಅವರನ್ನು ತೆಗಳಿದರು. ಲಕ್ಷ್ಮೀ ಹೆಬ್ಬಾಳ್ಕರ್‌ ಸೋಲಿಸುವುದೇ ನಮ್ಮ ಗುರಿ ಎನ್ನುತ್ತಾರೆ. ಯಾಕೆ ನಮ್ಮ ಪಕ್ಷದಲ್ಲಿ ನಾನು ಬೆಳೆಯಬಾರದಾ? ನೀವು ನಿಮ್ಮ ಪಕ್ಷದಲ್ಲಿ ಬೆಳೆದುಕೊಳ್ಳಿ. ಏನೂ ಮಾಡಿದ್ದೇನು ನಾನು? ಎಂದು ಪ್ರಶ್ನಿಸಿದರು.

click me!