
ಮೈಸೂರು (ಡಿ.21): ಪ್ರತಿಪಕ್ಷ ಇರುವುದೇ ಪ್ರಶ್ನಿಸಲು. ಆಡಳಿತ ಪಕ್ಷ ತಕ್ಕ ಉತ್ತರ ಕೊಡುವ ಸಾಮರ್ಥ್ಯ ಇರಬೇಕು. ಅದು ಬಿಟ್ಟು 141 ಸಂಸದರನ್ನು ಅಮಾನತುಗೊಳಿಸಿದ್ದು ಸಂಸತ್ತಿಗೆ ಮಾಡಿದ ದೊಡ್ಡ ದ್ರೋಹ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ವಿಶ್ವನಾಥ್ ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ತಿನ ವ್ಯವಹಾರ ಮಂತ್ರಿಗಳಿಗೆ ವಿಪಕ್ಷಗಳ ಕೆಲಸವೇ ಅರ್ಥವಾಗುತ್ತಿಲ್ಲ. ಪ್ರಶ್ನಿಸಿದವರನ್ನೇ ಅಮಾನತ್ತುಗೊಳಿಸುತ್ತಿದ್ದಾರೆ. ಮೂರು ಸುತ್ತಿನ ಬೇಹುಗಾರಿಕೆ ಭೇದಿಸಿ ಒಳ ಬಂದಿದ್ದಾರೆ ಅಂದರೆ ಅದರ ಹಿಂದೆ ಯಾರಿದ್ದಾರೆ? ಅದನ್ನ ಕೇಳಲು ಹೋದರೆ ಅಮಾನತು ಮಾಡಿದ್ದಾರೆ. ಹಾಗಾದರೇ ಸಂಸತ್ ಇರೋದು ಯಾಕೇ? ಸಂಸತ್ ಚರ್ಚೆ ಮಾಡಲಿಕ್ಕೆ ಇರುವ ಒಂದು ವೇದಿಕೆ ಅಲ್ಲವೇ ಎಂದರು.
ಹೊಗೆ ಬಾಂಬ್ ಬಗ್ಗೆ ಪ್ರಧಾನಿ ಮಾತನಾಡದಿರುವುದು ದುರಂತ: ಸಚಿವ ಶಿವರಾಜ ತಂಗಡಗಿ
ಪ್ರಧಾನಿಗೆ ಮಾಧ್ಯಮ ಎದುರು ಬಂದು ನಿಲ್ಲುವ ತಾಕತ್ತು ಇಲ್ಲ. ಇಡೀ ಜಗತ್ತಿನ ಮುಂದೆ ಭಾರತದ ಮಾನ ಬೆತ್ತಲಾಗಿದೆ. ಸಂಸತ್ತನ್ನು ಸಂಸತ್ತಿನ ಪ್ರಶ್ನೋತ್ತರಗಳನ್ನು ದುರ್ಬಲಗೊಳಿಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ದ್ರೋಹ ಮಾಡಿದಂತೆ. ಇಂಥಾ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡೋದೆ ಬೇಡ ಅಂದರೆ ಹೇಗೆ? ಇದು ನಮ್ಮ ದೇಶದ ಸಂವಿಧಾನ ವ್ಯವಸ್ಥೆಗೆ ಮಾರಕ. 141 ಜನರ ಅಮಾನತನ್ನು ಹಿಂದಕ್ಕೆ ಪಡೆಯಬೇಕು. ಆರೋಗ್ಯಕರ ವಾತಾವರಣದಲ್ಲಿ ಚರ್ಚೆಗಳ ನಡೆಯಬೇಕು ಎಂದು ಭಾರತ ಸರ್ಕಾರವನ್ನು ನಾನು ಒತ್ತಾಯ ಮಾಡುತ್ತಿದ್ದೇನೆ. ಈ ಕೂಡಲೇ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಪ್ರಧಾನಿ ಸ್ಥಾನಕ್ಕೆ ಖರ್ಗೆ: ಮಲ್ಲಿಕಾರ್ಜುನ ಖರ್ಗೆ ಈ ದೇಶದ ಪ್ರಧಾನಿಯಾದರೆ ನಾನು ಸ್ವಾಗತಿಸುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯಾಗಲು ಸಮರ್ಥರಿರುವ ವ್ಯಕ್ತಿ. ಅವರು ಸಾಮಾನ್ಯ ವ್ಯಕ್ತಿಯ ಮಗನಾಗಿ ದೊಡ್ಡ ರಾಜಕಾರಣಿಯಾಗಿ ಬೆಳೆದು ಇಂದು ಪ್ರಧಾನಿಯಾಗುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಎಂದರು. ಶೋಷಿತ ಸಮುದಾಯಗಳಿಂದ ಬಂದ ಇಂತಹ ನಾಯಕರು ಪ್ರಧಾನಿ ಆಗಬೇಕು ಎಂದು ಎಚ್. ವಿಶ್ವನಾಥ್ ತಿಳಿಸಿದರು.
ನಿಗಮ ಮಂಡಳಿಗೆ ಶೀಘ್ರವೇ ನೇಮಕಾತಿ: ಸಿಎಂ ಸಿದ್ದರಾಮಯ್ಯ
ರಾಮಮಂದಿರ ಉದ್ಘಾಟನೆಗೆ ಅಡ್ವಾಣಿ, ಮುರಳಿ ಮನೋಹರ ಜೋಶಿ ಬರೋದು ಬೇಡ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಚ್. ವಿಶ್ವನಾಥ್, ಬಿಜೆಪಿ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ರಾಮಮಂದಿರ ಹೋರಾಟದಲ್ಲಿ ಮುಂದಿದ್ದ ನಾಯಕ. ವಯಸ್ಸಿನ ಕಾರಣಕ್ಕೆ ಅವರನ್ನು ದೂರವಿಟ್ಟು ರಾಮಮಂದಿರ ಉದ್ಘಾಟನೆ ಮಾಡೋದು ತಪ್ಪು. ದೇವೇಗೌಡರಿಗೆ ವಯಸ್ಸಾಗಿದೆ ಅವರನ್ನು ಕರೆದಿದ್ದಾರೆ. ಕಾರ್ಯಕ್ರಮಕ್ಕೆ ಅಡ್ವಾಣಿ ಬಂದ್ರೆ ಕ್ರೆಡಿಟ್ ಮೋದಿಗೆ ಸಿಗಲ್ಲ. ಹಾಗಾಗಿ ಈ ರೀತಿ ಮಾಡಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.