
ಹಾವೇರಿ(ಜ.26): ಚುನಾವಣೆ ಕಾವು ಏರುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಇದೀಗ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಮತ್ತೊಂದು ತನಿಖಾಸ್ತ್ರದ ಬಾಣ ಪ್ರಯೋಗಿಸಿದೆ. ಕಾಂಗ್ರೆಸ್ ಸರ್ಕಾರ(ಸಿದ್ದರಾಮಯ್ಯ ಸರ್ಕಾರ)ದ ಅವಧಿಯಲ್ಲಿ ದಾಖಲಾಗಿದ್ದ 59 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಕೊಡುತ್ತಿರುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಘೋಷಿಸಿದ್ದಾರೆ. ಈ ಮೂಲಕ ‘ನಿಮ್ಮ ಭ್ರಷ್ಟಾಚಾರದ ಮುಖ ಕಳಚಿ, ಭ್ರಷ್ಟಾಚಾರದ ನಿಮ್ಮ ಮುಖ ರಾಜ್ಯದ ಜನತೆಗೆ ಗೊತ್ತಾಗಲಿ’ ಎಂದು ಅವರು ಹೇಳಿದ್ದಾರೆ.
ಹಿರೇಕೆರೂರು ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲಿ ನೋಡಿದರೂ ಭ್ರಷ್ಟಾಚಾರ, ಹಗರಣ ನಡೆಯಿತು. 59 ಕೇಸ್ಗಳು ಅವರ ಮೇಲೆ ಬಿದ್ದವು. ಅದನ್ನು ಮುಚ್ಚಿ ಹಾಕಲು ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿ ಹಾಕಿದರು. ಭ್ರಷ್ಟಾಚಾರ ನಿಗ್ರಹ ಮಾಡುವಂಥ ಸ್ವತಂತ್ರ ಸಂಸ್ಥೆಯನ್ನೇ ಮುಚ್ಚಿ ಕೈಗೊಂಬೆಯಂತಿರುವ ಎಸಿಬಿ ಇಟ್ಟುಕೊಂಡು ಕೂತಿದ್ದರು. ಕೋರ್ಚ್ ತೀರ್ಮಾನದಂತೆ ನಮ್ಮ ಸರ್ಕಾರ ಕಾಂಗ್ರೆಸ್ನವರ ಮೇಲಿರುವ 59 ಕೇಸ್ಗಳನ್ನು ಲೋಕಾಯುಕ್ತಕ್ಕೆ ಕೊಡುತ್ತಿದ್ದೇವೆ. ತನಿಖೆ ನಡೆದು ಅವರ ಭ್ರಷ್ಟಾಚಾರದ ಮುಖವಾಡ ಕಳಚಲಿದೆ ಎಂದು ಹೇಳಿದರು.
ಬಿಜೆಪಿ ಎಂಬ ಬುಲ್ಡೋಜರ್ ಕಾಂಗ್ರೆಸನ್ನು ನೆಲಸಮ ಮಾಡಲಿದೆ: ಸಚಿವ ಶ್ರೀರಾಮುಲು
ಕಾಂಗ್ರೆಸ್ಸಿಗರು ಹತಾಶರಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸೋಲು ಖಚಿತ ಎಂಬುದು ಅವರಿಗೆ ಖಾತ್ರಿಯಾಗಿದೆ. ಸಿದ್ದರಾಮಯ್ಯ ಸರ್ಕಾರ ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಕೂಡಿದ ಎಲ್ಲ ಸೌಭಾಗ್ಯಗಳನ್ನು ದೌರ್ಭಾಗ್ಯ ಮಾಡಿದರು. ಅದಕ್ಕಾಗಿಯೇ ಜನ 2018ರಲ್ಲಿ ಅವರನ್ನು ಮನೆಗೆ ಕಳುಹಿಸಿದರು. .30ರ ಮೋದಿ ಅಕ್ಕಿಗೆ .3ರ ‘ಸಿದ್ದರಾಮಯ್ಯ ಚೀಲ’ ಮಾಡಿ ಅನ್ನಭಾಗ್ಯ ಯೋಜನೆಯಡಿ ಪ್ರಚಾರ ಪಡೆದರು. ಈಗ 10 ಕೆ.ಜಿ. ಅಕ್ಕಿ ಕೊಡುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ. 7 ಕೆಜಿಯಿಂದ 4 ಕೆಜಿಗೆ ಇಳಿಸಿ, ಚುನಾವಣೆ ಬಂದಾಗ 10 ಕೆ.ಜಿ. ಕೊಡುತ್ತೇವೆ ಅಂತಿದ್ದಾರೆ. ಈ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಸೇರಲು ಕಾಂಗ್ರೆಸ್ ಶಾಸಕರೂ ತುದಿಗಾಲಲ್ಲಿ: ಸಿ.ಟಿ. ರವಿ
ಆಡಳಿತದಲ್ಲಿದ್ದಾಗ ಅನ್ನದಲ್ಲಿ ಕನ್ನ ಹಾಕಿದರು. ಇದನ್ನು ತನಿಖೆ ಮಾಡುತ್ತಿದ್ದ ಸಿಬಿಐ ಅಧಿಕಾರಿ ಉತ್ತರ ಭಾರತದಲ್ಲಿ ನಿಗೂಢವಾಗಿ ಮೃತಪಟ್ಟರು. ಇದಕ್ಕೆ ಏನು ಉತ್ತರ ಕೊಡುತ್ತೀರಿ ಎಂದು ಪ್ರಶ್ನಿಸಿದ ಬೊಮ್ಮಾಯಿ, ಈ ರೀತಿ ಜನರಿಗೆ ಮೋಸ ಮಾಡುವಂಥ ಸರ್ಕಾರವನ್ನು ನಾನು ಯಾವತ್ತೂ ನೋಡಿರಲಿಲ್ಲ. ಮಕ್ಕಳ ಹಾಸಿಗೆ, ದಿಂಬು ಕೂಡ ಬಿಡಲಿಲ್ಲ, ಸಣ್ಣ ನೀರಾವರಿ ಯೋಜನೆಯಡಿ ಕೆಲಸ ಮಾಡದೇ ಬಿಲ್ ತೆಗೆಯಲಾಯಿತು. ಬಹಿರಂಗವಾಗಿ ಭ್ರಷ್ಟಾಚಾರ ನಡೆಸಲಾಯಿತು. ಸಿದ್ದರಾಮಯ್ಯ ಅವಧಿಯಲ್ಲಿ ಅಧಿಕಾರಿಗಳು ಸಸ್ಪೆಂಡ್ ಆದರು. ಬಿಡಿಎ, ನೀರಾವರಿ ಇಲಾಖೆ ಎಲ್ಲೆಡೆ ಭ್ರಷ್ಟಾಚಾರದ ಹಗರಣಗಳು ನಡೆದವು ಎಂದು ಟೀಕಾಪ್ರಹಾರ ನಡೆಸಿದರು.
ಇದೇ ವೇಳೆ ಬಿಜೆಪಿ ಅಧಿಕಾರಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಪಟ್ಟಿಮಾಡಿದ ಅವರು, ನಮ್ಮ ಅವಧಿಯಲ್ಲಿ ಏನೇನು ಅಭಿವೃದ್ಧಿ ಕಾರ್ಯಗಳಾಗಿವೆ ಎಂಬ ಪಟ್ಟಿಕೊಟ್ಟಿದ್ದೇವೆ. ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ಏನೇನು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂಬ ಪಟ್ಟಿ ನೀಡಲಿ ಎಂದು ಸವಾಲು ಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.