
ಕಲಬುರಗಿ (ಏ.22): ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಸ್ವತಃ ಡಿ.ಕೆ.ಶಿವಕುಮಾರ್ ಸಂಚು ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಈಚೆಗೆ ಬಾಗಲಕೋಟೆಯ ಶಿವಾನಂದ ಪಾಟೀಲ್ ಅವರೇ ಮುಂದಾಗಿ ಸ್ವಾಮೀಜಿಯೊಬ್ಬರೊಂದಿಗೆ ಕಾನ್ಪರೆನ್ಸ್ ಕಾಲ್ನಲ್ಲಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಂಪರ್ಕಕ್ಕೆ ಬಂದು, ರಾಜಕೀಯ ವಿಷಯದ ಬಗ್ಗೆ ಮಾತನಾಡಿದ್ದಾರೆ.
ಮೈಸೂರು, ಚಾಮರಾಜನಗರದಲ್ಲಿ 60 ಸಾವಿರ ಲೀಡ್ ಕೊಡದಿದ್ರೆ ನನ್ನ ಕುರ್ಚಿ ಹೋಗುತ್ತದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇವನ್ನೆಲ್ಲಾ ನೋಡಿದರೆ ಚುನಾವಣೆ ಬಳಿಕ ಸಿಎಂ ಕುರ್ಚಿ ಹೋಗುವುದು ನಿಶ್ಚಿತ ಎಂದರು. ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಗೆಲ್ಲದೆ ಹೋದರೆ ಮುಖ್ಯಮಂತ್ರಿಯಾಗೋ ಅವಕಾಶವೇ ಕೈ ಜಾರಿ ಹೋಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಸಿದ್ದರಾಮಯ್ಯನವರ ಸಿಎಂ ಕುರ್ಚಿ ಹೋಗುವುದು ನಿಶ್ಚಿತ. ಇವರನ್ನೆಲ್ಲ ಕಾಡುತ್ತಿರುವ ಅನಿಶ್ಚಿತತೆಯನ್ನು ನೋಡಿದರೆ ಸರಕಾರವೇ ಪತನವಾದರೂ ಅಚ್ಚರಿ ಪಡಬೇಕಿಲ್ಲ ಎಂದರು.
ಸಿದ್ದು ಸರ್ಕಾರ ಢಮಾರ್: ಲೋಕಸಭಾ ಚುನಾವಣೆಯಾದ ಮೇಲೆ ಬಿಜೆಪಿ ನೇತೃತ್ವದ ಮಿತ್ರಕೂಟ ಬಹುಮತ ಪಡೆಯುತ್ತದೆ, ಮೋದಿಯವರು 3ನೇ ಬಾರಿಗೆ ಪ್ರಧಾನಿಯಾಗುತ್ತಾರೆ, ಆಗ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿನ ಕಾಂಗ್ರೆಸ್ ಸರ್ಕಾರ ಢಮಾರ್ ಆಗಲಿದೆ ಎಂದು ವಿಜಯಪುರದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಭವಿಷ್ಯ ನುಡಿದಿದ್ದಾರೆ. ಅವರುತಾಲೂಕಿನ ಮಾಶಾಳ ಗ್ರಾಮದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆದ ಕರಜಗಿ ಮತ್ತು ಮಾಶಾಳ ಜಿಪಂ ಮತಕ್ಷೇತ್ರದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ದೇಶದಲ್ಲಿ ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದರು.
ಈ ವರ್ಷ ಸಿಇಟಿ ಪರೀಕ್ಷೆಗೆ ನೀಡಿದ್ದು 2023ರ ಪತ್ರಿಕೆಯಾ?: ಇಂದು ಎಬಿವಿಪಿ ಪ್ರತಿಭಟನೆ
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಭಾರಿ ಜನಬೆಂಬಲದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಕೇಂದ್ರದಲ್ಲಿ ಮೋದಿ ಪ್ರಧಾನಿಯಾದ ತಕ್ಷಣದಲ್ಲಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಉರುಳುವುದು ಖಚಿತ ಎಂದರು. ಜಗತ್ತಿನ ಯಾವ ಶಕ್ತಿ ಕೂಡ ಎದುರಾದರೂ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಮಮತಾ ಬ್ಯಾನರ್ಜಿ ಮತ್ತಿತರರು ಒಂದಾದರೂ ಕೂಡಾ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಚ್ಚಳಗೊಂಡಿದೆ. ಬಳಿಕ ರಾಜಕಾರಣದಲ್ಲಿ ದೊಡ್ಡ ತಿರುವು ಉಂಟಾಗಲಿದ್ದು ನಿತಿನ್ ಗುತ್ತೇದಾರ್, ಚಂದು ಪಾಟೀಲ್ ಮುಂತಾದ ನಾಯಕರು ಭವಿಷ್ಯದ ಶಾಸಕರಾಗಲಿದ್ದಾರೆಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.