ಮೇಕೆದಾಟು ಯೋಜನೆಗೆ ತಮಿಳರ ಅಡ್ಡಿ ಬೇಡ: ಮೋದಿಗೆ ದೇವೇಗೌಡ ಮನವಿ

By Govindaraj SFirst Published Apr 22, 2024, 7:03 AM IST
Highlights

ರಾಜ್ಯದಲ್ಲಿ ತೀವ್ರ ನೀರಿನ ಸಮಸ್ಯೆ ಇದೆ. ಹೀಗಾಗಿ, ಕಾವೇರಿ ನೀರಿನ ಹೆಚ್ಚುವರಿ ಬಳಕೆಗೆ ಮೇಕೆದಾಟು ಯೋಜನೆಯ ಅಗತ್ಯವಿದೆ. ಈ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡಿನವರು ಅಡ್ಡಿಪಡಿಸಬಾರದು. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ತಾವು ಮನವಿ ಮಾಡಿದ್ದಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. 
 

ಹಾಸನ (ಏ.22): ರಾಜ್ಯದಲ್ಲಿ ತೀವ್ರ ನೀರಿನ ಸಮಸ್ಯೆ ಇದೆ. ಹೀಗಾಗಿ, ಕಾವೇರಿ ನೀರಿನ ಹೆಚ್ಚುವರಿ ಬಳಕೆಗೆ ಮೇಕೆದಾಟು ಯೋಜನೆಯ ಅಗತ್ಯವಿದೆ. ಈ ಅಣೆಕಟ್ಟು ನಿರ್ಮಾಣಕ್ಕೆ ತಮಿಳುನಾಡಿನವರು ಅಡ್ಡಿಪಡಿಸಬಾರದು. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ತಾವು ಮನವಿ ಮಾಡಿದ್ದಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. ಹೊಳೆನರಸೀಪುರ ತಾಲೂಕಿನ ನಗರನಹಳ್ಳಿಯಲ್ಲಿ ಮಾತನಾಡಿ, ಮೋದಿಯವರ ರಾಜ್ಯ ಭೇಟಿ ವೇಳೆ ಕಾವೇರಿ ವಿಚಾರವಾಗಿ ಚರ್ಚಿಸಿದ್ದೇನೆ. ಮೋದಿ ಕಾರ್ಯಕ್ರಮದ ವೇದಿಕೆಯಲ್ಲೇ ಈ ಬಗ್ಗೆ ಮಾತನಾಡಿದ್ದೇನೆ. 

ತಮಗೆ ಕಾವೇರಿ ನೀರಿನ ಸಮಸ್ಯೆ ಅರ್ಥವಾಗಿದೆ. ಈ ಬಗ್ಗೆ ಏನಾದರೂ ಮಾಡುತ್ತೇನೆ ಎಂದು ಮೋದಿಯವರು ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ನಾವು 28ಕ್ಕೆ 28 ಸ್ಥಾನಗಳನ್ನೂ ಗೆಲ್ಲಿಸಿಕೊಂಡು ಬರುತ್ತೇವೆ ಎಂದಿದ್ದೇನೆ. ಮೈತ್ರಿಕೂಟದ 28 ಸಂಸದರನ್ನು ಗೆಲ್ಲಿಸಿಕೊಂಡು ಮೋದಿ ಬಳಿ ಹೋಗೋಣ. ಕಾವೇರಿ ಸಮಸ್ಯೆಗೊಂದು ಪರಿಹಾರ ಹುಡುಕೋಣ. ನಾನು ಬದುಕಿರುವಾಗಲೇ ಈ ಯೋಜನೆ ಆಗಬೇಕು ಎಂದರು. ನಾನು ರಾಜ್ಯದ ಎಲ್ಲಾ ಕಡೆ ಪ್ರಚಾರ ನಡೆಸಿ, ಹೋರಾಟ ಮಾಡುತ್ತಾ ಇದ್ದೇನೆ. ಮೋದಿ ಬಿಟ್ಟರೆ ಪ್ರಧಾನಿ ಆಗಲು ಬೇರೆ ಯಾರಿಗೂ ಈ ದೇಶದಲ್ಲಿ ಯೋಗ್ಯತೆ ಇಲ್ಲ ಎಂದು ಅವರು ಪ್ರತಿಪಾದಿಸಿದರು.

ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ: ಲೋಕಸಭಾ ಚುನಾವಣೆ ಮುಗಿದ ಮೇಲೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದರು. ಶಿಡ್ಲಘಟ್ಟ ಹಾಗೂ ಚಿಂತಾಮಣಿ ತಾಲೂಕಿನ ಗಡಿ ಭಾಗದಲ್ಲಿ ಶುಕ್ರವಾರ ಲೋಕಸಭಾ ಕ್ಷೇತ್ರದ ಮೀಸಲು ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್ ಬಾಬು ಪರ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

ಈ ವರ್ಷ ಸಿಇಟಿ ಪರೀಕ್ಷೆಗೆ ನೀಡಿದ್ದು 2023ರ ಪತ್ರಿಕೆಯಾ?: ಇಂದು ಎಬಿವಿಪಿ ಪ್ರತಿಭಟನೆ

ಜೆಡಿಎಸ್ ಬಿಜೆಪಿ ಬಿ ಟೀಮ್ ಹೌದು: ಕಾಂಗ್ರೆಸ್‌ ನವರು ಜೆಡಿಎಸ್ ನವರು ಬಿಜೆಪಿ ಯ ’ಬಿ’ ಟೀಮ್ ಎಂದು ಕರೆಯುತ್ತಾರೆ. ಹೌದು ನಾವು ಬಿಜೆಪಿಯ ’ಬಿ’ ಟೀಮ್ ಹೌದು ಎಂದ ಅವರು, ತಾವು ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕೂಡ ಮೈತ್ರಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸುವುದಾಗಿ ತಿಳಿಸಿದರು. ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಜೆಡಿಎಸ್ ಎಲ್ಲಿದೆ ಎಂದು ಕೇಳುತ್ತಿದ್ದೀರಿ. ಜೆಡಿಎಸ್ ಪಕ್ಷ ಇಲ್ಲದಿದ್ದರೆ ನಿಮ್ಮನ್ನ ಮೈಸೂರಿನಿಂದ ಕರೆದುಕೊಂಡು ಬಂದು ಶಾಸಕನಾಗಿ ಮಾಡಿದ ಪಕ್ಷ ಯಾವುದು ಸ್ವಾಮಿ ಎಂದು ಪಶ್ನಿಸಿದರು.

click me!