
ಬೆಂಗಳೂರು(ಏ.11): ಕರ್ನಾಟಕ ವಿಧಾಸಭಾ ಚುನಾವಣಾ ಕಾವು ಜೋರಾಗುತ್ತಿದ್ದಂತೆ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ಇಂದು ಘೋಷಣೆಯಾಗಲಿದೆ. ಹಿರಿಯ ನಾಯಕರಿಗೆ ಟಿಕೆಟ್ ಕೈತಪ್ಪು ಸಾಧ್ಯತೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕರು ರಾಜೀನಾಮೆ ನೀಡುತ್ತಿದ್ದಾರೆ. ಕೆಎಸ್ ಈಶ್ವರಪ್ಪ ರಾಜೀನಾಮೆ ನೀಡಿದರೆ. ಜಗದೀಶ್ ಶೆಟ್ಟರ್ ಅಸಮಾಧಾನ ತೋಡಿಕೊಂಡಿದ್ದಾರೆ. ಇದೀಗ ಭಾರಿ ಕುತೂಹಲ ಮೂಡಿಸಿದ್ದ ಅಥಣಿ ಕ್ಷೇತ್ರದಲ್ಲಿ ಜಟಾಪಟಿ ಶುರುವಾಗಿದೆ. ಅಥಣಿ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿ ಆಪ್ತ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಲು ಬಿಜೆಪಿ ಒಲವು ತೋರಿದೆ. ಇದರಿಂದ ಅಸಮಾಧಾನಗೊಂಡಿರುವ ಲಕ್ಷ್ಮಣ ಸವದಿ ರಾಜೀನಾಮೆಗೆ ಮುಂದಾಗಿದ್ದಾರೆ .
ಇತ್ತ ಕರಾವಳಿಯಲ್ಲಿ ಬಿಜೆಪಿ ಟಿಕೆಟ್ ವಿಚಾರದಲ್ಲಿ ಮೇಜರ್ ಸರ್ಜರಿ ಮಾಡಲು ಮುಂದಾಗಿದೆ. ಉಡುಪಿ ಕ್ಷೇತ್ರದ ಹಾಲಿ ಶಾಸಕ ರಘುಪತಿ ಭಟ್ ಬದಲು ಯಶ್ಪಾಲ್ ಸುವರ್ಣಗೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ. ಕಾಪು ಕ್ಷೇತ್ರದಿಂದ ಲಾಲ್ಜಿ ಮೆಂಡನ್ ಬದಲಿಗೆ ಗುರ್ಮೆ ಸುರೇಶ್ ಶೆಟ್ಟಿಗೆ ಟಿಕೆಟ್ ನೀಡುವ ಸಾಧ್ಯತೆಗಳು ಕಾಣಿಸುತ್ತಿದೆ. ಇತ್ತ ಬೈಂದೂರಿನಲ್ಲಿ ಸುಕುಮಾರ್ ಶೆಟ್ಟಿಗೆ ಟಿಕೆಟ್ ಮಿಸ್ ಆಗುವ ಸಾಧ್ಯತೆ ದಟ್ಟವಾಗಿದೆ. ಇತ್ತ ಈ ಕ್ಷೇತ್ರದಿಂದ ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
ಟಿಕೆಟ್ ಘೋಷಣೆ ಮುನ್ನ ವಿಕೆಟ್ ಪತನ, ಆಲೌಟ್ ಲಕ್ಷಣ: ಈಶ್ವರಪ್ಪ ರಾಜೀನಾಮೆಗೆ ಬಿಜೆಪಿ ಕುಟುಕಿದ ಡಿಕೆಶಿ!
ಅಥಣಿ ಟಿಕೆಟ್ ವಿಚಾರ ಇದೀಗ ಬಿಜೆಪಿಗೆ ತಲೆನೋವಾಗಿದೆ. ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿರುವ ನಾಯಕರಲ್ಲಿ ಮಹೇಶ್ ಕುಮಟಳ್ಳಿ ಕೂಡ ಒಬ್ಬರಾಗಿದ್ದಾರೆ. ಇತ್ತ ರಮೇಶ್ ಜಾರಕಿಹೊಳಿ ಕೂಡ ಕುಮಟಳ್ಳಿ ಪರ ಬ್ಯಾಟ್ ಬೀಸಿದ್ದರು. ಕುಮಟಳ್ಳಿಗೆ ಟಿಕೆಟ್ ನೀಡದಿದ್ದರೆ ನನಗೂ ಟಿಕೆಟ್ ಬೇಡ ಎಂದಿದ್ದರು. ಹೀಗಾಗಿ ಅಳೆದು ತೂಗಿ ಅಥಣಿಯ ಬಿಜೆಪಿ ನಾಯಕ ಲಕ್ಷ್ಮಣ ಸವದಿ ಬಿಟ್ಟು ಕುಮಟಳ್ಳಿಗೆ ಟಿಕೆಟ್ ನೀಡಲು ಬಿಜೆಪಿ ಮುಂದಾಗಿದೆ. ಇದರಿಂದ ಕೆರಳಿರುವ ಸವದಿ, ರಾಜಿನಾಮೆಯತ್ತ ಹೆಜ್ಜೆ ಇಟ್ಟಿದ್ದಾರೆ.
ಸವದಿ ನಿರ್ಧಾರ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಲಕ್ಷ್ಮಣ ಸವದಿ ಅವರು ಅಥಣಿಯಿಂದ ಟಿಕೆಟ್ ಕೊಡುವಂತೆ ಕೇಳಿರುವುದು ನಿಜ. ಆದರೆ, ಮಹೇಶ್ ಕುಮಟಹಳ್ಳಿ ಅವರು ಬಿಜೆಪಿ ಸರ್ಕಾರ ರಚನೆ ಮಾಡಲು ಪ್ರಮುಖ ಪಾತ್ರವನ್ನು ವಹಿಸಿರುವ ಹಿನ್ನೆಲೆಯಲ್ಲಿ ಅವರೊಂದಿಗೆ ಚರ್ಚೆ ಮಾಡಲಾಗುತ್ತಿದೆ. ಆದರೆ, ಲಕ್ಷ್ಮಣ ಸವದಿ ಅವರಿಗೆ ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬಾರದು ಎಂದು ಸೂಚನೆ ನೀಡಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯದ 35 ಹಾಲಿ ಶಾಸಕರಿಗೆ ಬಿಜೆಪಿ ಕೊಕ್?: ಯಾರಿಗೆಲ್ಲಾ ಮಿಸ್ ಆಯ್ತು ಟಿಕೆಟ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.