
ಮೈಸೂರು (ಅ.03): ಕಾಂಗ್ರೆಸ್ ಸರ್ಕಾರ ಯಾವ ಜಾತಿಯನ್ನು ನಿರ್ಲಕ್ಷಿಸಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸ್ಪಷ್ಟಪಡಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಆಧಾರದ ಮೇಲೆ ಹುದ್ದೆ ಕೊಡಲಾಗುವುದಿಲ್ಲ. ಅಲ್ಲದೆ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಳಕ್ಕೆ ನಿಯೋಜಿಸಿಲ್ಲ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ಸತ್ಯಕ್ಕೆ ದೂರವಾದದ್ದು ಎಂದು ಹೇಳಿದರು.
40 ಮುಖ್ಯ ಎಂಜಿನಿಯರ್ ಹುದ್ದೆಯಲ್ಲಿ 10 ಲಿಂಗಾಯತ, 41 ವಿವಿಗಳ ಕುಲಪತಿಗಳ ಪೈಕಿ 14 ಲಿಂಗಾಯತರು, ಕರ್ನಾಟಕದ 87 ಐಎಎಸ್ ಅಧಿಕಾರಿಗಳಲ್ಲಿ 22 ಲಿಂಗಾಯತರು, ನಾಲ್ವರು ಜಿಲ್ಲಾಧಿಕಾರಿಗಳಾಗಿದ್ದಾರೆ. 10 ಜನರು ಜಿಪಂ ಸಿಇಒಗಳಾಗಿದ್ದಾರೆ. 439 ಕೆಎಎಸ್ ಶ್ರೇಣಿಯ ಅಧಿಕಾರಿಗಳಿದ್ದಾರೆ. ಇವರ ಪೈಕಿ 102 ಲಿಂಗಾಯತರಿದ್ದಾರೆ ಎಂದು ವಿವರಿಸಿದರು. ಹೌಸಿಂಗ್ ಬೋರ್ಡ್, ತೋಟಗಾರಿಕೆ, ಕೃಷಿ, ಕ್ರೆಡಾಲ್, ಸೆಸ್ಕ್, ಬೆಸ್ಕಾಂ, ನೀರಾವರಿ ಮಂಡಲಿಗಳಲ್ಲಿ ಮುಖ್ಯಸ್ಥ ಸ್ಥಾನಗಳಲ್ಲಿ ಲಿಂಗಾಯತರಿದ್ದಾರೆ. ಇವು ಆಯಕಟ್ಟಿನ ಹುದ್ದೆಗಳಲ್ಲವೇ? ಎಂದು ಪ್ರಶ್ನಿಸಿದರು. ಶಾಮನೂರು ಶಿವಶಂಕರಪ್ಪ ಅವರಿಗೆ ಯಾರೋ ಧಿಕ್ಕು ತಪ್ಪಿಸುತ್ತಿದ್ದಾರೆ.
ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ
ಲಕ್ಷಾಂತರ ಕಾರ್ಯಕರ್ತರ ಶ್ರಮದಿಂದ ಕಾಂಗ್ರೆಸ್ ಪಕ್ಷ 136 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿದೆ. ನಿಮ ಖುಷಿಗೋ ತೆವಲಿಗೋ ಹೇಳಿಕೆ ಕೊಟ್ಟು ಜೆಡಿಎಸ್- ಬಿಜೆಪಿಗೆ ಆಹಾರ ಕೊಡಬೇಡಿ. ಅಸಮಾಧಾನ ಇದ್ದರೆ ಹೈಕಮಾಂಡ್ ಜತೆ ಚರ್ಚಿಸಿ ಬಗೆಹರಿಸಿಕೊಳ್ಳುವಂತೆ ಹೇಳಿದರು. ಕಾಂಗ್ರೆಸ್ ಸರ್ಕಾರ ಪ್ರತಿ ಸಮುದಾಯವನ್ನೂ ಒಟ್ಟಿಗೆ ಕೊಂಡೊಯ್ಯುತ್ತಿದೆ. ಸಿದ್ದರಾಮಯ್ಯ ಎಂದೂ ಜಾತಿ ರಾಜಕೀಯ ಮಾಡಿಲ್ಲ. ಕುರುಬರೇ ಸರ್ಕಾರ ನಡೆಸುತ್ತಿರುವುದು ಎನ್ನುವುದು ತಪ್ಪು. ಮುಖಂಡರು ಭಿನ್ನಾಭಿಪ್ರಾಯ ಸೃಷ್ಟಿಸುವ ಹೇಳಿಕೆ ಕೊಡುವುದು ಸರಿಯಲ್ಲ ಎಂದರು. ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುವ ಬಿಜೆಪಿ ನಾಯಕರು ಇದನ್ನು ಪ್ರಶ್ನಿಸುವ ನೈತಿಕತೆ ಇಲ್ಲ ಎಂದು ಅವರು ಟೀಕಿಸಿದರು.
ದೇವೇಗೌಡರು ವಸ್ತು ಸ್ಥಿತಿ ವಿವರಿಸಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹತ್ತಿರವಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಏಕೆ ರಾಜ್ಯದ ವಸ್ತು ಸ್ಥಿತಿ ವಿವರಿಸಬಾರದು?. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಿರಂತರ ಸಭೆ ನಡೆಸಿ ರಾಜ್ಯದ ಉಳಿವಿಗಾಗಿ ಮೈತ್ರಿ ಮಾಡಿಕೊಂಡಿದ್ದೇವೆ ಎನ್ನುತ್ತಾರೆ. ಹಾಗಾದರೆ ಮೋದಿಗೆ ಹತ್ತಿರವಿರುವ ದೇವೇಗೌಡರು ರಾಜ್ಯದ ವಸ್ತಸ್ಥಿತಿಯನ್ನು ಯಾಕೇ ವಿವರಿಸಬಾರದು ಎಂದು ಅವರು ಪ್ರಶ್ನಿಸಿದರು. ಜೆಡಿಎಸ್ ಈಗ ಜೆಡಿಸಿ ಆಗಿ ಬದಲಾಗಿದೆ. ಜೆಡಿಎಸ್ ಬಳಸಲು ಅವರಿಗೆ ನೈತಿಕತೆ ಇಲ್ಲ. ಜೆಡಿಎಸ್ ಈಗ ಕಮ್ಯುನಲ್ ಆಗಿದೆ. ಹಿಜಾಬ್, ವ್ಯಾಪಾರ ವಹಿವಾಟಿಗೆ ತಡೆಯೊಡ್ಡಿ ನಿರಂತರ ಕಿರುಕುಳ ನೀಡಿದಾಗ ಮುಸ್ಲೀಮರು ದೇಶ ಬಿಡುವಂತೆ ನಾಯಕರು ಕರೆ ನೀಡಿದಾಗ ಇವರೆಲ್ಲಾ ಏನು ಮಾಡುತ್ತಿದ್ದರು ಎಂದು ಅವರು ತಿರುಗೇಟು ನೀಡಿದರು.
ರೈತ ಸಂಘಟನೆಗಳ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದನ್ನು ನಿಲ್ಲಿಸಿ ಸಂಸದರ ವಿರುದ್ಧ ಪ್ರತಿಭಟನೆ ಮಾಡಬೇಕು. ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರದ ಎಳ್ಳಷ್ಟೂ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು. ಸರ್ಕಾರ ಬದಲಾಗುತ್ತಿದೆ ಎಂದು ಹಿಂದಿನಿಂದಲೂ ಬಿಜೆಪಿಯವರು ಹೇಳುತ್ತಿದ್ದಾರೆ. ಸರ್ಕಾರ ರಚನೆಯಾದ ದಿನದಿಂದಲೂ ಇದೇ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ, ಜೆಡಿಎಸ್ನಿಂದ ಕಾಂಗ್ರೆಸ್ ಸೇರಲು 25 ರಿಂದ 30 ಶಾಸಕರು ಇದಕ್ಕೆ ಸಿದ್ಧರಿದ್ದಾರೆ. ಬಿಟ್ಟು ಹೋಗುವವರನ್ನು ಉಳಿಸಿಕೊಳ್ಳಲು ಈ ತಂತ್ರ ಬಳಸುತ್ತಿದ್ದಾರೆ ಎಂದು ಅವರು ನುಡಿದರು.
Siddaramaiah ಮೊದಲ ಅವಧಿಯಲ್ಲಿ ಟಿಪ್ಪು, ಇವಾಗ ಔರಂಗಜೇಬ್ನನ್ನು ಮರೆಸಲಾಗುತ್ತಿದೆ: ಪ್ರಲ್ಹಾದ್ ಜೋಶಿ
ಬಿಜೆಪಿ ಒಂದು ಮನೆ 15 ಬಾಗಿಲು: ರಾಜ್ಯದ ಬಿಜೆಪಿ ಈಗ ಒಂದೇ ಮನೆ 15 ಬಾಗಿಲು ಆಗಿದೆ. ಇದು ಕರ್ನಾಟಕ ಬಿಜೆಪಿಯ ಸ್ಥಿತಿ. ಇಡೀ ದೇಶದಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾಡದ ರಾಜ್ಯ ಎಂದರೆ ಅದು ಕರ್ನಾಟಕ ಮಾತ್ರ. ಅಶ್ವಥ್ನಾರಾಯಣ್, ಆರ್. ಅಶೋಕ್ಬಾಯಿ ಮುಚ್ಚಿ ಹೋಗಿದೆ. ಸಿ.ಟಿ. ರವಿ ಅವರ ಹುದ್ದೆ ಹೋಗಿದೆ ಎಂದು ಅವರು ವ್ಯಂಗ್ಯವಾಡಿದರು. ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಸೇವಾದಳದ ಗಿರೀಶ್, ಮಾಧ್ಯಮ ಸಂಚಾಲಕ ಕೆ. ಮಹೇಶ್ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.