ಆಜಾದ್‌ ಬೆನ್ನಲ್ಲೇ ಪಕ್ಷ ತೊರೆಯುವ ಸಾಧ್ಯತೆ: ಸುಧಾಕರ್‌ ಭೇಟಿ ಮಾಡಿದ ಮುನಿಯಪ್ಪ

Published : Aug 26, 2022, 12:55 PM ISTUpdated : Aug 26, 2022, 01:03 PM IST
ಆಜಾದ್‌ ಬೆನ್ನಲ್ಲೇ ಪಕ್ಷ ತೊರೆಯುವ ಸಾಧ್ಯತೆ: ಸುಧಾಕರ್‌ ಭೇಟಿ ಮಾಡಿದ ಮುನಿಯಪ್ಪ

ಸಾರಾಂಶ

KH Muniyappa likely to join BJP: ಕೋಲಾರದ ಹಿರಿಯ ಕಾಂಗ್ರೆಸ್‌ ನಾಯಕ ಕೆ ಎಚ್‌ ಮುನಿಯಪ್ಪ ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇಂದು ಸಚಿವ ಡಾ. ಸುಧಾಕರ್‌ ಅವರ ನಿವಾಸದಲ್ಲಿ ಇಬ್ಬರ ಭೇಟಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲೊಬ್ಬರಾದ ಕೆ ಎಚ್‌ ಮುನಿಯಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ಜೊತೆಗೆ ಮಾಜಿ ಸಚಿವ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಬಣ ಮತ್ತು ಮುನಿಯಪ್ಪ ಬಣ ಆಗಾಗ ಕಿತ್ತಾಡುತ್ತಲೇ ಇರುತ್ತವೆ. ಈಗ ಇಬ್ಬರ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು ಪಕ್ಷದಲ್ಲಿ ಮುನಿಯಪ್ಪರನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಜತೆಗೆ ಮುನಿಯಪ್ಪ ಕಾಂಗ್ರೆಸ್‌ ನಾಯಕರ ಮೇಲೆ ಸಿಟ್ಟಾಗಿದ್ದು ಬಿಜೆಪಿ ಸೇರುವ ಸಾಧ್ಯತೆಯಿದೆ ಎಂಬ ಮಾತುಗಳೂ ಕೇಳಿ ಬರುತ್ತಿತ್ತು. ಇದೀಗ ಸಚಿವ ಡಾ. ಕೆ. ಸುಧಾಕರ್‌ ಅವರ ಜೊತೆಗಿನ ಭೇಟಿ ಸಾಕಷ್ಟು ಹೊಸ ಚರ್ಚೆಗಳಿಗೆ ನಾಂದಿ ಹಾಡಿದೆ. ಮುನಿಯಪ್ಪ ಇಂದು ಸುಧಾಕರ್‌ ಅವರ ಸದಾಶಿವನಗರ ನಿವಾಸದಲ್ಲಿ ಭೇಟಿಯಾಗಿ ಮಾತನಾಡಿದರು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಭೇಟಿಯಾದರು. ಭೇಟಿ ವೇಳೆ ಚರ್ಚೆಯಾದ ವಿಚಾರಗಳ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲವಾದರೂ ಕಾಂಗ್ರೆಸ್‌ನಿಂದ ಹೊರಬರುವ ಬಗ್ಗೆ ಚರ್ಚೆಯಾಗಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. 

ಇಂದು ಬೆಳಗ್ಗೆಯಷ್ಟೇ ಕಾಂಗ್ರೆಸ್‌ನ ಹಿರಿಯ ನಾಯಕ ಗುಲಾಂ ನಭಿ ಆಜಾದ್‌ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದಲ್ಲಿ ಸೋನಿಯಾ ಗಾಂಧಿ ನಾಮ ಮಾತ್ರಕ್ಕೆ ಅಧ್ಯಕ್ಷೆ ಎಲ್ಲಾ ತೀರ್ಮಾನಗಳನ್ನೂ ರಾಹುಲ್‌ ಗಾಂಧಿ, ಮತ್ತವರ ಪಿಎ ಗಳೇ ತೆಗೆದುಕೊಳ್ಳುತ್ತಾರೆ. ಹಿರಿಯ ನಾಯಕರನ್ನು ಪಕ್ಷದಲ್ಲಿ ಸೈಡ್‌ಲೈನ್‌ ಮಾಡಲಾಗಿದೆ ಎಂದು ಆಜಾದ್‌ ದೂರಿ ರಾಜೀನಾಮೆ ನೀಡಿದ್ದಾರೆ. ಐದು ಪುಟಗಳ ರಾಜೀನಾಮೆ ಪತ್ರದಲ್ಲಿ ಗುಲಾಂ ನಭಿ ಆಜಾದ್‌ ರಾಹುಲ್‌ ಗಾಂಧಿ ವಿರುದ್ಧದ ತಮ್ಮ ಅಭಿಪ್ರಾಯವನ್ನು ವಿವರವಾಗಿ ನಮೂದಿಸಿದ್ದಾರೆ.

ಚರ್ಚೆಗೆ ಆಹಾರವಾದ ಮುನಿಯಪ್ಪ ಭೇಟಿ:

ದೆಹಲಿಯಲ್ಲಿ ಗುಲಾಂ ನಭಿ ಆಜಾದ್‌ರ ರಾಜೀನಾಮೆಯಿಂದ ಆರಂಭವಾದ ಸಂಚಲನ ಮುನಿಯಪ್ಪ ಮತ್ತು ಸುಧಾಕರ್‌ ಭೇಟಿಯಿಂದ ಇನ್ನಷ್ಟು ಹೆಚ್ಚಿದೆ. ಕಳೆದ ಕೆಲ ದಿನಗಳಿಂದ ಪಕ್ಷದ ಹಿರಿಯ ನಾಯಕರು ಪಕ್ಷ ತೊರೆದು ಹೋಗುತ್ತಿದ್ದಾರೆ. ಈ ವೇಳೆ ಮುನಿಯಪ್ಪ - ಸುಧಾಕರ್‌ ಭೇಟಿ ಸಾಮಾನ್ಯವಾಗಿ ಕುತೂಹಲಕ್ಕೆ ಕಾರಣವಾಗಿದೆ. ಮುನಿಯಪ್ಪ ಪಕ್ಷ ತೊರೆಯುತ್ತಾರೆ ಎಂಬ ಮಾತು ಹಲವು ದಿನಗಳಿಂದ ಕೇಳಿ ಬರುತ್ತಿತ್ತು. ಇಂದು ಸುಧಾಕರ್‌ ಮತ್ತು ಬೊಮ್ಮಾಯಿ ಅವರನ್ನು ಅವರು ಭೇಟಿಯಾಗಿದ್ದಾರೆ. ಒಂದು ವೇಳೆ ಅವರು ಬಿಜೆಪಿ ಹೋದರೆ ಸಂಸತ್‌ ಚುನಾವಣೆಗೆ ಟಿಕೆಟ್‌ ಸಿಗುವುದು ಕಷ್ಟ. ಯಾಕೆಂದರೆ ಕೋಲಾರ ಕ್ಷೇತ್ರವನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮುನಿಸ್ವಾಮಿಯವರೇ ಗೆದ್ದಿದ್ದಾರೆ. ಆದರೂ ಪಕ್ಷದಲ್ಲಿ ವರ್ಚಸ್ಸಿಗೆ ತಕ್ಕ ಸ್ಥಾನ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅವರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಇದನ್ನೂ ಓದಿ: ಕಾಂಗ್ರೆಸ್‌ ಪಕ್ಷವನ್ನು ತೊರೆದ ಹಿರಿಯ ನಾಯಕ ಗುಲಾಂ ನಬಿ ಅಜಾದ್‌!

ಆಜಾದ್‌ ರಾಜೀನಾಮೆ:

ಜಮ್ಮು ಕಾಶ್ಮೀರ ರಾಜಕೀಯದ ಹಿರಿಯ ರಾಜಕಾರಣಿಯಾಗಿರುವ ಗುಲಾಂ ನಬಿ ಆಜಾದ್‌, ಹಲವು ದಶಕಗಳಿಂದ ಪಕ್ಷಕ್ಕಾಗಿ ದುಡಿದ ವ್ಯಕ್ತಿಯಾಗಿದ್ದಾರೆ. ಬಿಹಾರದ ಪ್ರಾದೇಶಿಕ ಪಕ್ಷವೊಂದು ಅವರಿಗೆ ರಾಜ್ಯಸಭಾ ಸ್ಥಾನವನ್ನು ನೀಡುವ ಆಫರ್‌ ಅನ್ನೂ ಇತ್ತೀಚೆಗೆ ನೀಡಿತ್ತು.ಆದರೆ, ಈ ಆಫರ್‌ ಅನ್ನು ಅವರು ತಿರಸ್ಕರಿಸಿದ್ದರು. ಕಾಂಗ್ರೆಸ್‌ ಪಕ್ಷದೊಂದಿಗೆ ನಾನು ರಾಜಕೀಯದಲ್ಲಿ ಇದ್ದಿದ್ದು ಇದು ಕೊನೆಯ ಬಾರಿ ಎಂದು ಈ ವೇಳೆ ಅವರು ಹೇಳಿದ್ದರು. ಕಾಂಗ್ರೆಸ್‌ನ ಇನ್ನೊಬ್ಬ ಪ್ರಭಾವಿ ನಾಯಕ ಆನಂದ್‌ ಶರ್ಮ ಅವರು ಹಿಮಾಚಲ ಪ್ರದೇಶದಲ್ಲಿ ಪಕ್ಷದ ಪ್ರಮುಖ ಸ್ಥಾನಗಳಿಗೆ ರಾಜೀನಾಮೆ ನೀಡಿದ ಬೆನ್ನಲ್ಲಿಯೇ ಗುಲಾಂ ನಬಿ ಆಜಾದ್‌ ಪಕ್ಷವನ್ನೇ ತೊರೆದಿದ್ದಾರ.ೆ ಪಕ್ಷದಲ್ಲಿ ತಮಗೆ ದೊಡ್ಡ ಮಟ್ಟದಲ್ಲಿ ಅವಮಾನವಾಗಿದೆ ಎಂದು ಆನಂದ್‌ ಶರ್ಮ ಹೇಳಿದ್ದರು. ಅವರೂ ಕೂಡ ಪಕ್ಷವನ್ನು ತೊರೆಯುವ ಸಾಧ್ಯತೆ ದಟ್ಟವಾಗಿದೆ.

ನನ್ನ ಕೆಲಸವನ್ನೊಬ್ಬರು ಗುರುತಿಸಿದರು: ಗುಲಾಂ ನಬಿ ಅಜಾದ್‌

ರಾಹುಲ್‌ ಗಾಂಧಿಯಿಂದ ಈ ಸ್ಥಿತಿ: ಸುಮಾರು 45 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಗುಲಾಂ ನಬಿ ಆಜಾದ್‌ ಸೇವೆ ಸಲ್ಲಿಸಿದ್ದರು. ರಾಹುಲ್‌ ಗಾಂಧಿಯವರ ನಿರ್ಧಾರದಿಂದ ಪಕ್ಷದಿಂದ ದೊಡ್ಡ ಮಟ್ಟದಲ್ಲಿ ಹಿನ್ನಡೆಯಾಗಿದೆ. ನೀವು ಕೇವಲ ಪಕ್ಷದಲ್ಲಿ ಸಾಂಕೇಂತಿಕ ಅಧ್ಯಕ್ಷರು. ಆದರೆ, ಕಾಂಗ್ರೆಸ್‌ ಪಕ್ಷದ ಪ್ರಮುಖ ನಿರ್ಧಾರಗಳನ್ನು ರಾಹುಲ್‌ ಗಾಂಧಿ, ಅವರ ಪಿಎ ಹಾಗೂ ಭದ್ರತಾ ಸಿಬ್ಬಂದಿ ಮಾಡುತ್ತಿದ್ದಾರೆ ಎಂದು ಗುಲಾಂ ನಬಿ ಆಜಾದ್‌ ಸೋನಿಯಾ ಗಾಂಧಿಯವರನ್ನು ಉಲ್ಲೇಖಿಸಿ ಪತ್ರದಲ್ಲಿ ಬರೆದಿದ್ದಾರೆ. ರಾಹುಲ್‌ ಗಾಂಧಿ ತೆಗೆದುಕೊಳ್ಳುವ ಬಾಲಿಶ ನಿರ್ಧಾರಗಳಿಂದಲೇ ಪಕ್ಷಕ್ಕೆ ಈ ಸ್ಥಿತಿ ಬಂದಿದೆ ಎಂದು ಆರೋಪ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ