
ರಾಣಿಬೆನ್ನೂರು (ಆ.26): ಯಾರಾದರೂ ನನ್ನನ್ನು ಹೊಗಳಿದರೆ ಹೆದರುತ್ತೇನೆ, ತೆಗಳಿದರೆ, ಟೀಕೆ ಮಾಡಿದರೆ ನಾನು ಕೆಲಸದ ಮೂಲಕ ದಿಟ್ಟ ಉತ್ತರ ಕೊಡುತ್ತೇನೆ. ನಾನು ದುಡಿಮೆಯಲ್ಲಿ ನಂಬಿಕೆ ಇಟ್ಟವನು. ರಾಜ್ಯದ ಅಭಿವೃದ್ಧಿಗೆ ಸ್ಥಿತಪ್ರಜ್ಞೆಯಿಂದ ಕೆಲಸ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರಾಣಿಬೆನ್ನೂರು ಕ್ಷೇತ್ರದಲ್ಲಿ ಕೈಗೊಂಡಿರುವ .51.90 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ನಗರದ ಬಿ.ಟಿ. ಪಾಟೀಲ ಮೈದಾನದಲ್ಲಿ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ ಅವರು, ಒಂದು ಕಾಲದಲ್ಲಿ ದುಡ್ಡೇ ದೊಡ್ಡಪ್ಪ ಎನ್ನುತ್ತಿದ್ದರು.
ಇಂದು ದುಡಿಮೆಯೇ ದೊಡ್ಡಪ್ಪ. ನಾನು ದುಡಿಮೆಗೆ ಗೌರವ, ಅವಕಾಶ, ಸ್ವಾಭಿಮಾನ ನೀಡುವ ಕೆಲಸ ಮಾಡುತ್ತಿದ್ದೇನೆ. ಭಾಷಣದಿಂದ ಹೊಟ್ಟೆತುಂಬಲ್ಲ, ಬುದ್ದಿಗೆ ವಿದ್ಯಕೊಡಬೇಕು, ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು. ರೈತರ ಬೆವರಿಗೆ ಬೆಲೆ ನೀಡುತ್ತೇನೆ ಎಂದರು. ಜಿಲ್ಲೆಯ 15 ಸಾವಿರ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್ಶಿಪ್ ಆರಂಭಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಾವೇರಿ ಜಿಲ್ಲೆಗೆ 25 ವರ್ಷ ಪೂರೈಸಿದ ಶುಭ ಸಂದರ್ಭದಲ್ಲಿ ನವಂಬರ್ ತಿಂಗಳಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗಾಗಿ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಖ್ಯಾತವಾಗಿರುವ ರಾಣಿಬೆನ್ನೂರ ತಾಲೂಕಿನ ಗಡಿ ಭಾಗದಲ್ಲಿ ಜಿಲ್ಲೆಯನ್ನು ಪ್ರವೇಶಿಸುವ ಹೆದ್ದಾರಿ ಮಾರ್ಗದಲ್ಲಿ ಒಂದು ದೊಡ್ಡ ಹೆಬ್ಬಾಗಿಲು ನಿರ್ಮಾಣ ಮಾಡಲು ಮಂಜೂರಾತಿ ನೀಡಲಾಗಿದೆ. ಇದಕ್ಕೆ .5 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಸಿದ್ದರಾಮಯ್ಯ ಸತ್ಯಹರಿಶ್ಚಂದ್ರರಾ: ಸಿಎಂ ಬೊಮ್ಮಾಯಿ ಕಿಡಿ
ಹಾವೇರಿ ಜಿಲ್ಲೆಗೆ ಜಲಜೀವನ್ ಮಿಷನ್ ಯೋಜನೆಯಡಿ 1200 ಕೋಟಿ ಅನುದಾನ ನೀಡಲಾಗಿದೆ. ಮೆಡ್ಲೇರಿ, ಹೋಳೆಆನ್ವೇರಿ, ಹಾನಗಲ್ ತಾಲೂಕು ಸಮ್ಮಸಗಿ, ಬಾಳಂಬೀಡ ಹಾಗೂ ಬ್ಯಾಡಗಿ ಆಣೂರ ಬುಡಪನಹಳ್ಳಿ, ಹಿರೇಕೆರೂರ ಸೇರಿದಂತೆ ನೀರವಾರಿ ಯೋಜನೆಗಳನ್ನು ನನ್ನ ಅವಧಿಯಲ್ಲಿ ಪೂರ್ಣಗೊಳಿಸಿ ಉದ್ಘಾಟನೆ ಮಾಡುವೆ ಎಂದರು. 100 ಕೋಟಿ ವೆಚ್ಚದಲ್ಲಿ ಮೆಗಾಡೈರಿ ಆರಂಭಕ್ಕೆ ಶೀಘ್ರವೇ ಅಡಿಗಲ್ಲು ಹಾಕುವೆ. .50 ಕೋಟಿ ವೆಚ್ಚದಲ್ಲಿ ಯು.ಎಚ್.ಟಿ. ಪ್ಲಾಂಟ್ ಡಿಸೆಂಬರ್ ತಿಂಗಳಲ್ಲಿ ಆರಂಭಗೊಳ್ಳಲಿದೆ. ಒಂದು ಲಕ್ಷ ಎಕರೆ ಜಮೀನಿಗೆ ತುಂಗಾ ಮೇಲ್ದಂಡೆ ಯೋಜನೆಯಡಿ ನೀರಾವರಿ ಸೌಕರ್ಯ ಕಲ್ಪಿಸಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ ಎಂದರು.
ಕಾಂಗ್ರೆಸ್ಸಿಗರಿಗೆ ಜಿನ್ನಾ ಕನಸೇ ಬೀಳೋದು: ಕಾಂಗ್ರೆಸ್ಸಿನವರು ಈ ದೇಶ ಒಡೆದೇ ಆಡಳಿತಕ್ಕೆ ಬಂದವರು. ಅವರಿಗೆ ಜಿನ್ನಾ ಮೇಲೆ ಬಹಳ ಪ್ರೀತಿ. ಅವರಿಗೆ ಯಾವಾಗಲೂ ಜಿನ್ನಾ ಕನಸೇ ಬೀಲೋದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು. ಜಿನ್ನಾ ಮತ್ತು ಸಾವರ್ಕರ್ ಇಬ್ಬರೂ ಒಂದೇ ಎಂಬ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆ ಕುರಿತು ರಾಣಿಬೆನ್ನೂರಿನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ನವರಿಗೆ ಜಿನ್ನಾ ಕಂಡರೆ ಪ್ರೀತಿ.
ರಾಜ್ಯದ ಅಜ್ಞಾತ ಸಿಎಂ ಯಾರು?: ಕಾಂಗ್ರೆಸ್ ತರಾಟೆ
ಅದಕ್ಕಾಗಿ ಅವರು ಈ ರೀತಿ ಹೇಳಿರುವುದರಲ್ಲಿ ಆಶ್ಚರ್ಯವೂ ಇಲ್ಲ. ಹೀಗಾಗಿ ಅವರ ಹೇಳಿಕೆ ಬಗ್ಗೆ ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ ಎಂದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರಿಂದ ಮತ್ತೆ ಸರ್ಕಾರದ ಮೇಲೆ ಪರ್ಸೆಂಟೇಜ್ ಆರೋಪ ವಿಚಾರವಾಗಿ ಮಾತನಾಡಿದ ಅವರು, ಇದು ರಾಜಕೀಯ ಪ್ರೇರಿತ ಆರೋಪ. ಅವರಲ್ಲಿ ಸಾಕ್ಷಿ, ಆಧಾರಗಳಿದ್ದರೆ ಲೋಕಾಯುಕ್ತಕ್ಕೆ ಕೊಡಲಿ. ಅವರು ಸಾಕ್ಷಿ, ಆಧಾರ ಕೊಡಬೇಕು, ತನಿಖೆ ಆಗಬೇಕು, ಸತ್ಯ ಹೊರಬರಬೇಕು ಎಂದು ಪ್ರತಿಕ್ರಿಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.