ದೆಹಲಿ ಅಂಗಳದಲ್ಲಿ ಸಿದ್ದು-ಡಿಕೆಶಿ: ಸಿಎಂ ಡಿಸಿಎಂ ಪತ್ಯೇಕ ಹೈಕಮಾಂಡ್‌ ಭೇಟಿ, ನವೆಂಬರ್ ಕ್ರಾಂತಿಯ ರಹಸ್ಯ?

Published : Oct 27, 2025, 05:04 PM IST
 DK Shivakumar  Siddaramaiah

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕವಾಗಿ ದೆಹಲಿಗೆ ಭೇಟಿ ನೀಡುತ್ತಿದ್ದು, ಹೈಕಮಾಂಡ್ ನಾಯಕರೊಂದಿಗೆ ಸಚಿವ ಸಂಪುಟ ಪುನರ್‌ರಚನೆ, ಅಧಿಕಾರ ಹಂಚಿಕೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.  

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಬಿರುಸಿನ ಚಟುವಟಿಕೆ ಕಂಡುಬರುತ್ತಿದೆ. ನವೆಂಬರ್ ಕ್ರಾಂತಿ ಬಗ್ಗೆ ಚರ್ಚೆಗಳು ಜೋರಾಗಿದೆ. ಸಿಎಂ ಬದಲಾವಣೆಯ ಕೂಗು ಕೂಡ ಕೇಳಿ ಬರುತ್ತಿದೆ. ಇದರ ಜೊತೆಗೆ ಸಂಪುಟ ಪುನರ್ ರಚನೆ ಬಗ್ಗೆಯೂ ಸುಳಿವು ಸಿಕ್ಕಿದೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೇರೆ ಬೇರೆ ದಿನ ದೆಹಲಿ ಭೇಟಿ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದ ಒಳಗಿನ ಬೆಳವಣಿಗೆಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಅಕ್ಟೋಬರ್ 26ರಂದು ದೆಹಲಿಗೆ ಒಮ್ಮೆ ಭೇಟಿ ನೀಡಿ ಬಂದಿದ್ದಾರೆ. ಜೊತೆಗೆ ನವೆಂಬರ್ 11ರಂದು ಕೂಡ ದೆಹಲಿ ಪ್ರವಾಸ ಮಾಡುತ್ತಿದ್ದು ಇದಾದ ತಕ್ಷಣ ಸಿಎಂ ಕೂಡ ನವೆಂಬರ್ 14ರಿಂದ ದೆಹಲಿ ಪ್ರವಾಸ ಮಾಡಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಮೂರು ದಿನಗಳ ದೆಹಲಿ ಪ್ರವಾಸ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 14ರಿಂದ ಮೂರು ದಿನಗಳ ಕಾಲ ದೆಹಲಿಯಲ್ಲಿ ವಾಸ್ತವ್ಯ ಇರಲಿದ್ದಾರೆ. ಈ ವೇಳೆ ಅವರು ಹೈಕಮಾಂಡ್ ನಾಯಕರೊಂದಿಗೆ ಸಚಿವ ಸಂಪುಟ ಪುನರ್‌ರಚನೆ (ಕ್ಯಾಬಿನೆಟ್ ರೀಶಫಲ್) ಕುರಿತ ಚರ್ಚೆ ನಡೆಸಲಿದ್ದಾರೆ. ದೆಹಲಿಯ ವಾಸ್ತವ್ಯದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಹಾಗೂ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಸಭೆ ನಡೆಸುವ ಸಾಧ್ಯತೆಗಳಿವೆ. ಸಚಿವ ಸಂಪುಟ ಪುನರ್‌ರಚನೆ ಜೊತೆಗೆ ರಾಜ್ಯ ಕಾಂಗ್ರೆಸ್‌ನ ಮುಂದಿನ ತಂತ್ರಗಾರಿಕೆಗಳ ಮೇಲೂ ಚರ್ಚೆ ನಡೆಯುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಅವರು ಹೈಕಮಾಂಡ್ ಭೇಟಿಯ ವೇಳೆ ಹೆಚ್ಚುವರಿ ಉಪಮುಖ್ಯಮಂತ್ರಿ ನೇಮಕ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ, ಹಾಗೂ ರಾಜ್ಯ ಸರ್ಕಾರದ ಆಡಳಿತಾತ್ಮಕ ಬದಲಾವಣೆಗಳ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ರಾಜಕೀಯ ವಲಯದಲ್ಲಿ ಸಿದ್ದರಾಮಯ್ಯ ಅವರ ಈ ಭೇಟಿಯನ್ನು ಡಿಕೆ ಶಿವಕುಮಾರ್‌ಗೆ “ಚೆಕ್ ಮೀಟ್” ಹಾಕುವ ತಂತ್ರದ ಭಾಗವೆಂದು ವಿಶ್ಲೇಷಿಸಲಾಗುತ್ತಿದೆ.

ಡಿಕೆ ಶಿವಕುಮಾರ್ ನವೆಂಬರ್ 11ರ ದೆಹಲಿ ಭೇಟಿ

ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೆಂಬರ್ 11ರಂದು ದೆಹಲಿಗೆ ತೆರಳಲಿದ್ದಾರೆ. ಅವರು ರಾಹುಲ್ ಗಾಂಧಿ ಅವರೊಂದಿಗೆ ಪ್ರತ್ಯೇಕ ಮಾತುಕತೆಗೆ ಸಮಯ ಕೇಳಿದ್ದಾರೆ. ಡಿಕೆಶಿಯ ಈ ಭೇಟಿಯು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಪಕ್ಷದ ಒಳಗಿನ ಅಧಿಕಾರ ಹಂಚಿಕೆ, ಭವಿಷ್ಯದ ನಾಯಕತ್ವ, ಹಾಗೂ ಸಚಿವ ಸಂಪುಟ ವಿಸ್ತರಣೆ ಅಥವಾ ಬದಲಾವಣೆಗಳ ಕುರಿತು ಚರ್ಚೆ ನಡೆಯಬಹುದೆಂದು ಅಂದಾಜಿಸಲಾಗಿದೆ.

ನವೆಂಬರ್ 11ರ ದೆಹಲಿ ಭೇಟಿ, ಬಿಹಾರ ಚುನಾವಣೆಯ ಎರಡನೇ ಹಂತದ ಮತದಾನ ಮುಗಿದ ತಕ್ಷಣವಾಗಿರುವುದರಿಂದ, ರಾಹುಲ್ ಗಾಂಧಿಯ ಸಮಯ ಲಭ್ಯತೆ ಹಾಗೂ ರಾಜಕೀಯ ತೀರ್ಮಾನಗಳ ಸಮಯದ ದೃಷ್ಟಿಯಿಂದ ಮಹತ್ವ ಪಡೆದಿದೆ. ಮೂಲಗಳ ಪ್ರಕಾರ, ಡಿಕೆಶಿ ತಮ್ಮ ಬೆಂಬಲಿಗರಿಗೆ ನವೆಂಬರ್ 11ರವರೆಗೆ ಮೌನವಾಗಿರಲು ಸೂಚನೆ ನೀಡಿದ್ದಾರೆ. ಇದರಿಂದಾಗಿ ಅವರ ಭೇಟಿಯು ಇನ್ನಷ್ಟು ಕುತೂಹಲ ಹೆಚ್ಚಿಸಿದೆ.

ನವೆಂಬರ್ 11ರಿಂದ 14ರವರೆಗಿನ ರಾಜಕೀಯ ಚಲನವಲನ

ಡಿ.ಕೆ. ಶಿವಕುಮಾರ್ ರಾಹುಲ್ ಗಾಂಧಿಯನ್ನು ಭೇಟಿ ಮಾಡುವ ಸಮಯದಲ್ಲಿ ಸಿದ್ದರಾಮಯ್ಯ ಇನ್ನೂ ದೆಹಲಿಗೆ ತೆರಳಿಲ್ಲ ಎಂಬ ಅಂಶವೂ ಗಮನ ಸೆಳೆಯುತ್ತಿದೆ. ಹೀಗಾಗಿ ಡಿಕೆಶಿಯ ಭೇಟಿಯು ಹೈಕಮಾಂಡ್‌ಗೆ ತನ್ನ ಬಲ ಮತ್ತು ಪ್ರಾಮುಖ್ಯತೆ ತೋರಿಸುವ ಪ್ರಯತ್ನವೆಂದು ವಿಶ್ಲೇಷಣೆಗಳು ನಡೆಯುತ್ತಿವೆ.

ಆದರೆ ಸಿದ್ದರಾಮಯ್ಯ ಅವರು ನವೆಂಬರ್ 14ರಿಂದ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ರಾಜ್ಯ ಆಡಳಿತದ ಪುನರ್‌ವ್ಯವಸ್ಥೆ, ಅಧಿಕಾರ ಹಂಚಿಕೆ, ಮತ್ತು ಮುಂದಿನ ರಾಜಕೀಯ ತಂತ್ರಗಳ ಕುರಿತು ಚರ್ಚಿಸಲು ತಯಾರಾಗಿದ್ದಾರೆ. ರಾಜಕೀಯ ವಲಯದಲ್ಲಿ, ನವೆಂಬರ್ 11ರಿಂದ 14ರವರೆಗೆ ನಡೆಯುವ ಈ ಎರಡು ಪ್ರಮುಖ ಭೇಟಿಗಳು ರಾಜ್ಯ ಕಾಂಗ್ರೆಸ್‌ನ ಭವಿಷ್ಯದ ಹಾದಿಯನ್ನು ನಿರ್ಧರಿಸುವಂತಿವೆ ಎನ್ನಲಾಗಿದೆ.

ರಾಜಕೀಯ ವಿಶ್ಲೇಷಕರ ಅಭಿಪ್ರಾಯದ ಪ್ರಕಾರ, ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಹೈಕಮಾಂಡ್‌ಗೆ ತಮ್ಮ ಬಲ ತೋರಿಸಲು ಪ್ರಯತ್ನಿಸುತ್ತಿದ್ದಾರೆ. ಸಚಿವ ಸಂಪುಟ ಪುನರ್‌ರಚನೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ, ಸಿಎಂ ಸ್ಥಾನ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ದಾರಿ ಮಾಡಿಕೊಡಬಹುದು. ಒಟ್ಟಿನಲ್ಲಿ, ನವೆಂಬರ್ 11ರಿಂದ ಆರಂಭವಾಗುವ ಈ ದೆಹಲಿ ಚಟುವಟಿಕೆಗಳು ಕಾಂಗ್ರೆಸ್‌ನ ಶಕ್ತಿ ಹಂಚಿಕೆ ಮತ್ತು ಮುಂದಿನ ನಾಯಕತ್ವದ ಬದಲಾವಣೆಯನ್ನು ನಿರ್ಣಾಯಕ ಕ್ಷಣವಾಗಲಿವೆ ಎನ್ನುವುದು ರಾಜಕೀಯ ವಲಯದ ಅಭಿಪ್ರಾಯ.

ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ದೆಹಲಿ ಭೇಟಿಗಳು, ಸಚಿವ ಸಂಪುಟ ಪುನರ್‌ರಚನೆ, ಅಧಿಕಾರ ಹಂಚಿಕೆ, ಮತ್ತು ಪಕ್ಷದ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳಿಗೆ ವೇದಿಕೆ ಒದಗಿಸುತ್ತಿವೆ. ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುವ ಈ ಹೊಸ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ರಾಜಕೀಯ ಕ್ರಾಂತಿಗೆ ಮುನ್ನುಡಿ ಬರೆಯಬಹುದಾದಂತಹ ಸೂಚನೆಗಳನ್ನು ನೀಡುತ್ತಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ