Karnataka election: ದಿಲ್ಲಿ, ಪಂಜಾಬ್‌ ಮಾದರಿ ತಂತ್ರಗಾರಿಕೆಗೆ ಆಪ್‌ ಸಿದ್ಧತೆ

By Kannadaprabha NewsFirst Published Mar 4, 2023, 7:38 AM IST
Highlights

ದೆಹಲಿ ಹಾಗೂ ಪಂಜಾಬ್‌ ರಾಜ್ಯಗಳಲ್ಲಿ ವಿನೂತನ ರೀತಿಯಲ್ಲಿ ತಂತ್ರಗಾರಿಕೆ ಮಾಡಿ ಅಧಿಕಾರದ ಗದ್ದುಗೆ ಏರಲು ಯಶಸ್ವಿಯಾಗಿರುವ ಆಮ್‌ ಆದ್ಮಿ ಪಕ್ಷವು ಕರ್ನಾಟಕದಲ್ಲಿ ಅದೇ ಮಾದರಿ ತಂತ್ರಗಾರಿಕೆಗೆ ಸಿದ್ಧತೆ ನಡೆಸಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ (ಮಾ.4) : ದೆಹಲಿ ಹಾಗೂ ಪಂಜಾಬ್‌ ರಾಜ್ಯಗಳಲ್ಲಿ ವಿನೂತನ ರೀತಿಯಲ್ಲಿ ತಂತ್ರಗಾರಿಕೆ ಮಾಡಿ ಅಧಿಕಾರದ ಗದ್ದುಗೆ ಏರಲು ಯಶಸ್ವಿಯಾಗಿರುವ ಆಮ್‌ ಆದ್ಮಿ ಪಕ್ಷವು ಕರ್ನಾಟಕದಲ್ಲಿ ಅದೇ ಮಾದರಿ ತಂತ್ರಗಾರಿಕೆಗೆ ಸಿದ್ಧತೆ ನಡೆಸಿದೆ.

Latest Videos

ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಆಪ್‌, ಯಾವ ರೀತಿ ಚುನಾವಣೆ ತಯಾರಿ ನಡೆಸಬೇಕು ಎಂದು ತಿಳಿಹೇಳಿ ತಂತ್ರ ರೂಪಿಸಲು ಇದೇ ಮೊದಲ ಬಾರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌(Arvind Kejriwal) ಮಾ. 4ಕ್ಕೆ ಹುಬ್ಬಳ್ಳಿ ಹಾಗೂ ದಾವಣಗೆರೆ(Davanagere)ಗೆ ಆಗಮಿಸಲಿದ್ದಾರೆ.

ಗ್ಯಾಸ್‌ ಹೋಯ್ತು ಸೌದೆ ಬಂತು: ಬಿಜೆಪಿ ಹೋಗುತ್ತೆ, ಕಾಂಗ್ರೆಸ್‌ ಬರು​ತ್ತೆ: ಕಾಂಗ್ರೆಸ್ ವಿನೂತನ ಪ್ರತಿಭಟನೆ

ಕಳೆದ 12 ವರ್ಷಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದಿರುವ ಆಪ್‌, ಈಗಾಗಲೇ ಎರಡು ರಾಜ್ಯಗಳಲ್ಲಿ ಬೇರೂರಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲೂ ತನ್ನ ಪೊರಕೆಯ ಕಮಾಲ್‌ ತೋರಿಸಲು ಯತ್ನಸಿತ್ತು. ಈ ಸಲ ಖುದ್ದು ಅರವಿಂದ ಕೇಜ್ರಿವಾಲ್‌ ಅವರೇ ಅಖಾಡಕ್ಕಿಳಿಯಲಿದ್ದಾರೆ. ಅದರ ಮೊದಲ ಹಂತವಾಗಿ ಮಾ.4ರಂದು ಕಾರ್ಯಕ್ರಮಗಳು ನಡೆಯಲಿವೆ.

ಹುಬ್ಬಳ್ಳಿಯಲ್ಲಿ ಗೌಪ್ಯಸಭೆ:

ದಾವಣಗೆರೆಯಲ್ಲಿ ಬೃಹತ್‌ ಸಮಾವೇಶ(Convention)ವನ್ನು ಮಾ. 4ಕ್ಕೆ ಆಯೋಜಿಸಲಾಗಿದೆ. ಅದರಲ್ಲಿ ಕೇಜ್ರಿವಾಲ್‌ ಹಾಗೂ ಪಂಜಾಬ್‌ ಮುಖ್ಯಮಂತ್ರಿ ಭಗವತ್‌ ಸಿಂಗ್‌ ಮಾನ್‌(Punjab Chief Minister Bhagwat Singh Mann) ಪಾಲ್ಗೊಳ್ಳಲಿದ್ದಾರೆ. ದಾವಣಗೆರೆಗೆ ಹೋಗುವ ಮುನ್ನ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಈ ಭಾಗದ ಆಕಾಂಕ್ಷಿಗಳೊಂದಿಗೆ ಗೌಪ್ಯ ಸಭೆ ನಡೆಸಲಿದ್ದು, ಚುನಾವಣಾ ತಂತ್ರಗಾರಿಕೆಯನ್ನು ರೂಪಿಸಲಿದ್ದಾರೆ. ಚುನಾವಣೆಗೆ ಯಾವ ರೀತಿ ತಯಾರಿ ನಡೆಸಬೇಕು? ತಮ್ಮ ಪಕ್ಷದ ಮೂಲ ಸಿದ್ಧಾಂತಗಳೇನು? ಜನರನ್ನು ಸೆಳೆಯಬೇಕೆಂದರೆ ಏನೆಲ್ಲ ಮಾಡಬೇಕು? ಎದುರಾಳಿ ಪಕ್ಷಗಳ ತಂತ್ರಗಾರಿಕೆಗೆ ನಾವು ಯಾವ ರೀತಿ ಪ್ರತಿ ತಂತ್ರಗಾರಿಕೆ ಮಾಡಬೇಕು ಎಂಬ ಬಗ್ಗೆ ತಿಳಿಸಲಿದ್ದಾರೆ. ಇದೇ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಲಿರುವ ಕೇಜ್ರಿವಾಲ್‌ಗೆ ಹುಬ್ಬಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರು ಸ್ವಾಗತಿಸಲಿದ್ದು, ಇಲ್ಲಿನ ಚುನಾವಣಾ ತಯಾರಿ ಬಗ್ಗೆ ವಿವರಿಸಲಿದ್ದಾರೆ.

20 ದಿನದೊಳಗೆ ಸಮಾವೇಶ:

ಸದ್ಯ ದಾವಣಗೆರೆಯಲ್ಲಿ ಸಮಾವೇಶ ನಡೆಸಲಿರುವ ಕೇಜ್ರಿವಾಲ್‌, ಮುಂದಿನ 3 ವಾರದೊಳಗೆ ಹುಬ್ಬಳ್ಳಿಯಲ್ಲೊಂದು ಬೃಹತ್‌ ಸಮಾವೇಶ ನಡೆಸಲಿದ್ದಾರೆ. ಹುಬ್ಬಳ್ಳಿಯನ್ನು ಕೇಂದ್ರೀಕೃತ ಮಾಡಿಕೊಂಡು ಉತ್ತರ ಕರ್ನಾಟಕದ ಜಿಲ್ಲೆಗಳ ಕಾರ್ಯಕರ್ತರ ಸಮಾವೇಶ ಇದಾಗಲಿದೆ. ಇದಕ್ಕಾಗಿ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕೆಂಬ ಬಗ್ಗೆಯೂ ಸೂಚನೆಗಳನ್ನು ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಏರಲು ಸಾಧ್ಯವಾಗದಿದ್ದರೂ ತನ್ನ ಶಕ್ತಿ ಪ್ರದರ್ಶಿಸುವ ಹವಣಿಕೆಯಲ್ಲಿದೆ ಆಪ್‌. ಕಳೆದ ಬಾರಿ ಭಾರಿ ಗಡಿಬಿಡಿಯಾಯಿತು. ಯಾವುದೇ ಬಗೆಯ ತಯಾರಿ ಕೂಡ ಇರಲಿಲ್ಲ. ಜತೆಗೆ ಕೇಜ್ರಿವಾಲ್‌ ಅವರೇ ಅಖಾಡಕ್ಕಿಳಿದಿರಲಿಲ್ಲ. ಆದರೆ ಈ ಸಲ ಆ ಪರಿಸ್ಥಿತಿ ಇಲ್ಲ. ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ಸಿಗೆ ಠಕ್ಕರ್‌ ಕೊಡುವುದು ಗ್ಯಾರಂಟಿ. ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನೂ ಇನ್ನೆರಡ್ಮೂರು ದಿನಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂಬ ಮಾತು ಪಕ್ಷದ್ದು.

Shivamogga crime: ನಕಲಿ ವಂಶವೃಕ್ಷ ಸೃಷ್ಟಿಸಿ ಆಸ್ತಿ ವಂಚ​ನೆ: ಆರೋಪಿಗಳಿಗೆ 3 ವರ್ಷ ಕಠಿಣ ಶಿಕ್ಷೆ

ಒಟ್ಟಿನಲ್ಲಿ ಆಮ್‌ ಆದ್ಮಿ ಪಕ್ಷ ಈ ಸಲದ ಚುನಾವಣೆಗೆ ತಂತ್ರಗಾರಿಕೆ ನಡೆಸುತ್ತಿರುವುದಂತೂ ಸತ್ಯ. ಆದರೆ ಜನತೆಯ ಮನ್ನಣೆ ಯಾವ ಮಟ್ಟಿಗೆ ಸಿಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ಸಿಂಗ್‌ ಮಾನ್‌ ದಾವಣಗೆರೆಯ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದಕ್ಕಾಗಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಈ ಭಾಗದ ಆಕಾಂಕ್ಷಿಗಳೊಂದಿಗೆ ಸಭೆ ಕೂಡ ನಡೆಸಲಿದ್ದಾರೆ. ಇನ್ನು 3 ವಾರದೊಳಗೆ ಹುಬ್ಬಳ್ಳಿಯಲ್ಲೇ ಬೃಹತ್‌ ಸಮಾವೇಶವನ್ನು ಆಯೋಜಿಸಲಾಗುವುದು. ಅದಕ್ಕೂ ಕೇಜ್ರಿವಾಲ್‌ ಆಗಮಿಸಲಿದ್ದಾರೆ.

ಅನಂತಕುಮಾರ, ಜಿಲ್ಲಾಧ್ಯಕ್ಷ, ಆಮ್‌ ಆದ್ಮಿ ಪಕ್ಷ

click me!