
ಜಮಖಂಡಿ (ಮೇ.01): ನೆಹರು ಮತ್ತು ಗಾಂಧಿ ಕುಟುಂಬಕ್ಕೆ ವಿರೋಧಿಗಳು ಬೈದಷ್ಟು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೈದಿಲ್ಲ. ಈ ಬಗ್ಗೆ ನಾವೇನಾದರೂ ಪಟ್ಟಿ ಮಾಡಿಟ್ಟಿದ್ದರೆ ದೊಡ್ಡ ಗ್ರಂಥವೇ ಆಗುತ್ತಿತ್ತು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಕಾಂಗ್ರೆಸ್ಸಿಗರು 91 ಬಾರಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಪ್ರಧಾನಿ ಮೋದಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಪೋಲೋ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ ನ್ಯಾಮಗೌಡರ ಚುನಾವಣೆ ಪ್ರಚಾರ ರಾರಯಲಿಯಲ್ಲಿ ಭಾನುವಾರ ಮಾತನಾಡಿದರು.
ಮೋದಿ ತಮ್ಮನ್ನು ಯಾರು ಬಯ್ಯುತ್ತಾರೆ ಅಂತ ಪಟ್ಟಿ ಮಾಡುತ್ತಾರೆ. ಗಾಂಧಿ ಕುಟುಂಬಕ್ಕೆ ಆದ ಬೈಗುಳಗಳನ್ನು ನೋಡಿದರೆ ಅದೊಂದು ದೊಡ್ಡ ಗ್ರಂಥವೇ ಆಗುತ್ತದೆ, ಇದರ ಮುಂದೆ ಮೋದಿ ಅವರಿಗೆ ಬೈದದ್ದು ಏನೂ ಅಲ್ಲ ಎಂದರು. ಪ್ರಧಾನಿ ಮೋದಿ ಅವರು ಧೈರ್ಯ ಮಾಡಿ ನನ್ನ ಸಹೋದರ (ರಾಹುಲ್ ಗಾಂಧಿ)ನನ್ನು ನೋಡಿ ಕಲಿಯಿರಿ. ನನ್ನ ಸಹೋದರ ವಿರೋಧಿಗಳ ಬೈಗುಳಗಳನ್ನು ಅಷ್ಟೇ ಅಲ್ಲ ಗುಂಡುಗಳನ್ನೂ ಎದುರಿಸಲು ಸಿದ್ಧನಿದ್ದಾನೆ. ಈ ದೇಶದ ಜನರಿಗಾಗಿ, ಸತ್ಯಕ್ಕಾಗಿ ಎದ್ದು ನಿಲ್ಲುತ್ತೇನೆಂದು ಆತ ಹೇಳುತ್ತಿದ್ದು, ಅದು ನಿಜವಾದ ನಾಯಕನ ಗುಣಲಕ್ಷಣ ಎಂದು ಹೇಳಿದರು.
ಪ್ರಧಾನಿ ಮೋದಿ ಮಾತಿಗೆ ಮರುಳಾಗಬೇಡಿ: ಎಚ್.ಡಿ.ಕುಮಾರಸ್ವಾಮಿ
ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಸಮಾಜದ ಎಲ್ಲ ವರ್ಗದ ಜನರಿಗೆ ಮೋಸ ಮಾಡಿದೆ. ಜಾತಿ ಮೀಸಲಾತಿ ನೀಡುವುದಾಗಿ ಸುಳ್ಳು ಭರವಸೆ ನೀಡಿ, ಈಗ ಅದನ್ನೇ ಬಂಡವಾಳ ಮಾಡಿಕೊಂಡು ಮತಯಾಚನೆಗೆ ಪ್ರಧಾನಿ, ಗೃಹಮಂತ್ರಿ, ರಕ್ಷಣಾಮಂತ್ರಿ ಹೀಗೆ ಡಜನ್ಗಳಷ್ಟುಕೇಂದ್ರ ನಾಯಕರು, ಬೇರೆ ರಾಜ್ಯದ ಮುಖ್ಯಮಂತ್ರಿಗಳು ಬರುತ್ತಿರುವುದು ನಾಚಿಗೇಡಿನ ಸಂಗತಿ ಎಂದು ಲೇವಡಿ ಮಾಡಿದರು. ಕೋಮುವಾದ ಬಿಜೆಪಿ ಕೆಲಸ: ಇಂದಿನ ಬಿಜೆಪಿ ಸರ್ಕಾರಕ್ಕೆ ನಿಮ್ಮ ಸಮಸ್ಯೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.
ಪ್ರಚಾರಕ್ಕೆ ಬಂದರೆ ಹೇಳಲು ವಿಷಯಗಳೂ ಇಲ್ಲ. ಈ ಚುನಾವಣೆಯಲ್ಲಿ ನಿಮ್ಮ ಸಮಸ್ಯೆ ಬಗೆಹರಿಸುವ ಕುರಿತು ಮಾತನಾಡುವುದಿಲ್ಲ. ನಮ್ಮ ಅಜ್ಜಿ ಇಂದಿರಾ ಗಾಂಧಿ ದೇಶಕ್ಕಾಗಿ ಗುಂಡು ಹೊಡೆಸಿಕೊಂಡರು. ತಂದೆ ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಹುತಾತ್ಮರಾದರು ಎಂದರು. ಬಿಜೆಪಿ ಜನಕ್ಕೆ, ದೇಶ ಅಭಿವೃದ್ಧಿಗೆ ಎಳ್ಳಷ್ಟೂಕಾಳಜಿ ತೋರಿಲ್ಲ. ಕೇವಲ ಜಾತಿ-ಜಾತಿಗಳ ಮಧ್ಯೆ ಕೋಮುವಾದ ಹಬ್ಬಿಸುವುದು ಇವರ ಕೆಲಸ ಎಂದು ದೂರಿದರು.
ಭ್ರಷ್ಟರ ವಿರುದ್ಧ ಕ್ರಮವಿಲ್ಲ: ಇಲ್ಲಿರುವ ಮಹಿಳೆಯರು ಕಷ್ಟ ಪಟ್ಟು ದುಡಿದರೂ ಏನೂ ಸಿಗುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಇದ್ದಾಗ ರೈತರ ಸಾಲಮನ್ನಾ ಮಾಡಲಾಗಿತ್ತು. ಸಾಕಷ್ಟು ಯೋಜನೆಗಳನ್ನು ಕಾಂಗ್ರೆಸ್ ನೀಡಿತ್ತು. ಮೂರೂವರೆ ವರ್ಷದಲ್ಲಿ ಯುವಕರಿಗೆ ಉದ್ಯೋಗ ಸಿಗಬೇಕಾಗಿತ್ತು. 90 ಲಕ್ಷ ಸಣ್ಣ ಮತ್ತು ಮಧ್ಯಮ ಉದ್ಯೋಗ ಬಂದ್ ಆಗಿವೆ. ಜನ 40 ಪರ್ಸೆಂಟ್ ಸರ್ಕಾರ ಅಂತ ಕರೆಯುತ್ತಿದ್ದಾರೆ. ಕಂಟ್ರ್ಯಾಕ್ಟರ್ ಸತ್ತರೂ ಕೇಳುತ್ತಿಲ್ಲ. ಶಾಸಕನ ಮಗನ ಬಳಿ ಹಣ ಸಿಕ್ಕರೂ ಏನು ಮಾಡಲಾಗಲಿಲ್ಲ. (ಮಾಡಾಳ್ ಪುತ್ರನ) ಅವರ ವಿರುದ್ಧವೂ ಕ್ರಮವಿಲ್ಲ. ಆತನ ತಂದೆ ಜೈಲಿನಿಂದ ಹೊರಬಂದು ಮೆರವಣಿಗೆ ಮಾಡಿದರು. ಯಾರೂ ಏನೂ ಮಾಡಲಿಲ್ಲ. ಈ ಬಿಜೆಪಿ ಸರ್ಕಾರ ಜನರಿಗೆ ಮೋಸ ಮಾಡುತ್ತಾ ಬಂದಿದೆ ಎಂದು ದೂರಿದರು.
ಬಿಜೆಪಿ ಅಧಿಕಾರದಲ್ಲಿರುವವರೆಗೆ ಅಚ್ಛೇದಿನ್ ಬರುವುದಿಲ್ಲ: ಡಿ.ಕೆ.ಶಿವಕುಮಾರ್
ಪ್ರಿಯಾಂಕಾಗೆ ಇಳಕಲ್ ಸೀರೆ ಕಾಣಿಕೆ: ಜಮಖಂಡಿ ಶುಗರ್ಸ್ ಕಾರ್ಖಾನೆ ಶಂಕುಸ್ಥಾಪನೆಗೆ ಆಗಮಿಸಿದ್ದ ಸೋನಿಯಾ ಗಾಂಧಿ ಅವರ ಭಾಷಣ, ನೆರೆದಿದ್ದ ಜನರವುಳ್ಳ ಭಾವಚಿತ್ರ ಹಾಗೂ ಇಳಕಲ್ ಸೀರೆಯನ್ನು ಸುಮಿತ್ರಾ ಸಿದ್ದು ನ್ಯಾಮಗೌಡ ಅವರು ಜಮಖಂಡಿ ಸಮಾವೇಶದಲ್ಲಿ ಕಾಣಿಕೆಯಾಗಿ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.