ಬಿಜೆಪಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ: ಅರುಣ್‌ ಸಿಂಗ್‌ ವಿಶ್ವಾಸ

By Kannadaprabha NewsFirst Published Apr 28, 2023, 9:22 PM IST
Highlights

ಕೇಂದ್ರ ಮತ್ತು ರಾಜ್ಯಗಳ ಸಾಧನೆ, ಸಂಘಟನೆಯ ಆಧಾರದಲ್ಲಿ ಬಿಜೆಪಿ 150 ಹೆಚ್ಚು ಸ್ಥಾನಗಳೊಂದಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು. 

ಮೈಸೂರು (ಏ.28): ಕೇಂದ್ರ ಮತ್ತು ರಾಜ್ಯಗಳ ಸಾಧನೆ, ಸಂಘಟನೆಯ ಆಧಾರದಲ್ಲಿ ಬಿಜೆಪಿ 150 ಹೆಚ್ಚು ಸ್ಥಾನಗಳೊಂದಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿಕಾಸ, ದೇಶದ ಅಭಿವೃದ್ಧಿ ಬಿಜೆಪಿಯ ಬದ್ಧತೆಯಾಗಿದೆ. ಈ ಬಾರಿ ಮೈಸೂರು ಭಾಗದಲ್ಲಿ ಪಕ್ಷ ಅತ್ಯಧಿಕ ಸ್ಥಾನ ಗೆಲ್ಲಲಿದೆ. ಕರ್ನಾಟಕ ಮತ್ತು ದೇಶದ ಹಿತದಿಂದ ಮತ್ತೆ ಡಬಲ್‌ ಎಂಜಿನ್‌ ಸರ್ಕಾರ ಕರ್ನಾಟಕದಲ್ಲಿ ರಚನೆ ಆಗಬೇಕು ಎಂದರು.

ದೇಶ ಮತ್ತು ರಾಜ್ಯದಲ್ಲಿ ಪ್ರಧಾನಿ ಮೋದಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಡಿಮೆ ಅವಧಿಯಲ್ಲಿ ದಾಖಲೆ ಪ್ರಮಾಣದ ಕೆಲಸಗಳು ಆಗಿವೆ. 2 ಲಕ್ಷ ರೈತರಿಗೆ ಭ್ರಷ್ಟಾಚಾರ ರಹಿತವಾಗಿ ಕಿಸಾನ್‌ ಸಮ್ಮಾನ್‌ ನಿಧಿ ಲಭಿಸುತ್ತಿದೆ. 4 ಲಕ್ಷ ಶೌಚಾಲಯ ನಿರ್ಮಾಣ, ಮನೆ ಮನೆಗೆ ನಲ್ಲಿ ನೀರು, ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ವೇ ನಿರ್ಮಾಣ, ರಿಂಗ್‌ ರಸ್ತೆ ಸೇರಿ ಅನೇಕ ಅಭಿವೃದ್ಧಿ ಮಾಡಲಾಗಿದೆ. ಸೆಮಿಕಂಡಕ್ಟರ್‌ ಕಾರ್ಖಾನೆ ಮೂಲಕ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ ಎಂದು ಅವರು ತಿಳಿಸಿದರು.

ಅಮೇಥಿಯನ್ನೇ ಬಿಟ್ಟಿಲ್ಲ, ಇನ್ನು ಕನಕಪುರ ಬಿಡ್ತೀವಾ: ಡಿಕೆ ಸಹೋ​ದ​ರರ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಬಿಜೆಪಿ ಕಾರ್ಯಕರ್ತ ಮತ್ತು ಸಂಘಟನೆ ಆಧರಿತ ಪಕ್ಷ. 4 ಬಾರಿ ಶಾಸಕರಾಗಿದ್ದ ಎಸ್‌.ಎ. ರಾಮದಾಸ್‌ ಅವರು ಹೊಸಬರಿಗೆ ಅವಕಾಶ ನೀಡಿದ್ದು, ಹೆಚ್ಚು ಮತಗಳ ಅಂತರದಿಂದ ಹೊಸ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಇದನ್ನು ಬಿಜೆಪಿಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ಅವರು ಹೇಳಿದರು. ಕಾಂಗ್ರೆಸ್‌ ರಾಜ್ಯದಲ್ಲಿ ಒಡೆದ ಮನೆಯಾಗಿದೆ. ವ್ಯಾಪಾರ, ವ್ಯವಹಾರ, ಅಭಿವೃದ್ಧಿ ವಿಚಾರದಲ್ಲಿ ಗಣನೀಯ ಸಾಧನೆ ಬಿಜೆಪಿ ಸರ್ಕಾರದ್ದು, ಆದರೆ ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ ಋುಣಾತ್ಮಕ ಪರಿಸ್ಥಿತಿ ಇತ್ತು. ಕಾಂಗ್ರೆಸ್‌ ಆಡಳಿತದಲ್ಲಿದ್ದಾಗ ಪಿಎಫ್‌ಐ ಜಾಲ ವಿಸ್ತೃತವಾಗಿತ್ತು. ದಂಗೆ, ಹಿಂದೂ ಹತ್ಯೆ ನಿರಂತರವಾಗಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಇಂಥ ಸ್ಥಿತಿ ಇತ್ತು. ನಮ್ಮ ಸರ್ಕಾರ ಬಂದಾಗ ಅಭಿವೃದ್ಧಿ ಕಾರ್ಯ ವೇಗ ಪಡೆಯಿತು. 

ಯಡಿಯೂರಪ್ಪ ಅವರ ಸರ್ಕಾರ ಗೋಹತ್ಯೆ ನಿಷೇಧಿಸಿತು. ಕೇಂದ್ರ ಸರ್ಕಾರ ಪಿಎಫ್‌ಐ ನಿಷೇಧಿಸಿತು. ಕಾಂಗ್ರೆಸ್‌ ತುಷ್ಟೀಕರಣ ನೀತಿ ತನ್ನದಾಗಿಸಿಕೊಂಡಿತ್ತು. ಆದರೆ, ಬಿಜೆಪಿ ಎಲ್ಲರ ಅಭಿವೃದ್ಧಿಗೆ ಗಮನ ಕೊಟ್ಟಿದೆ ಎಂದು ಅವರು ತಿಳಿಸಿದರು. ಕಾಂಗ್ರೆಸ್‌ ಪಕ್ಷ ಇಷ್ಟುವರ್ಷ ಆಡಳಿತದಲ್ಲಿದ್ದರೂ ಸಾಮಾಜಿಕ ನ್ಯಾಯ ನೀಡಲು ಗಮನ ಕೊಡಲಿಲ್ಲ. ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿಮೀಸಲಾತಿ ಪ್ರಮಾಣ ಹೆಚ್ಚಿಸಿದೆ. ಮೀಸಲಾತಿ ಜಾರಿ ಸಂಬಂಧ ನ್ಯಾಯಾಲಯಕ್ಕೆ ಅಫಿಡವಿಟ್‌ ಸಹ ಸಲ್ಲಿಸಲಾಗಿದೆ. ಯಾರ ಮೀಸಲಾತಿ ಕಿತ್ತುಕೊಳ್ಳುತ್ತೀರಿ, ಮುಸ್ಲಿಂರಿಗೆ ಅಸಾಂವಿಧಾನಿಕ ರೀತಿಯಲ್ಲಿ ಮೀಸಲಾತಿ ಕೊಡಲಾಗಿತ್ತು. ಅದನ್ನು ರದ್ದು ಮಾಡಿ, ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ಶೇ.2 ರಷ್ಟುಮೀಸಲಾತಿ ಕೊಡಲಾಗಿದೆ. ಒಳ ಮೀಸಲಾತಿ ಪ್ರಕಟಿಸಿದ್ದೇವೆ. ಕಾಂಗ್ರೆಸ್‌ ಮುಸ್ಲಿಂರಿಗೆ ಮತ್ತೆ ಮೀಸಲಾತಿ ಕೊಡುವ ಮಾತನಾಡುತ್ತಿದೆ. ಯಾರ ಮೀಸಲಾತಿ ರದ್ದು ಮಾಡಿ ನೀವು ಮುಸ್ಲಿಂರಿಗೆ ಮೀಸಲಾತಿ ಕೊಡುತ್ತೀರಿ ಎಂದು ಅವರು ಪ್ರಶ್ನಿಸಿದರು.

ಭ್ರಷ್ಟಾಚಾರ ಆರೋಪ ಆಧಾರರಹಿತ: ಕಾಂಗ್ರೆಸ್‌ಗೆ ಬಿಜೆಪಿ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯ ಸಿಗುತ್ತಿಲ್ಲ. ಹೀಗಾಗಿಯೇ, ಶೇ.40 ಕಮಿಷನ್‌ ಆರೋಪ ಮಾಡುತ್ತಿದೆ. ಇದು ಆಧಾರರಹಿತವಾಗಿದ್ದು, ಚುನಾವಣಾಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಿಯಾಂಕಾ ಗಾಂಧಿ ಅವರು ಉತ್ತರಪ್ರದೇಶದಲ್ಲಿ ಭರ್ಜರಿ ಪ್ರಚಾರ ಮಾಡಿದ್ದರು. ಆದರೆ, ಅಲ್ಲಿ ಗೆದ್ದಿದ್ದು ಕೇವಲ ಎರಡು ಸ್ಥಾನ ಮಾತ್ರ. ಕರ್ನಾಟಕದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಲ್ಲದೆ, ಕಾಂಗ್ರೆಸ್‌ ಅಧಿಕಾರದಲ್ಲಿರುವ ರಾಜ್ಯಗಳಲ್ಲೇ ಬೆಲೆ ಏರಿಕೆ ಅಧಿಕವಾಗಿದೆ ಎಂದು ಅವರು ಆರೋಪಿಸಿದರು. ಶಾಸಕ ಎಸ್‌.ಎ. ರಾಮದಾಸ್‌, ಮೈಲ್ಯಾಕ್‌ ಅಧ್ಯಕ್ಷ ಆರ್‌. ರಘು, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಎಂ. ಶಿವಕುಮಾರ್‌, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ನಗರ ಕಾರ್ಯಾಧ್ಯಕ್ಷ ಗಿರಿಧರ್‌, ಸಹ ವಕ್ತಾರ ಡಾ. ವಸಂತಕುಮಾರ್‌ ಮೊದಲಾದವರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ನನ್ನ ಸ್ಪರ್ಧೆ​ಯಿಂದ ಡಿಕೆಶಿ ಕುಟುಂಬಕ್ಕೆ ಭಯ: ಸಚಿವ ಅ​ಶೋಕ್‌

ಸೋಲಿನ ಭೀತಿಯಿಂದ ಜಗದೀಶ್‌ ಶೆಟ್ಟರ್‌ ಅವರು ಬಿ.ಎಲ್‌. ಸಂತೋಷ್‌ ಅವರ ವಿರುದ್ಧ ಆರೋಪಿಸುತ್ತಿದ್ದಾರೆ. ಸಂತೋಷ್‌ ಅವರು ತಮ್ಮ ಜೀವನವನ್ನೇ ದೇಶಕ್ಕಾಗಿ ಮುಡುಪಾಗಿ ಇರಿಸಿದ್ದಾರೆ. ಅಂತಹವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ.
- ಅರುಣ್‌ ಸಿಂಗ್‌, ಬಿಜೆಪಿ ರಾಜ್ಯ ಉಸ್ತುವಾರಿ

click me!