Assembly election: ಬಂಡಾಯದ ನೆಲದಲ್ಲಿ ಬಿಸಿಯೇರಿದ ಟಿಕೆಟ್‌ ದಂಗಲ್‌

By Kannadaprabha NewsFirst Published Dec 3, 2022, 12:32 PM IST
Highlights

ರಾಜ್ಯದ ರೈತ ಚಳವಳಿಯ ಮೂಲ ನೆಲವಾದ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ಫೈಟ್‌ ಜೋರಾಗಿದೆ. ಬಿಜೆಪಿಯಲ್ಲಿ ಹಾಲಿ ಸಚಿವ ಸಿ.ಸಿ.ಪಾಟೀಲ್‌ ಮಾತ್ರ ಟಿಕೆಟ್‌ ಆಕಾಂಕ್ಷಿಯಾಗಿದ್ದರೆ, ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಬಿ.ಆರ್‌.ಯಾವಗಲ್‌ ಸೇರಿದಂತೆ ಆರುಮಂದಿ ಟಿಕೆಟ್‌ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವುದು ಪೈಪೋಟಿಗೆ ಕಾರಣವಾಗಿದೆ.

ಶಿವಕುಮಾರ ಕುಷ್ಟಗಿ

 ಗದಗ (ಡಿ.3) : ರಾಜ್ಯದ ರೈತ ಚಳವಳಿಯ ಮೂಲ ನೆಲವಾದ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ಫೈಟ್‌ ಜೋರಾಗಿದೆ. ಬಿಜೆಪಿಯಲ್ಲಿ ಹಾಲಿ ಸಚಿವ ಸಿ.ಸಿ.ಪಾಟೀಲ್‌ ಮಾತ್ರ ಟಿಕೆಟ್‌ ಆಕಾಂಕ್ಷಿಯಾಗಿದ್ದರೆ, ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಬಿ.ಆರ್‌.ಯಾವಗಲ್‌ ಸೇರಿದಂತೆ ಆರುಮಂದಿ ಟಿಕೆಟ್‌ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವುದು ಪೈಪೋಟಿಗೆ ಕಾರಣವಾಗಿದೆ.

ಮಾಜಿ ಸಚಿವ, ಹಿರಿಯ ನಾಯಕ ಬಿ.ಆರ್‌. ಯಾವಗಲ್ಲ ಅವರ ಜತೆಗೆ ಯುವ ಕಾಂಗ್ರೆಸ್‌ ಮುಖಂಡರಾದ ಸಿದ್ಧಲಿಂಗೇಶ್ವರ ಪಾಟೀಲ, ಡಾ. ಸಂಗಮೇಶ ಕೊಳ್ಳಿ, ಪ್ರಕಾಶ ಕರಿ, ದಶರಥ ಗಾಣಿಗೇರ, ವಿವೇಕ ಯಾವಗಲ್ಲ ಟಿಕೆಟ್‌ಗಾಗಿ ತೊಡೆ ತಟ್ಟಿರುವುದು ನರಗುಂದ ಕ್ಷೇತ್ರದ ಹೆಸರು ಬೆಂಗಳೂರಿನಲ್ಲಿ ಧ್ವನಿಸುತ್ತಿದೆ.

Ground Report: ಗದಗದಲ್ಲಿ ಟಿಕೆಟ್‌ಗೆ ಪೈಪೋಟಿ, ಹೇಗಿದೆ ಅಖಾಡ?

ಕಾಂಗ್ರೆಸ್‌ ಮತ್ತು ಜನತಾ ಪರಿವಾರದ ನೆಲವಾಗಿದ್ದ ನರಗುಂದ ಬಿಜೆಪಿ ತೆಕ್ಕೆಗೆ ಹೋದಾಗಲೇ ಈ ಕ್ಷೇತ್ರದ ಹಿರಿಯ ಮುಖಂಡ ಯಾವಗಲ್‌ ಅವರ ವಿರೋಧಿ ಅಲೆಯೂ ಹೆಚ್ಚಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುವಂತೆ ಮಾಡಿದೆ. ಅದೇ ಕಾಂಗ್ರೆಸ್‌ ಸೋಲಿಗೆ ಕಾರಣವಾಗುತ್ತ ಬರುತ್ತಿದೆ.

ಬಿಜೆಪಿಯಲ್ಲಿ ಸಿಸಿಪಾ ಒಬ್ಬರೇ:

ಹಾಲಿ ಶಾಸಕ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಒಬ್ಬರೇ ಬಿಜೆಪಿಯ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಇದುವರೆಗೂ ಪಕ್ಷದಲ್ಲಿ ಬೇರೆ ಯಾರೂ ಸ್ಪರ್ಧೆಯ ಕುರಿತು ಇಂಗಿತ ವ್ಯಕ್ತಪಡಿಸದಿರುವುದು ಈ ಕ್ಷೇತ್ರದ ವಿಶೇಷ.

ನರಗುಂದ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ, ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ ಸೇರಿದಂತೆ ಎಲ್ಲ ಹಿಂದೂ ಪರ ಸಂಘಟನೆಗಳು, ಸಚಿವರು ಪ್ರತಿನಿಧಿಸುವ ಪಂಚಮಸಾಲಿ ಸಮುದಾಯ, ಲಿಂಗಾಯತರ ಒಳ ಪಂಡಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಸಚಿವ ಸಿ.ಸಿ. ಪಾಟೀಲ್‌ ಒಳ್ಳೆಯ ಹೆಸರು, ಸಂಪರ್ಕ ಹೊಂದಿದ್ದಾರೆ. ಹಾಗಾಗಿ ಪಾಟೀಲ ಮತ್ತೊಮ್ಮೆ ನರಗುಂದ ಕ್ಷೇತ್ರದಿಂದ ಕಣಕ್ಕಿಳಿಯುವ ಹುಮ್ಮಸ್ಸಿನಲ್ಲಿದ್ದಾರೆ.

ಆದರೆ, ನಿಮ್ಮ ಜತೆ ಮತ್ತೊಬ್ಬರನ್ನು ಗೆಲ್ಲಿಸಿಕೊಂಡು ಬನ್ನಿ ಎನ್ನುವ ಸಂದೇಶ ಬಿಜೆಪಿ ಹೈಕಮಾಂಡ್‌ನಿಂದ ಬಂದರೆ ಸಚಿವರ ಪುತ್ರ ಉಮೇಶಗೌಡ ಪಾಟೀಲ್‌ ಕೂಡ ಚುನಾವಣಾ ಅಖಾಡಕ್ಕೆ ದುಮುಕುವ ಸಾಧ್ಯತೆಗಳಿದ್ದು, ಆಗ ಕ್ಷೇತ್ರಗಳ ಆಯ್ಕೆ ತಂದೆ-ಮಗನ ನಿರ್ಧಾರದ ಮೇಲೆ ನಿಲ್ಲಲಿದೆ.

ಇತ್ತೀಚೆಗೆ ನರಗುಂದದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿ, ಯಶಶ್ವಿಗೊಳಿಸುವ ಮೂಲಕ ಸಂಘ ಪರಿವಾರ, ಬಿಜೆಪಿ ಮುಖಂಡರ ಗಮನ ಸೆಳೆದಿರುವ ಮತ್ತು ಈ ಮೂಲಕ ಕ್ಷೇತ್ರದಲ್ಲಿ ಉಮೇಶಗೌಡರು ತಮ್ಮ ಛಾಪು ಮೂಡಿಸಿದ್ದಾರೆ. ಈ ನಾಯಕತ್ವ ಗುಣ ಮನಗಂಡಿರುವ ಸಂಘದ ಪ್ರಮುಖರು ಇಂಥದೊಂದು ಪ್ರಯೋಗದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಹಾಗಾಗಿ ನರಗುಂದ ಕ್ಷೇತ್ರದ ಚುನಾವಣಾ ಅಖಾಡದಲ್ಲಿ ಪರಸ್ಪರ ಸೆನಸುವ ಕಲಿಗಳ ಬಗ್ಗೆ ಈಗಲೇ ಯಾವುದೇ ಚಿತ್ರಣ ಕಾಣುತ್ತಿಲ್ಲ.

ಜಾತಿ ಪ್ರಮುಖವಾಗುತ್ತಿದೆ...

ನರಗುಂದ ಕ್ಷೇತ್ರದ ಟಿಕೆಟ್‌ ಹಂಚಿಕೆಯಲ್ಲಿ ಜಾತಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲಿಯೂ ಕಾಂಗ್ರೆಸ್‌ ಈ ಬಾರಿ ಬದಲಾವಣೆ ಬಯಸಿದ್ದು, ಇದಕ್ಕಾಗಿ ಡಿ.ಕೆ. ಶಿವಕುಮಾರ ತಮ್ಮ ಅತ್ಯಾಪ್ತರ ಮೂಲಕ ಸಮೀಕ್ಷೆ ನಡೆಸಿದ್ದಾರೆ. ನರಗುಂದ ಕ್ಷೇತ್ರದಲ್ಲಿ ಹಾಲಿ ಸಚಿವರಿಗೆ ಪ್ರಬಲ ಪೈಪೋಟಿ ನೀಡಬೇಕಾದಲ್ಲಿ ಲಿಂಗಾಯತ ಪ್ರಮುಖ ಸಮುದಾಯಕ್ಕೆ ಟಿಕೆಟ್‌ ನೀಡಬೇಕು ಎನ್ನುವ ಲೆಕ್ಕಾಚಾರ ಜೋರಾಗಿದೆ. ಈ ಸೂತ್ರವನ್ನು ಕಾಂಗ್ರೆಸ್‌ ಅನುಸರಿಸಿದಲ್ಲಿ ಮಾಜಿ ಸಚಿವರಿಗೆ ಟಿಕೆಟ್‌ ಕೈ ತಪ್ಪಿದರೂ ಆಶ್ಚರ್ಯ ಪಡುವಂತಿಲ್ಲ.

3 ದಿನದ ಹಸುಳೆ ಗದಗ ಎಪಿಎಂಸಿ ಆವರಣದಲ್ಲಿ ಪತ್ತೆ; ಮನುಷ್ಯತ್ವ ಮರೆತ ಪಾಪಿಗಳು!

ಯುವಕರಿಗೆ ನೀಡಿ ಕೂಗು...

ಕಾಂಗ್ರೆಸ್‌ನಲ್ಲಿ ಅತಿ ಹೆಚ್ಚಿನ ಪೈಪೋಟಿ ಕಂಡು ಬರುತ್ತಿದೆಯಾದರೂ ಅರ್ಜಿ ಸಲ್ಲಿಸಿದ 6 ಜನರಲ್ಲಿ 4 ಜನ ಒಂದೇ ತೀರ್ಮಾನವಿದೆ. ಪಕ್ಷ ಯುವಕರಿಗೆ ಆದ್ಯತೆ ನೀಡಿ ಯುವಕರಲ್ಲಿ ಯಾರೇ ಒಬ್ಬರಿಗೆ ಟಿಕೆಟ್‌ ನೀಡಿದರೂ ನಾವ್ಯಾರೋ ವಿರೋಧಿಸುವುದಿಲ್ಲ ಎನ್ನುವ ಒಮ್ಮತದ ನಿರ್ಧಾರ ಮಾಡಿದ್ದಾರೆ. ಯುವ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಗದಗ ಜಿಪಂಗೆ, ಗದಗ ಎಪಿಎಂಸಿ ಇತಿಹಾಸದಲ್ಲಿಯೇ ಕಿರಿಯ ವಯಸ್ಸಿನ ಅಧ್ಯಕ್ಷರಾಗಿ ಕೆಲಸ ಮಾಡಿರುವ ಸಿದ್ದಲಿಂಗೇಶ್ವರ ಪಾಟೀಲ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಅವರೊಟ್ಟಿಗೆ ಡಾ. ಸಂಗಮೇಶ ಕೊಳ್ಳಿ ಹೆಸರು ಕೂಡಾ ಚಾಲ್ತಿಯಲ್ಲಿದೆ.

click me!