2023ಕ್ಕೆ ಮತ್ತೆ ಬಿಜೆಪಿ ಅಧಿಕಾರ ಖಚಿತ: ಸಿಎಂ ಬೊಮ್ಮಾಯಿ

By Kannadaprabha NewsFirst Published Dec 3, 2022, 12:00 PM IST
Highlights

ಎಲ್ಲ ಕೆಲಸ ಮಾಡುವಾಗ ಟೀಕೆ-ಟಿಪ್ಪಣಿ ಬರುತ್ತವೆ ಒಳ್ಳೆಯದಿದ್ದರೆ ನಾವು ಸ್ವೀಕಾರ ಮಾಡುತ್ತೇವೆ. ನಮ್ಮ ಅಭಿವೃದ್ಧಿ ಕೆಲಸಗಳ ದಾರಿ ತಪ್ಪಿಸುವ ಟೀಕೆಗಳಿಗೆ ನಾನು ಸೊಪ್ಪು ಹಾಕಲ್ಲ. ಇಂತಹ ಬಹಳ ಜನರನ್ನು ನೋಡಿದ್ದೇನೆ: ಸಿಎಂ ಬೊಮ್ಮಾಯಿ

ಬೆಳಗಾವಿ(ಡಿ.03):  2023ಕ್ಕೆ ಮತ್ತೆ ಮರಳಿ ಅಧಿಕಾರಕ್ಕೆ ಬರುತ್ತೇವೆ. ಇದರಲ್ಲಿ ಎರಡೂ ಮಾತೇ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋವು ನಮ್ಮ ಮಾತೆ, ಪುಣ್ಯ ಕೋಟಿ ಯೋಜನೆ ಜಾರಿ ಮಾಡಲಾಗಿದೆ. ಎಲ್ಲ ಕೆಲಸ ಮಾಡುವಾಗ ಟೀಕೆ-ಟಿಪ್ಪಣಿ ಬರುತ್ತವೆ ಒಳ್ಳೆಯದಿದ್ದರೆ ನಾವು ಸ್ವೀಕಾರ ಮಾಡುತ್ತೇವೆ. ನಮ್ಮ ಅಭಿವೃದ್ಧಿ ಕೆಲಸಗಳ ದಾರಿ ತಪ್ಪಿಸುವ ಟೀಕೆಗಳಿಗೆ ನಾನು ಸೊಪ್ಪು ಹಾಕಲ್ಲ. ಇಂತಹ ಬಹಳ ಜನರನ್ನು ನೋಡಿದ್ದೇನೆ. ಯಾರಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಗೋಹತ್ಯೆ ಕಾನೂನು ಮಾಡಿದ್ದಕ್ಕೆ ವಯಸ್ಸಾದ ಗೋವುಗಳನ್ನು ಏನು ಮಾಡುತ್ತಿರಿ ಎಂದು ವಿಪಕ್ಷಗಳು ಪ್ರಶ್ನೆ ಮಾಡುತ್ತಿವೆ. ಗೋವು ನಮ್ಮ ಮಾತೆ, ಪುಣ್ಯ ಕೋಟಿ ಯೋಜನೆ ಜಾರಿ ಮಾಡಲಾಗಿದೆ. ಎಲ್ಲ ಕೆಲಸ ಮಾಡುವಾಗ ಟೀಕೆ-ಟಿಪ್ಪಣಿ ಬರುತ್ತವೆ. ಒಳ್ಳೆಯದಿದ್ದರೆ ನಾವು ಸ್ವೀಕಾರ ಮಾಡುತ್ತೇವೆ. ಏನಾದರೂ ತಾಕತ್‌ ಇದ್ದರೆ ಅದು ಜನಶಕ್ತಿಗೆ ಮಾತ್ರ. ಟೀಕೆ ಟಿಪ್ಪಣಿಗೆ ನಾವು ಸೊಪ್ಪು ಹಾಕಲ್ಲ. ನಮ್ಮ ಕರ್ತವ್ಯನಿಷ್ಠೆ ನಾವು ಬದಲಾಯಿಸಲ್ಲ. 25 ವರ್ಷ ಅಮೃತ ಕಾಲ ಆಗಬೇಕಂದರೆ ಕರ್ತವ್ಯ ಕಾಲ ಆಗಬೇಕು. ಸಬ್‌ ಕಾ ಸಾಥ್‌, ಸಬ… ಕಾ ವಿಕಾಸ್‌, ಸಬ… ಕಾ ಪ್ರಯಾಸ್‌ ಅಂತಾ ಪ್ರಧಾನಿ ಹೇಳಿದ್ದು, ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.

ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಬರಬೇಡಿ: ಸಿಎಂ ಬೊಮ್ಮಾಯಿ

ಉಕ ಅಭಿವೃದ್ಧಿಗೆ ಆದ್ಯತೆ:

ಬೆಳಗಾವಿ ಸಂಪದ್ಭರಿತ ಜಿಲ್ಲೆಯಾಗಿದ್ದು ಈ ಭಾಗದ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ ಕಳಸಾ ಬಂಡೂರಿ ಯೋಜನೆ ಸಫಲತೆ ಸಿಗುತ್ತೆ ಎಂಬ ವಿಶ್ವಾಸ ಇದೆ. ಮುಂಬರುವ ದಿನಗಳಲ್ಲಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೊಸ ಯೋಜನೆ ರೂಪಿಸಲಾಗುವುದು. ಎಲ್ಲ ಪ್ರಮುಖ ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ನಮ್ಮ ಸರ್ಕಾರ ಕೊಡುತ್ತದೆ. ತಾವು ಇಷ್ಟುದೊಡ್ಡ ಸಂಖ್ಯೆಯಲ್ಲಿ ಸೇರಿದ್ದು ನಿಮ್ಮ ಸಂಕಲ್ಪ ಏನು ಎಂದು ಗೊತ್ತಾಗುತೆ. ನಿಮ್ಮ ಸಂಕಲ್ಪವೇ ನಮ್ಮ ಸಂಕಲ್ಪವಾಗಿದೆ, ಈ ರಾಜ್ಯದ ರಕ್ಷಣೆ, ಈ ರಾಜ್ಯದ ಗಡಿ ಅಭಿವೃದ್ಧಿಯೇ ನಮ್ಮ ಸಂಕಲ್ಪ. ಆದ್ದರಿಂದ ನಿಮ್ಮ ಆಶೀರ್ವಾದ ಬೆಂಬಲ ನಮಗೆ ಇರಲಿ ಎಂದರು.

ಎಲ್ಲ ಸಮಾಜಗಳು ಇಂದು ಜಾಗೃತಗೊಂಡಿರುವುದು ದೇಶದ ಅಭಿವೃದ್ಧಿಗೆ ಒಳ್ಳೆಯ ಬೆಳವಣಿಗೆಯಾಗಿದೆ. ದುಡಿಯುವ ವರ್ಗಕ್ಕೆ ಒಳ್ಳೆಯ ಕೆಲಸ, ಸಂಭಾವನೆ ಕೊಟ್ಟಾಗ ಅಭಿವೃದ್ಧಿ ಆಗುತ್ತದೆ. ರೈತನಿಂದ ದೇಶ ಉಳಿದಿದೆ. ಬೆಳೆಯುತ್ತಿದೆ. ನೇಕಾರರ ಸಮಸ್ಯೆ ಬಗ್ಗೆ ನನಗೆ ಗೊತ್ತಿದೆ ಇನ್ನೊಬ್ಬರ ಮರ್ಯಾದೆ ಮುಚ್ಚಲು ಕೆಲಸ ಮಾಡುವ ನೇಕಾರರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಕೆಲಸ ಮೀನುಗಾರರು, ಕುರಿಗಾಹಿಗಳಿಗಾಗಿ ಹಲವು ಯೋಜನೆ ಜತೆಗೆ ಶಾಶ್ವತ ಬದುಕು ಕಟ್ಟಿಕೊಳ್ಳುವ ಕೆಲಸ ನಾವು ಮಾಡಬೇಕು ಎಂದರು.

ಬೆಳಗಾವಿಯಲ್ಲಿ ಕನ್ನಡ ಬಾವುಟ ಸಂಘರ್ಷ: ಒಬ್ಬ ಸೆರೆ, ಮೂವರು ವಶ

8 ಸಾವಿರ ಕೊಠಡಿ ನಿರ್ಮಾಣ:

ಬಡಿಗೇರರು, ಕಮ್ಮಾರರು ಸೇರಿ ಎಲ್ಲ ವರ್ಗಕ್ಕೆ ವಿಶೇಷ ಕಾರ್ಯಕ್ರಮ ರೂಪಿಸಲಾಗುವುದು. ಭಾಷಣದಿಂದ ಸಾಮಾಜಿಕ ನ್ಯಾಯ ಸಿಗುತ್ತಾ?, ಹತ್ತು ಹಲವಾರು ಸಿಎಂಗಳು ಬಂದು ಹೋದರು, ಸಾಮಾಜಿಕ ನ್ಯಾಯ ಭಾಷಣದ ಸರಕು, ಜನ ಜಾಗೃತರಾಗಿದ್ದಾರೆ. ಸಾಮಾಜಿಕ ನ್ಯಾಯ ಬರಬೇಕಂದರೆ ಹಿಂದುಳಿದ, ದಿನದಲೀತರ ಮಕ್ಕಳು ಸಶಕ್ತರಾಗಬೇಕು. ಆರ್ಥಿಕವಾಗಿ ಸಶಕ್ತರಾದರೆ ಮಾತ್ರ ಸಮಾಜದಲ್ಲಿ ಗೌರವವಿದೆ. ಆರ್ಥಿಕ ಅಭಿವೃದ್ಧಿ, ಶಿಕ್ಷಣ, ಆರೋಗ್ಯ ಬಹಳ ಮುಖ್ಯ ಅದಕ್ಕಾಗಿ ಹಲವು ಕಾರ್ಯಕ್ರಮ ಮಾಡಿದ್ದೇವೆ. ಮಹಿಳೆಯರಿಗೆ ಸ್ತ್ರೀಶಕ್ತಿ, ಯುವಕರಿಗಾಗಿ ಯುವಶಕ್ತಿ ಯೋಜನೆ ಮಾಡಿದ್ದೇವೆ. ದೂರದೃಷ್ಟಿಇಟ್ಟುಕೊಂಡು ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇವೆ. ವಿವೇಕ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಎಂಟು ಸಾವಿರ ಶಾಲಾ ಕೊಠಡಿ ನಿರ್ಮಾಣ ಮಾಡುತ್ತಿದ್ದೇವೆ ಎಂದು ಹೇಳಿದರು.

1 ಟ್ರಿಲಿಯನ್‌ ಡಾಲರ್‌ ಬಯಕೆ:

ಶಾಸಕ ಮಹಾದೇವಪ್ಪ ಯಾದವಾಡ ನಿಮ್ಮ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿಗೆ ಬಂದರೆ ಆಫೀಸ್‌ ಆಫೀಸ್‌ ಅಲೆದಾಡುತ್ತಾರೆ. ಈ ತಾಲೂಕು ಮಾದರಿ ತಾಲೂಕು ಮಾಡಬೇಕೆಂಬ ಮಹಾದೇವಪ್ಪ ಯಾದವಾಡರ ಕನಸಿಗೆ ನಮ್ಮ ಸರ್ಕಾರ ಯಾವತ್ತೂ ಇದೆ. ನೀವು ಇಷ್ಟುಸಂಖ್ಯೆಯಲ್ಲಿ ಬಂದಿದ್ದು ನಮ್ಮ ಶಕ್ತಿ ಇಮ್ಮಡಿಯಾಗಿದ್ದು, ಜೀವನದ ಕೊನೆಯ ಉಸಿರಿರೋವರೆಗೂ ಈ ನಾಡಿನ ಕಟ್ಟಕಡೆಯ ವ್ಯಕ್ತಿ ಅಭಿವೃದ್ಧಿ ಅದುವರೆಗೂ ನಮ್ಮ ಕರ್ತವ್ಯ ಮಾಡ್ತುತೇವೆ ಎಂಬ ಸಂಕಲ್ಪ ನಮ್ಮದಾಗಿದೆ. ಕೇವಲ ರಾಮದುರ್ಗ ಅಲ್ಲ ಇಡೀ ಬೆಳಗಾವಿ ಸಂಪದ್ಭರಿತ ಆಗಲಿ, ಇದರ ಲಾಭ ರಾಜ್ಯಕ್ಕೆ ಸಿಗಲಿ. 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆಗೆ ಪ್ರಧಾನಿ ಮೋದಿ ಕನಸಿದ್ದು ಅದರಲ್ಲಿ 1 ಟ್ರಿಲಿಯನ್‌ ಡಾಲರ್‌ ಕರ್ನಾಟಕದಿಂದ ನೀಡಬೇಕೆಂಬ ಬಯಕೆ ಇದ್ದು, ನವ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ತೊಟ್ಟು ನಿಮಗೆ ಕೋಟಿ ಕೋಟಿ ಅಭಿನಂದನೆ ಸಲ್ಲಿಸುವೆ ಎಂದರು.
 

click me!