ಬಿಜೆಪಿಗೆ ವರುಣ್‌ ಗಾಂಧಿ ಗುಡ್‌ಬೈ..? ಕಾಂಗ್ರೆಸ್‌, ಆಪ್‌, ಟಿಎಂಸಿಯತ್ತ ಚಿತ್ತ..!

By Kannadaprabha NewsFirst Published Jan 9, 2023, 7:57 AM IST
Highlights

ಬಿಜೆಪಿಗೆ ಗುಡ್‌ಬೈ ಹೇಳಲು ವರುಣ್‌ ಗಾಂಧಿ ಸಜ್ಜಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಕಾಂಗ್ರೆಸ್‌, ಆಪ್‌, ಟಿಎಂಸಿಯತ್ತ ಚಿತ್ತ ಹರಿಸಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿಯೇ ವಜಾ ಮಾಡಲಿ ಎಂದು ವರುಣ್‌ ಗಾಂಧಿ ಕಾದಿದ್ದಾರೆ, ಹೀಗಾದರೆ ತಮಗೆ ‘ಹುತಾತ್ಮ ಪಟ್ಟ’ ಸಿಗುತ್ತೆ ಎಂಬ ಭಾವನೆ ಇದೆ ಎಂದೂ ವರದಿಗಳು ಹೇಳುತ್ತಿವೆ. ಮೋದಿ ಸರ್ಕಾರವನ್ನು ವರುಣ್‌ ಗಾಂಧಿ  ಆಗಾಗ್ಗೆ ಟೀಕಿಸುತ್ತಾರೆ.

ಲಖನೌ: ಕೆಲವು ವರ್ಷಗಳಿಂದ ಖುದ್ದು ಮೋದಿ ಸರ್ಕಾರದ ನೀತಿಗಳು ಹಾಗೂ ಯೋಜನೆಗಳ ವಿರುದ್ಧ ಮಾತನಾಡುತ್ತಿರುವ ಉತ್ತರಪ್ರದೇಶದ ಬಿಜೆಪಿ ಸಂಸದ ಹಾಗೂ ಗಾಂಧಿ ಕುಟುಂಬದ ಕುಡಿ ವರುಣ್‌ ಗಾಂಧಿ ಅವರು ಬಿಜೆಪಿ ತೊರೆದು ಅನ್ಯಪಕ್ಷಗಳತ್ತ ಗಮನ ಹರಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಅವರು ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ ಅಥವಾ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ ಸೇರಬಹುದು ಎಂಬ ಗುಸುಗುಸು ಹರಿದಾಡುತ್ತಿದೆ.

ಕೃಷಿ ಕಾಯ್ದೆ (Farm Bill), ಸಿಎಎ-ಎನ್‌ಆರ್‌ಸಿ (CAA - NRC) ಸೇರಿ ಹಲವಾರು ಮೋದಿ ಸರ್ಕಾರದ (Modi Government) ಯೋಜನೆಗಳನ್ನು ವರುಣ್‌ ಗಾಂಧಿ (Varun Gandhi) ಟೀಕಿಸಿದ್ದರು. ಹೀಗೆ ಅವಕಾಶ ಸಿಕ್ಕಾಗಲೆಲ್ಲ ಸರ್ಕಾರ ಟೀಕಿಸುವ ಅವರು, ಬಿಜೆಪಿಯೇ (BJP) ತಮ್ಮನ್ನು ಹೊರದಬ್ಬಲಿ. ಹೀಗೆ ದಬ್ಬಿದರೆ ತಮಗೆ ‘ಹುತಾತ್ಮ’ ಪಟ್ಟ ಸಿಗಬಹುದು. ಆಗ ಇದನ್ನೇ ಬಂಡವಾಳ ಮಾಡಿಕೊಂಡು ಅನ್ಯಪಕ್ಷ ಸೇರಬಹುದು ಎಂಬ ಚಿಂತನೆಯಲ್ಲಿದ್ದಾರೆ ಎಂದು ವರದಿಗಳು ಹೇಳಿವೆ. ಆದರೆ ಈವರೆಗೂ ವರುಣ್‌ ಗಾಂಧಿ ಬಗ್ಗೆ ಪ್ರತಿಕ್ರಿಯಿಸದೇ ಸುಮ್ಮನಿದ್ದು, ಅವರಾಗೇ ಪಕ್ಷ ಬಿಟ್ಟು ಹೋಗಲಿ ಎಂಬ ಇರಾದೆ ಹೊಂದಿದೆ ಎನ್ನಲಾಗಿದೆ.

ಇದನ್ನು ಓದಿ: ಬಡವರ ಅನ್ನ ಕಸಿದು ರಾಷ್ಟ್ರಧ್ವಜ ಕೊಳ್ಳಲು ಒತ್ತಾಯಿಸುವುದು ನಾಚಿಕೆಗೇಡು: ವರುಣ್ ಗಾಂಧಿ ಟೀಕೆ

ಈ ನಡುವೆ ಅವರು ಕಾಂಗ್ರೆಸ್‌ ಸೇರುವ ಬಗ್ಗೆ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಸೋದರಿ ಪ್ರಿಯಾಂಕಾ ಗಾಂಧಿ ಜತೆ ವರುಣ್‌ ಗಾಂಧಿಗೆ ಉತ್ತಮ ಸಂಬಂಧವಿದೆ. ಆದರೆ ರಾಹುಲ್‌-ಸೋನಿಯಾ ಗಾಂಧಿ ಜತೆ ಅಷ್ಟು ಸಂಬಂಧ ಚೆನ್ನಾಗಿಲ್ಲ. ಹೀಗಾಗಿ ವರುಣ್‌ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ರಾಹುಲ್‌ ಗಾಂಧಿ ಒಪ್ಪಬೇಕು ಎನ್ನಲಾಗಿದೆ. ಇದಲ್ಲದೆ, ಅವರು ತೃಣಮೂಲ ಕಾಂಗ್ರೆಸ್‌ ಹಾಗೂ ಅರವಿಂದ ಕೇಜ್ರಿವಾಲ್‌ರ ಆಪ್‌ ಸೇರುವ ಬಗ್ಗೆಯೂ ಉತ್ಸುಕರಾಗಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಬಿಜೆಪಿ, ಸಂಘ ಪರಿವಾರದ ವಿರುದ್ಧವೇ ಟೀಕೆ..!
ಬಿಜೆಪಿ ಸಂಸದ ವರುಣ್ ಗಾಂಧಿ ಅವರ ಇತ್ತೀಚಿನ ಹೇಳಿಕೆಗಳು ಮತ್ತು ಅವರ ಸ್ವಂತ ಪಕ್ಷದ ನೀತಿಗಳು ಹಾಗೂ ಆಚರಣೆಗಳ ಬಗ್ಗೆ ಬಹಿರಂಗ ಟೀಕೆಗಳು ಅವರು ಅಂತಿಮವಾಗಿ ಬಿಜೆಪಿಯಿಂದ ನಿರ್ಗಮಿಸಿ ಕಾಂಗ್ರೆಸ್‌ ಪ್ರವೇಶಕ್ಕೆ ದಾರಿ ಮಾಡಿಕೊಡುತ್ತಿದ್ದಾರೆಯೇ ಎಂದು ಹಲವರು ಆಶ್ಚರ್ಯ ಪಡುವಂತೆ ಮಾಡಿದೆ. 2 ವರ್ಷಗಳಿಂದ ಪ್ರಮುಖ ನಿಯತಕಾಲಿಕಗಳಲ್ಲಿ ಪ್ರಕಟವಾದ ಅವರ ಲೇಖನಗಳಲ್ಲಿ ಬಿಜೆಪಿಯೊಂದಿಗಿನ ಅವರ ಭ್ರಮನಿರಸನವು ಗೋಚರಿಸುತ್ತಿದ್ದು, ಕಳೆದ ತಿಂಗಳು ಸಾರ್ವಜನಿಕ ಸಭೆಯೊಂದರಲ್ಲಿ ಅವರು ಹೇಳಿದ್ದು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ.

ಇದನ್ನೂ ಓದಿ: ನಾನು ಬಿಜೆಪಿ ತೊರೆವ ದಿನ, ನನ್ನ ರಾಜಕೀಯದ ಕೊನೆ: ವರುಣ್‌ ಗಾಂಧಿ
 
“ನಾನು ನೆಹರೂ ಜೀ ವಿರೋಧಿಯಲ್ಲ ಅಥವಾ ನಾನು ಕಾಂಗ್ರೆಸ್ ವಿರುದ್ಧ ಅಲ್ಲ; ನಮ್ಮ ರಾಜಕೀಯವು ಅಂತರ್ಯುದ್ಧವನ್ನು ಪ್ರಚೋದಿಸುವ ಬದಲು ಜನರನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿರಬೇಕು. ಇಂದು, ಕೇವಲ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಮತಗಳನ್ನು ಗಳಿಸುತ್ತಿರುವ ಜನರು ಉದ್ಯೋಗ, ಶಿಕ್ಷಣ ಅಥವಾ ಆರೋಗ್ಯದಂತಹ ಗಂಭೀರ ವಿಷಯಗಳಲ್ಲಿ ಏನು ಮಾಡುತ್ತಿದ್ದಾರೆ ಎಂದು ಕೇಳಬೇಕಾಗಿದೆ. ಜನರನ್ನು ತುಳಿಯುವ ಅಥವಾ ದಮನ ಮಾಡುವ ರಾಜಕೀಯವನ್ನು ನಾವು ಮಾಡಬಾರದು; ನಾವು ಜನರನ್ನು ಮೇಲಕ್ಕೆತ್ತುವ ರಾಜಕೀಯವನ್ನು ಮಾಡಬೇಕಾಗಿದೆ ಎಂದು ವರುಣ್ ಗಾಂಧಿ ತಮ್ಮ ಕ್ಷೇತ್ರವಾದ ಪಿಲಿಭಿತ್‌ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಹಿಂದಿಯಲ್ಲಿ ಇಂತಹ ಹಲವಾರು ವಿಷಯಗಳ ಜೊತೆಗೆ ಹೇಳಿದರು.
 
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅದರ ಉನ್ನತ ನಾಯಕತ್ವವು ಅನುಸರಿಸುತ್ತಿರುವ ನೀತಿಗಳು ಮತ್ತು ಅಭ್ಯಾಸಗಳ ಬಗ್ಗೆ ಅವರು ಎಷ್ಟು ವಿಮರ್ಶಾತ್ಮಕವಾಗಿದ್ದಾರೆ ಎಂಬುದನ್ನು ಅವರು ಉಚ್ಚರಿಸಿದ ಪ್ರತಿಯೊಂದು ಪದವೂ ಹೇಳುತ್ತದೆ. ಜವಾಹರ್ ಲಾಲ್ ನೆಹರೂ ಅವರು ಸಂಘಪರಿವಾರದ ವಿರುದ್ಧ ಕೆಂಡ ಕಾರುತ್ತಿದ್ದರೂ, ಅವರು ನೆಹರೂ ಅಥವಾ ಕಾಂಗ್ರೆಸ್ ವಿರುದ್ಧ ಅಲ್ಲ ಎಂದು ಹೇಳಿರುವುದು ಆಶ್ಚರ್ಯಕರವೇ ಸರಿ.

ಇದನ್ನೂ ಓದಿ: ಟೇಸ್ಟಿ ಟೇಸ್ಟಿ ಬಿಸ್ಕೆಟ್‌ ತಯಾರಿಸಿದ ಪುತ್ರಿ... ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ ವರುಣ್ ಗಾಂಧಿ

click me!