ಭಾರತದ ಮೂಲನಿವಾಸಿಗಳು ಆತಂಕದಲ್ಲಿದ್ದಾರೆ: ಸಚಿವ ಮಹದೇವಪ್ಪ

By Kannadaprabha NewsFirst Published Mar 4, 2024, 10:03 PM IST
Highlights

ಪ್ರಪಂಚಕ್ಕೆ ಶಾಂತಿ, ಅಹಿಂಸೆ, ಸಹಿಷ್ಣುತೆಯನ್ನು ಬೋದನೆ ಮಾಡಿದ ರಾಷ್ಟ್ರ ಭಾರತ. ಅಹಿಂಸೆ ಹಾಗೂ ಅಸಹಕಾರದಿಂದ ಸ್ವಾತಂತ್ರ್ಯ ಪಡೆದ ಈ ದೇಶದ ಇಂದಿನ ಆಡಳಿತ ವ್ಯವಸ್ಥೆಯು ಎಲ್ಲರನ್ನೂ ತಳಮಳಗೊಳಿಸುತ್ತಿದೆ. 

ಮೈಸೂರು (ಮಾ.04): ಪ್ರಪಂಚಕ್ಕೆ ಶಾಂತಿ, ಅಹಿಂಸೆ, ಸಹಿಷ್ಣುತೆಯನ್ನು ಬೋದನೆ ಮಾಡಿದ ರಾಷ್ಟ್ರ ಭಾರತ. ಅಹಿಂಸೆ ಹಾಗೂ ಅಸಹಕಾರದಿಂದ ಸ್ವಾತಂತ್ರ್ಯ ಪಡೆದ ಈ ದೇಶದ ಇಂದಿನ ಆಡಳಿತ ವ್ಯವಸ್ಥೆಯು ಎಲ್ಲರನ್ನೂ ತಳಮಳಗೊಳಿಸುತ್ತಿದೆ. ಸ್ವಾತಂತ್ರ್ಯದ ಉದ್ದೇಶ ಬುಡಮೇಲು ಮಾಡಲಾಗುತ್ತಿದ್ದು, ಭಾತರದ ಮೂಲನಿವಾಸಿಗಳು ಆತಂಕದಲ್ಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು. ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪ. ಮಲ್ಲೇಶ್- 90ರ ಅಂಗವಾಗಿ ಶನಿವಾರ ಕಲಾಮಂದಿರದಲ್ಲಿ ನಡೆದ ಭಾರತ ಜನತಂತ್ರದ ಸಮಕಾಲೀನ ತಲ್ಲಣಗಳು ಕುರಿತ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ದೇಶದ ಉಜ್ವಲ ಭವಿಷ್ಯಕ್ಕೆ ಮಾರ್ಗ ತೊರಿಸುವ ಸಂವಿಧಾನ ಇಂದು ಅಪಾಯದಲ್ಲಿದೆ. ಜನರ ಜೀವನ ನಿಜಕ್ಕೂ ಕಷ್ಟದಲ್ಲಿದೆ. ಅಸ್ಪೃಶ್ಯತೆ ನಿವಾರಣೆ ಆಗಿಲ್ಲ. ಕೋಮ ಸೌಹರ್ಧತೆ ಸಂಪೂರ್ಣ ಸಾಧಿಸಿಲ್ಲ. ನಮ್ಮ ದೇಶದ ಮೂಲ ಕಸುಬಾದ ಕೃಷಿ ಆಧಾರಿತ ಬದುಕು ಸಂಕಷ್ಟಕ್ಕೆ ಸಿಲುಕಿದ. ರೈತರು ಕೃಷಿ ನಿಲ್ಲಿಸಿ ಬೀದಿಗಿಳಿದು ಹೋರಾಟ ಮಾಡಬೇಕಾದ ಹೀನಾಯ ಪರಿಸ್ಥಿತಿ ಬಂದೊದಗಿರುವುದು ಅತ್ಯಂತ ನಾಚಿಗೇಡಿನ ಸಂಗತಿ ಎಂದರು. ಜವಾಹರಲಾಲ್ ನೆಹರು ಅವರು ಪ್ರಧಾನಿಯಾಗಿದ್ದಾಗ ಡಾ.ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನದ ಆಶಯ ಈಡೇರಿಸಲು ಪಂಚವಾರ್ಷಿಕ ಯೋಜನೆ ಮೂಲಕ ದೇಶವನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡುವಂಥ ಪ್ರಯತ್ನ ನಡೆದು ದೇಶದಲ್ಲಿ ಕೃಷಿಯ ಉತ್ಪಾದನೆಗೆ ಪ್ರೇರಕ ಶಕ್ತಿಯಾದ ಬಾಕ್ರಾನಂಗಲ್ ಅಣೆಕಟ್ಟೆ ನಿರ್ಮಾಣ ಮಾಡಲಾಯಿತು ಎಂದು ವಿವರಿಸಿದರು. 

ದೇಶದ ಪ್ರತಿ ಮನೆಗೂ ನೀರು ನೀಡಲು ಜಲಜೀವನ್‌ ಯೋಜನೆ: ಸಂಸದ ಪ್ರಜ್ವಲ್‌ ರೇವಣ್ಣ

ಭೂಮಿ ಸಾಮಾನ್ಯ ಜನರಿಗೆ, ಕೃಷಿಕರಿಗೆ ಸಾಮಾಜಿಕ ಭದ್ರತೆ ಒದಗಿಸುತ್ತದೆ. ಆದರೆ ಇಂದು ಭೂಮಿಯು ಬಂಡವಾಳ ಶಾಹಿಗಳ ಕೈ ಸೇರುತ್ತಿದೆ. ಒಬ್ಬ ವ್ಯಕ್ತಿ ನೂರಾರು ಎಕರೆ ಹೊಂದುವಂಥ ಕರಾಳ ಶಾಸನವನ್ನು ಇಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದೆ. ಇದರಿಂದ ಸಾಮಾಜಿಕ ನ್ಯಾಯ ಮರೀಚಿಕೆಯಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಸಿಂಧೂ ನಾಗರಿಕತೆ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ಪುರಾತನ ಚರಿತ್ರೆ, ನಮ್ಮ ಸಾಂಸ್ಕೃತಿಕ ಬದುಕು, ಧಾರ್ಮಿಕ ಆಚಾರ, ವಿಚಾರ, ವಿಭಿನ್ನವಾದ ಪ್ರಾಂತ್ಯಗಳ ಜನಜೀವನ ಹಾಗೂ ಸ್ವತಃ ನೋವು ಅನುಭವಿಸಿ, 15ಕ್ಕೂ ಹೆಚ್ವು ರಾಷ್ಟ್ರಗಳ ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ ಬಾಬಾ ಸಾಹೇಬರು ಭಾರತದ ಸಂವಿಧಾನ ರಚಿಸಿದ್ದಾರೆ. 

ಸಮಾನತೆ, ಸಮಾನ ಅವಕಾಶ, ಸಂಪತ್ತಿನ ಹಂಚಿಕೆ, ಸಾಮಾಜಿಕವಾಗಿ, ಆರ್ಥಿಕವಾಗಿ ಶೈಕ್ಷಣಿಕವಾಗಿ ಹಂಚುವುದು ಸೇರಿದಂತೆ ಸಂವಿಧಾನದ ನೀತಿ, ನಿರ್ದೇಶನಗಳು ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಹೇಳಿದರು. ಪ್ರಪಂಚದ ಇತಿಹಾಸದಲ್ಲಿ ಚಳವಳಿಗಳು ಜನಜೀವನದಲ್ಲಿ ಅಮೂಲಾಗ್ರ ಬದಲಾವಣೆ ತಂದಿವೆ. ಆದರೆ ಇಂದು ಪ್ರಜಾಸತ್ಯಾತ್ಮಕ ನಿರ್ಧಾರ ಬಲಪಡಿಸುವಂಥ ಚಳವಳಿಗಳು ಕ್ಷೀಣಿಸುತ್ತಿದೆ. ಅಧ್ಯಯನ ಶೀಲತೆ ಕಡಿಮೆಯಾಗುತ್ತಿದೆ. 80ನೇ ದಶಕದ ಹೋರಾಟ, ಜೆಪಿ ಅವರ ಸಮಗ್ರ ಕ್ರಾಂತಿ, ನಂಜುಂಡಸ್ವಾಮಿ ಅವರ ಭಾರತ ಚಳಿವಳಿ, ದಲಿತ ಸಂಘಟನೆಗಳ ಶಾಂತಿಯುವಾದ ಹೋರಾಟಗಳು, ಅನ್ಯಾಯದ ವಿರುದ್ಧದ ಧ್ವನಿ ಕವಲಾಗಿ ಹೊಡೆದುಹೋಗುತ್ತಿದೆ ಎಂದು ಅವರು ವಿಷಾಧ ವ್ಯಕ್ತಪಡಿಸಿದರು.

ಸರ್ಕಾರದ ಸೌಲಭ್ಯದಿಂದ ಜನರ ಕುಂದು ಕೊರತೆ ನಿವಾರಣೆ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ

ಸರ್ವಾಧಿಕಾರ ಎಂದಿಗೂ ಉಳಿಯುವುದಿಲ್ಲ: ಪ್ರಸ್ತುತ ನಮ್ಮೆಲ್ಲರ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ಒದಗಿದೆ. ಇದರ ಕತ್ತು ಹಿಚುಕಿದರೆ ಪ್ರಜಾಪ್ರಭುತ್ವ ಸಂಪೂರ್ಣ ನಾಶವಾಗಲಿದೆ. ವ್ಯಕ್ತಿ ಪೂಜೆ ಸರ್ವಾಧಿಕಾರಕ್ಕೆ ಪ್ರೇರಣವಾಗಲಿದೆ. ಸರ್ವಾಧಿಕಾರಿಯು ಪ್ರಜಾಪ್ರಭುತ್ವ ನಾಶಮಾಡುತ್ತಾನೆ. ಇದರಿಂದ ದೇಶ ಅವನತಿ ಕಾಣಲಿದೆ. ಅಂತಹ ಕಾಲಗಟ್ಟದಲ್ಲಿ ನಾವು ನಿಂತಿದ್ದೇವೆ. ಈ ದೇಶವು ಅನೇಕ ಹೋರಾಟ ಕಂಡು, ಜೀರ್ಣಿಸಿಕೊಂಡಿದೆ. ಹೀಗಾಗಿ ಬಹಳಷ್ಟು ಕಾಲ ಸರ್ವಾಧಿಕಾರ ಉಳಿಯುವುದಿಲ್ಲ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯಂತ್ರಿಗಳ ರಾಜಕೀಯ ಸಲಹೆಗಾರ ಬಿ.ಆರ್. ಪಾಟೀಲ, ಪ್ರೊ. ಕಾಂಚಾಲಯ್ಯ, ಸುಕನ್ಯಾ ಕಮರಳ್ಳಿ, ಚಿಂತಕ ಬಸವರಾಜು, ಸವಿತಾ ಮಲ್ಲೇಶ್, ರಂಗಕರ್ಮಿ ಎಚ್. ಜನಾರ್ಧನ್, ಸಾಹಿತಿ ನಾ. ದಿವಾಕರ, ಪ್ರೊ. ಕಾಳಚನ್ನೇಗೌಡ ಮೊದಲಾದವರು ಇದ್ದರು.

click me!