ಬಿಜೆಪಿ ಪ್ರತಿಭಟನೆ: ಕೆಇಬಿ ಕಟ್ಟಡಕ್ಕೆ ಕಲ್ಲು ತೂರಾಟ: ಶಾಸಕ ವಶ​ಕ್ಕೆ

By Kannadaprabha NewsFirst Published Jun 15, 2023, 4:26 AM IST
Highlights

ವಿದ್ಯುತ್‌ ದರ ಏರಿಕೆಯನ್ನು ವಿರೋಧಿಸಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಭಾಗವಾಗಿ ವಿದ್ಯುತ್‌ ಇಲಾಖೆ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿದ್ದು, ಈ ಸಂದರ್ಭದಲ್ಲಿ ಕಾರ್ಯಕರ್ತನೊಬ್ಬ ಕಲ್ಲು ತೂರಿದ್ದು, ಇದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆಗೊಳಿಸಿದರು.

ಶಿವಮೊಗ್ಗ (ಜೂ.15) : ವಿದ್ಯುತ್‌ ದರ ಏರಿಕೆಯನ್ನು ವಿರೋಧಿಸಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಭಾಗವಾಗಿ ವಿದ್ಯುತ್‌ ಇಲಾಖೆ ಮುಖ್ಯ ಕಚೇರಿಗೆ ಮುತ್ತಿಗೆ ಹಾಕಿದ್ದು, ಈ ಸಂದರ್ಭದಲ್ಲಿ ಕಾರ್ಯಕರ್ತನೊಬ್ಬ ಕಲ್ಲು ತೂರಿದ್ದು, ಇದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತು. ಬಳಿಕ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆಗೊಳಿಸಿದರು.

ವಿದ್ಯುತ್‌ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಮಾಡಿದರೂ ನಿಯಂತ್ರಣಕ್ಕೆ ಬರಲಿಲ್ಲ. ಈ ವೇಳೆಯಲ್ಲಿ ಕಚೇರಿ ಆವರಣಕ್ಕೆ ನುಗ್ಗಿದ ಪ್ರತಿಭಟನಕಾರರು ಕಚೇರಿಯ ಒಳಗೂ ಪ್ರವೇಶಿಸಿ, ಸೂಚನಾ ಫಲಕದ ಗಾಜನ್ನು ಒಡೆದುಹಾಕಿದರು. ಕಲ್ಲು ತೂರಾಟದಿಂದ ಕಟ್ಟಡದ ಹೊರ ಭಾಗಕ್ಕೆ ಅಳವಡಿಸಿದ ಗಾಜು ಪುಡಿ ಪುಡಿಯಾಯಿತು. ಈ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದರು.

Latest Videos

ಲೋಕಸಭೆ ಚುನಾವಣೆ 2024: ಶಿವಮೊಗ್ಗದಿಂದ ಗೀತಾ ಶಿವರಾಜ್‌ ಕುಮಾರ್‌ ಕಾಂಗ್ರೆಸ್‌ ಅಭ್ಯರ್ಥಿ?

ಬಂಧಿತ ವ್ಯಕ್ತಿಯನ್ನು ಬಿಡುಗಡೆ ಮಾಡುವಂತೆ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಲ್ಲದೇ, ಕೆಇಬಿ ವೃತ್ತದಲ್ಲಿ ಧರಣಿ ಕುಳಿತರು. ಶಾಸಕ ಚನ್ನಬಸಪ್ಪ(Channabasappa MLA) ಸೇರಿದಂತೆ ಹಲವರನ್ನು ಪೊಲೀಸರು ಈ ಸಂದರ್ಭದಲ್ಲಿ ವಶಕ್ಕೆ ಪಡೆದರು.

ಪ್ರತಿಭಟನಾ ಸಭೆ:

ಇದಕ್ಕೂ ಮೊದಲು ಕೆಇಬಿ(KEB Shivamogga) ವೃತ್ತದಲ್ಲಿರುವ ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಿದ ಬಿಜೆಪಿ ಮುಖಂಡರು ಕಾಂಗ್ರೆಸ್‌ ಸರ್ಕಾರವನ್ನು ಟೀಕಿಸಿದರಲ್ಲದೇ, ಕೂಡಲೇ ದರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ಶಾಸಕ ಚನ್ನಬಸಪ್ಪ ಮಾತನಾಡಿ, ಇದು ಬಡವರ ವಿರೋಧಿ ಸರ್ಕಾರ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಕಪಾಳಕ್ಕೆ ಹೊಡೆಯಬೇಕು. ಜನರನ್ನು ದಿಕ್ಕು ತಪ್ಪಿಸುತ್ತಿದೆ. ವಿದ್ಯುತ್‌ ದರ ಹೆಚ್ಚಾದರೆ ಕೈಗಾರಿಕೆಗಳ ಗತಿ ಏನು? ಬಿಜೆಪಿ ಸರ್ಕಾರದ ಮೇಲೆ ತಪ್ಪು ಹೊರಿಸುತ್ತಾರೆ. ವಿದ್ಯುತ್‌ ಕಂಪನಿಗಳು ದರ ಏರಿಸುವಂತೆ ಸರ್ಕಾರದ ಮುಂದಿಟ್ಟಾಗ ಬಿಜೆಪಿ ಸರ್ಕಾರ ಅದನ್ನು ನಿರಾಕರಿಸಿತ್ತು. ಅಧಿಕಾರಕ್ಕೆ ಬರಲು ಗ್ಯಾರಂಟಿಗಳ ಸುಳ್ಳು ಹೇಳಿ ಅದನ್ನು ಜಾರಿಗೆ ತರಲಾಗದೇ ಈಗ ವಿದ್ಯುತ್‌ ದರ ಏರಿಸುವ ಮೂಲಕ ಕಾಂಗ್ರೆಸ್‌ ಸರ್ಕಾರ ಕುತಂತ್ರದ ರಾಜಕಾರಣ ಮಾಡುತ್ತಿದೆ ಎಂದರು.

ಶಾಸಕ ರುದ್ರೇಗೌಡ ಮಾತನಾಡಿ, ಹೊಸ ಸರ್ಕಾರ ಬಂದು ಒಂದು ತಿಂಗಳಲ್ಲಿಯೇ ಬೀದಿಗಿಳಿಯುವ ಪರಿಸ್ಥಿತಿ ಬಂದಿರುವುದು ದುರದೃಷ್ಟಕರವಾಗಿದೆ ಎಂದರು.

ಎಸ್‌. ದತ್ತಾತ್ರಿ ಮಾತನಾಡಿ, ಇದೊಂದು ಭ್ರಷ್ಟಸರ್ಕಾರವಾಗಿದೆ. ಗ್ಯಾರಂಟಿ ಹೆಸರಿನಲ್ಲಿ ಜನತೆಗೆ ಮಂಕುಬೂದಿ ಎರಚುತ್ತಿದೆ ಎಂದು ಟೀಕಿಸಿದರು.

ಶಾಸಕ ಡಿ.ಎಸ್‌. ಅರುಣ್‌ ಮಾತನಾಡಿ, ಕೂಡಲೇ ಏರಿಸಿದ ವಿದ್ಯುತ್‌ ದರವನ್ನು ಇಳಿಸಬೇಕು.ವಿದ್ಯುತ್‌ ಕಂಪನಿಗಳಿಗೆ ಸರ್ಕಾರ ಮಣೆ ಹಾಕಬಾರದು. ಅಲ್ಲದೇ, ಬಿಜೆಪಿ ಸರ್ಕಾರದಲ್ಲಿ ಜಾರಿಗೆ ತಂದ ಕಾಯಿದೆಗಳನ್ನು ವಾಪಾಸ್‌ ತೆಗೆದುಕೊಳ್ಳುವುದು ಕೂಡ ಸರಿಯಲ್ಲ ಎಂದರು.

ಕಾಂಗ್ರೆಸ್‌ ಗ್ಯಾರಂಟಿಗೆ ಚಾಲನೆ ಕೊಟ್ಟ ಬಿಜೆಪಿ ಶಾಸಕ: ಉಚಿತ ಬಸ್‌ ಟಿಕೆಟ್ ವಿತರಣೆ

ಪ್ರತಿಭಟನೆಯಲ್ಲಿ ಮೇಯರ್‌ ಶಿವಕುಮಾರ್‌, ಉಪಮೇಯರ್‌ ಲಕ್ಷಿ ್ಮೕ ಶಂಕರ ನಾಯಕ್‌, ಪಾಲಿಕೆ ಸದಸ್ಯರಾದ ಇ.ವಿಶ್ವಾಸ್‌, ಅನಿತಾ ರವಿಶಂಕರ್‌, ಸುರೇಖಾ ಮುರಳೀಧರ್‌, ಮಂಜುನಾಥ್‌, ಸುನೀತಾ ಅಣ್ಣಪ್ಪ, ವಿಶ್ವನಾಥ್‌, ಬಿಜೆಪಿ ನಗರಾಧ್ಯಕ್ಷ ಜಗದೀಶ್‌, ಪ್ರಮುಖರಾದ ಬಳ್ಳೇಕೆರೆ ಸಂತೋಷ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

click me!