
- ಮೈಸೂರು (ಮಾ.14): ‘ನನ್ನ ಕೊನೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ. ಜನರ ಸೇವೆ ಮಾಡುತ್ತೇನೆ. ಕಳೆದ 4-5 ದಶಕಗಳ ನನ್ನ ರಾಜಕೀಯ ಬದುಕಿನಲ್ಲಿ ನಾನು ಸಾಕಷ್ಟು ಸೋಲು-ಗೆಲುವು ಕಂಡಿದ್ದೇನೆ. ಸೋತಾಗಲೂ ಜನಸೇವೆ ಬಿಟ್ಟಿಲ್ಲ, ಎಂದೆಂದಿಗೂ ಜನಸೇವೆ ಮರೆಯಲಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕ ನುಡಿಗಳನ್ನಾಡಿದ್ದಾರೆ.
‘ನನಗೆ ವರುಣ ಕ್ಷೇತ್ರಕ್ಕೆ ಹೆಚ್ಚು ಬರಲು ಆಗುತ್ತಿಲ್ಲ, ಆದರೆ, ಮಗ ಯತೀಂದ್ರ ಬರುತ್ತಾರೆ. ನನ್ನನ್ನು ಬೆಳೆಸಿದಂತೆ ಯತೀಂದ್ರರನ್ನೂ ರಾಜಕೀಯವಾಗಿ ಬೆಳೆಸಿ’ ಎಂದು ವರುಣ ಕ್ಷೇತ್ರದ ಜನರಿಗೆ ಮನವಿ ಮಾಡಿದ್ದಾರೆ.
ಮೈಸೂರು ತಾಲೂಕು ವರುಣ ವಿಧಾನಸಭಾ ಕ್ಷೇತ್ರದ ವರಕೋಡು ಬೀರೇಶ್ವರ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘1978ರಲ್ಲಿ ಈ ಪ್ರದೇಶದಿಂದಲೇ ನನ್ನ ರಾಜಕೀಯ ಜೀವನ ಆರಂಭವಾಯಿತು. ಇಲ್ಲಿ ನನಗೆ ಅಪಾರ ಜನಬೆಂಬಲ ಸಿಕ್ಕಿದೆ. ಅಲ್ಲಿಂದ ಇಲ್ಲಿಯವರೆಗೆ ಚಾಮುಂಡೇಶ್ವರಿ ಮತ್ತು ವರುಣ ಕ್ಷೇತ್ರದ ಜನ ನನ್ನನ್ನು ಸದಾ ಬೆಂಬಲಿಸುತ್ತಲೇ ಬಂದಿದ್ದಾರೆ. ಇಲ್ಲಿನ ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ, 17 ಬಾರಿ ಬಜೆಟ್ಗಳನ್ನು ಮಂಡಿಸುವ ಅವಕಾಶ ದೊರೆತಿದೆ. 13 ಬಾರಿ ಚುನಾವಣೆಗಳನ್ನು ಎದುರಿಸಿದ್ದು, 4 ಬಾರಿ ಸೋತ ಸಂದರ್ಭದಲ್ಲೂ ಈ ಭಾಗದ ಜನ ನನ್ನನ್ನೇ ಬೆಂಬಲಿಸಿದ್ದಾರೆ. ನನ್ನ ರಾಜಕೀಯ ಬದುಕಿಗೆ ಇಲ್ಲಿನ ಜನರ ಕೊಡುಗೆ ಅನನ್ಯ’ ಎಂದರು.
‘ನನ್ನ ಗುರುಗಳ ಮಾರ್ಗದರ್ಶನದಿಂದ ಶಿಕ್ಷಣ ಪಡೆದು, ವಕೀಲನಾಗಿ, ರಾಜಕಾರಣಿಯಾಗಿ ಜನರ ಸೇವೆ ಮಾಡುವ ಅವಕಾಶ ದೊರೆತಿದೆ. ರಾಜ್ಯದ ವಿವಿಧ ಜಾತಿ, ಧರ್ಮ, ವರ್ಗಗಳ ಬಡಜನರಿಗೆ ಅನೇಕ ಭಾಗ್ಯಗಳು ಹಾಗೂ ಗ್ಯಾರಂಟಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದೇನೆ. ಕಳೆದ 4-5 ದಶಕಗಳ ನನ್ನ ರಾಜಕೀಯ ಬದುಕಿನಲ್ಲಿ ಅನೇಕ ಸೋಲು-ಗೆಲುವುಗಳನ್ನು ಕಂಡಿದ್ದರೂ, ಜನಸೇವೆಯನ್ನು ಮರೆತಿಲ್ಲ. ಮುಂದೆಯೂ ಮರೆಯುವುದಿಲ್ಲ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.