
ಶಿರಾಳಕೊಪ್ಪ (ಮಾ.20): ಶಿಕಾರಿಪುರ ತಾಲೂಕಿನ ಜನರ ಆಶೀರ್ವಾದದಿಂದ 4 ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಜನರ ಋುಣವನ್ನು ಕೊನೆ ಉಸಿರಿರುವ ತನಕ ಸೇವೆ ಮಾಡಿ ತೀರಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಶಿರಾಳಕೊಪ್ಪ ಪಟ್ಟಣಕ್ಕೆ ಭಾನುವಾರ ಮಧ್ಯಾಹ್ನ ಆಗಮಿಸಿದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಈವರೆಗೆ ಯಾವ ರೀತಿ ನನ್ನನ್ನು ಬೆಂಬಲಿಸಿದ್ದೀರೋ ಅದೇ ರೀತಿ ಮುಂದೆಯೂ ಬೆಂಬಲಿಸಿ, ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡುವಂತೆ ವಿನಂತಿಸಿದರು.
ಬಿಜೆಪಿ ನಾಯಕ ಈಶ್ವರಪ್ಪ ಮಾತನಾಡಿ, ವಿಜಯಸಂಕಲ್ಪ ಯಾತ್ರೆ ಮಾಡಿ ಎಂದರೆ ತಾವೆಲ್ಲರೂ ಇಲ್ಲಿ ವಿಜಯೋತ್ಸವ ಮಾಡುತ್ತಿದ್ದೀರಿ. ಶಿಕಾರಿಪುರ ತಾಲೂಕು ಯಡಿಯೂರಪ್ಪ ಅವರ ಮುಖಾಂತರ ರಾಜ್ಯಕ್ಕೆ ಚಿರಪರಿಚಯವಾಗಿದೆ. ಮುಂಬರುವ ಚುನಾವಣೆಯಲ್ಲಿ 224 ಕ್ಷೇತ್ರಗಳ ಚುನಾವಣೆ ಫಲಿತಾಂಶ ಬಂದಾಗ ಶಿಕಾರಿಪುರ ತಾಲೂಕಿನಲ್ಲಿ ಅತಿ ಹೆಚ್ಚು ಮತಗಳನ್ನು ಕೊಡುವ ಮುಖಾಂತರ ಗೆಲ್ಲಿಸಬೇಕು ಎಂದು ಹೇಳಿದರು. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ಯಾತ್ರೆ ನಡೆಯುತ್ತಿದೆ.
ನಾನು ನಿಮಿತ್ತ ಮಾತ್ರ, ಎಲ್ಲವೂ ಯಡಿಯೂರಪ್ಪನವರೇ: ಸಿಎಂ ಬೊಮ್ಮಾಯಿ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಅಧಿಕಾರಕ್ಕೆ ಬರುವ ಮುಖಾಂತರ ಲೋಕಸಭೆಯಲ್ಲೂ ಎಲ್ಲ 25 ಕ್ಷೇತ್ರಗಳನ್ನು ಗೆಲ್ಲುವ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದರು. ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಕೊಟ್ಟಂತಹ ಜನಪರ ಯೋಜನೆಗಳನ್ನು ಪ್ರತಿಯೊಂದು ಮನೆಮನೆಗೆ ಮುಟ್ಟಿಸಬೇಕಾಗಿದೆ. ಆ ಮುಖಾಂತರ ಮುಂಬರುವ ಚುನಾವಣೆಯಲ್ಲಿ ಈ ಹಿಂದಿಗಿಂತ ಹೆಚ್ಚಿನ ಬಹುಮತಗಳಿಂದ ಚುನಾವಣೆಯಲ್ಲಿ ಗೆಲ್ಲಿಸಿ, ಇನ್ನೂ ಹೆಚ್ಚಿನ ಸೇವೆ ಮಾಡುವಂತೆ ನಿಮ್ಮ ಆಶೀರ್ವಾದ ಸದಾ ಇರಲಿ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ ಮಾತನಾಡಿದರು. ಪ್ರಾರಂಭದಲ್ಲಿ ಸೊರಬ ರಸ್ತೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ನಾಯಕರನ್ನು ಡೊಳ್ಳು, ಝಾಂಜ್ ಮತ್ತು ಇತರ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿ, ಬಸ್ ನಿಲ್ದಾಣ ವೃತ್ತದಲ್ಲಿ ಹೂವಿನ ಮಳೆಗರೆದು ಭಾರಿ ಘೋಷಣೆ ಕೂಗುತ್ತ ಸ್ವಾಗತಿಸಿದರು. ಸಭೆಯಲ್ಲಿ ಸಂಕಲ್ಪ ಯಾತ್ರೆ ಮುಖ್ಯಸ್ಥ ಮೈಸೂರು ರಾಜಣ್ಣ, ಕೆ.ರೇವಣಪ್ಪ, ಹನುಮಂತಪ್ಪ, ರಾಜು ತಲ್ಲೂರು, ದತ್ತಾತ್ರಿ, ತಾಲೂಕು ಅಧ್ಯಕ್ಷ ವೀರೇಂದ್ರ ಪಾಟೀಲ್, ಮಂಚಿ ಶಿವಣ್ಣ ತಲ್ಲೂರು ರಾಜು ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.
20 ಹೊಸ ಬಸ್ಗಳ ಸಂಚಾರ: ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗುವ ರೀತಿಯಲ್ಲಿ ಸುಸಜ್ಜಿತ ಕೆಎಸ್ಆರ್ಟಿಸಿ ನೂತನ ಬಸ್ ನಿಲ್ದಾಣ ಶಿಕಾರಿಪುರ ತಾಲೂಕು ಕೇಂದ್ರದಲ್ಲಿ ನಿರ್ಮಾಣವಾಗಿದೆ. ಈ ಸರ್ಕಾರಿ ಸೇವೆ ಉಪಯೋಗ ಎಲ್ಲರಿಗೂ ದೊರೆಯಬೇಕು ಎಂದು ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿದ ಅವರು, ಅಂದಾಜು .4.7 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಬಸ್ ನಿಲ್ದಾಣದಲ್ಲಿ ಈ ಕೂಡಲೇ 20 ಹೊಸ ಬಸ್ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದರು.
ಬಿಎಸ್ವೈ ನಮಗೂ ನಾಯಕರು: ವಿಜಯೇಂದ್ರಗೆ ಸಚಿವ ಸೋಮಣ್ಣ ಚಾಟಿ
ನೂತನ ಬಸ್ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ನಾಮಕರಣಗೊಳಿಸಲಾಗಿದೆ. ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗುವ ರೀತಿಯಲ್ಲಿರುವ ಸುಸಜ್ಜಿತ ಬಸ್ ನಿಲ್ದಾಣ ಸಹಿತ ಸರ್ಕಾರದ ಸಂಚಾರಿ ವ್ಯವಸ್ಥೆ ಸದುಪಯೋಗ ಎಲ್ಲರಿಗೂ ದೊರೆಯಬೇಕು ಎಂದು ತಿಳಿಸಿದರು. ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ನೂತನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದಾಗಿ 20ಕ್ಕೂ ಅಧಿಕ ಹೊಸ ಬಸ್ಗಳ ಸಂಚಾರ ಆರಂಭವಾಗಲಿದೆ. ಇದರಿಂದ ಗ್ರಾಮೀಣ ಜನತೆಯ ಹಲವು ದಿನದ ಬೇಡಿಕೆ ಪೂರೈಸಲಾಗುತ್ತದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.