
ಜೈಪುರ(ಅ.19) ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸುತ್ತಿದೆ. ಇದರ ನಡುವೆ ಎರಡು ಬಣಗಳು ಒಗ್ಗಟ್ಟಿನ ಪ್ರದರ್ಶನ ನೀಡಲು ಹೈಕಮಾಂಡ್ ಖಡಕ್ ಸೂಚನೆ ನೀಡಿದೆ. ಕಾಂಗ್ರೆಸ್ ಬಣಗಳ ಬಂಡಾಯ ಬಿಜೆಪಿಗೆ ನೆರವಾಗುವ ಸಾಧ್ಯತೆ ಅರಿತಿರುವ ಕಾಂಗ್ರೆಸ್ ಈ ಪ್ಲಾನ್ ಮಾಡಿದೆ. ಆದರೆ ಸಿಎಂ ಅಶೋಕ್ ಗೆಹ್ಲೋಟ್ ಇದೀಗ ಹೊಸ ರೀತಿಯಲ್ಲಿ ಸಚಿನ್ ಪೈಲೆಟ್ ಬಣಕ್ಕೆ ಟಾಂಗ್ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ನಾನು ಸಿದ್ದನಿದ್ದೇನೆ. ಆದರೆ ಏನು ಮಾಡಲಿ, ಸಿಎಂ ಕುರ್ಚಿ ನನ್ನನ್ನು ಸ್ಥಾನ ತ್ಯಜಿಸಲು ಬಿಡುತ್ತಿಲ್ಲ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದ ವೇಳೆ ಅಶೋಕ್ ಗೆಹ್ಲೋಟ್ ಈ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್ನಲ್ಲಿ ತಳಮಳ ಸೃಷ್ಟಿಸಿದ್ದರೆ, ಇದೇ ಹೇಳಿಕೆ ಚುನಾವಣೆ ಸಮೀಪದಲ್ಲೇ ಭಾರಿ ಟ್ರೋಲ್ ಆಗುತ್ತಿದೆ. ನನಗೆ ಮಹಿಳೆಯೊಬ್ಬರು ಇತ್ತೀಚೆಗೆ ನೀವು 4ನೇ ಬಾರಿಗೆ ರಾಜಸ್ಥಾನ ಮುಖ್ಯಮಂತ್ರಿ ಆಗಬೇಕು ಎಂದು ಆಗ್ರಹಿಸಿದ್ದರು. ನಾನು ಮುಖ್ಯಮಂತ್ರಿ ಸ್ಥಾನವನ್ನೇ ತ್ಯಜಿಸಲು ಸಿದ್ಧನಿದ್ದೇನೆ. ಆದರೆ ಈ ಸ್ಥಾನ ನನ್ನನ್ನು ಸಿಎಂ ಹುದ್ದೆ ತ್ಯಜಿಸಲು ಬಿಡುತ್ತಿಲ್ಲ ಎಂದು ಮಹಿಳೆಗೆ ಉತ್ತರಿಸಿದ್ದೆ ಎಂದರು.
ನೆರವು ಕೇಳಿದ ರೈತನ ಕಾಲಿನಿಂದ ಒದ್ದ ಕಾಂಗ್ರೆಸ್ ಶಾಸಕ, ವೈರಲ್ ವಿಡಿಯೋ ತಂದ ಸಂಕಷ್ಟ!
ಒಂದೇ ಉತ್ತರದ ಮೂಲಕ ಅಶೋಕ್ ಗೆಹ್ಲೋಟ್ ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ ತಾನೇ ಮುಖ್ಯಮಂತ್ರಿ ಅನ್ನೋ ಸ್ಪಷ್ಟ ಸೂಚನೆಯನ್ನು ಸಚಿನ್ ಪೈಲೆಟ್ ಬಣಕ್ಕೆ ನೀಡಿದೆ. ಇಷ್ಟೇ ಅಲ್ಲ ಕಾಂಗ್ರೆಸ್ ಪಾಲಿಗೆ ತಾನೇ ಮುಖ್ಯಮಂತ್ರಿ ಆಯ್ಕೆ. ಇಲ್ಲಿ ಯಾವುದೇ ಗೊಂದಲವಿಲ್ಲ, ಎರಡನೇ ಆಯ್ಕೆಯೂ ಇಲ್ಲ ಎಂಬುದನ್ನು ಅಶೋಕ್ ಗೆಹ್ಲೋಟ್ ಸ್ಪಷ್ಟಪಡಿಸಿದ್ದಾರೆ.
ಇತ್ತ ಬಿಜೆಪಿಯಲ್ಲೂ ಕೆಲ ಹೇಳಿಕೆ ಪಕ್ಷದೊಳಗೆ ಬಣಗಳನ್ನು ಸೃಷ್ಟಿಸಿದೆ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ರಾಜ್ಯದಲ್ಲಿ ಹೊಸ ನಾಯಕತ್ವಕ್ಕೆ ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರೆ ಎಂದು ಸಂಸದ ಹಾಗೂ ವಿಧಾನಸಭಾ ಅಭ್ಯರ್ಥಿ ರಾಜ್ಯವರ್ಧನ್ ಸಿಂಗ್ ರಾಠೋಡ್ ಹೇಳಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನವನ್ನು ಸೃಷ್ಟಿ ಮಾಡಿದೆ.
ಪಂಚರಾಜ್ಯ ಚುನಾವಣೆ: ಮಧ್ಯ ಪ್ರದೇಶ, ಛತ್ತೀಸ್ಗಢ ಕೈ ಪಾಲು, ರಾಜಸ್ಥಾನ ಬಿಜೆಪಿಗೆ: ಸಮೀಕ್ಷೆ
ರಾಜಸ್ಥಾನ ಚುನಾವಣೆ ನವೆಂಬರ್ 25 ರಂದು ನಡೆಯಲಿದೆ. ಮೊದಲು ನವೆಂಬರ್ 23ಕ್ಕೆ ನಿಗದಿಪಡಿಸಲಾಗಿತ್ತು. ನ.23ರಂದು 1 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮದುವೆಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳು ಇರುವುದರಿಂದ ಇದು ಚುನಾವಣೆ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಹೆಚ್ಚಿನ ಸಂಖ್ಯೆಯ ಜನ ಚುನಾವಣೆಯಲ್ಲಿ ಭಾಗವಹಿಸದೇ ಇರಬಹುದು ಎಂದು ರಾಜಕೀಯ ಪಕ್ಷಗಳು ಮನವಿ ಮಾಡಿದ ಕಾರಣ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.