ನನಗೆ ಸಿಕ್ಕ ಖಾತೆಯಲ್ಲಿ ಬಡವರ ಸೇವೆಗೆ ಅವಕಾಶವಿದೆ: ಸಚಿವ ಜಮೀರ್‌ ಅಹಮದ್‌

By Kannadaprabha NewsFirst Published Jun 1, 2023, 2:00 AM IST
Highlights

ಮುಖ್ಯಮಂತ್ರಿ ನನಗೆ ನೀಡಿರುವ ಖಾತೆಯಲ್ಲಿ ಬಡವರ ಸೇವೆ ಮಾಡಲು ಅವಕಾಶ ಇದೆ. ಹಾಗಾಗಿ ಈ ಖಾತೆ ಸಿಕ್ಕಿರುವುದು ನನಗೆ ಖುಷಿ ತಂದಿದೆ ಎಂದು ನೂತನ ವಸತಿ ಹಾಗೂ ವಕ್ಫ್ ಖಾತೆ ಸಚಿವ ಜಮೀರ್‌ ಅಹಮದ್‌ ಖಾನ್‌ ತಿಳಿಸಿದರು. 

ತುಮಕೂರು (ಜೂ.01): ಮುಖ್ಯಮಂತ್ರಿ ನನಗೆ ನೀಡಿರುವ ಖಾತೆಯಲ್ಲಿ ಬಡವರ ಸೇವೆ ಮಾಡಲು ಅವಕಾಶ ಇದೆ. ಹಾಗಾಗಿ ಈ ಖಾತೆ ಸಿಕ್ಕಿರುವುದು ನನಗೆ ಖುಷಿ ತಂದಿದೆ ಎಂದು ನೂತನ ವಸತಿ ಹಾಗೂ ವಕ್ಫ್ ಖಾತೆ ಸಚಿವ ಜಮೀರ್‌ ಅಹಮದ್‌ ಖಾನ್‌ ತಿಳಿಸಿದರು. ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು, ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನೀಡಿರುವ ಖಾತೆಯಲ್ಲಿ ಕೆಲಸ ಮಾಡಲು ತೃಪ್ತಿ ಇದೆ. ರಾಜ್ಯದ ಬಡವರ ಸೇವೆಗೆ ಇದೊಂದು ಸುವರ್ಣಾವಕಾಶವನ್ನು ಮುಖ್ಯಮಂತ್ರಿಗಳು ಕಲ್ಪಿಸಿಕೊಟ್ಟಿದ್ದಾರೆ ಎಂದರು.

ನಮ್ಮ ಪಕ್ಷ ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಈಗಾಗಲೇ ಮೊದಲ ಸಚಿವ ಸಂಪುಟದಲ್ಲೇ ಈ ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿದ್ದೇವೆ. ಆದಷ್ಟುಬೇಗ ಮುಖ್ಯಮಂತ್ರಿಗಳು ಈ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಸಿದ್ಧಗಂಗಾ ಮಠಕ್ಕೆ ನಾನು ಹೊಸದಾಗಿ ಬಂದಿಲ್ಲ. ಈ ಹಿಂದೆ ಮಂತ್ರಿಯಾಗಿದ್ದಾಗಲೂ ಬಂದಿದ್ದೆನು, ಈಗಲೂ ಮಂತ್ರಿಯಾಗಿದ್ದೇನೆ. ಹಾಗಾಗಿ ಶ್ರೀ ಮಠಕ್ಕೆ ಬಂದಿದ್ದು, ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಸಿದ್ಧಗಂಗಾ ಮಠದಲ್ಲಿ 10 ಸಾವಿರ ಮಕ್ಕಳಿಗೆ ಮಾತ್ರ ವಾಸ್ತವ್ಯಕ್ಕೆ ವ್ಯವಸ್ಥೆ ಇದೆ. ಹಾಗಾಗಿ ಶ್ರೀಗಳು ಕಟ್ಟಡ ವ್ಯವಸ್ಥೆ ಇಲ್ಲದ ಕಾರಣ ಈ ಬಾರಿ 10 ಸಾವಿರ ಮಕ್ಕಳಿಂದ ಅರ್ಜಿ ಸ್ವೀಕರಿಸಲು ಮಾತ್ರ ತೀರ್ಮಾನ ಮಾಡಿದ್ದಾರೆ. ಹಾಗಾಗಿ ಈ ಬಾರಿ ಮಠಕ್ಕೆ ಮಕ್ಕಳನ್ನು ದಾಖಲಿಸಲು ಬೇಡಿಕೆ ಜಾಸ್ತಿಯಾಗಿದೆ. ನಾನು ಸಹ ಶ್ರೀಗಳಿಗೆ ಮುಂದಿನ ವರ್ಷ ಮತ್ತಷ್ಟುಸಂಖ್ಯೆಯಲ್ಲಿ ಮಕ್ಕಳನ್ನು ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದೇನೆ ಎಂದರು.

ಯಾವುದೇ ಅನುಮಾನ ಬೇಡ, ಗ್ಯಾರಂಟಿ ಅನುಷ್ಠಾನ ಖಚಿತ: ಡಾ.ಜಿ.ಪರಮೇಶ್ವರ್‌

ಸಿದ್ಧಗಂಗಾ ಮಠದಲ್ಲಿ ಹಾಸ್ಟೆಲ್‌ ಕಟ್ಟಡ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ 10 ಕೋಟಿ ರು. ಹಣ ಬಿಡುಗಡೆ ಮಾಡಿತ್ತು. ಈ ಆದೇಶವನ್ನು ಕಾಂಗ್ರೆಸ್‌ ಸರ್ಕಾರ ತಡೆ ಹಿಡಿದಿದೆಯಲ್ಲ ಎಂಬ ಪ್ರಶ್ನೆಗೆ ಈ ಬಗ್ಗೆ ನನ್ನ ಜತೆ ಶ್ರೀಗಳು ಚರ್ಚಿಸಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಅಗತ್ಯ ಕಟ್ಟಡ ವ್ಯವಸ್ಥೆಗೆ ಸಹಕಾರ ನೀಡುವುದಾಗಿ ಅವರು ತಿಳಿಸಿದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಾವೀದ್‌ ಕರಂಗಿ, ಎಇಇ ಮಹಲಿಂಗಪ್ಪ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಅಲೀಮ್‌ ಮತ್ತಿತರರು ಉಪಸ್ಥಿತರಿದ್ದರು.

ಶಾಸಕ ಜಮೀರರು ಕನ್ನಡಿಗರ ಕ್ಷಮೆ ಕೇಳಲಿ: ಚಾಮರಾಜಪೇಟೆ ಕ್ಷೇತ್ರ ಶಾಸಕರಾದ ಜಮೀರ್‌ ಅಹಮದ್‌ ಅವರು ಇಂಗ್ಲಿಷ್‌ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿರುವುದು ನಿಜಕ್ಕೂ ಖಂಡನೀಯ ಎಂದು ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್‌ ಟೀಕಿ​ಸಿ​ದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕನ್ನಡಿಗರಿಂದ ಆಯ್ಕೆಯಾದ ಶಾಸಕ ಜಮೀರ್‌ ಅಹಮದ್‌ ಖಾನ್‌ ಅವರು ಕನ್ನಡ ಭಾಷೆಗೆ ಆದ್ಯತೆಯನ್ನು ನೀಡಿ ಪ್ರಮಾಣ ವಚನ ಸ್ವೀಕಾರ ಮಾಡಬೇಕಾಗಿತ್ತು. ಆದರೆ ನನಗೆ ಕನ್ನಡ ಬರೋದಿಲ್ಲ. ಆದ್ದರಿಂದ ಇಂಗ್ಲಿಷ್‌ ಭಾಷೆಯಲ್ಲಿ ಪ್ರಮಾಣ ವಚನ ಮಾಡಿದ್ದೇನೆ ಎಂದು ಹೇಳಿರುವುದು ಕನ್ನಡ ದ್ರೋಹಿಯ ಕೆಲಸವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿ: ಸಚಿವ ಜಮೀರ್‌ ಅಹಮ್ಮದ್‌

ಇಂತಹ ಶಾಸಕರಿಂದ ಕನ್ನಡ ನಾಡಿಗೆ ಭಾಷೆ, ಸಂಸ್ಕೃತಿಗೆ ಯಾವ ಗೌರವ ಸಿಗುತ್ತೆ ಮಾತನಾಡಿದರೆ ನಾನು ಕನ್ನಡಿಗ ಕನ್ನಡ ಭಾಷೆಗೆ ಆದ್ಯತೆ ಅಂತ ಹೇಳುವ ಇಂತಹ ಕನ್ನಡ ದ್ರೋಹಿ ಕರ್ನಾಟಕದಲ್ಲಿ ಶಾಸಕರಾಗುವುದಕ್ಕೆ ಯೋಗ್ಯತೆ ಇಲ್ಲ. ಇವರ ಮಾತೃಭಾಷೆ ಉರ್ದು ಆದ್ದರಿಂದ ಕನ್ನಡ ಸರಿಯಾಗಿ ಬರುವುದಿಲ್ಲ ಎಂದು ಹೇಳುವ ಇವರು ಬೇರೆ ವಿಷಯದಲ್ಲಿ ಅವಾ​ಚ್ಯ​ವಾಗಿ ಕನ್ನಡದಲ್ಲಿ ನಿಂದಿ​ಸಲು ಬರು​ತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂತಹ ಶಾಸಕನನ್ನ ಕರೆದು ಕನ್ನಡ ಭಾಷೆಗೆ ಸಂಸ್ಕೃತಿಗೆ ಗೌರವ ಕೊಡುವಂತೆ ಸೂಚಿಸುವಂತೆ ಮನವಿ ಮಾಡಿದರು. ಶಾಸಕ ಜಮೀರ್‌ ಅಹ​ಮದ್‌ ಅವರು ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು. ಮುಂದಿನ ದಿನಗಳಲ್ಲಿ ಕನ್ನಡ ಭಾಷೆ ಯಲ್ಲಿ ಮಾತನಾಡುವುದರ ಜೊತೆಗೆ ಕನ್ನಡದಲ್ಲೇ ಬರೆಯಬೇಕು. ಇಲ್ಲದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಯಲ್ಲಿರಬೇಕು ಎಂದು ಒತ್ತಾಯಿಸಿದ್ದಾರೆ.

click me!