ಅಭಿವೃದ್ಧಿ ಮಾಡುವ ಹುಚ್ಚು ನನ್ನನ್ನು ರಾಜಕೀಯಕ್ಕೆ ಕರೆತಂದಿದೆ; ಬಸವರಾಜ ರಾಯರೆಡ್ಡಿ

By Kannadaprabha NewsFirst Published Oct 9, 2022, 1:23 PM IST
Highlights

ನಾನು ಅಧಿಕಾರಕ್ಕಾಗಿ ರಾಜಕಾರಕ್ಕೆ ಬಂದಿಲ್ಲ ಆದರೆ, ಅಭಿವೃದ್ಧಿ ಹುಚ್ಚಿನಿಂದ ರಾಜಕಾರಕ್ಕೆ ಬಂದಿದ್ದೇನೆ. ಇದು ಕ್ಷೇತ್ರದ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ತಾಲೂಕಿನ ತಲ್ಲೂರÜ ಗ್ರಾಮದ ಕೆರೆಗೆ ಶನಿವಾರ ಬ್ಲಾಕ್‌ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಗಂಗಾಮಾತೆಗೆ ಪೂಜೆ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದÜರು.

ಮಾಜಿ ಸಚಿವ ಬಸವರಾಜ ರಾಯರಡ್ಡಿ ಸ್ಪಷ್ಟನೆ

ಕುಕನೂರು (ಅ.9) : ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ 2013ರಲ್ಲಿ ಅವರನ್ನು ಕರೆಯಿಸಿ ಚುನಾವಣೆಗೋಸ್ಕರ ಕೃಷ್ಣಾ ಬಿ ಸ್ಕೀಂ ನೀರಾವರಿ ಯೋಜನೆಗೆ ಭೂಮಿಪೂಜೆ ಮಾಡಿಸಿ ಅಡಿಗಲ್ಲು ಹಾಕಿಸಿದ್ದರು. ಯೋಜನೆ ಸ್ಥಿತಿ ತಿಳಿಯದೇ, ನೀರಾವರಿ ಬಗ್ಗೆ ಅರಿಯದೇ ಅಡಿಗಲ್ಲು ಹಾಕಿದ್ದೇವೆ ಅಂದಿದ್ದಕ್ಕೆ ಅದು ಅಡಿಗಲ್ಲು ಅಲ್ಲಾ ಅಡ್ಡಗಲ್ಲು ಎಂದು ಹೇಳಿದ್ದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಸಮರ್ಥಿಸಿಕೊಂಡರು. ತಾಲೂಕಿನ ಬೆಣಕಲ್ಲ ಕೆರೆಗೆ ಶನಿವಾರ ಗಂಗಾ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಇದು ಸಿದ್ದರಾಮೋತ್ಸವ ಅಲ್ಲ, ಸಿದ್ದು ಜನ್ಮದಿನದ ಅಮೃತ ಮಹೋತ್ಸವ: ಬಸವರಾಜ ರಾಯರೆಡ್ಡಿ

ನೀರಾವರಿ ಅಂದರೆ ಏನು ಎಂದು ಹಾಗೂ 1 ಟಿಎಂಸಿ ಗೊತ್ತಿಲ್ಲದವರು ನೀರಾವರಿ ಮಾಡುತ್ತೇನೆ ಅನ್ನುತ್ತಿದ್ದಾರೆ. ಯೋಜನೆಯ ಕೃಷ್ಣಾ ಬಿ ಸ್ಕೀಂಗೆ ಸುಪ್ರೀಂ ಕೋರ್ಟಿನಲ್ಲಿ ತಡೆಯಾಜ್ಞೆ ಇರುವುದರಿಂದ ನೀರಾವರಿ ಬದಲಾಗಿ ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸಲು ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಮುಂದಿನ ಸಮ್ಮಿಶ್ರ ಸರ್ಕಾರದಲ್ಲಿ ಅನುದಾನ ನೀಡಲಾಯಿತು ಎಂದರು.

ಯೋಜನೆಗೆ ತಡೆಯಾಜ್ಞೆ ಇರುವುದರಿಂದ ನೀರನ್ನು ನೀರಾವರಿಗಾಗಿ ಉಪಯೋಗಿಸಲು ಸಾಧ್ಯವಿಲ್ಲ. ಯೋಜನೆಗೆ ಹಣ ಮೀಸಲಿಟ್ಟು ಘೋಷಣೆ ಮಾಡಿರುವುದರಿಂದ ಅದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕೆರೆ ತುಂಬಿಸಲು ಸದುಪಯೋಗ ಆಗುವಂತೆ ಮಾಡಿದರು. ಆದರೆ, ಅದೆಲ್ಲವನ್ನು ಅರಿಯದೆ ಕೆಲವರು ನೀರಾವರಿ ಎಂದು ಹೇಳುತ್ತ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ರಾಯರಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ಕೃಷ್ಣಾ ಬೀ ಸ್ಕೀಂನಲ್ಲಿ 130 ಟಿಎಂಸಿ ನೀರು ಮಾತ್ರ ಬಳಕೆಗೆ ಅವಕಾಶ ಇದ್ದು, ಕೊಪ್ಪಳ ಜಿಲ್ಲೆಗೆ ಬರೀ 2 ಟಿಎಂಸಿ ನೀಡುತ್ತಾರೆ. 2011ರಲ್ಲಿ ಕೋರ್ಚ್‌ ಸಹ ಕೃಷ್ಣಾ ಬಿ ಸ್ಕೀಂ ಅನುಷ್ಠಾನ ಆಗಬೇಕಾದರೆ ಆಲಮಟ್ಟಿಡ್ಯಾಂನ್ನು ಇನ್ನೂ 5 ಅಡಿ ಎತ್ತರಕ್ಕೇರಿಸಬೇಕು ಎಂದು ಹೇಳಿದೆ. ಆದರೆ, ಇವೆಲ್ಲ ಸರಳ ಕಾರ್ಯಗಳಲ್ಲ. ಇದನ್ನು ಅರಿಯದೆ ಬೇವೂರಿನಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರನ್ನು ಕರೆಯಿಸಿ ಕೃಷ್ಣಾ ಬೀ ಸ್ಕೀಂಗೆ ಅಡಿಗಲ್ಲು ಎಂಬ ಪೂಜೆ ಮಾಡಿಸಿದರು. ಅವರಿಗೆ (ಸಚಿವರಿಗೆ) ನೀರಾವರಿ, ಟಿಎಂಸಿ ಎಂದರೇನು ಎಂಬುವುದೇ ಗೊತ್ತಿಲ್ಲ. ಅಲ್ಲದೆ ಬೇವೂರಿನಲ್ಲಿ ಇದುವರೆಗೂ ನೀರಾವರಿಗೆ ಎಷ್ಟುಭೂಮಿ ಭೂಸ್ವಾಧೀನ ಆಗಿದೆ ಹೇಳಿ, ಅಲ್ಲಿ ಯಾವುದೇ ಕಾರ್ಯವೇ ಇಲ್ಲ. ಹೀಗಾಗಿ, ಈ ಹಿಂದೆಯೂ ನಾನು ಅದು ಅಡಿಗಲ್ಲು ಅಲ್ಲ, ಅಡ್ಡಗಲ್ಲು ಎಂದು ಹೇಳಿದ್ದೆ ಎಂದರು.

ನೀರಾವರಿ ಮಾಡುವುದು ಸುಲಭ ಇದ್ದಿದ್ದರೆ ಎಲ್ಲ ಎಂಎಲ್‌ಎಗಳು ತಮ್ಮ ಜಮೀನನ್ನು ನೀರಾವರಿ ಮಾಡಿಕೊಳ್ಳುತ್ತಿದ್ದರು. ನೀರಾವರಿ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಕೆಲವರು ಕೃಷಿ ಭೂಮಿಯನ್ನು ಇಂಡಸ್ಟ್ರಿಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ನಾನು ಒಬ್ಬ ರೈತ. 3200 ಮಾವಿನ ಗಿಡ, 500 ಚಿಕ್ಕು, ತೆಂಗು ಗಿಡಗಳನ್ನು ಸ್ವತಃ ಬೆಳೆದಿದ್ದೇನೆ ಎಂದರು.

ಯಲಬುರ್ಗಾ ಕ್ಷೇತ್ರದ ದುಸ್ಥಿತಿ ಕಂಡು 1985ರಲ್ಲಿ ನಾನು ರಾಜಕೀಯಕ್ಕೆ ಬಂದೆ. ನೂರು ಹಳ್ಳಿಗೆ ರಸ್ತೆ ಇರಲಿಲ್ಲ. 70 ಹಳ್ಳಿಗೆ ವಿದ್ಯುತ್‌ ಇರಲಿಲ್ಲ. ಶಾಲೆ, ಕಾಲೇಜುಗಳ ಸಂಖ್ಯೆ ವಿರಳ. ಈಗ ಕ್ಷೇತ್ರದಲ್ಲಿ ಯಾವುದಕ್ಕೂ ಕೊರತೆಯಿಲ್ಲ. 1999ರಲ್ಲಿ ದೆಹಲಿಯ ವಿಶೇಷ ಪ್ರತಿನಿಧಿ ಇದ್ದಾಗ ಜೆ.ಎಚ್‌. ಪಟೇಲರು ನಾನು ಕೃಷ್ಣಾ ಬೀ ಸ್ಕೀಂ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೆವು. ಅದರ ಫಲ ಈಗಿನ ಕೆರೆ ತುಂಬಿಸುವ ಯೋಜನೆ ಎಂದರು.

ಯಲಬುರ್ಗಾ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಗ್ರಾಪಂ ಅಧ್ಯಕ್ಷೆ ಅನ್ನಮ್ಮ, ತಾಪಂ ಮಾಜಿ ಸದಸ್ಯ ಗವಿಸಿದ್ದಪ್ಪ ಜಂತ್ಲಿ, ದಾನರೆಡ್ಡಿ, ಗವಿಸಿದ್ದಪ್ಪ, ಸಂತೋಷ ಬೆಣಕಲ್ಲ, ಶರಣಪ್ಪ ಗಾಂಜಿ, ವಕ್ತಾರ ಸಂಗಮೇಶ ಗುತ್ತಿ, ಮಹೇಶ ಗಾವರಾಳ ಹಾಗು ಬೆಣಕಲ್ಲ, ನಿಟ್ಟಾಲಿ ಗ್ರಾಮಸ್ಥರಿದ್ದರು.

500, 1000ಕ್ಕೆ ಆಸೆ ಪಡಬೇಡಿ:

ಐದೂವರೆ ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಈ ಸಲ ಕ್ಷೇತ್ರದ ಜನ ಯಾರೂ 500, 1000ಕ್ಕೆ ಆಸೆ ಪಟ್ಟು, ಅಭಿವೃದ್ಧಿ ಕಾರ್ಯ ಮರೆತು ಬೆರೆಯವರಿಗೆ ಮತ ನೀಡಬೇಡಿ. ಕ್ಷೇತ್ರಕ್ಕೆ ಇನ್ನೂ ಹೆಚ್ಚು ಕಾರ್ಯ ಮಾಡಬೇಕೆಂಬ ಹಂಬಲ ಇದೆ. ಈ ಸಲ ಚುನಾವಣೆಗೆ ಪ್ರತಿಯೊಬ್ಬರು ನೀವೇ ನನಗೆ 100 ನೀಡಬೇಕು. ಅದರಿಂದ ನಾನು ಚುನಾವಣೆ ಮಾಡುತ್ತೇನೆ. ದುಡ್ಡು ಹಂಚುತ್ತ ರಾಜಕೀಯ ಗಲೀಜ್‌ ಆಗಿದೆ. ಯಾರಾದರೂ ದುಡ್ಡು ನೀಡಲು ಬಂದರೆ .5 ಲಕ್ಷ ಕೇಳಿ, ಗಾದೆ ಮಾತಿನಂತೆ ಕುಲಗೆಟ್ಟು ಸುಖಪಡ್ಬೇಕು ಅನ್ನುವ ಹಾಗಾದರೂ ಆಗುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಅಭಿವೃದ್ಧಿ ಹುಚ್ಚು ನನ್ನನ್ನು ರಾಜಕಾರಣಕ್ಕೆ ತಂದಿದೆ

ನಾನು ಅಧಿಕಾರಕ್ಕಾಗಿ ರಾಜಕಾರಕ್ಕೆ ಬಂದಿಲ್ಲ ಆದರೆ, ಅಭಿವೃದ್ಧಿ ಹುಚ್ಚಿನಿಂದ ರಾಜಕಾರಕ್ಕೆ ಬಂದಿದ್ದೇನೆ. ಇದು ಕ್ಷೇತ್ರದ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ತಾಲೂಕಿನ ತಲ್ಲೂರÜ ಗ್ರಾಮದ ಕೆರೆಗೆ ಶನಿವಾರ ಬ್ಲಾಕ್‌ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಗಂಗಾಮಾತೆಗೆ ಪೂಜೆ ಕಾರ್ಯಕ್ರಮದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದÜರು. ಬಿಜೆಪಿಯವರಿಗೆ ಕ್ಷೇತ್ರದ ಅಭಿವೃದ್ಧಿ ಬೇಕಿಲ್ಲ. ಕೇವಲ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುವ ಅವಶ್ಯಕತೆ ನನಗಿಲ್ಲ. ಇವತ್ತು ಅಧಿಕಾರ ಬರಬಹುದು, ಹೋಗಬಹುದು. ಆದರೆ, ನಾವು ಮಾಡಿದ ಅಭಿವೃದ್ಧಿ ಶಾಶ್ವತ ಎನ್ನುವುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಲಿ ಎಂದರು.

ಅಂತರ್‌ರಾಜ್ಯ ಜಲವಿವಾದ ಕೋರ್ಟಿನಲ್ಲಿದ್ದರೂ ಕ್ಷೇತ್ರಕ್ಕೆ ನೀರಾವರಿ ಮಾಡುತ್ತೇವೆ ಎಂದು ಸಚಿವರು ಹೇಳುತ್ತಿರುವುದು ಸರಿಯಲ್ಲ, ಜಲವಿವಾದ ಶಾಶ್ವತವಾಗಿ ಪರಿಹಾರವಾಗಬೇಕಾದರೆ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಬೇಕು. ಇದರಲ್ಲಿ ಪ್ರಧಾನ ಮಂತ್ರಿಗಳ ಮಧ್ಯ ಪ್ರವೇಶವಾಗಬೇಕಾಗಿದೆ. ಇದ್ಯಾವುದನ್ನು ತಿಳಿದುಕೊಳ್ಳದೆ ಕಾನೂನಿನ ಅಂಶಗಳನ್ನು ಅರ್ಥಮಾಡಿಕೊಳ್ಳದೇ ನೀರಾವರಿ ಮಾಡುತ್ತೇನೆ ಎಂದು ಹೇಳುವುದು ಎಷ್ಟುಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್‌ 150 ಸ್ಥಾನಗಳನ್ನು ಗೆದ್ದು ಮತ್ತೆ ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ಎಲ್ಲ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲಿದ್ದಾರೆ. ಆದರೆ, ಬಿಜೆಪಿಯವರಿಂದ ನೀರಾವರಿ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ. ಮತ್ತೆ ಕಾಂಗ್ರೆಸ್‌ ಸರಕಾರದಿಂದಲ್ಲೇ ಆಗುವುದು ನಿಶ್ಚಿತ ಎಂದು ಹೇಳಿದರು.

'ಸಚಿವ ಆಚಾರ್‌ಗೆ ನೀರಾವರಿ ಬಗ್ಗೆ ಎಬಿಸಿಡಿ ಗೊತ್ತಿಲ್ಲ'

ಈ ವೇಳೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಮುಖಂಡರಾದ ರಾಮಣ್ಣ ಸಾಲಭಾವಿ, ಬಂಡಿರಾವ್‌ ದೇಸಾಯಿ, ರೇವಣೆಪ್ಪ, ಓಬಳೆಪ್ಪ ಕುಲಕರ್ಣಿ, ಬಾಳಪ್ಪ ಬಂಡ್ಲಿ, ಸೀನಪ್ಪ ನಾಯಕ, ಡಾ. ಶಿವನಗೌಡ ದಾನರೆಡ್ಡಿ, ಶರಣಪ್ಪ ಗಾಂಜಿ, ಈಶ್ವರ ಅಟಮಾಳಗಿ, ಮಲ್ಲು ಜಕ್ಕಲಿ, ಹಂಪಯ್ಯ ಹಿರೇಮಠ, ಅಲ್ಲಾಸಾಬ ಚಮ್ಮೂರ, ಶರಣಗೌಡ ಪಾಟೀಲ್‌, ಹುಲಗಪ್ಪ ಬಂಡಿವಡ್ಡರ್‌, ಹನುಮಂತಪ್ಪ ಭಜಂತ್ರಿ, ಕಳಕೇಶ ಸೂಡಿ, ಸುರೇಶ ದಾನಕೈ, ಪುನೀತ್‌ ಕೊಪ್ಪಳ ಮತ್ತಿತರರು ಇದ್ದರು.

click me!