
ಮುಂಡಗೋಡ (ಅ.9) : ಸಮಾಜದಲ್ಲಿ ನಡೆಯುವ ವಿದ್ಯಮಾನಗಳು ತಕ್ಷಣದಲ್ಲಿ ಗೊತ್ತಾಗುವ ಕಾಲವಿದು. ಸುಳ್ಳು ಹೇಳಿ ರಾಜಕಾರಣ ಮಾಡಿದರೆ ಯಾರೂ ನಂಬುವುದಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ರೈತರಿಂದ ಸಹಕಾರಿ ಕ್ಷೇತ್ರ ಸದೃಢ; ಸಚಿವ ಶಿವರಾಮ್ ಹೆಬ್ಬಾರ್
ಶನಿವಾರ ಸಂಜೆ ತಾಲೂಕಿನ ಕೋಡಂಬಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಯೋಜನೆಯ ಜಲಜೀವನ್ ಕಾಮಗಾರಿ ಹಾಗೂ ಲೋಕೋಪಯೋಗಿ ಇಲಾಖೆಯ ಪಾಳಾ ಕ್ರಾಸ್-ಕೋಡಂಬಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
25 ವರ್ಷಗಳಿಂದ ಮುಂಡಗೋಡ ಜನತೆಯ ಮುಗ್ಧತೆ ಹಾಗೂ ಬಡತನವನ್ನೇ ಬಂಡವಾಳ ಮಾಡಿಕೊಂಡು ಆಳಿದ ಮಹಾನಾಯಕರು ಕಿಂಚಿತ್ತೂ ಕಾಳಜಿ ತೋರಲಿಲ್ಲ. ಕ್ಷೇತ್ರದ ಜನ ಒಳ್ಳೆಯ ರಸ್ತೆ ಕಾಣಲಿಲ್ಲ. ಕೆರೆ ಹೂಳೆತ್ತಲಿಲ್ಲ. ರೈತರಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಿಲ್ಲ. ಯಾವುದೇ ಕಾರ್ಯಕ್ರಮ ಜಾರಿಗೆ ತರಲಿಲ್ಲ. ಯಾರೂ ಶಾಶ್ವತರಲ್ಲ. ಹುಟ್ಟು ಆಕಸ್ಮಿಕ ಸಾವು ಖಚಿತ, ಇದರ ನಡುವೆ ನಾವು ಮಾಡುವ ಕೆಲಸ ಮಾತ್ರ ಶಾಶ್ವತವಾಗಿರುತ್ತವೆ ಎಂದರು.
ದೇಶಕ್ಕೆ ಅನ್ನ ನೀಡುವ ರೈತರ ಬದುಕಿಗೆ ನಾವು ಏನು ಮಾಡಿದ್ದೇವೆ ಎಂಬುದನ್ನು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕಳೆದ 10 ವರ್ಷಗಳ ಈಚೆಗಿನ ನಮ್ಮ ಅವಧಿಯಲ್ಲಿ .600 ಕೋಟಿ ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ ಕಾಮಗಾರಿ ನಡೆಯುತ್ತಿದೆ. 25 ವರ್ಷ ಜಿಲ್ಲೆಯನ್ನು ಆಳಿದ ಆ ನಾಯಕರು ಕಾಳಜಿ ವಹಿಸಿದ್ದರೆ ಮುಂಡಗೋಡ ಎಂದಿಗೂ ಬರಗಾಲ ಎದುರಿಸಬೇಕಾಗುತ್ತಿರಲಿಲ್ಲ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಎಂಬ ಪುಣ್ಯಾತ್ಮ ತಾಲೂಕಿನಲ್ಲಿ ಜಲಾಶಯಗಳನ್ನು ನಿರ್ಮಾಣ ಮಾಡದಿದ್ದರೆ ಇಲ್ಲಿಯ ರೈತರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿತ್ತು. ರೈತ ಬದುಕಿದರೆ ನಾಡು ಮತ್ತು ದೇಶ ಸದೃಢವಾಗಿರುತ್ತದೆ. ದೇಶದ ಮುಖದಲ್ಲಿ ಮಂದಹಾಸ ನೆಲೆಸಬೇಕು ಎಂದು ಆಶಿಸಿದರು.
ಚುನಾವಣೆ ಬರುತ್ತವೆ ಹೋಗುತ್ತವೆ. ಸೋಲು-ಗೆಲುವು ಮುಖ್ಯವಲ್ಲ. ಜನರಿಗೆ ನೀಡಿದ ಮಾತು ಅವರೊಂದಿಗೆ ನಡೆದುಕೊಳ್ಳುವ ರೀತಿ-ನೀತಿಯಿಂದ ಜನರು ನಮ್ಮನ್ನು ಅಳೆಯುತ್ತಾರೆ. ಏನು ಹೇಳುತ್ತೇನೆ ಅದನ್ನೇ ಮಾಡುತ್ತೇನೆ. ಏನು ಮಾಡುತ್ತೇನೆ ಅದನ್ನೇ ಮಾಡುತ್ತೇನೆ. ಹಿಂದೆ ಮಂತ್ರಿಗಳನ್ನು ಕಿಟಕಿಯಿಂದ ನೋಡುವ ಕಾಲವಿತ್ತು. ಆದರೆ ಈಗ ಪಕ್ಕದಲ್ಲಿ ಕುಳಿತುಕೊಂಡು ಮಾತನಾಡುವ ಕಾಲ ಬಂದಿದೆ. ಇದೇ ನಿಜವಾದ ಪ್ರಜಾಪ್ರಭುತ್ವ ಎಂದರು.
Haveri: ಶಿಥಿಲಗೊಂಡ ಶಾಲೆಗಳಲ್ಲಿ ಮಕ್ಕಳನ್ನು ಕೂರಿಸಬೇಡಿ: ಸಚಿವ ಶಿವರಾಮ್ ಹೆಬ್ಬಾರ್ ಎಚ್ಚರಿಕೆ
ತಾಲೂಕಿನ ಕೋಡಂಬಿ ಗ್ರಾಮದಲ್ಲಿ ಸುಮಾರು 50 ವರ್ಷಗಳ ಹಿಂದೆ ಹಂಚಿಕೆ ಮಾಡಲಾದ ಭೂಮಿ ಇಂದಿಗೂ ಕೆಜೆಪಿ ಆಗಲಿಲ್ಲ. ಇದರಿಂದ ಆಸ್ತಿ ಇದ್ದರೂ ಅಧಿಕೃತ ಮಾಲೀಕತ್ವವಿಲ್ಲದೆ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಮುಂದಿನ 2-3 ತಿಂಗಳೊಳಗಾಗಿ ಕೋಡಂಬಿ ಗ್ರಾಮದ ಭೂಮಿಯನ್ನು ಸಂಪೂರ್ಣ ಕೆಜೆಪಿ ಮಾಡಿಕೊಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡ ಪಾಟೀಲ, ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ. ಪಾಟೀಲ, ಗ್ರಾಪಂ ಅಧ್ಯಕ್ಷ ಪಾಲಾಕ್ಷಯ್ಯ ವೆಂಕಟಾಪುರಮಠ, ನಾಗಭೂಷಣ ಹಾವಣಗಿ, ಮಹೇಶ ಹೊಸಕೊಪ್ಪ, ಹಾಲಪ್ಪ ಕೋಡಣ್ಣವರ, ಕೃಷ್ಣ ಕ್ಯಾರಕಟ್ಟಿಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.