Latest Videos

ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು, ಕುಮಾರಣ್ಣ ಎಂದೂ ಧಕ್ಕೆ ತರಲ್ಲ: ನಿಖಿಲ್‌ ಕುಮಾರಸ್ವಾಮಿ

By Kannadaprabha NewsFirst Published Jul 1, 2024, 11:44 PM IST
Highlights

ಮಂಡ್ಯ ಜಿಲ್ಲೆಯ ಜನರ ಆಶೀರ್ವಾದದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದಾರೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾವು ಧಕ್ಕೆ ತರದಂತೆ ಕೆಲಸ ಮಾಡುತ್ತೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು. 

ಭಾರತೀನಗರ (ಜು.01): ಮಂಡ್ಯ ಜಿಲ್ಲೆಯ ಜನರ ಆಶೀರ್ವಾದದಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದಾರೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾವು ಧಕ್ಕೆ ತರದಂತೆ ಕೆಲಸ ಮಾಡುತ್ತೇವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು. ತೊರೆಬೊಮ್ಮನಹಳ್ಳಿಯಲ್ಲಿ ಲಕ್ಷ್ಮೀದೇವಿ ದೇವಾಲಯ ಹಾಗೂ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಜನತೆ ಸಂಸದರನ್ನಾಗಿ ಆಯ್ಕೆ ಮಾಡಿದ ಫಲವಾಗಿ ಇಂದು ಕೇಂದ್ರದಲ್ಲಿ ಸಚಿವರಾಗಿದ್ದಾರೆ ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೇಂದ್ರ ಸರ್ಕಾರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ನಿರ್ವಹಣೆಯ ದೊಡ್ಡ ಜವಾಬ್ದಾರಿ ನೀಡಿರುವುದರಿಂದ ಬೆಂಗಳೂರಿಗೆ ವಾರಕ್ಕೆರಡು ದಿನ ಮಾತ್ರ ಬರುತ್ತಾರೆ. ಇದರಿಂದ ಜಿಲ್ಲೆಗೆ ಅವರು ಬರಲು ಆಗದ ಸಮಯದಲ್ಲಿ ಆ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ ಎಂದು ತಿಳಿಸಿದರು. ಎಚ್ಡಿಕೆ ಮಂತ್ರಿಯಾಗಿ ದೇಶದ ಅಭಿವೃದ್ಧಿ ಜೊತೆಗೆ ರಾಜ್ಯದ ಜವಾಬ್ದಾರಿಯನ್ನೂ ನಿರ್ವಹಿಸಬೇಕಿದೆ. ಹೀಗಾಗಿ ಜಿಲ್ಲೆಯ ಜನರ ಕಷ್ಟ- ಸುಖ ಕೇಳಲು ಅವರಿಗೆ ಸಮಯದ ಅವಕಾಶ ಕಡಿಮೆ ಇರುವುದರಿಂದ ಅವರ ಜವಾಬ್ದಾರಿಯನ್ನು ನನ್ನ ಹೆಗಲಿಗೆ ವಹಿಸಿದ್ದಾರೆ. ಆ ಜವಾಬ್ದಾರಿಯನ್ನು ನಾನೇ ನಿರ್ವಹಿಸುತ್ತೇನೆ ಎಂದು ಹೇಳಿದರು.

ಸ್ಯಾಂಡಲ್‌ವುಡ್‌ನ ಈ ಹಾಸ್ಯ ನಟ ಬಂಧನ ಮೂವಿ ನೋಡಿ ವಿಷ್ಣು ಫ್ಯಾನ್‌ ಆದ್ರು: ಕಟೌಟ್ ಏರಿ ಕ್ಷೀರಾಭಿಷೇಕ ಮಾಡಿದ್ರು..

ಸಂಸದರಿಂದ ಆಗುವ ಕೆಲಸಗಳನ್ನು ಮಾಡಿಕೊಡಲು ಜಿಲ್ಲೆಯ ಜನರು, ಯಾವುದೇ ಗ್ರಾಮದವರಾದರೂ ಸರಿ, ನಮ್ಮ ಮುಖಂಡರ ಮೂಲಕ ನನಗೆ ವಿಚಾರ ತಿಳಿಸಿದರೆ ತಕ್ಷಣದಲ್ಲೇ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು. ಮದ್ದೂರು ತಾಲೂಕಿನ ಜನತೆ ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚು ಮತಗಳನ್ನು ನೀಡಿದ್ದು, ಹಾಗಾಗಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರೊಂದಿಗೆ ನಾನು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಅವಕಾಶ ಸಿಕ್ಕಿದೆ. ಎಲ್ಲಾ ತಾಲೂಕುಗಳಲ್ಲಿಯೂ ಲೀಡ್ ಕೊಟ್ಟಿದ್ದೀರಿ. ನಿಮ್ಮ ಋಣವನ್ನು ಎಂದಿಗೂ ಮರೆಯಲಾಗದು ಎಂದರು.

ಜಿಲ್ಲೆಯಲ್ಲಿ ನಡೆಯುವ ಯಾವುದೇ ಸಮಾರಂಭವಾದರೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಕಾಯದೇ ನನಗೆ ತಿಳಿಸಿದಲ್ಲಿ ನಾನು ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತೇನೆ ಎಂದು ಹೇಳಿದರು. ಬೊಮ್ಮನಹಳ್ಳಿಯಲ್ಲಿ ಲಕ್ಷ್ಮೀ ದೇವಿ ದೇವಾಲಯವನ್ನು ಚೆನ್ನಾಗಿ ನಿರ್ಮಾಣ ಮಾಡಿದ್ದು, ನಾನೂ ಕೂಡ ಎಲ್ಲಾ ದೇವರಿಗೆ ಪೂಜೆ ಸಲ್ಲಿಸಿದ್ದೇನೆ. ದೇವಿ ಸಕಲ ಸೌಭಾಗ್ಯಗಳನ್ನು ಕರುಣಿಸಿ ಸರ್ವರಿಗೂ ಒಳಿತು ಉಂಟುಮಾಡಲಿ. ಗ್ರಾಮ ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.

ಲಕ್ಷ್ಮೀದೇವಿ ದೇವಸ್ಥಾನದ ರಾಜಗೋಪುರ ಪೂಜಾ ಕಾರ್ಯಕ್ರಮದಲ್ಲಿ ಆದಿಹೊನ್ನಾಯಕನಹಳ್ಳಿ ಮಂಟೇಸ್ವಾಮಿ ಬಸವಪ್ಪ, ಶ್ರೀಕಾರಕಹಳ್ಳಿ ಬಸವೇಶ್ವರಸ್ವಾಮಿ ಬಸವಪ್ಪ, ಆಲಭುಜನಹಳ್ಳಿ ಶ್ರೀ ಬಸೇಶ್ವರಸ್ವಾಮಿ ಬಸವಪ್ಪಗಳು ಭಾಗವಹಿಸಿ ದೇವರಿಗೆ ವಿಶೇಷ ಪೂಜೆಯನ್ನು ಸಮರ್ಪಿಸಲಾಯಿತು. ಸಾವಿರಾರು ಭಕ್ತಾಧಿಗಳಿಗೆ ಅನ್ನಸತರ್ಪಣೆ ಜರುಗಿತು.

ಕೊಡವ ಭಾಷೆ ನಮಗೂ ಕಲಿಸಿಕೊಡಿ, ಇಲ್ಲಾ ಕನ್ನಡದಲ್ಲೂ ಮಾತಾಡಿ ರಶ್ಮಿಕಾ ಮೇಡಂ ಅಂತಿದಾರೆ ಫ್ಯಾನ್ಸ್‌!

ಈ ವೇಳೆ ಸಾವಿರಾರು ಜನರು ನಿಖಿಲ್‌ ಕುಮಾರಸ್ವಾಮಿ ಅವರಿಂದ ಸೆಲ್ಫಿಗಾಗಿ ಮುಗಿಬಿದ್ದರು. ಎಚ್ ಡಿಕೆ ಮತ್ತು ನಿಖಿಲ್ ಪರ ಜೈಕಾರ ಕೂಗಿದರು. ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ನಿಖಿಲ್‌ಕುಮಾರಸ್ವಾಮಿ ಅವರನ್ನು ಅಭಿನಂದಿಸಿ, ಗೌರವಿಸಲಾಯಿತು. ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಕಾರ್ಯಾಧ್ಯಕ್ಷ ಮಾದನಾಯನಹಳ್ಳಿ ರಾಜಣ್ಣ, ಮುಖಂಡರಾದ ಕೂಳಗೆರೆ ಶೇಖರ್, ಕರಡಕೆರೆ ಹನುಮಂತೇಗೌಡ, ಅಪ್ಪಪ್ಪಿಗೌಡ, ಗುರುದೇವರಹಳ್ಳಿ ಅರವಿಂದ್, ಕೆ.ಟಿ.ಸುರೇಶ್, ವಿನು, ಗ್ರಾಮದ ಮುಖಂಡರಾದ ಶ್ರೀನಿವಾಸ್, ಯೋಗ, ಬಿ.ಟಿ.ಉಮೇಶ್, ಶ್ರೀಕಂಠೇಗೌಡ, ವಿಜಿ, ಟಿ.ಜೆ.ವೆಂಕಟೇಶ್, ನಂಜುಂಡೇಗೌಡ, ಮೋಹನ, ಚಂದು, ಮುತ್ತುರಾಜು, ನಂಜೇಗೌಡ, ಜಗದೀಶ್, ಸ್ವಾಮಿ ಸೇರಿ ಹಲವರಿದ್ದರು.

click me!