
ಬಾಗಲಕೋಟೆ (ಜೂ.24): ನಾನು ಉಪಮುಖ್ಯಮಂತ್ರಿಯ ಆಕಾಂಕ್ಷಿಯೂ ಅಲ್ಲ. ಇನ್ನು ಮುಂದೆ ಯಾವ ಚುನಾವಣೆಯಲ್ಲಿಯೂ ನಿಲ್ಲುವವನು ಅಲ್ಲ. ಆದರೆ, ಯಾವಾಗಲೂ ಕೂಡ ಅಧಿಕಾರ ಹಂಚಿಕೊಂಡಾಗ ಇನ್ನೂಳಿದ ಸಮುದಾಯಗಳು ಸಹ ಆಯಾ ಪಕ್ಷದ ಮೇಲೆ ಪ್ರೀತಿ ವಿಶ್ವಾಸ ಬರುತ್ತದೆ. ಹೀಗಾಗಿ ನಾನು ಉಪಮುಖ್ಯಮಂತ್ರಿ ಹುದ್ದೆಯ ಕುರಿತು ಪ್ರತಿಪಾದನೆ ಮಾಡಿದ್ದೇನೆ ವಿನಃ ಬೇರೇನೂ ಇಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ಸುದ್ದಿಗಾರರೊಂದಿಗೆ ಉಪಮುಖ್ಯಮಂತ್ರಿ ಹುದ್ದೆಯ ಕುರಿತು ನಡೆದಿರುವ ಚರ್ಚೆಯ ಭಾಗವಾಗಿ ಮಾತನಾಡಿದ ಅವರು, ಲಿಂಗಾಯತ, ದಲಿತ, ಅಲ್ಪಸಂಖ್ಯಾತ ಸಮುದಾಯದವರನ್ನು ಉಪಮುಖ್ಯಮಂತ್ರಿ ಮಾಡಬೇಕೆಂಬ ಮಾತನ್ನು ಪುನರುಚ್ಚಿಸಿದರು.
ಈ ಹಿಂದೆ ಬಿಜೆಪಿಯಲ್ಲಿ ಇಂತಹ ಪ್ರಯೋಗ ಮಾಡಿದ ಉದಾಹರಣೆಗಳಿವೆ. ಹಾಗಂತ ಡಿಸಿಎಂ ಮಾಡಿದ ತಕ್ಷಣ ಬೇರೆ ಯಾವ ಸೌಲಭ್ಯಗಳು ಸಿಗಲ್ಲ. ಆದರೆ, ಆಯಾ ಸಮುದಾಯದ ಜನರಲ್ಲಿ ಪ್ರಾತಿನಿಧ್ಯ ದೊರಕಿದೆಂಬ ಸಮಾಧಾನ ಇರುತ್ತದೆ. ಆ ಮೂಲಕ ಆ ಸಮುದಾಯಗಳ ಪ್ರೀತಿಗಳಿಸಿಕೊಳ್ಳಲು ಇದೊಂದು ಉತ್ತಮ ಸಾಧನೆ ಎಂಬುವುದು ನನ್ನ ಭಾವನೆ. ಇದಕ್ಕೆ ಬಹುತೇಕ ಸಚಿವರ ಸಹಮತವಿದೆ. ಆದರೆ, ಅಂತಿಮವಾಗಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಬ್ಯಾಕ್ ಟು ಬ್ಯಾಕೋ ಇಲ್ಲ ಫ್ರಂಟ್ ಟು ಫ್ರಂಟೋ ನಮಗೇನು ಗೊತ್ತು: ಸೂರಜ್ ಬಗ್ಗೆ ಸಚಿವ ದಿನೇಶ್ ಹೇಳಿದಿಷ್ಟು..
ಗ್ಯಾರಂಟಿ ಯೋಜನೆಗಳಿಗೆ ಅಪಸ್ವರ ಇಲ್ಲ: ಕೈ ಶಾಸಕರೇ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳಿಗೆ ಅಪಸ್ವರ ಆರಂಭಿಸಿದ್ದಾರೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದೆಲ್ಲವು ಮಾಧ್ಯಮಗಳ ಸೃಷ್ಟಿ ಮಾತ್ರ. ಕ್ಯಾಬಿನೆಟ್ನಲ್ಲಿಯೂ ಸಹ ಈ ಕುರಿತು ಚರ್ಚೆಯಾಗಿಲ್ಲ. ಮುಖ್ಯಮಂತ್ರಿಗಳೇ ಸಹ ಗ್ಯಾರಂಟಿ ನಿಲ್ಲಿಸುವುದಿಲ್ಲ ಎಂದಿದ್ದಾರೆ. ಬಡವರಿಗೆ ನೀಡಿದ ಸೌಲಭ್ಯಗಳು ಕುಂಠಿತ ಆಗುವುದಿಲ್ಲ ಕಡಿತ ಆಗುವುದಿಲ್ಲ ಎಂದು ತಿಳಿಸಿದರು.
ಮಾನವ ಕುಲ ತಲೆತಗ್ಗಿಸುವಂತಹ ಪ್ರಕರಣ: ಅಸಹಜ ಲೈಂಗಿಕ ಪ್ರಕರಣದಡಿ ಬಂಧನವಾಗಿರುವ ಎಂಎಲ್ಸಿ ಸೂರಜ್ ರೇವಣ್ಣ ಪ್ರಕರಣದ ಕುರಿತು ಮಾತನಾಡಿದ ಸಚಿವರು, 377ರಲ್ಲಿ ಏನಿದೆ. ಕಾನೂನಾತ್ಮಕವಾಗಿ ಏನು ನಡೆಯಬೇಕು ಅದು ನಡೆಯುತ್ತದೆ. ಇದರಲ್ಲಿ ಯಾರದೂ ಹಸ್ತಕ್ಷೇಪ ಒತ್ತಡ ಹಾಕಲು ನಾವು ಬಿಡುವುದಿಲ್ಲ. ತನಿಖಾಧಿಕಾರಿಗಳು ಸ್ವತಂತ್ರರಿದ್ದಾರೆ. ಇಂತಹ ಪ್ರಕರಣದಿಂದ ಹಿರಿಯರಾದ ದೇವೆಗೌಡರಿಗೆ ಈ ಇಳಿ ವಯಸ್ಸಿನಲ್ಲಿ ಮಾನಸಿಕವಾಗಿ ಹಿಂಸೆ ಆಗುತ್ತಿರುವುದು ನೋವಿನ ವಿಷಯ ಎಂದರು.
ರಾಜ್ಯ ಸರ್ಕಾರಕ್ಕೆ 5039 ಶಿಫಾರಸುಗಳ 7 ವರದಿ ಸಲ್ಲಿಕೆ: ಶಾಸಕ ಆರ್.ವಿ.ದೇಶಪಾಂಡೆ
ಹಾಸನ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆ ನಿಜಕ್ಕೂ ಮಾನವ ಕುಲ ತಲೆ ತಗ್ಗಿಸುವಂತಾಗಿದೆ. ನಾನು ಉಸ್ತುವಾರಿಯಾದ ನಂತರ ಅಲ್ಲಿನ ಸಂತ್ರಸ್ತರು ಧೈರ್ಯದಿಂದ ಬಂದು ತಮಗಾದ ಅನ್ಯಾಯ ಹೇಳುತ್ತಿದ್ದಾರೆ. ಅದರ ಪರಿಣಾಮ ತಪ್ಪಿತಸ್ಥರಿಗೆ ಶಿಕ್ಷೆ ಕೊಡುವ ಪ್ರಕ್ರಿಯೆ ಆರಂಭಗೊಂಡಿದೆ. ಅಲ್ಲಿ ಬಹಳಷ್ಟು ವರ್ಷಗಳಿಂದ ಇಂತಹ ಪ್ರಕರಣಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಇದೀಗ ಕಾನೂನು ತನ್ನ ಕೆಲಸ ಮುಂದುವರಿಸಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.