
ಬೆಂಗಳೂರು (ಮಾ.25): ಹಿಜಾಬ್ ವಿಚಾರ ಮುಗಿದು ಹೋದ ವಿಚಾರ. ಆದರೂ ಕಾಂಗ್ರೆಸ್ (Congress) ನಾಯಕರು ಮತ್ತೆ ಗಾಯವನ್ನು ಕೆರೆದು ಹುಣ್ಣು ಮಾಡಿಕೊಳ್ತಿದಾರೆ. ಹಿಜಾಬ್ ಬಿಜೆಪಿಗರೇ (BJP) ಹುಟ್ಟು ಹಾಕಿದ ವಿವಾದ ಅಂತಾ ಸಿದ್ದರಾಮಯ್ಯ (Siddaramaiah) ಹೇಳಿದ ಮಾತಿಗೆ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ಸಿದ್ದರಾಮಯ್ಯ ಮಾತಿಗೆ ಸರಿಯಾಗೇ ಟಾಂಗ್ ಕೊಟ್ಟಿದಾರೆ. ಹಿಜಾಬ್ ವಿವಾದ ಇದ್ದಾಗ ಕಾಂಗ್ರೆಸ್ ನಾಯಕರು ಹೆಣ್ಣೂ ಅಲ್ಲದ, ಗಂಡೂ ಅಲ್ಲದವರ ರೀತಿ ನಡೆದುಕೊಂಡರು. ಕೋರ್ಟ್ (High Court) ತೀರ್ಪು ಬಂದ ಬಳಿಕ ಈಗ ಮಾತಾಡ್ತಿದಾರೆ. ಹಿಜಾಬ್ ವಿವಾದ (Hijab Row) ನಾವು ಹುಟ್ಟು ಹಾಕಿದ್ದಲ್ಲ, ನಾವು ಕಾಂಗ್ರೆಸ್ನವರ ಹುಟ್ಟು ಅಡಗಿಸಿವ ಕೆಲಸ ಮಾಡ್ತಿದ್ದೇವೆ.
ಸ್ವಾಮೀಜಿಗಳು ತಲೆಯ ಮೇಲೆ ವಸ್ತ್ರ ಹಾಕಿಕೊಳ್ಳುವ ವಿಚಾರ ಪ್ರಸ್ತಾಪ ಮಾಡಿರುವ ಸಿದ್ದರಾಮಯ್ಯಗೆ ಆ ವಿಚಾರ ಯಾಕೆ. ಅವರು ತಲೆ ಮೇಲೆ ಬೇಕಾದ್ರೂ ವಸ್ತ್ರ ಹಾಕಿಕೊಳ್ಳಲಿ, ಕಾಲಿನ ಮೇಲೆ ಬೇಕಾದ್ರೂ ಹಾಕಿಕೊಳ್ಳಲಿ. ಹಿಜಾಬ್ ಅನ್ನು ಶಾಲಾ ತರಗತಿಯಲ್ಲಿ ಹಾಕಿಕೊಳ್ಳಲು ಅವಕಾಶ ಇಲ್ಲ ಅಂತ ಅಷ್ಟೇ ನಾವು ಹೇಳಿದ್ದೇವೆ. ಅದು ಹೊರತು ಪಡಿಸಿ ಬೇರೆ ಎಲ್ಲಿ ಬೇಕಾದ್ರೂ ಅವರು ಹಿಜಾಬ್ ಧರಿಸಬಹುದು ಎಂದರು. ಇಂಧನ ಸಚಿವ ಸುನಿಲ್ ಕುಮಾರ್ (Sunil Kumar) ಕೂಡಾ ಸಿದ್ದರಾಮಯ್ಯ ಮಾತಿಗೆ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ನವರು ಧರ್ಮಕ್ಕೆ ಗೌರವ ಕೊಡ್ತಾರೋ, ನ್ಯಾಯಾಲಯದ ಆದೇಶಕ್ಕೆ ಗೌರವ ಕೊಡ್ತಾರೋ, ಸಂಪ್ರದಾಯಕ್ಕೆ ಗೌರವ ಕೊಡ್ತಾರೋ ಮೊದಲು ಹೇಳಲಿ. ಹಿಜಾಬ್ ಈಗ ಮುಗಿದ ಅದ್ಯಾಯ.ಈಗ ಯಾಕೆ ಮತ್ತೆ ಆ ವಿಚಾರ ಕೆದಕುತ್ತಿದ್ದಾರೆ ಅಂದರು.
ಪಿಎಸ್ಐ ಆಕಾಂಕ್ಷಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟ ಸಚಿವ ಆರಗ
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಲೋಡ್ ಶೆಡ್ಡಿಂಗ್ ಮಾಡುವಂತಹಾ ಯೋಚನೆ ಇಲ್ಲ ಅಂತಾ ಇಂಧನ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ. ವಿದ್ಯುತ್ ಸರಬರಾಜಿನಲ್ಲಿ ಕೆಲವು ಲೋಪದೋಷಗಳನ್ನು ಕಂಡುಕೊಂಡಿದ್ದೇವೆ.ಅವುಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಮೇ ತಿಂಗಳ ಕೊನೆಯ ವರೆಗೆ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಇಲಾಖೆಯಲ್ಲಿ ತೆಗೆದುಕೊಳ್ಳಲಾಗ್ತಿದೆ. ಆ ಸಮಯದಲ್ಲಿ ಕೂಡಾ ವಿದ್ಯುತ್ ಪೂರೈಕೆ ಯಲ್ಲಿ ವ್ಯತ್ಯಾಸ ಗಳು ಆಗಲ್ಲ.ಶಾಲಾ ಮಕ್ಕಳ ಪರೀಕ್ಷೆ ಸಮಯ ಇದಾಗಿರುವುದರಿಂದ ಲೋಡ್ ಶೆಡ್ಡಿಂಗ್ ಮಾಡುವ ಯೋಚನೆ ಸರ್ಕಾರದ ಮುಂದೆ ಇಲ್ಲ ಎಂದಿದ್ದಾರೆ.
ಪೊಲೀಸ್ ವರ್ಗಾವಣೆಗೆ ಲಂಚ: ಹೋಟೆಲ್ನಲ್ಲಿ ತಿಂಡಿಗಳ ದರ ನಿಗದಿ ಮಾಡಿರುವಂತೆ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆಗೆ ದರ ನಿಗದಿಪಡಿಸಲಾಗಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇಂಥವರಿಂದ ಕಾನೂನು ಕಾಪಾಡಲು ಸಾಧ್ಯವೇ ಎಂದು ಪ್ರತಿಪಕ್ಷ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಗುರುವಾರ ಕಾನೂನು ಸುವ್ಯವಸ್ಥೆ ವಿಷಯದ ಮೇಲಿನ ಚರ್ಚೆಯಲ್ಲಿ ಭ್ರಷ್ಟಾಚಾರ ವಿಷಯಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ನಡುವೆ ಪದೇ ಪದೇ ವಾಗ್ವಾದ ನಡೆಯಿತು.
ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಹೇಳಿಕೆ ಯಾರೂ ನೀಡಬಾರದು: ಆರಗ ಜ್ಞಾನೇಂದ್ರ
ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಸಚಿವ ಆರಗ ಜ್ಞಾನೇಂದ್ರ, ವರ್ಗಾವಣೆ ಮಾಡಲು ಹಿಂದೆ ಏಜೆಂಟ್ಗಳನ್ನು ಇಟ್ಟುಕೊಂಡಿದ್ದರು. ಅವರನ್ನು ನಾನು ಹತ್ತಿರ ಸೇರಿಸಲಿಲ್ಲ. ಪೊಲೀಸ್ ಇಲಾಖೆಯಲ್ಲಿ ಯಾವಾಗಿನಿಂದ ಭ್ರಷ್ಟಾಚಾರ ಶುರುವಾಗಿದೆ ಹೇಳಿ ಎಂದರು. ಆಗ ಸಿದ್ದರಾಮಯ್ಯ, ಅದಕ್ಕಾಗಿಯೇ ಜನರು ಬದಲಿಸಿದ್ದಾರೆ. ನಮಗೆ ಈ ಕಡೆ ಕೊಟ್ಟು, ನಿಮಗೆ ಆ ಕೊಟ್ಟಿದ್ದಾರೆ. ನೀವು ಅಧಿಕಾರಕ್ಕೆ ಬಂದು ಏನು ಬದಲಾವಣೆ ತಂದಿದ್ದೀರಿ? ಕೊಟ್ಟಕುದುರೆ ಏರದವನು ಶೂರನೂ ಅಲ್ಲ, ವೀರನೂ ಅಲ್ಲ. ನಿಮ್ಮಲ್ಲಿ ದೂರದೃಷ್ಟಿ ಹೋಗಿದೆ ಎಂದು ಟೀಕಿಸಿದರು. ಅದಕ್ಕೆ ಗೃಹ ಸಚಿವರು, ಹಳೆ ಕುದುರೆ ಹೊಸ ಸವಾರ. ಕುದುರೆ ಎಳೆದುಕೊಂಡು ಹೋಗುತ್ತದೆ. ಹೆಂಡದಂಗಡಿಗೂ ಹೋಗುತ್ತದೆ, ಮತ್ತೆಲ್ಲಿಗೋ ಹೋಗುತ್ತದೆ. ಆದರೂ ನಾವು ನಿಭಾಯಿಸುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.