ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಗೃಹಲಕ್ಷ್ಮಿ ಗ್ಯಾರಂಟಿ: ಸಿದ್ದರಾಮಯ್ಯ

By Kannadaprabha NewsFirst Published Feb 8, 2023, 2:00 PM IST
Highlights

ರಾಜ್ಯದಲ್ಲಿ ಅನೈತಿಕ ಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದೆ. ತಿನ್ನುವುದಿಲ್ಲ, ತಿನ್ನುವರಿಗೂ ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ರಾಜ್ಯದ ಬಿಜೆಪಿ ಶೇ.40 ಪರ್ಸೆಂಟೆಜ್‌ ಸರ್ಕಾರ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೆ, ಪ್ರಧಾನಿ ಸರ್ಕಾರದ ವಿರುದ್ಧ ಏನೂ ಕ್ರಮ ಕೈಗೊಂಡಿಲ್ಲ ಎಂದು ಅಸಮಧಾನ ಹೊರಹಾಕಿದ ಸಿದ್ದರಾಮಯ್ಯ. 

ಆಳಂದ(ಫೆ.08): 2013ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಕೊಟ್ಟಿರುವ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಈ ಬಾರಿಯು ಅಧಿಕಾರಕ್ಕೆ ಬಂದಲ್ಲಿ ಘೋಷಣೆ ಮಾಡಿರುವ ಗೃಹಲಕ್ಷ್ಮಿ ಭಾಗ್ಯ, ಉಚಿತ 200 ಯೂನಿಟ್‌ ವಿದ್ಯುತ್‌ ಕೊಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆಯನ್ನು ಪುನರುಚ್ಚರಿಸಿದ್ದಾರೆ. ಪಟ್ಟಣದ ಶ್ರೀರಾಮ ಮಾರುಕಟ್ಟೆಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅನೈತಿಕ ಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದೆ. ತಿನ್ನುವುದಿಲ್ಲ, ತಿನ್ನುವರಿಗೂ ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ರಾಜ್ಯದ ಬಿಜೆಪಿ ಶೇ.40 ಪರ್ಸೆಂಟೆಜ್‌ ಸರ್ಕಾರ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೆ, ಪ್ರಧಾನಿ ಸರ್ಕಾರದ ವಿರುದ್ಧ ಏನೂ ಕ್ರಮ ಕೈಗೊಂಡಿಲ್ಲ ಎಂದು ಅಸಮಧಾನ ಹೊರಹಾಕಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿ 600 ಭರವಸೆ ನೀಡಿತು. ಅದರಲ್ಲಿ ಕೇವಲ 51 ಈಡೇರಿಸಿದ್ದಾರೆ. ಇಂತಹ ಭ್ರಷ್ಟಸರ್ಕಾರ ಮೇಲೆ ಜನರಿಗೆ ವಿಶ್ವಾಸವಿಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬರೋದು ನಿಶ್ಚಿತ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರಕ್ಕೆ ಬರುತ್ತಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಹುದ್ದೆ ಭರ್ತಿ, ಕೆಕೆಆರ್‌ಡಿಬಿಗೆ ಪ್ರತಿ ವರ್ಷ 5 ಸಾವಿರ ಕೋಟಿ ರು. ಅನುದಾನ ಹಾಗೂ ಬಡವರಿಗೆ 10 ಕೆ.ಜಿ. ಅಕ್ಕಿ ಉಚಿತವಾಗಿ ಕೊಡುತ್ತೇವೆ. ಕ್ಷೇತ್ರದಿಂದ ಬಿ.ಆರ್‌.ಪಾಟೀಲ್‌ ಅವರನ್ನು ಮತದಾರರು ಗೆಲ್ಲಿಸಿಕೊಡಬೇಕು ಎಂದು ಅವರು ಕೈಮುಗಿದು ಮನವಿ ಮಾಡಿದರು.

ASSEMBLY ELECTION: ಕುಮಾರಸ್ವಾಮಿ ವೆಸ್ಟೆಂಡ್‌ನಲ್ಲಿ ಕುಳಿತುಕೊಂಡೇ ಅಧಿಕಾರ ಕಳ್ಕೊಂಡ್ರು: ಸಿದ್ದರಾಮಯ್ಯ ವಾಗ್ದಾಳಿ

ಮಾಜಿ ಶಾಸಕ ಬಿ.ಆರ್‌. ಪಾಟೀಲ್‌ ಮಾತನಾಡಿ, ಸಿದ್ದರಾಮಯ್ಯ ಅವರು 600 ಕೋಟಿ ರು. ಅನುದಾನ ಕೊಟ್ಟಿದ್ದರಿಂದ ರಸ್ತೆ, ನೀರಾವರಿ ಅಭಿವೃದ್ಧಿಯಾಗಿದೆ. ಶಾಸಕ ಗುತ್ತೇದಾರ ಆಡಳಿತ ಸಂಪೂರ್ಣ ವಿಫಲವಾಗಿದೆ. ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಗೊಂಡಿಲ್ಲ. ವಿಧಾನಸಭೆಯಲ್ಲಿ ಚಕಾರವೆತ್ತಿಲ್ಲ. ಅಭಿವೃದ್ಧಿ ಹೆಸರಲ್ಲಿನ ಲೂಟಿ ಮಾಡಿದ್ದು ಬಿಟ್ಟರೆ ಏನು ಇಲ್ಲ. ಹೀಗಾಗಿ ಅನೇಕರು ಕಾಂಗ್ರೆಸ್‌ ಬೆಂಬಲಿಸಲು ಮುಂದಾಗಿದ್ದಾರೆ ಎಂದು ಹೇಳಿದರು.

ಅದ್ಧೂರಿ ಸ್ವಾಗತ:

ಪಟ್ಟಣಕ್ಕೆ ಪ್ರಜಾಧ್ವನಿ ಯಾತ್ರೆಯಲ್ಲಿ ಆಗಮಿಸಿದ ರಾಜ್ಯ ನಾಯಕರನ್ನು ಜಿಲ್ಲೆಯ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಯಾತ್ರೆ ಬಸ್‌ನಿಲ್ದಾಣ ಮೂಲಕ ಪಟ್ಟಣವನ್ನು ಪ್ರವೇಶ ಮಾಡುತ್ತಿದ್ದಂತೆ, ಕಾರ್ಯಕರ್ತರ ಜಯಘೋಷ ಮುಗಿಲು ಮುಟ್ಟಿತು. ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ನಾಯಕರನ್ನು ಕ್ರೇನ್‌ ಮೂಲಕ ಬೃಹತ್‌ ಗಾತ್ರದ ಹೂವಿನ ಹಾರ ಹಾಕಿ, ಹೂ ಮಳೆ ಸುರಿಸಿ ಅಭಿಮಾನ ಮತ್ತು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು.

ನಂತರ ಪ್ರಜಾಧ್ವನಿ ಯಾತ್ರೆಯೂ ಬಸ್‌ನಿಲ್ದಾಣದಿಂದ ಮೆರವಣಿಗೆ ಹೊರಟು ಶ್ರೀರಾಮ ಮಾರುಕಟ್ಟೆಯ ಕಾರ್ಯಕ್ರಮದ ವೇದಿಕೆಯನ್ನು ತಲುಪಿತು. ಪುರಸಭೆ ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ದತ್ತರಾಜ ಗುತ್ತೇದಾರ ಸೇರಿದಂತೆ ಇತರ ಮುಖಂಡರು ಬಿಜೆಪಿ ತೊರೆದು ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದರು. ಜಿಲ್ಲೆಯ ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಪಕ್ಷದ ಮುಖಂಡರು ಭಾಗವಹಿಸಿದ್ದರು.

click me!