
ಚಿಕ್ಕಬಳ್ಳಾಪುರ (ಜು.07): ಗೌರಿಬಿದನೂರು ತಾಲೂಕಿನಲ್ಲಿ ಕಾಂಗ್ರೆಸ್ ವತಿಯಿಂದ ಯಾವುದೇ ಕಾರ್ಯಕ್ರಮಗಳಾಗಲಿ ಅಥವಾ ಚುನಾವಣೆಗಳಾಗಲಿ ಮಾಜಿ ಶಾಸಕ ಎನ್. ಹೆಚ್. ಶಿವಶಂಕರರೆಡ್ಡಿ ರವರನ್ನು ಮುಂದಿಟ್ಟುಕೊಂಡು ಮಾಡಲಾಗುವುದು. ಕಾರಣ ಕ್ಷೇತ್ರಕ್ಕೆ ಅವರ ಕೊಡುಗೆ ಸಾಕಷ್ಟಿದೆ ಎಂದು ಮಾಜಿ ಸಂಸದ ವೀರಪ್ಪ ಮೊಯ್ಲಿ ಹೇಳಿದರು. ಗೌರಿಬಿದನೂರು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಚುನಾವಣೆಯಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಎರಡು ಮುಖಗಳಿದಂತೆ ಈ ಬಾರಿ ಅವರು ಪರಾಭವಗೊಂಡಿರಬಹುದು. ಆದರೆ 25 ವರ್ಷಗಳಿಂದ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗಾಗಿ ಬಹಳ ಶ್ರಮಿಸಿದ್ದಾರೆ ಎಂದರು.
ಶಿವಶಂಕರ ರೆಡ್ಡಿಗೆ ಅಧಿಕಾರ ಸ್ಥಾನ: ತಾಲೂಕಿನ ನಾಲ್ಕು ಮೂಲೆಗಳಲ್ಲಿಯೂ ಸಹ ಜನಪರವಾದ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಹೆಚ್ ನರಸಿಂಹಯ್ಯರವರ ಹೆಸರಿನಲ್ಲಿ ರಾಷ್ಟ್ರೀಯ ವಿಜ್ಞಾನ ಕೇಂದ್ರ. ಕುಡುಮಲಕುಂಟೆ ಬಳಿ ಸಾವಿರಾರು ಎಕರೆಯಲ್ಲಿ ಕೈಗಾರಿಕಾ ಪ್ರದೇಶಕ್ಕೆ ಹೆಚ್ಚು ಒತ್ತು, ಅಂಬೇಡ್ಕರ್ ಅಧ್ಯಯನ ಕೇಂದ್ರ ಸ್ಥಾಪನೆ ಹೀಗೆ ತಾಲೂಕಿನ ಮೂಲೆ ಮೂಲೆಯಲ್ಲಿ ಎದ್ದು ಕಾಣುವಂತೆ ಅಭಿವೃದ್ಧಿ ಮಾಡಿದ್ದಾರೆ. ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ಮೂಲಕ ಅವರಿಗೆ ಉನ್ನತ ಮಟ್ಟದ ಅಧಿಕಾರ ವಹಿಸಲಾಗುವುದು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ: ವಿಪಕ್ಷ ನಾಯಕನ ಆಯ್ಕೆ ಕುರಿತು ಸಿ.ಟಿ.ರವಿ ಹೇಳಿದ್ದೇನು?
ಶಿವಶಂಕರರೆಡ್ಡಿ ಅವರು ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಗೆ ತುಂಬಾ ಅವಶ್ಯಕತೆ ಇರುವ ವ್ಯಕ್ತಿ. ಅವರಿಗೆ ಪಕ್ಷದ ಹೈಕಮಾಂಡ್ ಆಗಲಿ ನಾವಾಗಲೀ ಕಾರ್ಯಕರ್ತರಾಗಲಿ ಪರಾಭವಗೊಂಡಿದ್ದಾರೆ ಎಂಬ ಪದ ಬಳಸಬಾರದು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರ ಹಿಡಿಯ ಬೇಕೆಂದರೆ ಶಿವಶಂಕರರೆಡ್ಡಿ ಹಾಗೂ ಸಚಿವ ಎಂ.ಸಿ. ಸುಧಾಕರ್ ಅವರ ಪಾತ್ರ ಬಹಳಷ್ಟಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎತ್ತಿನಹೊಳೆ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಗೌರಿಬಿದನೂರು ಅಭಿವೃದ್ಧಿಗೆ ಕ್ರಮ: ಮಾಜಿ ಶಾಸಕ ಎನ್. ಹೆಚ್. ಶಿವಶಂಕರರೆಡ್ಡಿ ಮಾತನಾಡಿ ತಾಲೂಕಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಿರೀಕ್ಷೆಗೆ ತಕ್ಕಂತೆ ಚುನಾವಣೆಯಲ್ಲಿ ಮತಗಳನ್ನು ಪಡೆಯುವಲ್ಲಿ ವಿಫಲರಾಗಿವೆ. ಸದರಿ ಪಕ್ಷಗಳು ಅವರವರ ನಿರೀಕ್ಷೆಗೆ ತಕ್ಕಂತೆ ಮತ ಪಡೆದಿದ್ದರೆ ನಮ್ಮ ಪಕ್ಷದ ಗೆಲವು ಖಚಿತವಾಗುತ್ತಿತ್ತು. ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಯಾವುದೇ ಬರಲಿ ಕಾಂಗ್ರೆಸ್ ಸದಸ್ಯರು ಹೆಚ್ಚು ಇರುವುದರಿಂದ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಸಿಗುತ್ತದೆ ಹಾಗೂ ಸರ್ಕಾರದಿಂದ ನಗರಸಭೆಗೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳ ಅನುದಾನ ಬರುತ್ತದೆ.
ಏಕವಚನದಲ್ಲಿ ಎಚ್.ಡಿ.ಕುಮಾರಸ್ವಾಮಿ-ಚೆಲುವರಾಯಸ್ವಾಮಿ ಕಿತ್ತಾಟ
ಆದ್ದರಿಂದ ನಗರವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎನ್.ಕೇಶವರೆಡ್ಡಿ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹನುಮಂತರೆಡ್ಡಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಪ್ಪ. ಮಾಜಿ ತಾ. ಪಂ. ಉಪಾಧ್ಯಕ್ಷ ಹೆಚ್. ಎನ್. ಪ್ರಕಾಶರೆಡ್ಡಿ. ಅಶ್ವತ್ಥನಾರಾಯಣ ಗೌಡ. ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ. ಜಿ. ಸೋಮಯ್ಯ. ಇನ್ನೂ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.