
ಶಿವಮೊಗ್ಗ (ಸೆ.06): ಯಾವ ಸಮಯದಲ್ಲಾದರೂ ಚುನಾವಣೆ ಬರಬಹುದು. ಎಲ್ಲದಕ್ಕೂ ಸಿದ್ಧರಾಗಿರಿ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತರಿಗೆ ಕರೆ ನೀಡಿರುವುದು ಕುತೂಹಲ ಮೂಡಿಸಿದೆ. ಇಲ್ಲಿನ ಶುಭಮಂಗಳ ಸಮುದಾಯ ಭವನದಲ್ಲಿ ಜಿಲ್ಲಾ ಜೆಡಿಎಸ್ ವತಿಯಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಮುಂದಿನ ಚುನಾವಣೆ 2028ರಲ್ಲೇ ಬರಬಹುದು, 2026ರಲ್ಲಿ ಬರಬಹುದು, 2025ರಲ್ಲೇ ಚುನಾವಣೆ ಬರಬಹುದು. ಯಾವುದಕ್ಕೂ ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧರಾಗಿ ಎಂದು ಹೇಳಿದರು.
ಜಿಲ್ಲೆಯಲ್ಲಿ ಜಾತ್ಯಾತೀತ ಜನತಾದಳದ ಬೇರು ಗಟ್ಟಿಯಾಗಿದೆ. ಆದರೆ ಪಕ್ಷಕ್ಕೆ ಬಂದು ಚುನಾವಣೆ ನಂತರ ಬಿಟ್ಟು ಹೋಗುತ್ತಿರು ವುದರಿಂದ ಪಕ್ಷಕ್ಕೆ ಹಿನ್ನೆಡೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಭದ್ರಾವತಿಯ ಅಪ್ಪಾಜಿಗೌಡರ ನಂತರ ಇಬ್ವರು ಸಹೋದರಿಯರಿಂದ ಪಕ್ಷ ಭದ್ರಾವತಿ ಮತ್ತು ಶಿವಮೊಗ್ಗ ಗ್ರಾಮಾಂತರದಲ್ಲಿ ಗಟ್ಟಿಯಾಗಿದೆ. ಪ್ರತಿ ಬೂತ್ ಮಟ್ಟದಲ್ಲಿ ಯುವಕರು, ಬೇರೆ ಸಮಾಜದವರನ್ನು ಹಾಗೂ ಮಹಿಳೆಯರನ್ನು ನೋಂದಣಿ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಜನತೆಯಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಸಮಾಧಾನವಿದೆ. ಹಿಂದಿನ ಸರ್ಕಾರದ ಬಗ್ಗೆ ಆರೋಪ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಭಿವೃದ್ಧಿ ಕಾಣ್ತಾ ಇಲ್ಲ. ಜನ ಬೇಸತ್ತಿದ್ದಾರೆ. ಮುಂದಿನ ಮೂರೂವರೆ ವರ್ಷಗಳವರೆಗೆ ಅವಧಿ ಇದ್ದರೂ ಕಾಂಗ್ರೆಸ್ ನಾಯಕರ ತಪ್ಪಿನಿಂದ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು. ಜಿಲ್ಲೆಯಲ್ಲಿ ಹಳ್ಳಿಗೆ ಭೇಟಿ ನೀಡಿ ಮುಂದಿನ ದಿನಗಳಲ್ಲಿ ಜೆಡಿಎಸ್ ಮಾತ್ರ ಸಮಗ್ರ ಸರ್ಕಾರ ನೀಡಲಿದೆ ಎಂಬ ವಿಶ್ವಾಸ ಹುಟ್ಟಿಸಿದರೆ ಜಿಲ್ಲೆಯಲ್ಲಿ ನಾಲ್ಕು ಸ್ಥಾನ ಪಡೆಯಬಹುದು. ಮೈತ್ರಿಗೆ ನಮ್ಮಿಂದ ಯಾವುದೇ ಧಕ್ಕೆ ತರದಂತೆ ಸಂಘಟನೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಜನರ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಹಣ ಲೂಟಿ ಹೊಡೆಯುತ್ತಿದೆ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಪುತ್ರ ನಿಖಿಲ್ ಪಕ್ಷ ಸಂಘನೆ ದೃಷ್ಠಿಯಿಂದ ರಾಜ್ಯದಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಕೊಪ್ಪಳದಲ್ಲಿ ಅಭೂತ ಪೂರ್ವ ಕಾರ್ಯ ಕ್ರಮ ನಡೆದಿದೆ. ಇದರಿಂದ ನನಗೆ ನೆಮ್ಮದಿ ತಂದಿದೆ. ನನಗೂ ಶಿವಮೊಗ್ಗಕ್ಕೂ ನಂಟಿದೆ. 2004 ರಲ್ಲಿ ನಡೆದ ಉಪಚುನಾವಣೆ ಯಲ್ಲಿ ಶಿವಮೊಗ್ಗಕ್ಕೆ ಬಂದಿದ್ದೆ. ಆಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ ಗೆದ್ದಿದ್ದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ, ಶಾರದ ಅಪ್ಪಾಜಿ ಗೌಡ ಸೇರಿದಂತೆ ಹಲವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.