
ಶಿವಮೊಗ್ಗ (ಸೆ.06): ಸರ್ಕಾರದ ಯೋಜನೆ ಜಾರಿಯಲ್ಲೂ ಹಲವು ಲೋಪ-ದೋಷಗಳಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೊದಲ ವರ್ಷ ದಲ್ಲೇ ಸರ್ಕಾರದ ಬಗ್ಗೆ ಟೀಕೆ-ಟಿಪ್ಪಣೆಗಳು ಶುರುವಾಗಿವೆ ಎಂದು ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು. ರಾಜ್ಯದಲ್ಲಿ ಭ್ರಷ್ಟಾಚಾರ, ಅಧಿಕಾರಿಗಳ ವರ್ಗಾವಣೆ. ನಿಗಮಗಳ ಹಗರಣಗಳೇ ಮುನ್ನೆಲೆಗೆ ಬಂದಿವೆ. ಜನರ ಹೆಸರಿನಲ್ಲಿ ಸರ್ಕಾರ ಹಣ ಲೂಟಿ ಹೊಡೆಯುತ್ತಿದೆ ಎಂದು ಆರೋಪಿಸಿದರಲ್ಲದೆ, ಸಿಎಂ ಸಿದ್ದರಾಮಯ್ಯ ಅವರು ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಸಂಗೊಳ್ಳಿ ರಾಯಣ್ಣರನ್ನು ಹೋಲಿಕೆ ಮಾಡಿಕೊಂಡು ಹೇಳಿಕೆ ಕೊಡುತ್ತಿದ್ದಾರೆ. ನಮ್ಮ ಪಕ್ಷದವರೇ ತನ್ನ ವಿರುದ್ಧ ಷಡ್ಯಂತ್ರ ಮಾಡುವ ಮೂಲಕ ಅಧಿಕಾರದಿಂದ ಇಳಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿ ಕೊಂಡಿದ್ದಾರೆ ಎಂದು ಟಾಂಗ್ ನೀಡಿದರು.
ಗುಂಡಿ ಮುಚ್ಚಲೂ ಸರ್ಕಾರದ ಬಳಿ ಹಣವಿಲ್ಲ: ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಒಂದು ರಸ್ತೆಯ ಗುಂಡಿ ಮುಚ್ಚಲು ಆಗುತ್ತಿಲ್ಲ. ಕಂದಾಯ ಸಚಿವರೇ ಏನಾದರೂ ಮಾಡಿ ಗುಂಡಿಮುಚ್ಚಿ ಎಂದು ಅಧಿಕಾರಿಗಳಿಗೆ ಕೈ ಮುಗಿದು ಕೇಳುಕೊಳ್ಳುವ ದಾರುಣ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗದ ಪರಿಸ್ಥಿತಿ ತಲುಪಿದೆ ಎಂದು ಕಳವಳ ವ್ಯಕ್ತಪಡಿಸಿದರು. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ಕೋಟಿ ರೈತರ ಸಾಲಮನ್ನ ಮಾಡಿದೆ. ಆದರೂ ಅಭಿವೃದ್ಧಿ ಕಾರ್ಯವನ್ನು ಯಾವತ್ತೂ ನಿಲ್ಲಿಸಲಿಲ್ಲ. ಸಾಲಮನ್ನಾ ಜೊತೆಗೆ ಅಭಿವೃದ್ಧಿ ಮಾಡಿದ್ದರಿಂದ ಸರ್ಕಾರ ಉಳಿದಿತ್ತು ಎಂದು ತಿಳಿಸಿದರು.
ಕೋವಿಡ್ ರಿಪೋರ್ಟ್ ಬಗ್ಗೆ ಗೊತ್ತಿಲ್ಲ, ಕ್ಯಾಬಿನೆಟ್ಟಲ್ಲಿ ಚರ್ಚೆಯಾಗಲಿ: ಕೋವಿಡ್ ರಿಪೋರ್ಟ್ ಏನಿದೆ ಗೊತ್ತಿಲ್ಲ. ಕ್ಯಾಬಿನೆಟ್ನಲ್ಲಿ ಈ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ ಎಂಬ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಕೆಂಪಣ್ಣ ಆಯೋಗ ವರದಿ ಬಗ್ಗೆ ಕ್ಯಾಬಿನೆಟ್ನಲ್ಲಿ ಇಟ್ಟು ಅದನ್ನು ಚರ್ಚೆ ಮಾಡಲಿ. ಅದನ್ನು ಏಕೆ ಕ್ಯಾಬಿನೆಟ್ ಮುಂದೆ ತರದೇ ಬಿಟ್ಟಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಹಿನ್ನೆಲೆಯಲ್ಲಿ ಆಯುಕ್ತ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಮಾಧ್ಯಮದವರೇ ಎಲ್ಲಾ ಹೇಳ್ತಿದ್ದಾರೆ.
ಟಗರು ಮೇಲೆ ಪ್ರೀತಿ ಅಂತ ಅಲ್ಲ, ಸಿದ್ದರಾಮಯ್ಯ ಒಳ್ಳೆಯ ಮನುಷ್ಯ: ಸಿ.ಎಂ.ಇಬ್ರಾಹಿಂ
ಈಗಾಗಲೇ ಹೈಕೋರ್ಟ್ನಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಗಿದೆ. ಸಿದ್ದರಾಮಯ್ಯ ಪರ ವಕೀಲರು ವಾದ ಮಾಡಲು ಇನ್ನೂ ಸಮಯ ಕೇಳುತ್ತಿದ್ದಾರೆ ಎಂದರು. ವಿಐಎಸ್ಎಲ್ ನಿರ್ವಹಣೆಗೆ 10 ರಿಂದ15 ಸಾವಿರ ಕೋಟಿ ಬೇಕು. ವಿಐಎಸ್ಎಲ್ ಹಾಗೂ ವೈಜಾಕ್ ಬಗ್ಗೆ ನಮಗೆ ಕಮಿಟ್ ಮೆಂಟ್ ಇದೆ. ಆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಯುತ್ತಿದೆ. 10 ರಿಂದ15 ಸಾವಿರ ಕೋಟಿ ಬೇಕಾಗಿರುವುದರಿಂದ ಸಮಯ ಹಿಡಿಯುತ್ತದೆ. ಕನ್ನಡ ಚಿತ್ರರಂಗದಲ್ಲಿ ಮೀಟೂ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.